Wednesday, 23rd October 2024

Tumkur Dasara: ಇಂದಿನಿಂದ 2 ದಿನಗಳ ಕಾಲ ದಸರಾ ಸಾಂಸ್ಕೃತಿಕ ಮೆರುಗು; ಏನೇನು ಕಾರ್ಯಕ್ರಮ?

Tumkur Dasara

ತುಮಕೂರು: ತುಮಕೂರು ದಸರಾ ಉತ್ಸವದ (Tumkur Dasara) ಅಂಗವಾಗಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಅಮರ ಶಿಲ್ಪಿ ಜಕಣಾಚಾರಿ ಬೃಹತ್ ವೇದಿಕೆಯಲ್ಲಿ ಅ. 11 ಹಾಗೂ 12ರಂದು ಪ್ರತಿ ದಿನ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ದಸರಾ ಉತ್ಸವದ ಮೆರುಗನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಡಾ: ಶಿವಕುಮಾರ ಸ್ವಾಮೀಜಿ ಧಾರ್ಮಿಕ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಮಹಾಗೌರಿ (ಮಹಾಕಾಳಿ) ಅಲಂಕಾರದಲ್ಲಿದ್ದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ತುಮಕೂರು ದಸರಾ ಪ್ರಯುಕ್ತ ಅಕ್ಟೋಬರ್ 11ರ ಆಯುಧ ಪೂಜೆ ದಿನದಂದು ಏರ್ಪಡಿಸಿರುವ ಮ್ಯಾರಾಥಾನ್, ನಾಡಕುಸ್ತಿ, ಆಹಾರ ಮೇಳ, ವಸ್ತುಪ್ರದರ್ಶನ, ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | KUWJ Conference: ತುಮಕೂರಿನಲ್ಲಿ ನವೆಂಬರ್‌ನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ

ಕ್ರೀಡಾ ದಸರಾ ಉತ್ಸವದಲ್ಲಿ ಅಕ್ಟೋಬರ್ 11ರ ಬೆಳಗ್ಗೆ 7 ಗಂಟೆಗೆ ಮಹಾತ್ಮಗಾಂಧಿ ಕ್ರೀಡಾಂಗಣದಿಂದ ಮ್ಯಾರಾಥಾನ್ ಓಟ ಏರ್ಪಡಿಸಲಾಗಿದ್ದು, ಕ್ರೀಡಾಪಟುಗಳು, ಅಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ನಾಡಕುಸ್ತಿ, ಆಹಾರ ಮೇಳ, ಪ್ರತಿಷ್ಠಿತ ಎಚ್.ಎ.ಎಲ್. ಸಂಸ್ಥೆಯಿಂದ ಹೆಲಿಕಾಪ್ಟರ್ ಶೋ; ಇಸ್ರೋ ಸಂಸ್ಥೆಯಿಂದ ಬಾಹ್ಯಾಕಾಶ ಕುರಿತು ವಿಜ್ಞಾನಿ ರಾಜಾ ರಾಮಣ್ಣ ವಸ್ತುಪ್ರದರ್ಶನ; ಕೃಷಿ, ತೋಟಗಾರಿಕೆ, ಅರಣ್ಯ, ಮೀನುಗಾರಿಕೆ, ಮತ್ತಿತರ ಇಲಾಖೆಗಳಿಂದ ಅತ್ಯಾಕರ್ಷಕ ವಸ್ತುಪ್ರದರ್ಶನ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದ ಅಮರ ಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಸಂಜೆ 7-15 ಗಂಟೆಗೆ ಆಕರ್ಷಕ ಲೇಸರ್ ಶೋ; 7.30 ಗಂಟೆಯಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಗುರುಕಿರಣ್ ಹಾಗೂ ಕಂಬದ ರಂಗಯ್ಯ ಮತ್ತು ತಂಡದವರು ಕನ್ನಡ ಗೀತೆಗಳ ಮೂಲಕ ಜನರನ್ನು ರಂಜಿಸಲಿದ್ದಾರೆ ಎಂದು ತಿಳಿಸಿದರು.

ಅ.12ರ ವಿಜಯದಶಮಿ ಕಾರ್ಯಕ್ರಮಗಳು

ಅ. 12ರ ವಿಜಯದಶಮಿ ದಿನದಂದು ಮಧ್ಯಾಹ್ನ 1 ಗಂಟೆಗೆ ನಗರದ ಟೌನ್‌ಹಾಲ್ ವೃತ್ತದಿಂದ ಮೆರವಣಿಗೆ ನಡೆಯಲಿದ್ದು, ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 5 ಗಂಟೆಯಿಂದ ವಿಜಯದಶಮಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶಮೀ ಪೂಜೆ; ಬೆಳಿಗ್ಗೆ 10 ರಿಂದ 1 ಗಂಟೆಯವರಗೆ ನಗರದ ಕನ್ನಡ ಭವನದಲ್ಲಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ.

ನಂತರ ಸಂಜೆ 5.30 ರಿಂದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತುಮಕೂರಿನ ಶ್ರೀ ಸಾಯಿರಾಮನ್ ನೃತ್ಯ ಕೇಂದ್ರದಿಂದ ನವದುರ್ಗೆಯರ ಇತಿಹಾಸ ಕುರಿತ ನೃತ್ಯ ರೂಪಕ; 6.30 ಗಂಟೆಯಿಂದ ಗಾಯಕ ವಿಜಯ್‌ಪ್ರಕಾಶ್ ಮತ್ತು ತಂಡದವರಿಂದ ಸಂಗೀತ ರಸಸಂಜೆ ಹಾಗೂ ಡ್ರೋಣ್ ಶೋ; ರಾತ್ರಿ 9.30 ಗಂಟೆಗೆ ಸಮಾರೋಪ ಸಮಾರಂಭ; 10.15 ಗಂಟೆಗೆ ಹಸಿರು ಸಿಡಿಮದ್ದುಗಳಿಂದ ಬಾಣ-ಬಿರುಸು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | World Mental Health Day 2024: ವಿಶ್ವ ಮಾನಸಿಕ ಆರೋಗ್ಯ ದಿನ; ಆಫೀಸ್‌‌ಗಳು ಪ್ರೆಷರ್ ಕುಕ್ಕರ್‌‌ಗಳಾಗದಿರಲಿ!

ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 11 ಹಾಗೂ 12ರಂದು ಏರ್ಪಡಿಸಿರುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಾಡ ದೇವಿ ಚಾಮುಂಡೇಶ್ವರಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುವುದರೊಂದಿಗೆ ಸಂಜೆಯ ವೈವಿಧ್ಯಮಯ ಸಾಂಸ್ಕೃತಿಕ ಕಾಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಂಸ್ಕೃತಿಕ ರಸದೌತಣವನ್ನು ಸವಿಯಬೇಕೆಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.