Monday, 7th October 2024

Missing case: ಕೂಳೂರು ಸೇತುವೆಯಿಂದ ಜಿಗಿದ ಮುಮ್ತಾಜ್‌ ಅಲಿ ಸಾವಿಗೂ ಮೊದಲು ಹಲ್ಲೆ, 50 ಲಕ್ಷ ರೂ. ಸುಲಿಗೆ?

mumtaz ali missing

ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವಾ (Moideen Bava) ಅವರ ಸಹೋದರ ಮುಮ್ತಾಜ್‌ ಅಲಿ ಅವರ ಶವ ಕೂಳೂರು (Mangalore news) ಸೇತುವೆಯ ಕೆಳಗೆ ನದಿಯ ನೀರಿನಲ್ಲಿ ಪತ್ತೆಯಾಗಿದೆ. ಮುಮ್ತಾಜ್‌ ಅಲಿ (Mumtaz Ali Missing Case) ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಆದರೆ ಇದರ ಹಿಂದೆ ಲಕ್ಷಾಂತರ ರೂಪಾಯಿ ಹಣದ ಸುಲಿಗೆ (Extortion), ಬ್ಲ್ಯಾಕ್‌ಮೇಲ್‌ (Blackmail) ಹಾಗೂ ಹಲ್ಲೆ (Assault case) ಕೂಡ ಇದೆ ಎಂದು ಗೊತ್ತಾಗಿದೆ.

ಮೊಯಿದ್ದೀನ್ ಬಾವಾ ಸಹೋದರ ಮುಮ್ತಾಜ್ ಅಲಿ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದ್ದು, ಒಬ್ಬ ಮಹಿಳೆ ಸೇರಿದಂತೆ ಆರು ಮಂದಿಯ ಮೇಲೆ ಮುಮ್ತಾಜ್ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಮುಮ್ತಾಜ್ ಅಲಿ ಸಹೋದರ ಹೈದರ್ ಆಲಿಯಿಂದ ದೂರು ನೀಡಿದ್ದು, ಕಾವೂರು ಠಾಣೆಯಲ್ಲಿ ನೀಡಿರುವ ದೂರಿನ ಅನ್ವಯ ಮಹಿಳೆ ಸಹಿತ ಆರು ಮಂದಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಮುಮ್ತಾಜ್ ಅಲಿಗೆ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಬೇಡಿಕೆ ಇಡಲಾಗಿತ್ತು. ಮಹಿಳೆಯನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಲಾಗಿದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶುಐಬ್, ಸತ್ತರ್ ಮತ್ತು ಮುಮ್ತಾಜ್ ಕಾರು ಚಾಲಕ ಸಿರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಮಹಿಳೆ ಮೂಲಕ ಬ್ಲ್ಯಾಕ್ ಮೇಲ್ ಮಾಡಿ 50 ಲಕ್ಷ ರೂಪಾಯಿಗಿಂತ ಅಧಿಕ ಹಣಕಾಸು ವಸೂಲಿ ಮಾಡಿದ್ದಾರೆ. ಇನ್ನಷ್ಟು ಹಣ ನೀಡಲು ಒಪ್ಪದೆ ಹೋದಾಗ ಆರೋಪಿಗಳು ಮುಮ್ತಾಜ್ ಅಲಿ ಮೇಲೆ ಹಲ್ಲೆ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಈ ಬ್ಲ್ಯಾಕ್ ಮೇಲ್‌ ಹಾಗೂ ಹಲ್ಲೆಯಿಂದಲೇ ನನ್ನ ಸಹೋದರ ಅವಮಾನ ಹಾಗೂ ತೇಜೋವಧೆಗೀಡಾಗಿ ಈ ನಿರ್ಧಾರಕ್ಕೆ ಬಂದಿದ್ದಾನೆ. ನನ್ನ ಸಹೋದರ ಶೈಕ್ಷಣಿಕವಾಗಿ, ಧಾರ್ಮಿಕ ಕಾರ್ಯಗಳಿಂದ ಹೆಸರು ಗಳಿಸಿದ್ದ, ಆತನ ಖ್ಯಾತಿಯನ್ನು ಸಹಿಸದ ಕೆಲವು ಶಕ್ತಿಗಳು ಕುತಂತ್ರ ಮಾಡಿದ್ದಾರೆ. ಈ ಕಾರಣದಿಂದಲೇ ನನ್ನ ಸಹೋದರ ಈ ನಿರ್ಧಾರಕ್ಕೆ ಬಂದಿದ್ದಾನೆ. ನನ್ನ ಸಹೋದರನ ಈ ಸ್ಥಿತಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಲಿ. ಆತ ಎಂಟು ದಿನಗಳಿಂದ ಮಾನಸಿಕವಾಗಿ ಖಿನ್ನನಾಗಿದ್ದ. ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೊಯಿದ್ದೀನ್‌ ಬಾವ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Mumtaz Ali Missing case: ಮುಮ್ತಾಜ್‌ ಅಲಿ ಪತ್ತೆಗಿಳಿದ ಈಶ್ವರ ಮಲ್ಪೆ ತಂಡ; ಮಹಿಳೆಯ ಬ್ಲ್ಯಾಕ್‌ಮೇಲ್‌ ಕಾರಣ?