Monday, 28th October 2024

KL Rahul : ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿದ ಕೆಎಲ್ ರಾಹುಲ್

KL Rahul

ಬೆಂಗಳೂರು: ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ನಾಯಕ ಕೆಎಲ್ ರಾಹುಲ್ (KL Rahul) ಸಮಾಜ ಸೇವೆಯ ಮೂಲಕ ಮಿಂಚುತ್ತಿದ್ದಾರೆ. ಈ ಕಾರಣಕ್ಕೆ ಅವರು ಲಕ್ಷಾಂತರ ಮಂದಿಯ ಹೃದಯ ಗೆದ್ದಿದ್ದಾರೆ. ಅವರೀಗ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ನಿವಾಸಿ ಅಮೃತ್ ಮಾವಿನಕಟ್ಟಿ (20) ಎಂಬ ವಿದ್ಯಾರ್ಥಿ ತನ್ನ ಶಿಕ್ಷಣ ಮುಂದುವರಿಸಲು ರಾಹುಲ್ ಆರ್ಥಿಕ ನೆರವು ನೀಡಿದ್ದಾರೆ.

ಅಮೃತ್ ಮಾವಿನಕಟ್ಟಿ ಕಳೆದ ವರ್ಷ ಕ್ರಿಕೆಟಿಗನಿಂದ ಬೆಂಬಲ ಪಡೆದುಕೊಂಡಿದ್ದರು. ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅಮೃತ್ ಗೆ ಮೊದಲ ವರ್ಷದ B.Com ಪಡೆಯಲು ನೆರವಾಗಿದ್ದರು. ಇದೀಗ ಅವರ ಶೈಕ್ಷಣಿಕ ವೆಚ್ಚವನ್ನು ಭರಿಸಲು ರಾಹುಲ್ ಬದ್ಧರಾಗಿದ್ದು, ಅವರ ಅಧ್ಯಯನವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೃತ್ ಮಾವಿನಕಟ್ಟಿ, ಕಳೆದ ವರ್ಷ ಪ್ರವೇಶ ಪಡೆಯಲು ಸಹಾಯ ಮಾಡಿದ ಕೆಎಲ್ ರಾಹುಲ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ರಾಹುಲ್ ತನ್ನ ಅಧ್ಯಯನಕ್ಕಾಗಿ 75,000 ರೂ.ಗಳನ್ನು ಒದಗಿಸಿದ್ದಾರೆ ಮತ್ತು ತಮ್ಮ ಮೊದಲ ವರ್ಷದಲ್ಲಿ 9.3 ಸಿಜಿಪಿಎ ಮೂಲಕ ಈ ನಂಬಿಕೆ ಉಳಿಸಿಕೊಂಡಿದ್ದೇನೆ ಎಂದು ಅಮೃತ್ ಹೇಳಿದ್ದಾರೆ. ರಾಹುಲ್, ಸಮಾಜ ಸೇವಕ ಮಂಜುನಾಥ ಹೆಬಸೂರು ಮತ್ತು ಬಾಗಲಕೋಟೆಯ ನಿತಿನ್ ಅವರಿಗೆ ಇದೇ ವೇಳೆ ಅಮೃತ್‌ ಧನ್ಯವಾದ ಅರ್ಪಿಸಿದ್ದಾರೆ.

“ಕಳೆದ ವರ್ಷ ಕೆಎಲ್ ರಾಹುಲ್ ನನಗೆ ಕಾಲೇಜಿಗೆ ಪ್ರವೇಶ ಪಡೆಯಲು ಸಹಾಯ ಮಾಡಿದರು. ನಾನು ಮೊದಲ ವರ್ಷದಲ್ಲಿ 9.3 ಸಿಜಿಪಿಎ ಸ್ಕೋರ್ ಮಾಡಿದ್ದೇನೆ. ಅವರು ಭರವಸೆಯನ್ನು ಪೂರೈಸಿದ್ದೇನೆ, ಮತ್ತೆ ನನ್ನ ಎರಡನೇ ವರ್ಷದ ಅಧ್ಯಯನಕ್ಕಾಗಿ 75,000 ರೂ.ಗಳನ್ನು ಪಾವತಿಸಿದ್ದಾರೆ” ಎಂದು ಅಮೃತ್‌ ಹೇಳಿದ್ದಾಋಎ.

“ನನ್ನ ಅಧ್ಯಯನವನ್ನು ಮುಂದುವರಿಸಲು ಆರ್ಥಿಕವಾಗಿ ಸಹಾಯ ಮಾಡಿದ ಕೆಎಲ್ ರಾಹುಲ್, ಮಂಜುನಾಥ್ ಹೆಬಸೂರ್ ಮತ್ತು ಬಾಗಲಕೋಟೆಯ ನಿತಿನ್ ಅವರಿಗೆ ಧನ್ಯವಾದಗಳು. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ನಾನು ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರಿಸುತ್ತೇನೆ” ಎಂದು ಅಮೃತ್ ಹೇಳಿದರು. ರಾಹುಲ್ ಈ ಹಿಂದೆ ಧಾರವಾಡದ ಸೃಷ್ಟಿ ಕುಳವಿ ಎಂಬ ವಿದ್ಯಾರ್ಥಿನಿಯ ಶಾಲಾ ಶುಲ್ಕ ಭರಿಸಿದ್ದರು. ಅದೇ ರೀತಿ ಹಲವರಿಗೆ ವೈದ್ಯಕೀಯ ನೆರವು ಕೂಡ ನೀಡಿದ್ದರು.

ರಾಹುಲ್ ಬಗ್ಗೆ ಮಾತನಾಡುವುದಾದರೆ, ಕಳೆದ ಒಂದು ವರ್ಷದಿಂದ ಅವರ ವೃತ್ತಿಜೀವನವು ಗಾಯಗಳಿಂದ ಹಾಳಾಗಿದೆ. ಐಪಿಎಲ್ 2023 ರ ಋತುವಿನಲ್ಲಿ ಸ್ನಾಯುಸೆಳೆತದಿಂದ ಬಳಲಿದ್ದ ಅವರು ಕೆಲವು ತಿಂಗಳುಗಳ ಕಾಲ ಆಟದಿಂದ ಹೊರಗುಳಿದಿದ್ದರು. ಬಲಗೈ ಬ್ಯಾಟ್ಸ್ಮನ್ ಏಷ್ಯಾ ಕಪ್ 2023 ರ ಸಮಯದಲ್ಲಿ ಆಟಕ್ಕೆ ಮರಳಿದ್ದರು. ಭಾರತ ತಂಡದ ಭಾಗವಾದರು.

ಇದನ್ನೂ ಓದಿ: India vs Bangladesh : ಭಾರತಕ್ಕೆ ಮತ್ತೆ ಸುಲಭ ಗುರಿಯಾಗುವುದೇ ಬಾಂಗ್ಲಾದೇಶ?

ಜನವರಿಯಲ್ಲಿಗಾಯದ ಕಾರಣಕ್ಕೆ ಇಂಗ್ಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಐಪಿಎಲ್ 2024 ರ ಸಮಯದಲ್ಲಿ ಅವರು ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದರು. ಅಲ್ಲಿ ಲಕ್ನೊ ತಂಡವನ್ನು ಮತ್ತೆ ಮುನ್ನಡೆಸಿದ್ದರು. ಆದರೆ ಅವರಿಗೆ ಉತ್ತಮ ಯಶಸ್ಸು ದೊರಕಿರಲಿಲ್ಲ.

32 ವರ್ಷದ ಕ್ರಿಕೆಟಿಗ ಜುಲೈ-ಆಗಸ್ಟ್‌ನಲ್ಲಿ ಶ್ರೀಲಂಕಾ ಪ್ರವಾಸಕ್ಕಾಗಿ ಭಾರತೀಯ ತಂಡವನ್ನು ಮತ್ತೆ ಸೇರಿಕೊಂಡಿದ್ದರು. ಅವರು ದುಲೀಪ್ ಟ್ರೋಫಿ 2024 ಋತುವಿನ ಆರಂಭಿಕ ಪಂದ್ಯದಲ್ಲಿ ಆಡಿದ್ದಾರೆ. ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದ ಸಂದರ್ಭದಲ್ಲಿ ರಾಹುಲ್ ಕೊನೇ ಬಾರಿ ಕಾಣಿಸಿಕೊಂಡು ಮೂರು ಇನಿಂಗ್ಸ್‌ಗಳಲ್ಲಿ 106 ರನ್ ಗಳಿಸಿದ್ದರು.