Monday, 7th October 2024

Operation D Movie: ʼಆಪರೇಷನ್ ಡಿʼ ಟೀಸರ್ ಅನಾವರಣಗೊಳಿಸಿದ ಧ್ರುವ ಸರ್ಜಾ

Operation D Movie

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚೆಗಷ್ಟೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅದ್ವಿತ ಫಿಲಂ ಫ್ಯಾಕ್ಟರಿ ಹಾಗೂ ಮಸ್ಕ್ಯುಲರ್ ಗ್ರೂಪ್ ಲಾಂಛನದಲ್ಲಿ ಭಾರ್ಗವಿ ಮುರಳಿ ಹಾಗೂ ರಂಗನಾಥ್ ಬಿ. ನಿರ್ಮಿಸಿರುವ ಹಾಗೂ ತಿರುಮಲೇಶ್ ವಿ ನಿರ್ದೇಶನದ “ಆಪರೇಶನ್ ಡಿ” ಚಿತ್ರದ (Operation D Movie) ಟೀಸರ್ ಅನ್ನು ಬಿಡುಗಡೆ ಶುಭ ಹಾರೈಸಿದ್ದಾರೆ. ಇತ್ತೀಚೆಗೆ ನಡೆದ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಟೀಸರ್ ಬಿಡುಗಡೆಗೊಳಿಸಿದ ಧ್ರುವ ಸರ್ಜಾ (Dhruva Sarja) ಅವರಿಗೆ ಧನ್ಯವಾದ ತಿಳಿಸಿ, “ಆಪರೇಷನ್ ಡಿ” ಕುರಿತು ಮಾತನಾಡಿದರು.

ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ಧನ್ಯವಾದ ಎಂದು ಮಾತು ಆರಂಭಿಸಿದ ನಿರ್ದೇಶಕ ತಿರುಮಲೇಶ್ ವಿ, “ಆಪರೇಷನ್ ಡಿ” ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಆಧರಿಸಿದ ಚಿತ್ರ. ಮರ್ಡರ್ ಮಿಸ್ಟರಿ ಆದರೂ, ಒಂದು ಕಡೆ ರಕ್ತ ಕಾಣುವುದಿಲ್ಲ ಹಾಗೂ ಆಕ್ಷನ್ ಸನ್ನಿವೇಶಗಳಿಲ್ಲ. 2018 – 19 ರಲ್ಲಿ ಹುಟ್ಟಿದ ಈ ಕಾಲ್ಪನಿಕ ಕಥೆ, 2022 ರಲ್ಲಿ ಸಿನಿಮಾ ರೂಪ ಪಡೆದುಕೊಂಡಿತ್ತು. ನನ್ನ ಕಥೆಯನ್ನು ಸಿನಿಮಾವಾಗಿಸಲು ಕುಟುಂಬದವರು ಹಾಗೂ ಮಿತ್ರರು ಸಹಕಾರಿಯಾದರು.

ಸದ್ಯದಲ್ಲೇ ಸೆನ್ಸಾರ್ ಮುಂದೆ ಬರಲಿರುವ ಈ ಚಿತ್ರ ವರ್ಷದ ಕೊನೆಗೆ ತೆರೆಗೆ ಬರಲಿದೆ. ಇಂದು ಟೀಸರ್ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಬರುವ ನಾರಾಯಣ, ಲಕ್ಷ್ಮೀ ಹಾಗೂ ನಾರದ ಪಾತ್ರಗಳಿಗೆ ನಿರ್ದೇಶಕ – ನಟ ಶ್ರೀನಿ, ನಟಿ ಸಂಗೀತಾ ಭಟ್ ಹಾಗೂ ಸುದರ್ಶನ್ ರಂಗಪ್ರಸಾದ್ ಧ್ವನಿ ನೀಡಿದ್ದಾರೆ. ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚಿತ್ರ ಚೆನ್ನಾಗಿ ಮೂಡಿಬರಲು ಚಿತ್ರತಂಡದವರ ಪಾಲು ಹೆಚ್ಚಿದೆ ಎಂದರು.‌

ಚಿತ್ರದಲ್ಲಿ ನಾಲ್ಕು ಹಾಡುಗಳಿವೆ ಎಂದು ಸಂಗೀತ ನಿರ್ದೇಶಕಿ ವೇದಿಕ ತಿಳಿಸಿದರು. ಕೆಂಪಗಿರಿ ಹಾಗೂ ತಿರುಮಲೇಶ್ ತಲಾ ಒಂದು ಹಾಡು ಬರೆದಿದ್ದಾರೆ ಹಾಗೂ ಎರಡು ಹಾಡನ್ನು ವೇದಿಕ ಅವರೆ ಬರೆದಿದ್ದಾರೆ, ಭಾರ್ಗವಿ ಮುರಳಿ, ರಂಗನಾಥ್ ಹಾಗೂ ಸುರೇಶ ಅವರು ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ | BBH 18: ಹಿಂದಿಯಲ್ಲೂ ಶುರುವಾಯಿತು ಬಿಗ್ ಬಾಸ್: ಮನೆಯೊಳಗೆ ಕಾಲಿಟ್ಟ 18 ಸ್ಪರ್ಧಿಗಳು ಇವರೇ ನೋಡಿ

ಚಿತ್ರದಲ್ಲಿ ನಟಿಸಿರುವ ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯ, ವಿನೋದ್ ದೇವ್, ಸ್ನೇಹ ಭಟ್, ಇಂಚರ ಭರತ್ ರಾಜ್, ಮಹೇಶ್ ಎಸ್ ಕಲಿ, ಶ್ರೀಧರ್, ಪೃಥ್ವಿ ಬನವಾಸಿ, ಶಿವಾನಂದ್, ಸಂಚಯ ನಾಗರಾಜ್, ವೆಂಕಟಾಚಲ, ಶಿವಮಂಜು, ಕ್ರೇಜಿ ನಾಗರಾಜ್, ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಕಲನಕಾರ ವಿಕ್ರಮ್ ಶ್ರೀಧರ್, ಛಾಯಾಗ್ರಾಹಕ ಕಾರ್ತಿಕ್ ಪ್ರಸಾದ್, ನೃತ್ಯನಿರ್ದೇಶಕ ಜೈಹರಿಪ್ರಸಾದ್, ಬಿಜಿಎಂ (BGM) ನೀಡಿರುವ ರಾಹುಲ್ ಅರ್ಜ ಕಲಾ ಸೇರಿದಂತೆ ಅನೇಕ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿದ್ದರು.