Monday, 7th October 2024

HD Kumaraswamy: 50 ಕೋಟಿಗೆ ಬೇಡಿಕೆ ಆರೋಪ; ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲು

HD Kumaraswamy

ಬೆಂಗಳೂರು: 50 ಕೋಟಿ ರೂಪಾಯಿ ಬೇಡಿಕೆ ಹಾಗೂ ಜೀವ ಬೆದರಿಕೆ ಆರೋಪದಲ್ಲಿ ಕೇಂದ್ರ ಕೈಗಾರಿಕಾ ಸಚಿವ ಎಚ್‌ ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಉದ್ಯಮಿ ವಿಜಯ್ ಟಾಟಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಇದರಿಂದ ಡಿನೋಟಿಫಿಕೇಷನ್, ಗಣಿಗಾರಿಕೆಗೆ ಅನುಮತಿ ಪ್ರಕರಣಗಳಲ್ಲಿ ಕಾನೂನು ಸಮರ ನಡೆಸುತ್ತಿರುವ ಕೇಂದ್ರ ಸಚಿವ ಎಚ್.​ಡಿ. ಕುಮಾರಸ್ವಾಮಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಬಿಎನ್‌ಎಸ್‌ ಸೆಕ್ಷನ್ 3(5), 308(2), 351 (2) ಅಡಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಂಎಲ್‌ಸಿ ರಮೇಶ್‌ ಗೌಡ ವಿರುದ್ಧವೂ ಪ್ರಕರಣ ದಾಖಲಾಗಿದೆ. 50 ಕೋಟಿ ರೂ.ಗೆ ಬೇಡಿಕೆಯಿಟ್ಟು, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಉದ್ಯಮಿ ವಿಜಯ್ ಟಾಟಾ ದೂರು ದಾಖಲಿಸಿದ್ದರು.

ಜೆಡಿಎಸ್ ಮುಖಂಡರಾದ ರಮೇಶ್ ಗೌಡ ನಮ್ಮ ಮನೆಗೆ ಬಂದಿದ್ದರು. ನಿಖಿಲ್ ಚನ್ನಪಟ್ಟಣ ಉಪ ಚುನಾವಣೆ ನಿಲ್ಲುತ್ತಿದ್ದಾರೆ ಎಂದು ಹೇಳಿದ್ದರು. ಇದೇ ವೇಳೆ, ಎಚ್​​ಡಿ ಕುಮಾರಸ್ವಾಮಿ ಕೂಡ ದೂರವಾಣಿ ಕರೆ ಮಾಡಿದ್ದರು. ಚುನಾವಣೆಗಾಗಿ 50 ಕೋಟಿ ರೂಪಾಯಿ ಹಣ ನೀಡುವಂತೆ ನನ್ನನ್ನು ಕೇಳಿದ್ದರು. ನಾನು ಹಣ ಕೊಡಲಾಗದು ಎಂದಿದ್ದಕ್ಕೆ ಕುಮಾರಸ್ವಾಮಿ ಕೋಪಿಸಿಕೊಂಡಡು ಎಂದು ದೂರಿನಲ್ಲಿ ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ | Zakir Naik: ಅನಾಥ ಹುಡುಗಿಯರನ್ನು ಮಗಳೆಂದು ಕರೆಯಲು ಸಾಧ್ಯವಿಲ್ಲ; ಅವರು ಮದುವೆಗೆ ಅರ್ಹರು- ಜಾಕಿರ್‌ ನಾಯ್ಕ್‌ ವಿವಾದ

ಹಣ ಕೊಡುವುದಿಲ್ಲ ಎಂದಿದ್ದಕ್ಕೆ, ನಿಮ್ಮ ಪ್ರಾಜೆಕ್ಟ್ ಕಂಪ್ಲೀಟ್ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ದೇವಸ್ಥಾನ ಕಟ್ಟಲು ರಮೇಶ್ ಗೌಡ ಕೂಡ 5 ಕೋಟಿ ರೂಪಾಯಿ ಕೇಳಿದ್ದರು. ತುಂಬಾ ಕಷ್ಟವಿದೆ ಯಾವುದೇ ಕಾರಣಕ್ಕೂ ಹಣ ಕೊಡಲ್ಲ ಅಂದಿದ್ದೆ. 1 ವಾರದಿಂದ ರಮೇಶ್ ಗೌಡ ನಿರಂತರವಾಗಿ ಕಾಟ ಕೊಡುತ್ತಿದ್ದಾರೆ. 2019ರ ಚುನಾವಣೆಯಲ್ಲೂ ಅವರಿಗಾಗಿ ತುಂಬಾ ಖರ್ಚು ಮಾಡಿದ್ದೆವು ಎಂದು ವಿಜಯ್ ಟಾಟ ಹೇಳಿದ್ದರು.