Monday, 28th October 2024

Muda case: ಸಿಎಂ ಮೇಲೆ ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ ವಿರುದ್ಧ ಮಹಿಳೆ ಎಫ್‌ಐಆರ್‌

snehamayi krishna

ಮೈಸೂರು: ಮುಡಾ ಹಗರಣ (MUDA Case, MUDA Scam) ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ದ ಎಫ್​ಐಆರ್​ (FIR) ದಾಖಲಿಸಿರುವ ಆರ್​​ಟಿಐ ಕಾರ್ಯಕರ್ತ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ವಿರುದ್ಧ ಮಹಿಳೆಯೊಬ್ಬರು ಬೇರೊಂದು ಪ್ರಕರಣದಲ್ಲಿ ದೂರು ದಾಖಲಿಸಿದ್ದಾರೆ.

2024ರ ಆಗಸ್ಟ್​ 21ರಂದು ದಾಖಲಾದ ಪ್ರಕರಣ ಇದಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ಪೊಲೀಸ್ ಠಾಣೆಯಲ್ಲಿ 136/2024 ಮೊಕದ್ದಮೆ‌ ಸಂಖ್ಯೆ ಮತ್ತು ಬಿಎನ್ಎಸ್ 2023 ಅಡಿ ಪ್ರಕರಣ ದಾಖಲಾಗಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧವೇ ಹೋರಾಟ ಮಾಡುತ್ತಿರುವ ಸ್ನೇಹಮಯಿ ಕೃಷ್ಣ‌ ವಿರುದ್ಧ U/s-85, 126(2), 74, 352, 351(2), 79, 3(5) ಬಿಎನ್​ಎಸ್ ಸೆಕ್ಷನ್​​ಗಳಡಿ ಲಾವಣ್ಯ ಎಂಬವರು ಕೇಸ್ ದಾಖಲಿಸಿದ್ದಾರೆ. ಸ್ನೇಹಮಯಿ‌ ಕೃಷ್ಣ ಎ4 ಆರೋಪಿಯಾಗಿದ್ದಾರೆ. ಎ3 ಆರೋಪಿ ಡಾಬಾ ಜಯಕುಮಾರ್ ಜೊತೆ ಸೇರಿ ಹಲ್ಲೆ ಯತ್ನಿಸಿದ್ದಾರೆ. ಹಿಡಿದು ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ನಿನ್ನನ್ನು ಕೊಲೆ‌ ಮಾಡುತ್ತೀನಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನನ್ನ ಹಾಗೂ ನನ್ನ ತಾಯಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಬರೆದಿದ್ದಾರೆ. 2024ರ ಜುಲೈ 28ರಂದು ಕೋರ್ಟ್ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ ಎಂದೂ ಕೂಡ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಪ್ರಭಾ ಎ1 ಆರೋಪಿಯಾಗಿದ್ದರೆ, ಸಿದ್ದಪ್ಪ ಎಂಬವರು ಎ2 ಆರೋಪಿ. ಅತ್ತೆ, ಮಾವ ಹಾಗೂ ಅತ್ತೆಯ ಸಹೋದರನಿಗೆ ಸ್ನೇಹಮಯಿ ಕೃಷ್ಣ ಕಿರುಕುಳ ನೀಡುತ್ತಿದ್ದಾನೆ ಎಂದಿದ್ದಾರೆ.

2020ರಲ್ಲಿ ನನ್ನ ಗಂಡ ಹೃದಯಘಾತದಿಂದ ನಿಧನ ಹೊಂದಿದ್ದಾರೆ‌‌. ಡೆತ್ ಬೆನಿಫಿಸರಿ ಹಣ ಹಾಗು ನನ್ನ ಒಡವೆ ಪಡೆಯುವ ವಿಚಾರ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಪ್ರಕರಣದ ವಿಚಾರಣೆ ಮುಗಿಸಿ ನ್ಯಾಯಾಲಯದಿಂದ ತಾಯಿ ಜೊತೆ ಮನೆಗೆ ಬರುವಾಗ ಅಟ್ಯಾಕ್ ಮಾಡಿರುವುದಾಗಿ ಆರೋಪ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ, ನನ್ನ ವಿರುದ್ಧ ಮಹಿಳೆ ಮಾಡುತ್ತಿರುವುದು ಸುಳ್ಳು ಆರೋಪ. ನನ್ನ ವಿರುದ್ಧ ಹಲವರು ಷಡ್ಯಂತ್ರ ಮಾಡುತ್ತಿದ್ದಾರೆ. ನಾನು ಜೈಲಿಗೆ ಹೋದರೂ ಸರಿ ಹೋರಾಟ ನಿಲ್ಲಿಸುವುದಿಲ್ಲ. 2012 ರಲ್ಲಿಯೂ ಇದೇ ರೀತಿ ಸುಳ್ಳು ಎಫ್​ಐಆರ್​ ದಾಖಲಿಸಿ ಜೈಲಿಗೆ ಕಳಿಸಿದ್ದರು. ಆಗಲೂ ಕೂಡ ನಾನು ಜೈಲಿನಿಂದಲೇ ಹೋರಾಟ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ಆ ಮಹಿಳೆ ಮಾಡುತ್ತಿರುವ ಆರೋಪಗಳೆಲ್ಲ ಶುದ್ದ ಸುಳ್ಳು. ಆ ದಿನ ನಾನು ಮೈಸೂರಿನಲ್ಲಿಯೇ ಇದ್ದೆ. ಟವರ್ ಲೊಕೇಷನ್ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿ. ಮುಡಾದ ಹಗರಣದಲ್ಲಿ ಭಾಗಿಯಾಗಿರುವವರೆಲ್ಲ ಒಟ್ಟಿಗೆ ಸೇರಿಕೊಂಡಿದ್ದಾರೆ. ಎಲ್ಲರೂ ಕೂಡ ನನ್ನನ್ನು ಮುಗಿಸುವ ಹುನ್ನಾರ ನಡೆಸಿದ್ದಾರೆ. ನನ್ನ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಾನು ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ. ಅದೇ ರೀತಿ ಚಾಮರಾಜನಗರದಲ್ಲೊಬ್ಬ ಹಣ ಲೂಟಿ ಮಾಡಿದ್ದೇನೆ ಎಂಬ ಬಗ್ಗೆ ಆರೋಪ ಮಾಡಿದ್ದಾನೆ‌. ಅವನಿಗೂ‌ ಕೂಡ ನಾನು ಚಾಲೆಂಜ್ ಮಾಡ್ತೀನಿ. ಬ್ಯಾಂಕ್ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸ್ನೇಹಮಯಿ ಕೃಷ್ಣ ಸವಾಲು ಹಾಕಿದ್ದಾರೆ.