Sunday, 6th October 2024

RG Kar Hospital: ರ‍್ಯಾಗಿಂಗ್, ಲೈಂಗಿಕ ಕಿರುಕುಳ-ಒಂದೆರಡಲ್ಲ ಆರ್‌ಜಿ ಕರ್‌ ಕಾಲೇಜಿನ ಕರ್ಮಕಾಂಡ; 10 ವೈದ್ಯರು ಸಸ್ಪೆಂಡ್‌

kolkata Doctor protest

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆರ್‌ಜಿ ಕರ್‌ ಮೆಡಿಕಲ್‌ ಕಾಲೇಜಿನಲ್ಲಿ(RG Kar Hospital) ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ(Kolkata doctor Murder) ಬೆನ್ನಲ್ಲೇ ವಿದ್ಯಾರ್ಥಿಗಳು ರ್ಯಾಗಿಂಗ್‌, ಲೈಂಗಿಕ ಕಿರುಕುಳ, ನಿಂದನೆ, ಮಾನಸಿಕ ದೈಹಿಕ ಹಿಂಸೆ ಅನುಭವಿಸುತ್ತಿರುವ ಬಗ್ಗೆ ಕೂಗು ಕೇಳಿ ಬಂದಿದೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಇಂಟರ್ನ್‌ಗಳು ಸೇರಿದಂತೆ ಬರೋಬ್ಬರಿ 10 ವೈದ್ಯರನ್ನು ಅಮಾನತುಗೊಳಿಸಿ(Doctors susupended) ಆದೇಶ ಹೊರಡಿಸಲಾಗಿದೆ.

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ವಿದ್ಯಾರ್ಥಿಗಳು, ದೈಹಿಕ ಮತ್ತು ಬೆದರಿಕೆ ಆರೋಪದ ಮೇಲೆ ವೈದ್ಯರು, ಗೃಹ ಸಿಬ್ಬಂದಿ ಮತ್ತು ಇಂಟರ್ನ್‌ಗಳು ಸೇರಿದಂತೆ ಹತ್ತು ಜನರನ್ನುಅಮಾನತುಗೊಳಿಸಲಾಗಿದೆ. ಈ ಆರೋಪಿಗಳು ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ, ಮೌಖಿಕ ನಿಂದನೆ, ಲೈಂಗಿಕ ಕಿರುಕುಳ ಮತ್ತು ಡ್ರಗ್ಸ್ ಮತ್ತು ಮದ್ಯ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಇನ್ನು ಅಮಾನತುಗೊಂಡಿರುವ 10 ವೈದ್ಯರ ಪೈಕಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ಆಶಿಶ್ ಪಾಂಡೆ ಕೂಡ ಸೇರಿದ್ದಾರೆ. ವೈದ್ಯಕೀಯ ಕಾಲೇಜು ಅಧಿಕಾರಿಗಳು ಶನಿವಾರ ವಿಶೇಷ ಕಾಲೇಜು ಕೌನ್ಸಿಲ್ ಸಭೆ ನಡೆಸಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತಪ್ಪಿತಸ್ಥರೆಂದು ಸಾಂಸ್ಥಿಕ ತನಿಖಾ ಸಮಿತಿಯ ವರದಿಯನ್ನು ಪರಿಗಣಿಸಿ ಮುಂದಿನ ಸೂಚನೆ ಬರುವವರೆಗೆ ಅವರನ್ನು ಅಮಾನತುಗೊಳಿಸಿ ಕ್ರಮ ಜರುಗಿಸಿದೆ.

ಇದಲ್ಲದೆ, ಮಂಡಳಿಯು ಮಹಿಳೆಯರ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ 49 ಇತರರ ಹೆಸರನ್ನು ತನಿಖೆ ಮತ್ತು ಶಿಸ್ತು ಕ್ರಮಕ್ಕಾಗಿ ಆರ್‌ಜಿ ಕರ್‌ ಕಾಲೇಜು ಆಂತರಿಕ ದೂರುಗಳ ಸಮಿತಿಗೆ ರವಾನಿಸಿದೆ. ಮತ್ತೊಂದೆಡೆ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಹಾಗೂ ವಿವಿಧ ಬೇಡಿಕೆಗೆ ಆಗ್ರಹಿಸಿ ಕಿರಿಯ ವೈದ್ಯರು ಅನಿರ್ಧಿಷ್ಟಾವಧಿ ಉಪವಾಸ ಪ್ರತಿಭಟನೆ ಕೈಗೆತ್ತಿಕೊಂಡಿದೆ.

ಏನಿದು ಪ್ರಕರಣ?

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಟ್ರೈನಿ ವೈದ್ಯೆ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿರುವ ವೈದ್ಯರ ಒತ್ತಾಯಕ್ಕೆ ಕೊನೆಗೂ ಮಮತಾ ಬ್ಯಾನರ್ಜಿ ಸರ್ಕಾರ ಮಣಿದಿದೆ. ವೈದ್ಯರ ಬೇಡಿಕೆಯಂತೆ ಕೋಲ್ಕತ್ತಾ ಪೊಲೀಸ್‌ ಕಮಿಷನರ್‌ ಮತ್ತು ಆರೋಗ್ಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈ ಸುದ್ದಿಯನ್ನೂ ಓದಿ: Kolkata Doctors Protest: ಕೋಲ್ಕತ್ತಾದಲ್ಲಿ ಮತ್ತೆ ವೈದ್ಯರ ಮುಷ್ಕರ; ವಿವಿಧ ಬೇಡಿಕೆಗಳಿಗೆ ಆಗ್ರಹ