Friday, 25th October 2024

‘ಒಂದು ಶ್ರೇಣಿ, ಒಂದು ಪಿಂಚಣಿ’ ಯೋಜನೆಗೆ ಐದು ವರ್ಷ

ನವದೆಹಲಿ: ಸೇನಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ಕ್ಷೇಮಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ‘ಒಂದು ಶ್ರೇಣಿ, ಒಂದು ಪಿಂಚಣಿ(ಒಆರ್ ಒಪಿ)’ ಯೋಜನೆಯ ಐದನೇ ವರ್ಷಾಚರಣೆಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಯೋಧರು ನಿವೃತ್ತಿ ಹೊಂದಿದ ನಂತರ ಎಲ್ಲರಿಗೂ ಸಮಾನ ಪಿಂಚಣಿ ನೀಡುವ ಯೋದನೆ ಇದಾಗಿದ್ದು ನಮ್ಮ ದೇಶವನ್ನು ರಕ್ಷಿಸುವ ಯೋಧರ ಜೀವನ ಕ್ಷೇಮಕ್ಕಾಗಿ ಜಾರಿಗೆ ತಂದಿರುವ ಈ ಯೋಜನೆ ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದೆ. ದಶಕಗಳಿಂದ ಭಾರತ ದೇಶದ ಯೋಧರು ಈ ಯೋಜನೆಗಾಗಿ ಕಾಯುತ್ತಿದ್ದರು. ನಮ್ಮ ಯೋಧರು ಮತ್ತು ಸೇವೆಯಿಂದ ನಿವೃತ್ತಿ ಹೊಂದಿದವರ ಅಭೂತಪೂರ್ವ ಸೇವೆಗೆ ನನ್ನ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಸೇನೆಯಿಂದ ನಿವೃತ್ತಿ ಹೊಂದಿದ 20.60 ಲಕ್ಷ ನಿವೃತ್ತ ಯೋಧರಿಗೆ ಮತ್ತು ಅವರ ಕುಟುಂಬಸ್ಥರಿಗೆ ಸರ್ಕಾರ 10 ಸಾವಿರದ 795.4 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ವಾರ್ಷಿಕ ಮರುಕಳಿಸುವ ವೆಚ್ಚ 7 ಸಾವಿರದ 123.38 ಕೋಟಿ ರೂಪಾಯಿ ಯಾಗಿದೆ ಎಂದು ಹೇಳಿದ್ದಾರೆ.