Wednesday, 23rd October 2024

Haryana Assembly Election Result: ಹರಿಯಾಣದಲ್ಲಿ ಬಿಜೆಪಿ ಗೆಲುವಿನ ರೂವಾರಿ ಸತೀಶ್ ಪೂನಿಯಾ!

Haryana Election

ಹರಿಯಾಣ ವಿಧಾನಸಭೆ (Haryana Assembly Election Result) ಚುನಾವಣೆಯಲ್ಲಿ(Haryana Election) ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ಬಿಜೆಪಿ (BJP) ಉತ್ಸಾಹ ಇಮ್ಮಡಿಯಾಗಿದೆ. ಇದರ ಹಿಂದೆ ರಾಜಸ್ಥಾನದ ಬಿಜೆಪಿಯ ಮಾಜಿ ಅಧ್ಯಕ್ಷ (former Rajasthan BJP president) ಸತೀಶ್ ಪೂನಿಯಾ (Satish Poonia) ಅವರ ರಣತಂತ್ರವಿದೆ. ಹೀಗಾಗಿ ಹರಿಯಾಣದಲ್ಲಿ ಗೆಲುವಿನ ಬಳಿಕ ಸತೀಶ್ ಪೂನಿಯಾ ಅವರ ಕೊಡುಗೆಯನ್ನು ಪಕ್ಷದೊಳಗೆ ಗೌರವಿಸಲಾಗುತ್ತಿದೆ.

ರಾಜ್ಯದ ಉಸ್ತುವಾರಿಯಾಗಿ ಸತೀಶ್ ಪೂನಿಯಾ ಹರಿಯಾಣದಲ್ಲಿ ಅದ್ಭುತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಕಾರ್ಯತಂತ್ರವು ಪಕ್ಷದ ಗೆಲುವಿಗೆ ನಿರ್ಣಾಯಕವಾಗಿತ್ತು. ಸತೀಶ್ ಪೂನಿಯಾ ಅವರು ಹರಿಯಾಣದ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಂಡಾಗ ಬಿಜೆಪಿ ಗಮನಾರ್ಹ ಗೆಲುವು ಸಾಧಿಸುತ್ತದೆ ಎಂದು ಕೆಲವರು ನಿರೀಕ್ಷೆ ಮಾಡಿದ್ದರು. ಆದರೆ 10 ವರ್ಷಗಳ ಅಧಿಕಾರ ವಿರೋಧಿ ಭಾವನೆ ಮತ್ತು ಲೋಕಸಭಾ ಫಲಿತಾಂಶಗಳ ಬಳಿಕ ಇದು ಅಸಾಧ್ಯ ಎಂದೇ ಹೆಚ್ಚಿನವರು ಅಂದುಕೊಂಡಿದ್ದರು. ಆದರೆ ಸತೀಶ್ ಪೂನಿಯಾ ಅವರು ಮಾತ್ರ ಬಿಜೆಪಿ ಮೂರನೇ ಅವಧಿಗೆ ಅಧಿಕಾರ ಹಿಡಿಯಲಿದೆ ಎನ್ನುವ ಅಚಲ ನಂಬಿಕೆಯನ್ನು ಹೊಂದಿದ್ದರು.

ಹಿಂದುಳಿದ ವರ್ಗ ಮತ್ತು ದಲಿತ ಪ್ರಾತಿನಿಧ್ಯದ ವಿಚಾರದಲ್ಲಿ ಕಾಂಗ್ರೆಸ್‌ಗೆ ನೇರವಾಗಿ ಸವಾಲು ಹಾಕಿದ ಅವರು ಹಿಂದುಳಿದ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಎಂದು ಘೋಷಿಸಲು ಧೈರ್ಯಬೇಕು ಎಂದಿದ್ದರು. ಅವರ ಈ ದಿಟ್ಟ ಸವಾಲು ರಾಜಕೀಯ ಸನ್ನಿವೇಶವನ್ನು ಸಂಪೂರ್ಣವಾಗಿ ಬದಲಾಯಿಸಿತ್ತು.

Haryana Election

ದಲಿತರು, ಹಿಂದುಳಿದ ವರ್ಗಗಳ ಸಮಸ್ಯೆಯ ಜೊತೆಗೆ ಮೀಸಲಾತಿ ವಿಷಯದಲ್ಲೂ ಬಿಜೆಪಿ ಆಕ್ರಮಣಕಾರಿ ನಡೆಯಿಂದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಪರದಾಡಬೇಕಾಯಿತು. ಹಿರಿಯ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ಅವರ ಅಸಮಾಧಾನ ಬಿಜೆಪಿಗೆ ದೊಡ್ಡ ಅಸ್ತ್ರವಾಯಿತು. ಪೂನಿಯಾ ಕೇವಲ ಹಿಂದುಳಿದ ವರ್ಗಗಳ ಗಮನವನ್ನು ಮಾತ್ರ ಸೆಳೆಯಲಿಲ್ಲ. ರಾಜಕೀಯವಾಗಿ ಜಾಟ್ ಸಮುದಾಯವನ್ನೂ ಸೆಳೆಯುವ ಪ್ರಯತ್ನ ಮಾಡಿದರು. ಕಾಂಗ್ರೆಸ್ ಗೆ ಜಾಟ್ ಮತದಾರರಿಂದ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ಜಾಟ್‌ ಮತದಾರರ ಒಲವನ್ನು ಬಿಜೆಪಿ ಕಡೆ ಸೆಳೆಯಲೂ ಪೂನಿಯಾ ಹರಸಾಹಸ ನಡೆಸಿದರು.

ಹರಿಯಾಣದ ಜವಾಬ್ದಾರಿಯನ್ನು ಪೂನಿಯಾ ಅವರಿಗೆ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ದಿಟ್ಟ ನಿರ್ಧಾರ ತೆಗೆದುಕೊಂಡಿತ್ತು. ಪ್ರತಿ ವಿಧಾನಸಭಾ ಸ್ಥಾನಕ್ಕೂ ಭೇಟಿ ನೀಡಿದ ಪೂನಿಯಾ ಕಾರ್ಯಕರ್ತರೊಂದಿಗೆ ನೇರವಾಗಿ ಸಂವಾದ ನಡೆಸಿ ನಿರಾಶೆಗೊಂಡಿದ್ದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ಪೂನಿಯಾ ಅವರಿಗೆ ಪಕ್ಷದ ಹೈಕಮಾಂಡ್ ಮತ್ತು ಸಂಘದ ಸಂಪೂರ್ಣ ಬೆಂಬಲ ಸಿಕ್ಕಿತು. ಆದರೆ, ಲೋಕಸಭೆ ಚುನಾವಣೆಯಲ್ಲಿ ನಿರಾಶಾದಾಯಕ ಫಲಿತಾಂಶದ ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘವು ಹರಿಯಾಣವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು ಮತ್ತು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು.

ಸಂಘವು 1500ಕ್ಕೂ ಹೆಚ್ಚು ಸಭೆಗಳನ್ನು ನಡೆಸಿತು. ಸಂಘದ ಹಿರಿಯ ನಾಯಕ ಅರುಣ್ ಕುಮಾರ್ ಅವರೇ ಇದರ ನೇತೃತ್ವ ವಹಿಸಿದ್ದರು. ಇದೇ ವೇಳೆ ಪೂನಿಯಾ ಜಾಟ್ ಮತದಾರರ ಓಲೈಕೆಗೆ ತೊಡಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೀಗೆ ದೊಡ್ಡ ದೊಡ್ಡ ನಾಯಕರೆಲ್ಲ ತಮ್ಮದೇ ಆದ ರೀತಿಯಲ್ಲಿ ಚುನಾವಣಾ ಪ್ರಚಾರ ತಂತ್ರದಲ್ಲಿ ಪಾಲ್ಗೊಂಡಿದ್ದರು.

Vinesh Phogat: ನನ್ನ ಹೆಸರಿನ ಶಕ್ತಿಯಿಂದ ವಿನೇಶ್‌ಗೆ ಗೆಲುವು; ಬ್ರಿಜ್ ಭೂಷಣ್ ತಿರುಗೇಟು

ಬಿಜೆಪಿಯು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆ ವಿರೋಧ ಪಕ್ಷವು ಆಂತರಿಕ ಕಲಹಗಳಿಂದ ಕಂಗೆಟ್ಟಿತು. ಪೂನಿಯಾ ಮತ್ತು ಬಿಜೆಪಿಯ ಕಾರ್ಯತಂತ್ರದ ತಂತ್ರಗಳಲ್ಲಿ ಕಾಂಗ್ರೆಸ್ ಸಿಕ್ಕಿಬಿದ್ದಿತು. ದಲಿತ ಮತದಾರರು ದೂರವಾಗುತ್ತಿದ್ದಾರೆ ಎನ್ನುವ ಅರಿವಾಗುತ್ತಿದ್ದಂತೆ ಆತುರಾತುರವಾಗಿ ಬಿಜೆಪಿಯಲ್ಲಿದ್ದ ಪ್ರಮುಖ ನಾಯಕ ಅಶೋಕ್ ತನ್ವಾರ್ ಅವರನ್ನು ಪಕ್ಷಕ್ಕೆ ಕರೆ ತಂದಿತು. ಆದರೆ ಅದು ತಡವಾಗಿತ್ತು. ಬಿಜೆಪಿ ದಲಿತ ಮತದಾರರ ಬೆಂಬಲವನ್ನು ಮಾತ್ರ ಪಡೆಯಲಿಲ್ಲ, ಅದು ಜಾಟ್ ಮತದಾರರ ನಡುವೆಯೂ ಪಾದಯಾತ್ರೆ ಮಾಡಿತು. ಕಾಂಗ್ರೆಸ್‌ನ ಕಾರ್ಯತಂತ್ರದ ತಪ್ಪು ಹೆಜ್ಜೆಗಳನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಂಡಿತ್ತು. ಈ ಎಲ್ಲ ಕಾರ್ಯತಂತ್ರಗಳ ಹಿಂದಿನ ಪ್ರಮುಖ ವ್ಯಕ್ತಿ ಸತೀಶ್‌ ಪೂನಿಯಾ.