Friday, 27th September 2024

Bengaluru Woman Murder: ನನ್ನನ್ನೂ ಸೇರಿ ನಾಲ್ವರಿಗೆ ಮೋಸ ಮಾಡಿದಳು ಮಹಾಲಕ್ಷ್ಮಿ: ಪ್ರೇಮವಂಚಿತ ಕೊಲೆಗಾರನ ಪ್ರಲಾಪ

bengaluru woman murder case

ಬೆಂಗಳೂರು: ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮಿ ಎಂಬ ಮಹಿಳೆಯ ಕೊಲೆ (Bengaluru Woman Murder case) ಮಾಡಿದ ಆರೋಪಿ ಮುಕ್ತಿರಂಜನ್‌ ಒಡಿಶಾದ ತನ್ನ ಊರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅಲ್ಲಿಗೆ ಪರಾರಿಯಾಗುವ ಮುನ್ನ ತನ್ನ ಸೋದರನಿಗೆ ಫೋನ್‌ ಮಾಡಿದ್ದ. ಆಗ ಮಹಾಲಕ್ಷ್ಮಿಯ ಬಗೆಗೆ ಹಾಗೂ ತಾನು ಯಾಕೆ ಕೊಲೆ ಮಾಡಿದೆ ಎಂಬ ಬಗ್ಗೆ ಸಂಪೂರ್ಣ ಗೋಳು ತೋಡಿಕೊಂಡಿದ್ದ ಎಂದು (Bangalore crime) ಗೊತ್ತಾಗಿದೆ.

ಮುಕ್ತಿರಂಜನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿಯನ್ನು ಬೆಂಗಳೂರು ಪೊಲೀಸರು ನೀಡಿದ್ದಾರೆ. ಮಹಾಲಕ್ಷ್ಮಿಯ ಕೊಲೆ ಮಾಡಿ 59 ತುಣುಕುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ತುಂಬಿಸಿದ್ದ ಈತ ಬಳಿಕ ಒಡಿಶಾದ ಭದ್ರಕ್ ಜಿಲ್ಲೆಯಲ್ಲಿದ್ದ ತನ್ನ ಸ್ವಂತ ಊರಿಗೆ ಪರಾರಿಯಾಗಿದ್ದ. ಊರಿನ ಸ್ಮಶಾನದ ಬಳಿಯ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಶವದ ಪಕ್ಕದಲ್ಲಿ ಸ್ಕೂಟರ್, ಡೈರಿ, ಲ್ಯಾಪ್‌ಟಾಪ್ ಪತ್ತೆಯಾಗಿದೆ. ಆತ್ಮಹತ್ಯೆ ಸಂಬಂಧ ಧುಸುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಬಂಧಿಸುತ್ತಾರೆ ಎಂಬ ಭಯದಲ್ಲೇ ಮುಕ್ತಿ ರಂಜನ್ ಆತ್ಮಹತ್ಯೆಗೆ ಶರಣಾಗಿದ್ದಾನೆ‌. ಒಡಿಶಾದ ಪಂಡಿ ಬಳಿಯ ಬೂತಕಪುರದಲ್ಲಿ ನೇಣಿಗೆ ಶರಣಾಗಿದ್ದಾನೆ. ಮಹಾಲಕ್ಷ್ಮಿಯ ಕೊಲೆ ಮಾಡಿದ ಬಳಿಕ ತನ್ನ ತಮ್ಮನ ಬಳಿ ಈ ಎಲ್ಲಾ ವಿಚಾರ ಆತ ಹೇಳಿಕೊಂಡಿದ್ದ. ನಾನು ಮಹಾಲಕ್ಷ್ಮಿಯನ್ನು ತುಂಬಾ ಪ್ರೀತಿ ಮಾಡುತ್ತಿದ್ದೆ.‌ ಆದರೆ ಮಹಾಲಕ್ಷ್ಮಿ ನನ್ನ ಪ್ರೀತಿಗೆ ಮೋಸ ಮಾಡಿ ಇನ್ನೂ ಮೂವರೊಂದಿಗೆ ಸಂಪರ್ಕದಲ್ಲಿದ್ದಳು. ನನ್ನನ್ನು ವಿನಾಕಾರಣ ತ್ಯಜಿಸಿದ್ದಳು. ಹೀಗಾಗಿ ಅವಳನ್ನು ಕೊಲೆ‌ ಮಾಡಿ ಬಾಡಿನ ತುಂಡುಗಳನ್ನಾಗಿ ಮಾಡಿದ್ದೇನೆ. ನಾನು ಊರಿಗೆ ಹೋಗುತ್ತಿದ್ದೇನೆ ಎಂದಿದ್ದ.

ಊರಿಗೆ ಹೋದ ಮಗನನ್ನು ಬಚ್ಚಿಡುವ ಕೆಲಸ ಆತನ ತಾಯಿಯಿಂದಲೇ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಳ್ಳುವುದಕ್ಕೆ ಮುಕ್ತಿರಂಜನ್ ತಾಯಿ ವ್ಯವಸ್ಥೆ ಮಾಡಿದ್ದಳೆಂದು ಗೊತ್ತಾಗಿದೆ. ಆದರೆ ಪೊಲೀಸರು ಮುಕ್ತಿ‌ ರಂಜನ್ ರಾಯ್ ಸೋದರನ‌ ಮೂಲಕ ಆತನನ್ನು ಟ್ರ್ಯಾಪ್ ‌ಮಾಡುವ ಕೆಲಸ‌ ಮಾಡಿದ್ದರು. ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಒಡಿಸ್ಸಾದಲ್ಲಿ ಮುಕ್ತಿ‌ ರಂಜನ್ ರಾಯ್ ನೇಣಿಗೆ ಶರಣಾಗಿದ್ದಾನೆ‌.

ಮುಕ್ತಿರಂಜನ್‌ ಜೊತೆಗೆ ಇರುವ ಮೊದಲು ಮಹಾಲಕ್ಷ್ಮಿ ಬೇರೊಬ್ಬನ ಜೊತೆಗೆ ಮದುವೆಯಾಗಿದ್ದಳು. ಆತನಿಂದ ದೂರವಾಗಿ ಬೆಂಗಳೂರಿಗೆ ಬಂದು ನೆಲೆಸಿ ಇಲ್ಲಿನ ಒಂದು ಮಾಲ್‌ನಲ್ಲಿ ಕೆಲಸಕ್ಕೆ ಸೇರಿದ್ದಳು.

ಇದನ್ನೂ ಓದಿ: Bengaluru Woman Murder: ಮಹಾಲಕ್ಷ್ಮಿ ಕೊಲೆಪಾತಕಿಯ ಡೆತ್‌ನೋಟ್‌ ಪತ್ತೆ; ಬರ್ಬರ ಕೃತ್ಯದ ಉಲ್ಲೇಖ