Sunday, 6th October 2024

Just Married Movie: ಶೈನ್ ಶೆಟ್ಟಿ-ಅಂಕಿತಾ ಅಮರ್‌ ಅಭಿನಯದ ʼಜಸ್ಟ್ ಮ್ಯಾರೀಡ್ʼ ಟೀಸರ್‌ ಔಟ್‌; ಮೂವರು ದಿಗ್ಗಜ ನಿರ್ದೇಶಕರ ಸಾಥ್‌

Just Married Movie

ಬೆಂಗಳೂರು: ಅಬ್ಬಾಸ್‌ ಸ್ಟುಡಿಯೋಸ್‌ (Abbs studios) ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್. ಬಾಬಿ ಅವರು ನಿರ್ಮಿಸಿರುವ, ಸಿ.ಆರ್.ಬಾಬಿ ನಿರ್ದೇಶನದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ (Shine Shetty) ಹಾಗೂ ಅಂಕಿತಾ ಅಮರ್ (Ankita Amar) ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ ʼಜಸ್ಟ್ ಮ್ಯಾರೀಡ್ʼ (Just Married Movie) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕರಾದ ರಿಯಲ್ ಸ್ಟಾರ್ ಉಪೇಂದ್ರ, ನಿಥಿಲನ್ ಹಾಗೂ ಅಜಯ್ ಭೂಪತಿ ಅವರು ಒಟ್ಟಾಗಿ ʼಜಸ್ಟ್ ಮ್ಯಾರೀಡ್ʼ ಟೀಸರ್ ಅನಾವರಣಗೊಳಿಸಿದರು.

ಟೀಸರ್ ಬಿಡುಗಡೆಗೂ ಮುನ್ನ ಅಜನೀಶ್ ಲೋಕನಾಥ್ ಅವರ ತಂದೆ – ತಾಯಿ ಹಾಗೂ ಈಗಷ್ಟೇ ಮದುವೆಯಾಗಿರುವ ನೂತನ ದಂಪತಿಗಳನ್ನು ಸನ್ಮಾನಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಉಪೇಂದ್ರ ಮಾತನಾಡಿ, ʼʼನಾನು ಸಿ.ಆರ್. ಬಾಬಿ ಅವರ ಕೆಲಸವನ್ನು ಹತ್ತಿರದಿಂದ ನೋಡಿದ್ದೇನೆ. ಅದ್ಭುತ ಕಾರ್ಯವೈಖರಿ ಅವರದು. ಅಜನೀಶ್ ಅವರ ಬಗ್ಗೆ ಹೇಳುವ ಹಾಗೆ ಇಲ್ಲ. ನನ್ನ ಚಿತ್ರಕ್ಕೂ ಅವರೆ ಸಂಗೀತ ನಿರ್ದೇಶಕರು. ಕೈತುಂಬಾ ಕೆಲಸ ಇದ್ದರೂ ಸ್ವಲ್ಪವೂ ಅಹಂ ಇಲ್ಲ ಅವರಿಗೆ. ಇನ್ನು ಚಿತ್ರದ ಟೀಸರ್ ತುಂಬಾ ಚೆನ್ನಾಗಿದೆ. ಅಷ್ಟೇ ಚೆನ್ನಾಗಿ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೂ ಇದೆ. ನಿಥಿಲನ್ ಹಾಗೂ ಅಜಯ್ ಭೂಪತಿ ಅವರನ್ನು ಭೇಟಿ ಮಾಡಿಸಿದಕ್ಕೆ ತಂಡಕ್ಕೆ ಧನ್ಯವಾದʼʼ ಎಂದರು.

ಸಿ.ಆರ್. ಬಾಬಿ ಹಾಗೂ ಅಜನೀಶ್ ಅವರ ಜತೆಗಿನ ಒಡನಾಟವನ್ನು ಹಂಚಿಕೊಂಡ ನಿಥಿಲನ್ ಹಾಗೂ ಅಜಯ್ ಭೂಪತಿ ಅವರು ಚಿತ್ರದ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಉಪೇಂದ್ರ ಅವರ ನಿರ್ದೇಶನಕ್ಕೆ ನಾವು ಅಭಿಮಾನಿಗಳು ಎಂದು ಇಬ್ಬರು ನಿರ್ದೇಶಕರು ಈ ಸಂದರ್ಭದಲ್ಲಿ ತಿಳಿಸಿದರು.

ಸಿನಿಮಾ ನಿರ್ದೇಶನ ನನ್ನ ಬಹು ವರ್ಷಗಳ ಕನಸು ಎಂದು ಮಾತನಾಡಿದ ನಿರ್ದೇಶಕಿ ಸಿ.ಆರ್. ಬಾಬಿ, ʼʼನನ್ನ ಮೊದಲ ‌ನಿರ್ದೇಶನದ ಚಿತ್ರವನ್ನು ಅಜನೀಶ್ ನಿರ್ಮಾಣ ಮಾಡಿದ್ದಾರೆ. ಇನ್ನು ದಕ್ಷಿಣ ಭಾರತದ ಈ ಮೂವರು ಜನಪ್ರಿಯ ನಿರ್ದೇಶಕರು ನಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದು ತುಂಬಾ ಖುಷಿಯಾಗಿದೆ. ಟೀಸರ್ ಚೆನ್ನಾಗಿ ಬಂದಿದೆ ಎಂದರೆ ನನ್ನ ತಂಡದ ಸಹಕಾರವೇ ಕಾರಣ ಅವರೆಲ್ಲರಗೂ ಧನ್ಯವಾದ. ಸದ್ಯದಲ್ಲೇ ʼಜಸ್ಟ್ ಮ್ಯಾರೀಡ್ʼ ನಿಮ್ಮ ಮುಂದೆ ಬರಲಿದೆʼʼ ಎಂದರು.

ʼʼನನ್ನ ಮೊದಲ ಗುರು ನನ್ನ ತಂದೆ ಲೋಕನಾಥ್ ಅವರು. ಚಿತ್ರರಂಗದ ನನ್ನ ಗುರುಗಳು ಎಂದರೆ ಕೆ.ಕಲ್ಯಾಣ್ ಹಾಗೂ ಸಿ.ಆರ್.ಬಾಬಿ. ಅವರಿಬ್ಬರಿಗೂ ಧನ್ಯವಾದ ಹೇಳುತ್ತೇನೆ.‌ ಬಾಬಿ ಅವರು ಉತ್ತಮ ಕಥೆ ಮಾಡಿಕೊಂಡಿದ್ದಾರೆ. ಅವರೆ ನಿರ್ದೇಶನ ಕೂಡ ಮಾಡಿದ್ದಾರೆ. ಇಂದು ಟೀಸರ್ ಬಿಡುಗಡೆಯಾಗಿ, ಚಿತ್ರ ರಿಲೀಸ್ ಹಂತಕ್ಕೆ ತಲುಪಿದೆ‌. ಟೀಸರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಹಾಗೂ ತಂಡಕ್ಕೆ ಧನ್ಯವಾದʼʼ ಎಂದು ಅಜನೀಶ್ ಲೋಕನಾಥ್ ಹೇಳಿದರು.

ಶೈನ್ ಶೆಟ್ಟಿ ಮಾತನಾಡಿ, ʼʼಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಸಂತೋಷವಾಗಿದೆ. ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಬಾಬಿ ಹಾಗೂ ಅಜನೀಶ್ ಅವರು ಈ ಚಿತ್ರದ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ನಟಿ ಅಂಕಿತಾ ಅಮರ್ ಅವರು ಉತ್ತಮ ಕಲಾವಿದೆ. ಅವರ ಕ‌ನ್ನಡ ಹಾಗೂ ನಟನೆ ಎರಡು ಚೆಂದ.‌ ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಚಿತ್ರಕ್ಕಿರಲಿʼʼ ಎಂದರು.

ʼʼನಾನು ಅಜನೀಶ್ ಅವರ ಹಾಡುಗಳಿಗೆ ಅಭಿಮಾನಿ.‌ ಒಂದು ದಿನ ಅವರೆ ಕರೆ ಮಾಡಿ, ನೀವೇ ನಮ್ಮ ಚಿತ್ರದ ನಾಯಕಿ ಎಂದರು. ಇದಕ್ಕಿಂತ ಭಾಗ್ಯ ಬೇಕೆ? ಸಿ.ಆರ್. ಬಾಬಿ ಅವರು ಮೊದಲ ಚಿತ್ರವನ್ನೇ ಎಲ್ಲರೂ ಮೆಚ್ಚುವ ಹಾಗೆ ನಿರ್ದೇಶಿಸಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಸಹನಾ ನನ್ನ ಪಾತ್ರದ ಹೆಸರುʼʼ ಎಂದರು ನಾಯಕಿ ಅಂಕಿತಾ ಅಮರ್.‌

ಹಿರಿಯ ನಟಿ ಶ್ರುತಿ‌, ರವಿಶಂಕರ್ ಗೌಡ, ಶ್ರೀಮಾನ್, ವಾಣಿ ಹರಿಕೃಷ್ಣ, ಸಾಕ್ಷಿ ಅಗರವಾಲ್, ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ಸೇರಿದಂತೆ ಅನೇಕ ತಂತ್ರಜ್ಞರು ʼಜಸ್ಟ್ ಮ್ಯಾರೀಡ್ʼ ಸಿನಿಮಾ ಬಗ್ಗೆ ಮಾತನಾಡಿದರು. ಆನಂದ್ ಆಡಿಯೋದ ಆನಂದ್ ಉಪಸ್ಥಿತರಿದ್ದರು. ಹಿರಿಯ ನಟ ದೇವರಾಜ್, ನಿರ್ದೇಶಕ ಅನೂಪ್ ಭಂಡಾರಿ ಮುಂತಾದವರು ʼಜಸ್ಟ್ ಮ್ಯಾರೀಡ್ʼ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ‌45 Movie: ʼ45ʼ ಸಿನಿಮಾ ಶೂಟಿಂಗ್ ಮುಕ್ತಾಯ; ಉಪೇಂದ್ರ ಜತೆ ನಟಿಸಲು ಯಾವಾಗಲೂ ಸಿದ್ಧ ಎಂದ ಶಿವಣ್ಣ