Wednesday, 25th September 2024

Judge Pakistan Remark: ಗೋರಿಪಾಳ್ಯವನ್ನು ʼಪಾಕಿಸ್ತಾನʼ ಎಂದ ಜಡ್ಜ್ ವಿಷಾದ ಪರಿಗಣಿಸಿ ಕೇಸ್‌ ಕ್ಲೋಸ್ ಮಾಡಿದ ಸುಪ್ರೀಂ ಕೋರ್ಟ್‌

justice shrishananda

ಹೊಸದಿಲ್ಲಿ: ಪ್ರಕರಣವೊಂದರ ವಿಚಾರಣೆಯ ವೇಳೆ ಬೆಂಗಳೂರಿನ ಮೈಸೂರು ರೋಡ್‌ನಲ್ಲಿನ ಗೋರಿಪಾಳ್ಯ ಪ್ರದೇಶವನ್ನು ʼಪಾಕಿಸ್ತಾನʼ (High Court Judge Pakistan remark) ಎಂದು ಕರೆದ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂದ (Karnataka High Court Justice Shrishananda) ಅವರ ಮಾತುಗಳ ಬಗ್ಗೆ ಸುಪ್ರೀಂ ಕೋರ್ಟ್‌ (Supreme Court) ಕಳವಳ ವ್ಯಕ್ತಪಡಿಸಿದೆ. ಆದರೆ, ನ್ಯಾ.ಶ್ರೀಶಾನಂದ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಕ್ಷಮಾಪಣೆ ಕೇಳಿರುವ ಹಿನ್ನೆಲೆಯಲ್ಲಿ, ಈ ಕುರಿತ ಸ್ವಯಂಪ್ರೇರಿತ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.

“ಭಾರತದ ಯಾವುದೇ ಭಾಗವನ್ನು ಯಾರೂ ಪಾಕಿಸ್ತಾನ ಎಂದು ಕರೆಯುವಂತಿಲ್ಲ ಮತ್ತು ಇದು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆ” ಎಂದು ಸಿಜೆಐ ಡಿವೈ ಚಂದ್ರಚೂಡ್ ಹೇಳಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಕ್ಷಮಾಪಣೆಯನ್ನು ಗಮನಿಸಿದ ನಂತರ, ಅವರು ಮಾಡಿದ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ತಾವು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ವಿಶೇಷ ಐವರು ನ್ಯಾಯಾಧೀಶರ ಪೀಠ ಮುಕ್ತಾಯಗೊಳಿಸಿದೆ.

ಆದರೆ ಕೋರ್ಟ್‌, ಈ ಕುರಿತು ಸಾಮಾಜಿಕ ಮಾಧ್ಯಮದ ಲೈವ್‌ ಫೀಡಿಂಗ್‌ನಲ್ಲಿ ಬಂದಿರುವ ಕಾಮೆಂಟ್‌ಗಳನ್ನು ತಡೆಯಲು ನಿರಾಕರಿಸಿತು. “ಸೂರ್ಯನ ಬೆಳಕಿಗೆ ಉತ್ತರ ಇನ್ನಷ್ಟು ಸೂರ್ಯನ ಬೆಳಕು. ನ್ಯಾಯಾಲಯದಲ್ಲಿ ಏನಾಗುತ್ತದೆ ಎಂಬುದನ್ನು ನಿಗ್ರಹಿಸಲು ಸಾಧ್ಯವಿಲ್ಲ. ಪ್ರತಿಕ್ರಿಯೆಗಳನ್ನು ತಡೆಯಲಾಗುವುದಿಲ್ಲ” ಎಂದು ವೈರಲ್ ವೀಡಿಯೊ ಕ್ಲಿಪ್‌ಗಳ ಕುರಿತು ಬಂದಿರುವ ಸಾಮಾಜಿಕ ಮಾಧ್ಯಮದ ಕಾಮೆಂಟ್‌ಗಳ ಬಗ್ಗೆ ಸಿಜೆಐ ಹೇಳಿದರು.

ನ್ಯಾಯಾಂಗದ ಘನತೆಯ ಹಿತದೃಷ್ಟಿಯಿಂದ ನಾವು ಈ ಕುರಿತ ಪ್ರಕ್ರಿಯೆಗಳನ್ನು ಮುಂದುವರಿಸದಂತೆ ಕೈಬಿಡುತ್ತಿದ್ದೇವೆ ಎಂದು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.

“ಮುಕ್ತ ನ್ಯಾಯಾಲಯದ ವಿಚಾರಣೆಯಲ್ಲಿ ನ್ಯಾಯಾಧೀಶರು ಸಲ್ಲಿಸಿದ ಕ್ಷಮೆಯಾಚನೆಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಯ ಮತ್ತು ಸಂಸ್ಥೆಯ ಘನತೆಯ ಹಿತಾಸಕ್ತಿಯಿಂದ ಈ ವಿಚಾರಣೆಯನ್ನು ನಾವು ಕೈಬಿಡುತ್ತಿದ್ದೇವೆ. ಆದರೆ ಕ್ಲೋಸ್‌ ಮಾಡುವ ಮೊದಲು, ಕೆಲವು ಅವಲೋಕನಗಳನ್ನು ಮಾಡುವ ಅಗತ್ಯವಿದೆ. ನ್ಯಾಯಾಂಗದ ಘನತೆಯ ಹಿತದೃಷ್ಟಿಯಿಂದ ನಾವು ಹೈಕೋರ್ಟ್ ನ್ಯಾಯಾಧೀಶರಿಗೆ ನೋಟಿಸ್ ಜಾರಿ ಮಾಡುವುದನ್ನು ತಡೆದಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ.

ಇತ್ತೀಚೆಗೆ, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಎರಡು ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಒಂದು ವಿಡಿಯೋದಲ್ಲಿ ನ್ಯಾಯಾಧೀಶರು, ಪಶ್ಚಿಮ ಬೆಂಗಳೂರಿನಲ್ಲಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶವನ್ನು “ಪಾಕಿಸ್ತಾನ” ಎಂದು ಕರೆದಿದ್ದರು. ಮತ್ತೊಂದು ವೈರಲ್ ವೀಡಿಯೊ ಕ್ಲಿಪ್‌ನಲ್ಲಿ, ಇನ್ನೊಬ್ಬ ವಕೀಲರನ್ನು ಉದ್ದೇಶಿಸಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಕ್ಕಾಗಿ ತನ್ನ ಮುಂದೆ ಹಾಜರಾದ ಮಹಿಳಾ ವಕೀಲರನ್ನು ಟೀಕಿಸಿದ್ದರು.

ಈ ವಿಡಿಯೋ ಕ್ಲಿಪ್‌ಗಳು ವೈರಲ್ ಆದ ನಂತರ, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಂದ ಈ ಕುರಿತು ವಿವರ ಕೋರಿ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿತ್ತು. ವಿಚಾರಣೆಯ ಬಳಿಕ, ಹೈಕೋರ್ಟ್‌ ನ್ಯಾಯಾಧೀಶರ ಹೇಳಿಕೆಗಳ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿತು. ಸಾಂದರ್ಭಿಕ ಅವಲೋಕನಗಳು ವಿಶೇಷವಾಗಿ ನಿರ್ದಿಷ್ಟ ಲಿಂಗ ಅಥವಾ ಸಮುದಾಯವನ್ನು ನಿರ್ದೇಶಿಸಿ ಮಾಡಬಾರದು. ಇದು ವೈಯಕ್ತಿಕ ಪಕ್ಷಪಾತವನ್ನು ಸೂಚಿಸಬಹುದು ಎಂದು ಪೀಠ ಹೇಳಿದೆ.

“ಪಿತೃಪ್ರಭುತ್ವದ ಅಥವಾ ಸ್ತ್ರೀದ್ವೇಷದ ಕಾಮೆಂಟ್‌ಗಳನ್ನು ಮಾಡದಂತೆ ಜಾಗರೂಕರಾಗಿರಬೇಕು. ನಿರ್ದಿಷ್ಟ ಲಿಂಗ ಅಥವಾ ಸಮುದಾಯದ ಮೇಲಿನ ಮಾತುಗಳ ಬಗ್ಗೆ ನಾವು ನಮ್ಮ ಗಂಭೀರ ಕಳವಳ ವ್ಯಕ್ತಪಡಿಸುತ್ತೇವೆ. ಅಂತಹ ಮಾತುಗಳು ಋಣಾತ್ಮಕ ಬೆಳಕಿನಲ್ಲಿ ಅರ್ಥೈಸಲ್ಪಡುತ್ತವೆ. ಎಲ್ಲಾ ಅರ್ಜಿದಾರರನ್ನೂ ಸಮಾನವಾಗಿ, ಪಕ್ಷಪಾತವಿಲ್ಲದೆ ನೋಡಬೇಕು ಎಂದು ನಾವು ಭಾವಿಸುತ್ತೇವೆ”ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೊರಹೊಮ್ಮಿದ ಲೈವ್ ಸ್ಟ್ರೀಮಿಂಗ್ ಅಥವಾ ವಿಡಿಯೋ ಕಾನ್ಫರೆನ್ಸಿಂಗ್‌ನ ನಡವಳಿಕೆಯ ನಿಯಮಗಳನ್ನು ದೇಶದ ಹೆಚ್ಚಿನ ಉಚ್ಚ ನ್ಯಾಯಾಲಯಗಳು ಈಗ ಅಳವಡಿಸಿಕೊಂಡಿವೆ. ನ್ಯಾಯವನ್ನು ಒದಗಿಸಲು ನ್ಯಾಯಾಲಯಗಳಿಗೆ ಇದು ಪ್ರಮುಖ ಸಂಪರ್ಕ ಸೌಲಭ್ಯವಾಗಿದೆ. ಈ ಮೂಲಕ ಎಲ್ಲಾ ಕಕ್ಷಿದಾರರು, ನ್ಯಾಯಾಧೀಶರು, ವಕೀಲರು ನ್ಯಾಯಾಲಯದ ಭೌತಿಕ ಆವರಣಗಳನ್ನು ಮೀರಿದ ಪ್ರೇಕ್ಷಕರನ್ನು ತಲುಪುತ್ತಾರೆ ಎಂದು ತಿಳಿದಿರಬೇಕು. ಹೀಗಾಗಿ ಸಮುದಾಯದ ಮೇಲೆ ಇದರ ವೀಕ್ಷಣೆಯ ವ್ಯಾಪಕ ಪ್ರಭಾವದ ಬಗ್ಗೆ ಎಲ್ಲರೂ ತಿಳಿದಿರಬೇಕು ಎಂದು ಉನ್ನತ ನ್ಯಾಯಾಲಯ ಹೇಳಿದೆ.

ಪ್ರತಿಯೊಬ್ಬ ವ್ಯಕ್ತಿಯೂ ಜೀವನದ ಅನುಭವಗಳ ಆಧಾರದ ಮೇಲೆ ಪೂರ್ವಾಗ್ರಹಗಳನ್ನು ಹೊಂದಿರುತ್ತಾನೆ ಎಂಬ ಅಂಶದ ಬಗ್ಗೆ ನ್ಯಾಯಾಧೀಶರಾದ ನಾವು ಜಾಗೃತರಾಗಿದ್ದೇವೆ. ಆದರೆ, ನ್ಯಾಯಾಧೀಶರು ತಮ್ಮ ಪ್ರವೃತ್ತಿಗಳ ಬಗ್ಗೆ ತಿಳಿದಿರುವುದು ಮುಖ್ಯ. ಇದರಿಂದ ಅವರು ನಿಷ್ಪಕ್ಷಪಾತವಾಗಿ ಉಳಿಯಬಹುದು ಮತ್ತು ವಸ್ತುನಿಷ್ಠ ಹಾಗೂ ನ್ಯಾಯೋಚಿತ ನ್ಯಾಯವನ್ನು ನೀಡಬಹುದು ಎಂದು ನ್ಯಾಯಾಲಯ ಹೇಳಿದೆ.

“ನ್ಯಾಯಾಂಗ ನಿರ್ಣಯವನ್ನು ಮಾಡಲು ಮಾರ್ಗದರ್ಶನ ನೀಡಬೇಕಾದ ಮೌಲ್ಯಗಳು ಮಾತ್ರ ಸಂವಿಧಾನದಲ್ಲಿವೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ” ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ: HC Judge Remarks: ʻಉದ್ದೇಶ ಅದಾಗಿರ್ಲಿಲ್ಲʼ- ʻಪಾಕಿಸ್ತಾನʼ ಹೇಳಿಕೆಗೆ ಹೈಕೋರ್ಟ್ ನ್ಯಾಯಮೂರ್ತಿ ವಿಷಾದ