Sunday, 6th October 2024

Mohamed Muizzu India visit: ಬಿರುಕುಬಿಟ್ಟ ಬಾಂಧವ್ಯಕ್ಕೆ ತೇಪೆ ಹಾಕಲು ಭಾರತಕ್ಕೆ ಬಂದಿಳಿದ ಮಾಲ್ದೀವ್ಸ್‌ ಅಧ್ಯಕ್ಷ ಮುಯಿಝು

Maldivian President Mohamed Muizzu

ನವದೆಹಲಿ: ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು (Maldivian President Mohamed Muizzu India Visit) ಅವರು ಭಾರತಕ್ಕೆ ತಮ್ಮ ಅಧಿಕೃತ ಭೇಟಿಗಾಗಿ ಭಾನುವಾರ ಬಂದಿಳಿದಿದ್ದಾರೆ. ಬಿಗಡಾಯಿಸಿರುವ ತಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮುಯಿಝು ಭಾರತದ ಧನಸಹಾಯ ಯಾಚಿಸಲಿದ್ದಾರೆ ಹಾಗೂ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಯತ್ನಿಸಲಿದ್ದಾರೆ.

ಇದು ಭಾರತಕ್ಕೆ ಮುಯಿಝು ಅವರ ಮೊದಲ ದ್ವಿಪಕ್ಷೀಯ ಭೇಟಿ. ಆದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಜೂನ್‌ನಲ್ಲಿ ಇನ್ನಿತರ ಆರು ರಾಷ್ಟ್ರಗಳ ನಾಯಕರೊಂದಿಗೆ ನವದೆಹಲಿಗೆ ಬಂದಿದ್ದರು. ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ಕಠಿಣವಾದ ಹಂತದಲ್ಲಿರುವ ಹೊತ್ತಿನಲ್ಲಿ ಈ ಭೇಟಿ ಆಯೋಜಿಸಲಾಗಿದೆ.

ಮಾಲ್ಡೀವ್ಸ್‌ನಲ್ಲಿ ನಿಯೋಜಿಸಲಾದ 80ಕ್ಕೂ ಹೆಚ್ಚು ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಭಾರತ ಹಿಂತೆಗೆದುಕೊಳ್ಳುವಂತೆ ಮುಯಿಝು ಕಠಿಣ ಎಚ್ಚರಿಕೆ ನೀಡಿದ್ದರು. ಹಾಗೂ ಚೀನಾಕ್ಕೆ ಹತ್ತಿರವಾಗಲು ಪ್ರಯತ್ನಿಸಿದ್ದರು. ನಂತರ ಭಾರತದೊಂದಿಗೆ ಬಾಂಧವ್ಯ ಹಳಸಿತ್ತು. ಭಾರತೀಯ ಪ್ರವಾಸಿಗರು ʼಬಾಯ್ಕಾಟ್‌ ಮಾಲ್ದೀವ್ಸ್‌ʼ ಆರಂಭಿಸಿದ್ದರಿಂದ ಆ ದೇಶಕ್ಕೆ ಇನ್ನಷ್ಟು ಕಷ್ಟವಾಗಿತ್ತು.

ಇದೀಗ ಸುಮಾರು ಒಂದು ಡಜನ್ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುವ ಮುಯಿಝು ಅವರ ತಂಡ ಆಗಮಿಸಿದೆ. ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಮುಯಿಝುರನ್ನು ಬರಮಾಡಿಕೊಂಡರು. ಮೋದಿ ಅವರನ್ನು ಭೇಟಿಯಾಗುವ ಸಂದರ್ಭದಲ್ಲಿ ಉಭಯ ದೇಶಗಳು ಹಲವಾರು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಒಪ್ಪಂದಗಳನ್ನು ಅವರು ಅಂತಿಮಗೊಳಿಸುವ ನಿರೀಕ್ಷೆಯಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S jaishankar) ಅವರು ಮುಯಿಝು ಅವರನ್ನು ಭೇಟಿಯಾಗಿದ್ದಾರೆ. Xನಲ್ಲಿನ ಪೋಸ್ಟ್‌ನಲ್ಲಿ ಜೈಶಂಕರ್ ಅವರು, ಭಾರತ-ಮಾಲ್ಡೀವ್ಸ್ ಸಂಬಂಧವನ್ನು ಹೆಚ್ಚಿಸಲು ಮುಯಿಝು ಅವರ ಬದ್ಧತೆಯನ್ನು ಶ್ಲಾಘಿಸಿದರು. “ನಾಳೆ ಅವರು ಪಿಎಂ ಮೋದಿ ಅವರೊಂದಿಗೆ ನಡೆಸುವ ಮಾತುಕತೆಗಳು ನಮ್ಮ ಸ್ನೇಹ ಸಂಬಂಧಗಳಿಗೆ ಹೊಸ ಪ್ರಚೋದನೆಯನ್ನು ನೀಡುತ್ತವೆ ಎಂಬ ವಿಶ್ವಾಸವಿದೆ” ಎಂದಿದ್ದಾರೆ.

ಹೊಸದಿಲ್ಲಿಗೆ ಆಗಮಿಸುವ ಮುನ್ನ, “ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ಮಾಲ್ಡೀವ್ಸ್‌ನ ನೆರವಿಗೆ ಬರುತ್ತದೆ ಎಂಬ ಭರವಸೆಯಿದೆ” ಎಂದು ಮುಯಿಝು ಹೇಳಿದ್ದರು. “ಭಾರತವು ನಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರಿತುಕೊಂಡಿದೆ. ಭಾರತ ನಮ್ಮ ದೊಡ್ಡ ಅಭಿವೃದ್ಧಿ ಪಾಲುದಾರರಲ್ಲಿ ಒಬ್ಬ. ಅದು ನಮ್ಮ ಹೊರೆಯನ್ನು ತಗ್ಗಿಸಲು, ನಾವು ಎದುರಿಸುತ್ತಿರುವ ಸವಾಲುಗಳಿಗೆ ಉತ್ತಮ ಪರಿಹಾರಗಳನ್ನು ಕಂಡುಕೊಳ್ಳಲು ಯಾವಾಗಲೂ ಸಿದ್ಧವಾಗಿದೆ” ಎಂದು ಹೇಳಿದರು.

ಮಾಲ್ಡೀವ್ಸ್ ವಿದೇಶಿ ವಿನಿಮಯ ಮೀಸಲು $440 ಮಿಲಿಯಕ್ಕೆ ಕುಸಿದಿದ್ದು, ಸುಸ್ತಿದಾರ ಆಗುವ ಆತಂಕ ಎದುರಿಸುತ್ತಿದೆ. ಇದು ಒಂದೂವರೆ ತಿಂಗಳ ಆಮದುಗಳಿಗೆ ಮಾತ್ರ ಸಾಕಾಗುತ್ತದೆ. ಭಾರತವು ಮಾಲ್ಡೀವ್ಸ್‌ಗೆ ಸೆಪ್ಟೆಂಬರ್‌ನಲ್ಲಿ 50 ಮಿಲಿಯ ಡಾಲರ್ ಮೌಲ್ಯದ ಸರ್ಕಾರಿ ಖಜಾನೆ ಬಿಲ್‌ಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ನೆರವನ್ನು ನೀಡಿದೆ. ಹಿಂದೆ ಮೇ ತಿಂಗಳಲ್ಲಿ, ಮಾಲ್ಡೀವ್ಸ್‌ನ ಕೋರಿಕೆಯ ಮೇರೆಗೆ SBI ಅದೇ ಕಾರ್ಯವಿಧಾನದ ಅಡಿಯಲ್ಲಿ $ 50 ಮಿಲಿಯ ಮೌಲ್ಯದ ಖಜಾನೆ ಬಿಲ್‌ಗಳನ್ನು ನೀಡಿತ್ತು. ಭಾರತ ಅಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ $1.4 ಶತಕೋಟಿ ಮೌಲ್ಯದ ಆರ್ಥಿಕ ಬೆಂಬಲವನ್ನು ನೀಡಿದೆ.

ಭಾರತದ ಕುರಿತು ಮುಯಿಝು ಅವರ ಇತ್ತೀಚಿನ ಕಾಮೆಂಟ್‌ಗಳು ಅವರು ಮೆತ್ತಗಾಗಿರುವ ಸೂಚನೆ ನೀಡಿವೆ. ತಾನು ಯಾವುದೇ ದೇಶದ ವಿರುದ್ಧವಾಗಿಲ್ಲ ಎಂದಿರುವ ಅವರು, ಮೋದಿಯವರನ್ನು ಅವಮಾನಿಸುವಂತಹ ಟೀಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿದ ಸಚಿವರ ವಿರುದ್ಧ ಕ್ರಮ ಕೈಗೊಂಡಿದ್ದರು. “ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಮುಕ್ತ ಸಂವಾದ ಮತ್ತು ಪರಸ್ಪರ ತಿಳುವಳಿಕೆಯ ಮೂಲಕ ಪರಿಹರಿಸಬಹುದು” ಎಂದಿದ್ದರು.

ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಮೋದಿ ಅವರೊಂದಿಗೆ ಮಾತುಕತೆ ನಡೆಸುವುದರ ಜೊತೆಗೆ, ಮುಯಿಝು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಭೇಟಿಯಾಗಲಿದ್ದಾರೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ವಾಣಿಜ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ ಗಣನೀಯ ಪ್ರಮಾಣದ ಮಾಲ್ಡೀವ್ಸ್‌ ಡಯಾಸ್ಪೊರಾ ಜೊತೆ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝುಗೆ ಆಹ್ವಾನ