Wednesday, 25th September 2024

Study Committee: ಎಸ್‌ಸಿ, ಎಸ್‌ಟಿ ಪತ್ರಿಕಾ ಮಾಲೀಕರು, ಪತ್ರಕರ್ತರ ಸ್ಥಿತಿಗತಿ ಅಧ್ಯಯನಕ್ಕೆ ಸಮಿತಿ ರಚಿಸಿದ ಸರ್ಕಾರ

Study Committee

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಪತ್ರಿಕಾ ಮಾಲೀಕರ ಹಾಗೂ ಪತ್ರಕರ್ತರ ಆರ್ಥಿಕ, ಸಾಮಾಜಿಕ ಹಾಗೂ ಔದ್ಯಮಿಕ ಸ್ಥಿತಿಗತಿಯ ಅಧ್ಯಯನ ಮಾಡಿ ವರದಿ ನೀಡಲು ಸಮಿತಿ (Study Committee) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಸಮಾಜವನ್ನು ತಿದ್ದಿ ಮಾರ್ಗದರ್ಶನ ಮಾಡುವ ಹೊಣೆ ಮಾಧ್ಯಮಗಳದ್ದಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಎಲೆಕ್ಟ್ರಾನಿಕ್ ಮತ್ತು ಪತ್ರಿಕಾ ಮಾಧ್ಯಮಗಳು ಹೆಚ್ಚು ಪ್ರಬಲಶಾಲಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮಾಲೀಕ ಮತ್ತು ಮಾಧ್ಯಮ ವೃತ್ತಿಯನ್ನು ಅವಲಂಬಿಸಿರುವವರು ತುಂಬಾ ವಿರಳ. ಇದನ್ನೇ ವೃತ್ತಿಯಾಗಿ ನಂಬಿರುವ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಪತ್ರಕರ್ತರ ಜೀವನ ಭದ್ರತೆ ಮತ್ತು ವೃತ್ತಿ ಭದ್ರತೆ ದುಸ್ತರ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಮಾಧ್ಯಮ ಕ್ಷೇತ್ರವನ್ನು ನಂಬಿರುವ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಪತ್ರಿಕಾ ಮಾಲೀಕರ ಹಾಗೂ ಪತ್ರಕರ್ತರ ಆರ್ಥಿಕ, ಸಾಮಾಜಿಕ ಹಾಗೂ ಔದ್ಯಮಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಈ ಕೆಳಕಂಡವರನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಲು ರಚಿಸಲು ಆದೇಶ ಹೊರಡಿಸಲಾಗಿದೆ.

  1. ಕೆ. ಶಿವಕುಮಾರ್. ಇಂಡಿಯನ್ ಎಕ್ಸ್‌ಪ್ರೆಸ್‌, ಮೈಸೂರು
  2. ಶಿವಕುಮಾರ್ ಎಂ.ಡಿ (ಬೆಳ್ಳಿತಟ್ಟೆ), ವಿಶ್ವವಾಣಿ, ಚಾಮರಾಜನಗರ
  3. ಎ.ಲಾವಣ್ಯ, ಸಂಪಾದಕರು, ನುಡಿ ಜೇನು
  4. ಚಲುವರಾಜು, ಅಧ್ಯಕ್ಷರು, SC/ST ಪತ್ರಕರ್ತರ ಸಂಘ, ಬೆಂಗಳೂರು
  5. ಆರ್.ತಾರನಾಥ್, ಪ್ರಧಾನ ವರದಿಗಾರರು, ಕನ್ನಡಪ್ರಭ, ಚಿಕ್ಕಮಗಳೂರು
  6. ಮುತ್ತು ನಾಯ್ಕರ್ (ಪರಿಶಿಷ್ಟ ಪಂಗಡ), ಹಿರಿಯ ಪತ್ರಕರ್ತರು, ಬಾಗಲಕೋಟೆ.
  7. ಪೃಥ್ವಿರಾಜ್ ಎಸ್., ಪೃಥ್ವಿ, ಪತ್ರಿಕೆ, ಬೀದರ್.
  8. ಮಂಜುನಾಥ ಡೊಳ್ಳಿನ, ಜಂಟಿ ನಿರ್ದೇಶಕರು, ವಾರ್ತಾ ಇಲಾಖೆ

ಈ ಸುದ್ದಿಯನ್ನೂ ಓದಿ | PM Kisan Yojana: ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಬರಬೇಕಾದರೆ ಈ ನಿಯಮ ಪಾಲಿಸಿ

ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಪರಿಶೀಲನೆಗೆ ಸಮಿತಿ

Primary school teachers

ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ (Primary school teachers) ಬೇಡಿಕೆಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎ.ಮಹಾಲಕ್ಷ್ಮಿ ಆದೇಶ ಹೊರಡಿಸಿದ್ದಾರೆ. 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸದಿರುವುದು, ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರಿಪಡಿಸುವುದು ಹಾಗೂ ಪದವಿ ಪೂರೈಸಿದ ಶಿಕ್ಷಕರನ್ನು 6 ರಿಂದ 8ಕ್ಕೆ ಸೇವಾ ನಿರತ ಪದವೀಧರ ಶಿಕ್ಷಕರೆಂದು ಒಂದು ಬಾರಿ (One Time) ಪದನಾಮೀಕರಿಸುವುದು ಸೇರಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಸಲ್ಲಿಸಿತ್ತು.

ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ, ಅವುಗಳನ್ನು ಪರಿಗಣಿಸಲು ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಅವಕಾಶವಿರುವ ಕುರಿತು ಹಾಗೂ ಇದರಿಂದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳು ಮತ್ತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಮಗ್ರವಾದ ವರದಿ ನೀಡಲು ಸಮಿತಿಯನ್ನು ರಚಿಸಲು ಸರ್ಕಾರವು ತೀರ್ಮಾನಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿವಿಧ ಬೇಡಿಕೆಗಳನ್ನು ಪರಿಗಣಿಸುವ ಕುರಿತು ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳನ್ವಯ ಸಮಗ್ರವಾಗಿ ವರಿಶೀಲಿಸಿ ಸೂಕ್ತ ಶಿಫಾರಸು ಹಾಗೂ ಸ್ಪಷ್ಟ ಅಭಿಪ್ರಾಯವನ್ನೊಳಗೊಂಡ ಸಮಗ್ರ ವರದಿಯನ್ನು ನೀಡಲು ಈ ಕೆಳಕಂಡಂತೆ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Bengaluru News: ಅರುಣ್ ಯೋಗಿರಾಜ್ ಸೇರಿ ನಾಲ್ವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ

ಸಮಿತಿ ಅಧ್ಯಕ್ಷರು, ಸದಸ್ಯರು

ಅಧ್ಯಕ್ಷರು- ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ
ಸದಸ್ಯರು- ಪ್ರತಿನಿಧಿ, ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯ
ಸದಸ್ಯರು- ಪ್ರತಿನಿಧಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು), ಕರ್ನಾಟಕ ಸರ್ಕಾರ ಸಚಿವಾಲಯ
ಸದಸ್ಯರು-ಪ್ರತಿನಿಧಿ- ಕಾನೂನು ಇಲಾಖೆ, ಕರ್ನಾಟಕ ಸಚಿವಾಲಯ
ಸದಸ್ಯರು- ನಿರ್ದೇಶಕರು (ಪ್ರಾಥಮಿಕ ಶಿಕ್ಷಣ), ಶಾಲಾ ಶಿಕ್ಷಣ ಇಲಾಖೆ

ಮುಂದುವರಿದು, ಈ ಸಮಿತಿಯು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸಂಬಂಧಪಟ್ಟ ಇತರೆ ಪಾಲುದಾರರ (stake holders)ಜತೆ ಸಮಾಲೋಚಿಸಿ, ಎಲ್ಲಾ ಅಂಶಗಳನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಮತ್ತು ಸ್ಪಷ್ಟ ಶಿಫಾರಸ್ಸಿನೊಂದಿಗೆ ವಿಸ್ತ್ರತ ವರದಿಯನ್ನು ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.