Friday, 27th September 2024

CBI Probe: ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆಗೆ ತಡೆ: ಕರ್ನಾಟಕ ಸಚಿವ ಸಂಪುಟ ನಿರ್ಣಯ

cbi probe

ಬೆಂಗಳೂರು: ರಾಜ್ಯದಲ್ಲಿ ಪ್ರಕರಣಗಳನ್ನು ತನಿಖೆ ಮಾಡಲು ಕೇಂದ್ರೀಯ ತನಿಖಾ ದಳಕ್ಕೆ (CBI Probe) ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಕರ್ನಾಟಕ ಸರ್ಕಾರ (Karnataka Government) ರದ್ದುಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸಂಪುಟ ಸಭೆಯ (Karnataka Cabinet) ನಂತರ ಗುರುವಾರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.

ಸಿಬಿಐ ಪಕ್ಷಪಾತ ಮಾಡುತ್ತಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಭೂ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ಪ್ರತಿಪಕ್ಷ ಬಿಜೆಪಿಯಿಂದ ಹೆಚ್ಚುತ್ತಿರುವ ಬೇಡಿಕೆಗಳ ನಡುವೆಯೇ ಈ ನಿರ್ಣಯ ಬಂದಿದೆ.

ಸಿಬಿಐ ತನಿಖೆಗೆ ಒಪ್ಪಿಗೆ ಹಿಂತೆಗೆತಕ್ಕೂ ಹಾಗೂ ಮುಡಾ ಹಗರಣ ತನಿಖೆಗೂ ಸಂಬಂಧವಿದೆ ಎಂಬ ಆರೋಪವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ತಳ್ಳಿಹಾಕಿದ್ದಾರೆ. ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆಯಡಿ ಸಿಬಿಐನ ಒಪ್ಪಿಗೆಯನ್ನು ಹಿಂಪಡೆಯಲಾಗಿದೆ ಎಂದು ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಸಿಬಿಐ ಪೂರ್ವಾಗ್ರಹ ಪೀಡಿತವಾಗಿ, ಕೇಂದ್ರ ಸರಕಾರದ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದರಿಂದಾಗಿ, ಭವಿಷ್ಯದ ಯಾವುದೇ ತನಿಖೆಗಳಿಗೆ ಸಿಬಿಐ ಸಂಸ್ಥೆ ಪ್ರಕರಣವಾರು ಅನುಮೋದನೆ ಪಡೆಯುವ ಅಗತ್ಯವಿರುತ್ತದೆ. ಸಿಬಿಐ ತನಿಖೆಗೆ ಸಾಮಾನ್ಯ ಸಮ್ಮತಿಯನ್ನು ಹಿಂತೆಗೆದುಕೊಂಡ ರಾಜ್ಯಗಳಲ್ಲಿ ಇದೀಗ ಕರ್ನಾಟಕವೂ ಸೇರಿದೆ. ಈ ಹಿಂದೆ ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ಸೇರಿದಂತೆ ಹಲವು ಬಿಜೆಪಿಯೇತರ ಆಡಳಿತದ ರಾಜ್ಯಗಳು ಸಮ್ಮತಿ ಮರಳಿ ಪಡೆದಿವೆ.

ಗಣಿ ತನಿಖೆಗಳು ಸೇರಿದಂತೆ ಹಿಂದಿನ ಹಲವು ಪ್ರಕರಣಗಳನ್ನು ಸಿಬಿಐ ನಿರ್ವಹಿಸಿದ ರೀತಿ ಸರಿಯಾಗಿಲ್ಲ. ಆರೋಪಪಟ್ಟಿ ಸಲ್ಲಿಸಲು ಸಂಸ್ಥೆ ವಿಫಲವಾಗಿದೆ. ಇದು ಬಿಜೆಪಿ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಪಾಟೀಲ್‌ ಹೇಳಿದ್ದಾರೆ. ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ. ಪ್ರತಿಪಕ್ಷಗಳು ತಮ್ಮ ವಿರುದ್ಧ ಪಿತೂರಿ ನಡೆಸುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಆರೋಪಗಳ ತನಿಖೆಗೆ ರಾಜ್ಯಪಾಲರ ಅನುಮತಿಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದ ನಂತರ ನ್ಯಾಯಾಲಯದ ಆದೇಶ ಬಂದಿದೆ.

ಇದನ್ನೂ ಓದಿ: CBI Investigation: ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆ ಅಧಿಕಾರಕ್ಕೆ ಕಡಿವಾಣ; ಸಚಿವ ಸಂಪುಟ ನಿರ್ಧಾರ