Wednesday, 23rd October 2024

Shishir Hegde Column: ನಂಬಿಕೆ- ಎರಡು ಕಥೆಗಳು

ಶಿಶಿರಕಾಲ

ಶಿಶಿರ್‌ ಹೆಗಡೆ

ನಿಮಗೆ ಇವತ್ತು ಎರಡು ಕಥೆಗಳನ್ನು ಹೇಳುವವನಿದ್ದೇನೆ. ಈ ಕಥೆಗಳು ನಂಬಿಕೆಗೆ ಸಂಬಂಧಿಸಿದ್ದು. ಸತ್ಯಘಟನೆ. ಎರಡನೇ ಮಹಾಯುದ್ಧ ಆಗಷ್ಟೇ ಮುಗಿದಿತ್ತು. ಅಂದಿನ ಕ್ರೌರ್ಯ, ದೌರ್ಜನ್ಯ, ಎಂಟು ಕೋಟಿ ಜನರ ಸಾವು ಇವೆಲ್ಲ ಪಾಶ್ಚಿಮಾತ್ಯರಲ್ಲಿ ದೇವರ ಬಗೆಗಿನ ನಂಬಿಕೆಯ ರೂಪಗಳನ್ನು ಇನ್ನಷ್ಟು ವಿಕಾರಗೊಳಿಸಿದ್ದವು. ಶಿಕಾಗೋ ಸಮೀಪದ ಉಪ ನಗರ ಓಕ್ ಪಾರ್ಕ್. ಇಸವಿ 1954, ಕ್ರಿಸ್ಮಸ್ ದಿನ.

ಡಿಸೆಂಬರ್ ಎಂದರೆ ಶಿಕಾಗೋದಲ್ಲಿ ವಿಪರೀತ ಚಳಿಯಿರುತ್ತದೆ. ಅಂಥದ್ದರಲ್ಲಿ ಅಲ್ಲಿನ ಒಂದು ಮನೆಯ ಎದುರು ಜನರ ದೊಡ್ಡ ಗುಂಪು ನೆರೆದಿತ್ತು. ಅವರೆಲ್ಲ ಮೇಲುಧ್ವನಿಯಲ್ಲಿ ಒಂದೇಸಮನೆ ರಸ್ತೆಯಲ್ಲಿ, ಪಕ್ಕದ ಪಾರ್ಕಿನಲ್ಲಿ ಕ್ರಿಸ್ಮಸ್ ಗೀತೆಗಳನ್ನು ಹಾಡುತ್ತಿದ್ದರು. ಆ ಗುಂಪಿನ ನಾಯಕಿ ಡಾರ್ತಿ ಮಾರ್ಟಿನ್. ಅವಳು ಸ್ವಯಂಘೋಷಿತ ದೇವಮಾನವ. ಅವಳಿಗೆ ಈಗೆರಡು ವರ್ಷದ ಹಿಂದೆ ಕನಸಿನಲ್ಲಿ ಬಂದ ದೇವರು ಜಗತ್ತು ದುರುಳರಿಂದ ತುಂಬಿ ಹೋಗಿದೆ. ಈ ಕ್ರಿಸ್ಮಸ್ ದಿನದಂದು ಅಮೆರಿಕ ಸಂಪೂರ್ಣ ನೀರಿನಲ್ಲಿ ಮುಳುಗಲಿದೆ.

ಈ ಸಂಕಷ್ಟದಿಂದ ಕೆಲವರನ್ನೇ ರಕ್ಷಿಸಲು ದೇವರು ಇಚ್ಛಿಸಿದ್ದಾನೆ. ಇಲ್ಲಿಂದ ಎರಡನೇ ಕ್ರಿಸ್ಮಸ್ ದಿನದಂದು ನೀನು
ಜನರನ್ನು ಆಯ್ಕೆ ಮಾಡಿ ಓಕ್ ಪಾರ್ಕಿಗೆ ಕರೆದು ತರಬೇಕು. ಅವರನ್ನು ಪರಿಶುದ್ಧರನ್ನಾಗಿ ತರುವ ಜವಾಬ್ದಾರಿ ನಿನ್ನದು. ಅವರನ್ನು ಬಿಟ್ಟು ಉಳಿದವರನ್ನೆಲ್ಲ ನಾನು ನಾಶಮಾಡಿ ಹೊಸ ಜಗತ್ತನ್ನು ಪುನಃ ಸೃಷಿಸಲಿದ್ದೇನೆ. ಅದಕ್ಕೆ ನೀವು ವಾರಸು ದಾರರು’ ಎಂದು ಹೇಳಿದ್ದಂತೆ. ಕಳೆದ ಎರಡು ವರ್ಷದಿಂದ ಡೋರ್ತಿ ಹೋದ ಇದನ್ನೇ ಹೇಳಿ ಕೊಂಡು ಬಂದಿದ್ದಳು. ಅಷ್ಟೇ ಅಲ್ಲ, ಪತ್ರಿಕೆಗಳಲ್ಲಿ ಜಾಹೀರಾತಾಗಿ ಪ್ರಕಟಿಸಿದ್ದಳು.

ಒಟ್ಟಾರೆ ಇಷ್ಟೆ ಪ್ರಚಾರ ಮಾಡಲಾಗಿ, ಅವಳನ್ನು ನಂಬುವ ಗುಂಪೊಂದು ತಯಾರಾಯಿತು. ನೀವು ಶುದ್ಧರಾಗ ಬೇಕೆಂದರೆ, ಮನುಷ್ಯ ಸಂತತಿಯನ್ನು ಮುಂದುವರಿಸುವ ರೂವಾರಿಗಳಾಗಿರಬೇಕೆಂದರೆ ನಿಮ್ಮ ಮನೆ, ಉದ್ಯೋಗ, ಸಂಬಂಧ ಎಲ್ಲವನ್ನೂ ತೊರೆದು ಬರಬೇಕು. ಯಾವುದೇ ಜೀವನದ ಸಂಕೋಲೆಗಳಿದ್ದರೆ ದೇವರು ನಿಮ್ಮನ್ನು ಅವನ ವಾಹನಕ್ಕೆ ಹತ್ತಿಸಿಕೊಳ್ಳುವುದಿಲ್ಲ.’ ಎಂದು ಡೋರ್ತಿ ಹೇಳಿದ್ದನ್ನು ಕೇಳಿಕೊಂಡು, ನಂಬಿಕೊಂಡು ಅದೆಷ್ಟೋ ಮಂದಿ ಸರ್ವಸ್ವವನ್ನೂ ತೊರೆದು ಅಲ್ಲಿಗೆ ಬಂದಿದ್ದರು. ಘನಘೋರ ಚಳಿಯನ್ನು ಲೆಕ್ಕಿಸದೆ ಹಿಮದಲ್ಲಿ ಕಾಲನ್ನು ಹೂತು ನಿಂತು ಕ್ರಿಸ್ಮಸ್ ಹಾಡು ಹಾಡುತ್ತಿದ್ದರು. ಒಂದೆರಡು ತಾಸಾಯಿತು. ಮಧ್ಯರಾತ್ರಿಗೆ ಇನ್ನೊಂದು ತಾಸು. ಅಷ್ಟು ತಡವಾದರೂ ಇವರ ಹಾಡು ಮುಗಿಯುತ್ತಲೇ ಇಲ್ಲ.

ಮಧ್ಯರಾತ್ರಿ ದೇವರ ವಾಹನ ಬರಬೇಕಿತ್ತು – ಬರಲೇ ಇಲ್ಲ. ಕ್ರಮೇಣ ಕಿರಿಕಿರಿ ಹೆಚ್ಚಿ ಪೊಲೀಸರು ಬಂದು ಜನರನ್ನು ಅಟ್ಟಬೇಕಾಯಿತು. ಆ ದಿನ ಡೋರ್ತಿ ಹೇಳಿದಂತೆ ದೇವರು ರಕ್ಷಣೆಗೆ ವಾಹನ ಕಳುಹಿಸಲಿಲ್ಲ. ಈ ಸುದ್ದಿ ಮಾರನೆಯ ದಿನ ಪತ್ರಿಕೆಗಳ ಮುಖ ಪುಟದಲ್ಲಿ ಪ್ರಕಟವಾದವು. ಜನರು ಈ ಗುಂಪಿನವರನ್ನು ಕಂಡು ನಕ್ಕರು, ಹಾಸ್ಯಮಾಡಿದರು. ಆದರೆ ಅವರ ನಂಬಿಕೆ ಕದಲಿರಲಿಲ್ಲ. ಅವಳ ಹಿಂಬಾಲಕರಲ್ಲಿ ಕಾಕಪೋಕರಷ್ಟೇ ಅಲ್ಲ, ದೊಡ್ಡ ಯುನಿವರ್ಸಿಟಿಯ ಪ್ರೊ-ಸರುಗಳಿದ್ದರು, ಒಳ್ಳೆ ಕಲಿತವರೂ ಇದ್ದರು. ಅವರು ಸಂಸಾರ, ಉದ್ಯೋಗ, ಮನೆ ಎಲ್ಲವನ್ನೂ ತ್ಯಜಿಸಿ ಈ ದಿವ್ಯ ಕೆಲಸದಲ್ಲಿ ಭಾಗಿಯಾಗಲು ಬಂದಿದ್ದರು. ಅವರಲ್ಲಿ ಕೆಲವರು ಗಂಡ, ಹೆಂಡತಿ ಮಕ್ಕಳಾದಿಯಾಗಿ ಪೂರ್ಣ ಸಂಸಾ ರವೇ ಬಂದವರೂ ಇದ್ದರು. ಕಂಡಕಂಡವರೆಲ್ಲ ಅವರ ಮೂರ್ಖತನವನ್ನು ಹೀಯಾಳಿಸುತ್ತಿದ್ದರೆ ಈ ಗುಂಪು ಮಾತ್ರ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ.

ಅವರ ನಂಬಿಕೆ ಅದೆಷ್ಟು ಗಟ್ಟಿಯಾಗಿತ್ತು ಎಂದರೆ ಅವರಿಗೆ ತಮ್ಮಲ್ಲಿಯೇ ಏನೋ ತಪ್ಪಾಗಿದೆ, ಹಾಗಾಗಿಯೇ ದೇವರು
ಕಾಪಾಡಲು ಬಂದಿಲ್ಲ’ ಎಂದು ಕಾರಣಗಳನ್ನು ಹುಡುಕಿದರು. ಡೋರ್ತಿ ಕನಸಿನಲ್ಲಿ ಮತ್ತೆ ಬಂದ ದೇವರು ಇದು ಒಂದು ಟ್ರಯಲ್ ರನ್ – ತಲೀಮು. ಮುಂದಿನ ತಿಂಗಳು ತಯಾರಾಗಿರಿ, ಆಕಾಶದಿಂದ ನನ್ನ ವಾಹನ ಬರುತ್ತದೆ ತ್ತು ನಿಮ್ಮನ್ನು ಒಯ್ಯಲಿಕ್ಕಿದೆ.’. ಮತ್ತೆ ಆ ಜನರ ಗುಂಪು ಅದನ್ನು ನಂಬಿಕೊಂಡಿತು.

ಆ ದಿನ ಬಂತು. ಮತ್ತೆ ಇವರ ಯೇಸು ಭಜನೆ ಶುರುವಾಯಿತು. ಕಾಕತಾಳೀಯ ಎನ್ನುವಂತೆ ಅದೇ ದಿನ ಅಮೆರಿಕದ ಒಂದುಕಡೆ ಪ್ರವಾಹ ಬಂದಿತ್ತು. ಈ ಸುದ್ದಿ ಬರುತ್ತಿದ್ದಂತೆ ಅವರಲ್ಲಿ ಎಲ್ಲಿಲ್ಲದ ಉತ್ಸಾಹ. ಆ ದಿವ್ಯ ದಿನ ಬಂದೇ ಬಿಟ್ಟಿತು ಎಂಬ ಸಂಭ್ರಮ. ಈ ಬಾರಿಯೂ ಮಧ್ಯರಾತ್ರಿ ಕಳೆದರೂ ದೇವರು ವಾಹನ ಜತೆಯಾಗಿ ಬರಲೇ ಇಲ್ಲ. ಮತ್ತೆ
ಯಥಾಪ್ರಕಾರ ಇವರನ್ನೆಲ್ಲ ಪೊಲೀಸರು ಚದುರಿಸಿದರು. ಈ ಬಾರಿಯೂ ಇದು ದೇವರ ಪರೀಕ್ಷೆ ಎಂದೇ ಆ ಗುಂಪಿನ ವರು ಅಂದುಕೊಂಡರು. ಆ ದಿನ ಅ ಆದ ಪ್ರವಾಹ ಮುನ್ಸೂಚನೆಯಾಗಿ ಕಂಡು ಅವರ ನಂಬಿಕೆ ಇನ್ನಷ್ಟು ಹೆಚ್ಚಿತು.

ದೇವರ ಸಂದೇಶ ಸುಳ್ಳಾಗಳಿಕ್ಕಿದೆಯೇ? ಸಾಧ್ಯವೇ ಇಲ್ಲ. ದೇವರ ಸಂದೇಶ ಗ್ರಹಿಸುವಲ್ಲಿ ನಮ್ಮದೇ ಏನೋ ತಪ್ಪಾಗಿದೆ.
ಇದು ಹೀಗೆಯೇ ಸುಮಾರು ಎಂಟು ವರ್ಷ, ಸುಮಾರು ಇಪ್ಪತ್ತು ಸಲ ನಡೆಯಿತು. ಇವರೆಲ್ಲ ಗುಂಪಿನಲ್ಲಿ ಬರುವುದು

  • ದೇವರ ವಾಹನಕ್ಕೆ ಕಾಯುವುದು – ಭಜನೆ ಮಾಡುವುದು. ದೇವರ ವಾಹನ ಬರುವುದೇ ಇಲ್ಲ.
    ಆದರೆ ಇಲ್ಲಿ ಸರ್ವಸ್ವವನ್ನೂ ಬಿಟ್ಟು ಬಂದವರಿಗೆ ವಾಪಸ್ ಹೋಗುವ, ನಂಬಿದ್ದು ಸುಳ್ಳೆಂದು ಒಪ್ಪುವ ಸ್ಥಿತಿ ಇರಲಿಲ್ಲ. ಕೆಲವರು ಕೆಲಸ ಬಿಟ್ಟು ಬಂದವರು ಭೂಮಿಯ ಮೇಲಿನ ನಮ್ಮ ಬದುಕು ಇನ್ನು ಕೆಲವೇ ದಿನ ಎಂದು ತಮ್ಮಲ್ಲಿದ್ದ ಹಣ ವನ್ನೆಲ್ಲ ಖಾಲಿಮಾಡಿ ಕೊಂಡುಬಿಟ್ಟಿದ್ದರು. ಮೊದಲ ಬಾರಿ ವಾಹನ ಬರದಾಗ, ಮತ್ತೆ ನಂಬಿದರು. ಇದು ಹಾಗೆಯೇ ಮುಂದುವರಿಯಿತು. ನಂಬಿಕೆ ಸುಳ್ಳಿರಬಹುದು ಎಂದೆನಿಸಿದರೂ ಮೊದಮೊದಲು ಒಪ್ಪಲಾಗಲಿಲ್ಲ. ಏಕೆಂದರೆ ಇದನ್ನು ನಂಬಿ ಬಹಳ ಮುಂದೆ ಸಾಗಿ ಬಂದಾಗಿದೆ. ಅದನ್ನು ಎದುರಿಸುವ, ಪುನಃ ಬದುಕನ್ನು ಸಹಜಕ್ಕೆ ಮರಳಿಸುವ ಯಾವುದೇ ಸಾಧ್ಯತೆ ಅವರಲ್ಲಿರಲಿಲ್ಲ. ಕೆಲವರು ಬೀದಿಪಾಲದರು, ಕೆಲವರು ಆತ್ಮಹತ್ಯೆ ಮಾಡಿಕೊಂಡರು, ಇನ್ನು ಕೆಲವರು ಹುಚ್ಚರಾದರು. ಈ ಕಥೆಯನ್ನು ಇಲ್ಲಿಗೇ ಸ್ವಲ್ಪ ನಿಲ್ಲಿಸೋಣ.
  • ಎರಡನೇ ಕಥೆ. ಇಸವಿ 2018. ಮಧ್ಯವಯಸ್ಸಿನ ಅಮೆರಿಕನ್ ಮಹಿಳೆ. ಹೆಸರು ಶೆರಿಲ. ಅವಳ ಗಂಡ ಸರಿಯಿರಲಿಲ್ಲ. ಪರಸಂಗ, ಕುಡಿತ, ಜೂಜು ಇತ್ಯಾದಿ. ಅವರಿಬ್ಬರಲ್ಲಿ ಮಾತು, ರೊಮ್ಯಾ, ಸೆಕ್ಸ್ ಯಾವುದೂ ಉಳಿದಿರಲಿಲ್ಲ. ಆದರೂ ಶೆರಿಲ್ ಅವನ ಜತೆ ಸುಮಾರು ವರ್ಷ ಸಂಸಾರ ದೂಡಿದಳು. ಕೊನೆಗೊಂದು ದಿನ ಅವನ ಅಸಹನೆ ಮತ್ತು ಇವಳ ಸಹನೆ ಎರಡೂ ಮಿತಿಮೀರಿ ವಿವಾಹ ವಿಚ್ಛೇದನವಾಯಿತು. ಈಗ ಏಕಾಂಗಿ ಬದುಕು. ಅವಳಲ್ಲಿ ಸಾಕಷ್ಟು ಸಮಾಧಾನ, ನೆಮ್ಮದಿಯನ್ನು ತಂದಿತು. ಆದರೆ ಅವಳ ಬದುಕಿನಲ್ಲಿ
    ಪ್ರೀತಿಯ ಕೊರತೆ ಕಾಡಲಾರಂಭಿಸಿತು. ಅವಳನ್ನು ಕೊನೆಯ ಬಾರಿ ಇನ್ನೊಬ್ಬರು ಪ್ರೀತಿಸಿದ್ದೇ ನೆನಪಿರಲಿಲ್ಲ. ಕ್ರಮೇಣ ತನಗೊಬ್ಬ ಸಾಥಿ, ಜೊತೆಗಾರ ಬೇಕೆನ್ನುವ ಸಹಜ ಬಯಕೆ.
  • ಇನ್ನುಳಿದ ಬದುಕನ್ನಾದರೂ ಪ್ರೀತಿಸುವನೊಬ್ಬನ ಜೊತೆ ಬದುಕಬೇಕೆಂಬ ಕಾರಣಕ್ಕೆ ಡೇಟಿಂಗ್ ಸೈಟ್ (ಜೊತೆಗಾರರನ್ನು ಹುಡುಕಿಕೊಳ್ಳುವ ವೆಬ್‌ಸೈಟ್)ನಲ್ಲಿ ಹೋಗಿ ತನ್ನನ್ನು ರಿಜಿಸ್ಟರ್ ಮಾಡಿಕೊಂಡಳು. ಮಾರನೆಯ ದಿನವೇ ಆ ವೆಬ್‌ಸೈಟ್‌ನಲ್ಲಿ ಡೈವರ್ಸ್ ಆದ ಜೇವಿಯರ್ ಎಂಬ ವ್ಯಕ್ತಿಯ ಪ್ರೊಫೈಲ್ ಅವಳಿಗೆ ಇಷ್ಟವಾಯಿತು. ಫೋಟೋ ನೋಡಿದ್ದೇ ಏನೋ ಒಂದು ಸೆಳೆತ. ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದಳು. ‌
  • ತಕ್ಷಣ ಆ ಕಡೆಯಿಂದ ಪ್ರತಿಕ್ರಿಯೆ ಬಂತು. ಅವನ ಪ್ರೊಫೈಲ್ ಫೋಟೋ ಚೆನ್ನಾಗಿತ್ತು. ನಲವತ್ತರ ಆಸುಪಾಸು, ಅತಿ ಸುಂದರನೇನಲ್ಲ, ಆದರೂ ಹ್ಯಾಂಡ್ಸಮ. ಅಲ್ಲಿಂದ ಮುಂದೆ ಅವರಿಬ್ಬರೂ ತಮ್ಮ ಬದುಕಿನ ಬಗ್ಗೆ ವಿವರಗಳನ್ನು ಹಂಚಿಕೊಂಡರು. ನಿಧಾನಕ್ಕೆ ಚಾಟ್ ನಿಂದ ಫೋನ್ ಕರೆಯಲ್ಲಿ ಮಾತುಗಳು ಮುಂದುವರಿದವು.
  • ಅವನದು ಗಡುಸಾದ ಗಂಡಸಿನ ಮೆಲ್ ಧ್ವನಿ. ಆದರೊಂದು ಸಮಸ್ಯೆಯಿತ್ತು. ಅವನಿದ್ದದ್ದು ದೂರದ ಇಟಲಿಯಲ್ಲಿ. ಶೆರಿಲ್ ಇರುವುದು ಅಮೆರಿಕ. ಆದರೂ ಅವರ ನಡುವಿನ ಕೆಮೆಸ್ಟ್ರಿ ಶೆರಿಲ್‌ಗೆ ಬಹಳ ಇಷ್ಟವಾಗಿತ್ತು. ಒಂದು ದಿನ ಅವಳು ಅವನಲ್ಲಿ ವಿಡಿಯೊ ಕಾಲ್ ಮಾಡಿ ಮಾತಾಡೋಣ ಎಂದಳು.
    ನಾನಿರುವಲ್ಲಿ ಇಂಟರ್ನೆಟ್ ಅಷ್ಟು ಸರಿಯಿಲ್ಲ ಎಂದ. ತಾನು ವಿಡಿಯೊ ಕಾಲ್ ಅನ್ನು ಇಷ್ಟು ಬೇಗ ಕೇಳಬಾರದಿತ್ತೇನೋ ಎಂದುಕೊಂಡಳು. ಗಡಿಬಿಡಿ ಬಿದ್ದೇನೇನೋ, ಆಗತಾನೇ ಪರಿಚಯವಾಗಿತ್ತಲ್ಲ.
  • ಕ್ರಮೇಣ ಅವನ ಡೈವರ್ಸ್ ಬಗ್ಗೆ ಜೇವಿಯರ್ ಒಂದು ದಿನ ಹೇಳಿಕೊಂಡ. ಅವನ ಮಾಜಿ ಪತ್ನಿ ಅವನ ಮಗನನ್ನು ನೋಡಲು ಬಿಡುತ್ತಿಲ್ಲ ಎಂದು ಶೆರಿಲ್ ಬಳಿ ಹೇಳಿಕೊಂಡು ಅತ್ತ. ಅದೊಂದು ದಿನ ಜೇವಿಯರ್ ಬಹಳ ಸಂತೋಷದಿಂದ ಶೆರಿಲ್‌ಗೆ ಕರೆ ಮಾಡಿದ್ದ. ನಾನು ಟರ್ಕಿಗೆ ಹೋಗುತ್ತಿದ್ದೇನೆ. ಅಂದು ಮಲ್ಟಿ ಮಿಲಿಯನ್ ಡಾಲರಿನ ಪ್ರಾಜೆಕ್ಟಿಗೆ ಸಹಿ ಹಾಕುವವನಿದ್ದೇನೆ. ಅದೇನಾದರೂ ತನಗೆ ಸಿಕ್ಕಿಬಿಟ್ಟರೆ ಲೈಫ್
    ಸೆಟಲ್ ಆಗಿಬಿಡುತ್ತೇನೆ’ ಎಂದಾಗ ಶೆರಿಲ್‌ಗೆ ಅವನ ಬಗ್ಗೆ‌ ಹೆಮ್ಮೆಯೆನಿಸಿತು. ಜತೆಯಲ್ಲಿ ತಾನೊಬ್ಬ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುತ್ತಿದ್ದೇನೆ ಎಂದಾಗ ಅವನ ಮೇಲಿನ ಅಭಿಮಾನ ನೂರ್ಮಡಿಯಾಯಿತು.
  • ಜೇವಿಯರ್‌ನೊಂದಿಗೆ ಹೀಗೆಯೇ ಇನ್ನೊಂದಿಷ್ಟು ದಿನ ಫೋನ್ ಮಾತುಕತೆ ಮುಂದುವರಿಯಿತು. ಅದೊಂದು ದಿನ ಜೇವಿಯರ್ ಬಹಳ ಬೇಸರದಿಂದ ಇದ್ದ. ಶೆರಿಲ್ ಬಳಿ ಆ ಪ್ರಾಜೆಕ್ಟ್ ತನಗೆ ಒದಗಿಬರಬೇಕೆಂದರೆ ಅಂದಿಷ್ಟು ಮಂದಿಗೆ ಲಂಚ ತಿನ್ನಿಸಬೇಕು, ಆದರೆ‌ ತನ್ನಲ್ಲಿ ಹಣವಿಲ್ಲ. ಹಾಗಾಗಿ ಆ ಪ್ರಾಜೆಕ್ಟ್ ಕೈತಪ್ಪಿ ಹೋಗಲಿದೆ’
    ಎಂದು ಅವಲತ್ತುಕೊಂಡ. ಶೆರಿಲ್ ಮನಸ್ಸು ಕರಗಿತು. ತಾನು‌ ಆ ಹಣವನ್ನು ಕೊಡುತ್ತೇನೆ ಎಂದಳು. ಜೇವಿಯರ್ ಅದಕ್ಕೆ ಮೊದಲು ಒನೆಂದ. ನಂತರ ಒಪ್ಪಿಕೊಂಡ. ಶೆರಿಲ್ ತನ್ನ ಕೂಡಿಟ್ಟ ಆಪತ್ಕಾಲದ ಹಣದ ಕಾಲು ಭಾಗವನ್ನು ಇನ್ನೂ ಭೇಟಿಯಾಗದ ಜೇವಿಯರ್‌ಗೆ ಕಳುಹಿಸಿಕೊಟ್ಟಳು.
  • ಇದನ್ನೆಲ್ಲ ತನ್ನ ಸ್ನೇಹಿತೆಯರಿಗೆ ಶೆರಿಲ್ ಹೇಳಿಕೊಂಡಳು. ತನ್ನ ಮರುಭೂಮಿಯಂತಹ ಬದುಕಿಗೆ ಪ್ರೀತಿಯ ಸೆಲೆಯಾಗಿ ದೂರದ ಇಟಲಿಯ ಜೇವಿಯರ್ ಜತೆಯಾಗಿರುವ ಸಂಭ್ರಮವನ್ನು ಹಂಚಿಕೊಂಡಳು. ಸ್ನೇಹಿತೆಯರಿಗೆ ಜೇವಿಯರ್ ಮೇಲೆ ಅನುಮಾನ. ಅವನನನ್ನೆಂದೂ ಶೆರಿಲ್ ನೋಡಿಲ್ಲ, ಭೇಟಿಯಾಗಿಲ್ಲ. ಆ ಸ್ನೇಹಿತೆಯರು ಇಂಟರ್‌ನೆಟ್‌ನಲ್ಲಿ ಇಂತಹ ಸ್ಕ್ಯಾಮ್‌ಗಳ ಬಗ್ಗೆ ಹುಡುಕಾಡಿದರು. ಯಥಾವತ್ ಇವಳಿಗೆ
    ಹೇಳಿದ ಕಥೆಯೇ FBI ವೆಬ್‌ಸೈಟ್ ನಲ್ಲಿ ನಮೂದಾಗಿತ್ತು.
  • ಶೆರಿಲ್‌ಗೆ ನೀನು ಮೊಸಹೋಗಿದ್ದೀಯಾ ಎಂದು ಸ್ನೇಹಿತೆ ಯರು ಹೇಳಿದರು. ಆದರೆ ಅವಳಿಗೆ ಜೇವಿಯರ್ ಮೇಲೆ ಎಲ್ಲಿಲ್ಲದ ನಂಬಿಕೆ. ಅದಲ್ಲದೆ ಮುಂದಿನ ತಿಂಗಳು ಜೇವಿರ್ಯ ಅಮೆರಿಕಕ್ಕೆ ಶೆರಿಲ್‌ನ ಹುಟ್ಟುಹಬ್ಬಕ್ಕೆ ಬರುತ್ತೇನೆ ಎಂದು ಹೇಳಿದ್ದ. ಇದು ಮೋಸವಾದರೆ ಅವನು ಬರುತ್ತಾನೆಯೇ? ಜೇವಿಯರ್ ಅಮೆರಿಕಕ್ಕೆ ಬರುವ ದಿನ ಬಂದೇಬಿಟ್ಟಿತು. ಶೆರಿಲ್‌ಗೆ ಸಂಭ್ರಮ. ಅವನೊಂದಿಗೆ ಸಮಯ ಕಳೆಯಲು ಐಷಾರಾಮಿ ರೆಸಾರ್ಟ್ ಬುಕಿಂಗ್ ಮಾಡಿಕೊಂಡಿದ್ದಳು. ಜೇವಿಯರ್ ಹೊರಟಿದ್ದೇನೆ ಎಂದು ಸಂದೇಶ ಕಳುಹಿಸಿದ್ದ. ಆ ದಿನ
    ಏರ್‌ಪೋರ್ಟ್‌ಗೆ ಡ್ರೈವ್ ಮಾಡಿಕೊಂಡು ಹೋದಳು. ಕಾದಳು. ಜೇವಿಯರ್ ಹೇಳಿದ ವಿಮಾನ ಬಂತು. ಜೇವಿ ಯರ್ ಬರಲೇ ಇಲ್ಲ. ತಕ್ಷಣ ಅವಳಿಗೆ ಅವಳಿಗೆ ತಾನು ವಂಚನೆಗೊಳಗಾದ ಎಂದೆನಿಸಿತು. ಕುಸಿದುಹೋದಳು. ಸ್ನೇಹಿತೆಗೆ ಫೋನ್ ಮಾಡಿದಳು. ತಾನು ಮೋಸ ಹೋದೆ ಎಂದು ‌ಅತ್ತಳು.
  • ಮಾರನೆಯ ದಿನ ಶೆರಿಲ್ ಮತ್ತೆ ಜೇವಿಯರ್‌ನ ಫೋನ್‌ಗೆ ಕರೆ ಮಾಡಿದಳು. ಅವನ್ನು ಅದೇ ಮೆಲ್ಲನೆಯ ಧ್ವನಿಯಲ್ಲಿ ಹಾಲೋ ಎಂದ. ಇವಳಿಗೆ ನಖಶಿಖಾಂತ ಸಿಟ್ಟು. ಅವನು ಅಷ್ಟೇ ಸಮಾಧಾನದಲ್ಲಿ, ‘ನನಗೆ ಏನಾಯ್ತು ಎಂಬುದನ್ನು ನೀನು ತಿಳಿದರೆ ಹೀಗೆ ಸಿಟ್ಟುಮಾಡಿಕೊಳ್ಳುವುದಿಲ್ಲ’ ಎಂದ. ಏನೆಂದು ಕೇಳಿದಳು. ನಾನು ಏರ್‌ಪೋರ್ಟ್‌ಗೆ ಹೊರಟಿದ್ದೆ, ಮಾರ್ಗಮಧ್ಯೆ ನನ್ನ ಹಳೆಯ ಹೆಂಡತಿಯ ಫೋನ್ ಬಂತು.
  • ನನ್ನ ಮಗ ಆಕ್ಸಿಡೆಂಟಿನಲ್ಲಿ ತೀರಿಕೊಂಡಿದ್ದಾನೆ ಎಂದು ಜೇವಿಯರ್ ಅತ್ತಕಡೆಯಿಂದ ಅಳುತ್ತಿದ್ದ. ಶೆರಿಲ್‌ಗೆ ಇಂತಹ ವ್ಯಕ್ತಿಯನ್ನು ಅನುಮಾನಿಸಿಬಿಟ್ಟೇನಲ್ಲ ಎಂದು ಬೇಸರವಾಯಿತು. ಪುನಃ ಶೆರಿಲ್‌ಗೆ ಜೇವಿಯರ್ ಮೇಲೆ ಎಲ್ಲಿಲ್ಲದ ನಂಬಿಕೆ. ಮೊಸಹೋಗಿಲ್ಲವೆಂಬ ಧೃಢತೆ. ಅಷ್ಟರ ಜೇವಿಯರ್ ಅವಳು ಕೊಟ್ಟ ಹಣದಲ್ಲಿ ಸ್ವಲ್ಪ ಹಣವನ್ನು ವಾಪಸ್ ಮಾಡಿದ್ದ. ಇದೆಲ್ಲ ನಡೆದದ್ದೇ ಆತನನ್ನು ಶೆರಿಲ್ ಸಂಪೂರ್ಣ ನಂಬಿಬಿಟ್ಟಳು. ಕಥೆ ಹೀಗೆ ಮುಂದುವರಿಯುತ್ತದೆ. ಆನಂತರ ದಲ್ಲಿ ಜೇವಿಯರ್ ಎಂಬ ಫ್ರಾಡ್ ಮೋಸಗಾರ ವಿದೇಶದಲ್ಲಿಯೇ ಕೂತು ಶೆರಿಲ್‌ನ ಎಲ್ಲಾ ಉಳಿತಾಯದ ಹಣವನ್ನು ಲೂಟಿ‌ ಮಾಡಿಬಿಡುತ್ತಾನೆ.
  • ಅಷ್ಟೇ ಅಲ್ಲ, ಅವಳ ಕ್ರೆಡಿಟ್ ಕಾರ್ಡ್ ಬಳಸಿ ಅದರಲ್ಲಿಯೂ ಹಣವನ್ನೂ ಲೂಟಿ ಮಾಡಿ ಅವಳನ್ನು ಮಿಲಿಯನ್ ಗಟ್ಟಲೆ ಸಾಲಕ್ಕೆ ದೂಡಿಬಿಡುತ್ತಾನೆ. ಕೊನೆಗೊಂದು ದಿನ ಅವಳಿಗೆ ತಾನು ಫ್ರಾಡ್ – ಮೋಸಗಾರ
    ಎಂಬುದನ್ನು ಹೇಳುತ್ತಾನೆ. ಅಲ್ಲಿಯವರೆಗೂ ಶೆರಿಲ್ ಅವನನ್ನು ನಂಬುತ್ತಲೇ ಹೋಗುತ್ತಾಳೆ. ಪ್ರತಿ ಬಾರಿ ಅವನ
    ಮೇಲೆ ಅಪನಂಬಿಕೆ ಹುಟ್ಟಿದಾಗಲೂ ಆಕೆಗೆ ಸಿಗುವ ಒಂದೇ ಒಂದು ಚಿಕ್ಕ ಸಾಕ್ಷ್ಯ ಉಳಿದೆಲ್ಲ ಸುಳ್ಳನ್ನು ಕಾಣದಂತೆ ಮಾಡಿಟ್ಟಿರುತ್ತದೆ. ಶೆರಿಲ್ ದಡ್ಡಿಯಲ್ಲ, ಡಬಲ್ ಡಿಗ್ರಿ ಓದಿರುವ ಜಾಣೆ. ಆದರೆ ಆಕೆ ಈ ನಂಬಿಕೆಯ ಖೆಡ್ಡಾದೊಳಕ್ಕೆ ಬೀಳುತ್ತ, ತನಗೆ ಒದಗಿ ಬರುವ ಅನುಮಾನಗಳನ್ನು ಪಕ್ಕಕ್ಕೆ ಸರಿಸುತ್ತ, ಮುಂದೊಂದು ದಿನ ಇದು ಸುಳ್ಳು ಎಂದು ತಿಳಿದರೂ ಪುನಃ ಮರಳಿ ಬಾರದ ಹಂತಕ್ಕೆ ತಲುಪಿಬಿಡುತ್ತಾಳೆ.
  • ಮನುಷ್ಯನ ಈ ನಡವಳಿಕೆಗೆ ಕಾರಣ Cognitive Dissonance’. ಮನುಷ್ಯ ಮೊದಲು ಬಲವಾಗಿ ನಂಬುತ್ತಾನೆ. ಆನಂತರ ಆ ನಂಬಿಕೆಯ ಕಾರಣದಿಂದ ಬದಲಾಯಿಸಲಾಗದ ಕೆಲಸವೊಂದನ್ನು ಮಾಡಿಕೊಂಡುಬಿಡುತ್ತಾನೆ. ಉದಾಹರಣೆಗೆ ಡೋರ್ತಿ ಮಾರ್ಟಿನ್ ಅನುಯಾಯಿಗಳಂತೆ ಮನೆ, ಮಠ, ಉದ್ಯೋಗ ಎಲ್ಲವನ್ನೂ ಬಿಟ್ಟು ಬರುವುದು. ಶೆರಿಲ್ ಕಥೆಯಲ್ಲಿ ಭಾವನಾತ್ಮಕವ ಘಾಸಿಗೊಳ್ಳುವುದರೊಂದಿಗೆ
    ಹಣ ಕಳೆದುಕೊಳ್ಳುವುದು. ಅಥವಾ ಅತ್ಯಂತ ಖಾಸಗಿ ವಿಷಯವನ್ನು ಅಂಥವರ ಜತೆ ಹಂಚಿಕೊಳ್ಳುವುದು.
    ಇದರೊಂದಿಗೆ ವೈಯಕ್ತಿಕ ದೌರ್ಬಲ್ಯವೊಂದು ಸೇರಿಕೊಂಡು ಬಿಟ್ಟರೆ ಮುಗಿದೇ ಹೋಯಿತು. ಈ ಹಂತದಲ್ಲಿ ತಾನು ಬಲವಾಗಿ ನಂಬಿದ ಯಾವುದನ್ನೇ ಪ್ರಶ್ನಿಸುವ ಸ್ಥಿತಿ ಎದುರಾದಾಗ ತಲ್ಲಣಗೊಳ್ಳುತ್ತಾನೆ.
  • ಕೆಲವರಿಗೆ ಅವರು ನಂಬಿದ್ದು ಮೋಸ, ಸುಳ್ಳು, ತಪ್ಪು ಇತ್ಯಾದಿ ತಕ್ಷಣ ತಿಳಿದುಬಿಡುತ್ತದೆ. ಆದರೆ ಕೆಲವರ ನಂಬಿಕೆಗಳು ಹಾಗಲ್ಲ. ಅವು ನಿಧಾನಕ್ಕೆ ವ್ಯಕ್ತಿತ್ವದ ಭಾಗವಾಗಿಬಿಟ್ಟಿರುತ್ತದೆ. ಯಾವುದೋ ಒಂದು ಸ್ವಾಮೀಜಿ ಯ, ಮಠದ, ದೇವ ಮಾನವರೆನಿಸಿಕೊಂಡವರ ಸಾಮೀಪ್ಯ ಕ್ರಮೇಣ ಅಂಥವರನ್ನು ಅವರ ಮಾಯಾಜಾಲ ದೊಳಕ್ಕೆ ಎಳೆದುಕೊಂಡು ಬಿಡುತ್ತದೆ. ಅದೆಷ್ಟೋ ಯುವಕ ಯುವತಿಯರು ಸಂಸಾರ- ಕುಟುಂಬ ತ್ಯಜಿಸಿ ಕಳ್ಳ ದೇವಮಾನವರ ಆಶ್ರಮಗಳನ್ನು ಸೇರುವುದಿದೆ. ಎಲ್ಲರೂ ಕಳ್ಳರಲ್ಲ. ನೂರಕ್ಕೆ ತೊಂಬತ್ತೊಂಬತ್ತು ಒಳ್ಳೆಯವರೇ ಇದ್ದಾರೆ. ಆದರೆ ಅದೊಮ್ಮೆ ಕಳ್ಳ ನಿತ್ಯಾನಂದ ನಂಥವರ ಬಳಿ ಸೇರಿಕೊಂಡರೆ ಅದು ಬಹುತೇಕರಿಗೆ ಒನ್ ವೇ. ಏಕಮುಖ ದಾರಿ.
  • ಕೆಲವೊಮ್ಮೆ ಈ ರೀತಿ ನಂಬಿಕೊಂಡು ತನ್ನ ಆಸ್ತಿ ಪಾಸ್ತಿ ಎಲ್ಲವನ್ನೂ ಕಳ್ಳ ದೇವಮಾನವರಿಗೆ ಬರೆದುಕೊಡುವ,
    ಮಕ್ಕಳನ್ನು, ಮಡದಿಯನ್ನು ಆಶ್ರಮದ ಭಾಗವಾಗಿಸುವ ಹಂತಕ್ಕೆ ಹೋಗುವುದನ್ನು ನೋಡಿದ್ದೇನೆ. ಕ್ರಮೇಣ ಠಕ್ಕ ದೇವಮಾನವರ ಸಾಮೀಪ್ಯ ಅದೆಷ್ಟಾಗುತ್ತದೆ ಎಂದರೆ ಅವರು ಹೇಳಿದ್ದನ್ನೆ ಮಾಡಲು ಮುಂದಾಗುತ್ತಾರೆ. ಕೆಲವರಿಗೆ ಆಶ್ರಮ, ಮಠ ಎನ್ನುವುದು ಅದರ ಉದ್ದೇಶ ಮೀರಿದ ಐಡೆಂಟಿಟಿ. ಗುರೂಜಿ ಹೇಳಿದರೆಂದರೆ ಮುಗಿದೇ ಹೋಯಿತು.
  • ಇಂಥವರು ಒಳ್ಳೆಯ ಸ್ವಾಮೀಜಿಗಳ, ಸನ್ಯಾಸಿಗಳ ಜತೆಯಾದಲ್ಲಿ ಒಳ್ಳೆಯ ಕೆಲಸಗಳು ಆಗುವುದು ನಿಜ. ಒಂದು ವೇಳೆ ಅಲ್ಲಿರುವುದು ದೇವಮಾನವನ ವೇಷದ ದಗಲ್ ಬಾಜಿಯಾಗಿದ್ದರೆ ಅವರ ಜೊತೆ ಸಂಸಾರವೇ ಬೀದಿಗೆ ಬಿದ್ದರೂ ಅದರ ಅರಿವಾಗುವುದು ತಡವಾಗಿರುತ್ತದೆ. ಅಂಥವರು ಬೀದಿಗೆ ಬೀಳುತ್ತಾರೆ ಅಥವಾ ಬೀದಿಗಿಳಿದು ರಂಪ ಮಾಡುತ್ತಾರೆ. ಆದರೆ ಸಮಯ ಮೀರಿರುತ್ತದೆ.

ಇದನ್ನೂ ಓದಿ:Shishir Hegde Column: ಇಲ್ಲ, ಬೇಡ, No ಎಂದು ಹೇಳಲು ಹಿಂಜರಿಯಬಾರದು !