Wednesday, 23rd October 2024

Haryana Election Result : ಹರಿಯಾಣದಲ್ಲಿ ಜಿಲೇಬಿ ಟ್ರೆಂಡಿಂಗ್‌; ಕಾಂಗ್ರೆಸ್‌ಗೆ ಇದು ಸಿಹಿ ಸುದ್ದಿಯಲ್ಲ

Haryana Election Result

ಬೆಂಗಳೂರು: ಹರಿಯಾಣ ಚುನಾವಣಾ ಫಲಿತಾಂಶದ (Haryana Election Result) ಬಳಿಕ ಜಿಲೇಜಿ ಜೋರು ಟ್ರೆಂಡಿಂಗ್‌ನಲ್ಲಿದೆ (Jalebi Trending). ಆದರೆ ಅದು ಕಾಂಗ್ರೆಸ್‌ ಪಾಲಿಗೆ ಸಿಹಿ ಸುದ್ದಿಯಲ್ಲ. ಯಾಕೆಂದರೆ ಲೋಕಭೆಯಲ್ಲಿ ಪ್ರತಿಪಕ್ಷಗಳ ನಾಯಕ ಹಾಗೂ ಕಾಂಗ್ರೆಸ್‌ ನಾಯಕ ಬಾರಿ ರಾಹುಲ್ ಗಾಂಧಿ ಜಿಲೇಬಿ ಮೂಲಕ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ಕಾಂಗ್ರೆಸ್‌ಗೆ ಹರಿಯಾಣದಲ್ಲಿ ಅನಿರೀಕ್ಷಿತ ಸೋಲು ಹಾಗೂ ಬಿಜೆಪಿಗೆ ಹ್ಯಾಟ್ರಿಕ್‌ ಗೆಲುವು.

ಸಕ್ಕರೆ ಪಾಕದಲ್ಲಿ ಅದ್ದಿರುವ ಸುರುಳಿ ಸಿಹಿ ಹಿಟ್ಟಿನ ಜಿಲೇಬಿಯನ್ನು ಹರಿಯಾಣ ರಾಜಕೀಯಕ್ಕೆ ಎಳೆದು ತಂದವರು ರಾಹುಲ್ ಗಾಂಧಿ. ಆದರೀಗ ಬಿಜೆಪಿ ಈ ಜನಪ್ರಿಯ ಸಿಹಿ ತಿಂಡಿಯನ್ನು ರಾಹುಲ್ ಗಾಂಧಿಗೆ ತಿನ್ನಿಸುತ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಹರ್ಯಾಣ ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಅವರು ರಾಹುಲ್ ಗಾಂಧಿಗೆ ಮಥುರಾಮ್ ಜಿಲೇಬಿ ಉಡುಗೊರೆಯಾಗಿ ನೀಡಿದ್ದರು. ಈ ವೇಳೆ ರಾಹುಲ್‌ ಇದು 54 ವರ್ಷಗಳಲ್ಲಿ ತಾವು ತಿಂದ “ಅತ್ಯುತ್ತಮ ಜಿಲೇಬಿ” ಎಂದು ಹೇಳಿಕೊಂಡರು. ಅಲ್ಲಿಗೆ ನಿಲ್ಲದ ಅವರು ಪ್ರತಿಯೊಬ್ಬರೂ ಈ ಜಿಲೇಬಿಗಳನ್ನು ತಿನ್ನುವ ದಿನಗಳು ದೂರವಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಲೇಬಿಗಳನ್ನು ಕಾರ್ಖಾನೆ ಮಟ್ಟದಲ್ಲಿ ಉತ್ಪಾದಿಸುತ್ತೇವೆ. ಹೊಸ ಉದ್ಯೋಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದರು. ಹೀಗಾಗಿ ಜಿಲೇಜಿ ಹರಿಯಾಣ ಚುನಾವಣಾ ಕಣದ ಆಕರ್ಷಕ ಸಂಗತಿಯಾಯಿತು.

ರಾಹುಲ್ ಗಾಂಧಿ ಹೇಳಿದ್ದೇನು?

ಮಥುರಾಮ್‌ ಜಿಲೇಬಿಯ ರುಚಿಯನ್ನು ನೋಡಿದ್ದೇನೆ. ಇಂದು ನಾನು ನನ್ನ ಜೀವನದ ಅತ್ಯುತ್ತಮ ಜಿಲೇಬಿ ತಿಂದೆ. ನನ್ನ ಸಹೋದರಿ ಪ್ರಿಯಾಂಕಾಗೆ ಈ ಖುಷಿಯ ಸಂದೇಶ ಹಂಚಿಕೊಂಡಿದ್ದೇನೆ. ನಾನು ನಿಮಗೂ ಒಂದು ಬಾಕ್ಸ್ ಜಿಲೇಬಿ ತರುವೆ. ಗೋಹಾನಾದ ಜಿಲೇಬಿ ಭಾರತದ ಮತ್ತು ವಿಶ್ವದ ಎಲ್ಲಾ ಮೂಲೆಗಳನ್ನು ತಲುಪಬೇಕು ಎಂದು ಹರಿಯಾಣ ಕಾಂಗ್ರೆಸ್ ನಾಯಕರಿಗೆ ಹೇಳಿದ್ದೇನೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Basavaraja Bommai: ಕಾಂಗ್ರೆಸ್‌ನ ಜಾತಿ ರಾಜಕಾರಣವನ್ನು ಹರಿಯಾಣ ಜನತೆ ತಿರಸ್ಕರಿಸಿದ್ದಾರೆ: ಬೊಮ್ಮಾಯಿ

“ಈ ಜಿಲೇಬಿ ದೇಶ ಮತ್ತು ವಿದೇಶಗಳಿಗೆ ಹೋದರೆ, ಬಹುಶಃ ಅವರ ಅಂಗಡಿಗಳು ಕಾರ್ಖಾನೆಯಾಗಿ ಬದಲಾಗುತ್ತವೆ. ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ” ಎಂದು ರಾಹುಲ್ ಹೇಳಿದ್ದರು. ಹರಿಯಾಣ ಚುನಾವಣಾ ಫಲಿತಾಂಶಕ್ಕೆ ಮೂರು ದಿನಗಳ ಮೊದಲು, ರಾಹುಲ್ ಗಾಂಧಿ ರುಚಿಕರವಾದ ಮಥುರಾಮ್ ಜಿಲೇಬಿಯನ್ನು ಚರ್ಚಿಸುವ ಇನ್ಸ್ಟಾಗ್ರಾಮ್ ವೀಡಿಯೊ ಕೂಡ ಪೋಸ್ಟ್ ಮಾಡಿದ್ದರು.

ಹೀಗೆ ರಾಹುಲ್ ಗಾಂಧಿ ಮಥುರಾಮ್ ಅವರ ಜಿಲೇಬಿ ಮೂಲಕ ಹರಿಯಾಣದ ಜನರ ಮನಸ್ಸು ಗೆಲ್ಲಲು ಪ್ರಯತ್ನಿಸಿದ್ದರು. ಫಲಿತಾಂಶದಲ್ಲಿ ಹೇಳುವುದಾಗಿ ಅವರಿಗೆ ಜಿಲೆಬಿಯ ಸಿಹಿ ದೊರಕಿಲ್ಲ.

ಹರಿಯಾಣದ ಜನರು ಜಿಲೇಬಿಯ ಸಿಹಿಗಾಗಿ ಬಿಜೆಪಿ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ. ಹೀಗಾಗಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿತು. ಆ ಬಳಿಕ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡಲು ಅರಂಭಿಸಿದರು.

“ಜಿಲೇಬಿ ಕಾರ್ಖಾನೆಗಳು ಅಸ್ತಿತ್ವದಲ್ಲಿ ಉಳಿಯಲಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತು ಗೆದ್ದಿರುವ ಬಿಜೆಪಿಯ ಕಾರ್ಯಕರ್ತರು ಕಂಡ ಕಂಡಲ್ಲಿ ಜಿಲೇಬಿ ಕರಿದ ಸಂಭ್ರಮಿಸುತ್ತಿದ್ದಾರೆ. ಸಂಭ್ರಮ ಮಾಡಿದ ಹಾಗೆಯೂ ಆಯಿತು, ಜಿಲೇಜಿ ತಿಂದ ಹಾಗೆಯೂ ಆಯಿತು ಎಂಬುದು ಅವರ ಉದ್ದೇಶ.

ಹರಿಯಾಣದಲ್ಲಿ ಬಿಜೆಪಿ ಗೆಲುವು ಪಕ್ಕಾ ಆಗುತ್ತಿದ್ದಂತೆ ಜಿಲೇಬಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಯಿತು. ನಾನಾ ರೀತಿಯ ಮೀಮ್ಸ್‌ಗಳು, ವಿಡಿಯೊಗಳು, ಚಿತ್ರಗಳು ಸೋಶಿಯಲ್ ಮೀಡಿಯಾಗಲ್ಲಿ ಹರಿದಾಡಿದವು. ಪ್ರಮುಖವಾಗಿ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ವಿಡಿಯೊಗಳು ಹಾಗೂ ಚಿತ್ರಗಳು ಬಿಡುಗಡೆಗೊಂಡವು.