Sunday, 6th October 2024

Israel Airstrike: ಹೆಜ್ಬುಲ್ಲಾಗಳಿಗೆ ಬ್ಯಾಕ್‌ ಟು ಬ್ಯಾಕ್‌ ಹೊಡೆತ; ಇಸ್ರೇಲ್‌ ದಾಳಿಗೆ ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರ ಉಡೀಸ್‌

Israel airtstrike

ಬೈರುತ್‌: ಲೆಬನಾನ್‌ ಮೇಲೆ ಇಸ್ರೇಲ್‌ ಸೇನೆ ನಡೆಸುತ್ತಿರುವ ವೈಮಾನಿಕ ದಾಳಿ(Israel Airstrike)ಯ ತೀವ್ರತೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಲ್ಲೇ ಇದೆ. ಭೀಕರ ದಾಳಿಗೆ ಹೆಜ್ಬುಲ್ಲಾ ಉಗ್ರರು(Hezbollah) ಕಂಗೆಟ್ಟಿದ್ದಾರೆ. ಇದೀಗ ಬೈರುತ್‌ನ ದಹಿಯೆಹ್‌ನಲ್ಲಿರುವ ಹೆಜ್ಬುಲ್ಲಾಗಳ ಶಸ್ತ್ರಾಸ್ತ್ರ ತಯಾರಿಕಾ ನೆಲೆ ಮೇಲೆ ದಾಳಿ ನಡೆಸಿರುವ ಇಸ್ರೇಲ್‌ ಅದನ್ನು ಉಡೀಸ್‌ ಮಾಡಿದೆ.

ಮಥುಲಾ ಗಡಿ ಪ್ರದೇಶದಲ್ಲಿ ಇಸ್ರೇಲಿ ಸೇನೆಯನ್ನು ಗುರಿಯಾಗಿಸಿ ಹೆಜ್ಬುಲ್ಲಾಗಳು ದಾಳಿಗೆ ಸಂಚು ರೂಪಿಸಿತ್ತು. ಆದರೆ ಅದಕ್ಕೂ ಮುನ್ನವೇ ಇಸ್ರೇಲ್‌ ಉಗ್ರರ ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರಗಳ ಮೇಲೆ ಬಾಂಬ್‌ ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಿದೆ. ಈ ಬಗ್ಗೆಸ್ವತಃ ಇಸ್ರೇಲ್‌ ಸೇನೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.

ಹೌತಿ ಉಗ್ರರ ಪುಂಡಾಟ

ಇಸ್ರೇಲ್‌ ಸೇನೆಯ ಬ್ಯಾಕ್‌ ಟು ಬ್ಯಾಕ್‌ ದಾಳಿಯಿಂದ ಕಂಗೆಟ್ಟಿರುವ ಯೆಮೆನ್‌ನ ಹೌತಿ ಬಂಡುಕೋರರು, ಇಂದು ಕೆಂಪು ಸಮುದ್ರದಲ್ಲಿ ಹಡಗೊಂದನ್ನು ಗುರಿಯಾಗಿಸಿ ದಾಳಿ ನಡೆಸಿದೆ.ಇಸ್ರೇಲ್‌ ದಾಳಿ ನಂತರ ಇದೇ ಮೊದಲ ಬಾರಿಗೆ ಹೌತಿ ಬಂಡೂಕೋರರು ಹಡಗುಗಳ ಮೇಲೆ ದಾಳಿ ನಡೆಸಿದೆ. ಇನ್ನು ಈ ಬಗ್ಗೆ ಇಂಗ್ಲೆಂಡ್‌ನ ಸಾಗರೊತ್ತರ ವ್ಯಾಪಾರ ಕಾರ್ಯಾಚರಣೆಗಳ ಕೇಂದ್ರ ಮಾಹಿತಿ ಹಂಚಿಕೊಂಡಿದ್ದು, ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದಿದೆ. ಇನ್ನು ಇಸ್ರೇಲ್‌ ಅನ್ನು ಗುರಿಯಾಗಿಸಿ ಹೌತಿಗಳು ತಮ್ಮ ದಾಳಿಯನ್ನು ಮುಂದುವರೆಸುವ ಪಣತೊಟ್ಟಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಹಾಗೂ ಪ್ರಕ್ಷುಬ್ಧ ಪರಿಸ್ಥಿತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇಸ್ರೇಲ್‌ ಪ್ರಧಾನಿ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜತೆ ಮಾತುಕತೆ ನಡೆಸಿದ್ದಾರೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆಯ ವಿರುದ್ಧ ಇಸ್ರೇಲ್‌ ಸಮರ ಸಾರಿರುವ ಕಾರಣ ಪ್ರಧಾನಿ ಮೋದಿ ಮಾತನಾಡಿದ ಜಾಗತಿಕ ಶಾಂತಿಯ ಕುರಿತು ಚರ್ಚಿಸಿದ್ದಾರೆ.

ನೆತನ್ಯಾಹು ಅವರೊಂದಿಗಿನ ಸಂಭಾಷಣೆಯ ವಿವರಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದೇನೆ. ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ ಎಂದು ಅವರು ಸೋಶಿಯಲ್ ಮೀಡಿಯಾಗಳ ಮೂಲಕ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸುವ ಪ್ರಯತ್ನಗಳನ್ನು ಬೆಂಬಲಿಸುವ ಭಾರತದ ಬದ್ಧತೆಯನ್ನು ಪ್ರಧಾನಿ ಒತ್ತಿ ಹೇಳಿದ್ದಾರೆ. ಪ್ರಾದೇಶಿಕ ಉದ್ವಿಗ್ನ ಸ್ಥಿತಿಯನ್ನು ತಡೆಗಟ್ಟುವುದು ಮತ್ತು ಎಲ್ಲಾ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಶಾಂತಿ ಸ್ಥಾಪಿಸುವ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಬದ್ಧ ಎಂದು ಪ್ರಧಾನಿ ಮೋದಿ ಹೇಳಿದರು.

ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗಿದೆ. ಹಮಾಸ್ ಬಂದೂಕುಧಾರಿಗಳು ಗಾಜಾದಲ್ಲಿ ಸೃಷ್ಟಿಸಿದ ಉಪಟಳದ ಬಳಿಕ ಇಸ್ರೇಲ್ ಮತ್ತು ಹಮಾಸ್ ನಡುವೆ ಸಂಘರ್ಷ ಆರಂಭಗೊಂಡಿತ್ತು. ನಂತರ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿಗಳು ಮುಂದುವರಿದಿದ್ದವು ಇಸ್ರೇಲ್‌ನ ದಾಳಿಯು ಹಮಾಸ್‌ಗೆ ಗಮನಾರ್ಹ ಪೆಟ್ಟು ಕೊಟ್ಟಿತ್ತು. ಇದೇ ವೇಳೆ ಇರಾನ್ ಬೆಂಬಲಿತ ಹೆಜ್ಬುಲ್ಲಾ ಇಸ್ರೇಲ್ ವಿರುದ್ಧ ಕಾಲು ಕೆದರಿಕೊಂಡು ಜಗಳಕ್ಕೆ ನಿಂತಿತು. ಅಂತಿಮವಾಗಿ ಹೆಜ್ಬುಲ್ಲಾದ ಹಲವಾರು ನಾಯಕರನ್ನು ಇಸ್ರೇಲ್ ವಾಯುಪಡೆಯು ಹತ್ಯೆ ಮಾಡಿದೆ.

ಈ ಸುದ್ದಿಯನ್ನೂ ಓದಿ: PM Modi : ಹೆಜ್ಬುಲ್ಲಾ ದಮನದ ಬೆನ್ನಿಗೇ ಇಸ್ರೇಲ್ ಪ್ರಧಾನಿಗೆ ಮೋದಿ ಫೋನ್ ಕಾಲ್! ಮಾತುಕತೆಯ ಸಾರವೇನು?