Friday, 25th October 2024

Shashidhara Halady Column: ಹಕ್ಕಿ ಫೋಟೋ ತೆಗೆಯದೇ ವಾಪಸಾದೆ !

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ನಾವಿರುವ ಮನೆಯ ಹತ್ತಿರದ ಪುಟ್ಟ ಉದ್ಯಾನವನದಲ್ಲಿ ಕೆಲವೇ ಕೆಲವು ಹಕ್ಕಿಗಳನ್ನು ಕಾಣಲು ಸಾಧ್ಯ; ಅವುಗಳಲ್ಲಿ ಎದ್ದು ಕಾಣುವವು ಎಂದರೆ ಸೂರಕ್ಕಿಗಳು ಅಥವಾ ಸನ್‌ಬರ್ಡ್‌ಗಳು. ಇವು ಸುಂದರ ಹೊಳೆಯುವ ದೇಹದ, ಉದ್ದ ಕೊಕ್ಕಿನ, ಚಟುವಟಿಕೆಯ ಪುಟಾಣಿ ಹಕ್ಕಿಗಳು. ಮನುಷ್ಯರ ವಾಸಸ್ಥಳದ ಹತ್ತಿರವಿರುವ ದಾಸವಾಳ ಮೊದಲಾದ ಹೂವುಗಳ ಮೇಲೆ ಕುಳಿತು, ತನ್ನ ಉದ್ದನೆಯ ಕೊಕ್ಕನ್ನು ಆ ಹೂವಿನ ಬುಡಕ್ಕೆ ತೂರಿಸಿ, ಮಕರಂದ ಹೀರುವುದು ಅವುಗಳ ನೆಚ್ಚಿನ ಹವ್ಯಾಸ. ಚಿಂವ್ ಚಿರ್ ಎಂದು ಕೂಗುತ್ತಾ, ಅತ್ತಿತ್ತ ಹಾರಾಡುತ್ತಾ ಹೂವಿನಿಂದ ಹೂವಿಗೆ ಜಿಗಿಯುವ ಅವುಗಳ ನೋಟವು, ನೋಡುವವರ ಮನಸ್ಸಿನಲ್ಲಿ ಉಲ್ಲಾಸವನ್ನೂ ತುಂಬುತ್ತದೆ!

ನಮ್ಮ ನಾಡಿನಲ್ಲಿ ನಾಲ್ಕಾರು ಪ್ರಭೇದದ ಸೂರಕ್ಕಿಗಳು ಇವೆ. ಇವುಗಳ ಪೈಕಿ ನೇರಳೆ ಬಣ್ಣದ ಸೂರಕ್ಕಿ, ನೇರಳೆ ಪ್ರಷ್ಠದ ಸೂರಕ್ಕಿ, ಲೋಟೆನ್ಸ್ ಸೂರಕ್ಕಿಗಳು ಸುಲಭವಾಗಿ ಕಾಣಸಿಗುತ್ತವೆ. ಮಹಾನಗರದ ಮಧ್ಯೆ ಸೂರಕ್ಕಿಗಳ ಹಾರಾಟವನ್ನು ಕಂಡಾಗ, ನಮ್ಮ ಹಳ್ಳಿಯಲ್ಲಿ ಹಕ್ಕಿಗಳಿಗೆ ಸಂಬಂಧಿಸಿದಂತೆ ನಡೆದ ಒಂದೆರಡು ವಿದ್ಯಮಾನಗಳು ನೆನಪಾಯಿತು.

ನಾನಾಗ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ನಮ್ಮ ಮನೆಯಲ್ಲಿ ಹಳೆಯ ಕಾಲದ ಒಂದು ರೇಡಿಯೋ ಇತ್ತು. ಆಗಿನ ಕಾಲದ
ಆ ಡುಬ್ಬ ರೇಡಿಯೋಗಳಿಗೆ ಏರಿಯಲ್ ವಯರಿನ ಸಂಪರ್ಕ ಬೇಕಿತ್ತು. ಮನೆಯ ಉಪ್ಪರಿಗೆಯ ತನಕ ಸಾಗಿದ್ದ ಏರಿಯಲ್ ವಯರನ್ನು ರೇಡಿಯೋದ ಹಿಂಭಾಗದಲ್ಲಿರದ್ದ ರಂಧ್ರದಲ್ಲಿ ಅಳವಡಿಸಿದಾಗ ಮಾತ್ರ, ಅದು ದೂರದ ಭದ್ರಾವತಿ ಸ್ಟೇಷನ್ ನ ತರಂಗಗಳನ್ನು ಗ್ರಹಿಸುತ್ತಿತ್ತು. ಉಪ್ಪರಿಗೆಯಲ್ಲಿ ತೂಗು ಹಾಕಿದ್ದ ಏರಿಯಲ್ ತಂತಿಗಳಿಗೆ ಸಂಪರ್ಕ ನೀಡುವ ಒಂದು ಕಪ್ಪನೆಯ ವಯರು ಉದ್ದಕ್ಕೂ ಇಳಿಬಂದು, ಚಾವಡಿಯಲ್ಲಿದ್ದ ರೇಡಿಯೋಕ್ಕೆ ಸಿಕ್ಕಿ ಕೊಂಡಿತ್ತು.

ಈ ಕಪ್ಪನೆಯ ವಯರನ್ನು ಕಂಡರೆ, ಆ ಸೂರಕ್ಕಿ ದಂಪತಿಗಳಿಗೆ ಅದೇನೋ ಪ್ರೀತಿ. ಗೋಡೆಯಿಂದ ಇಳಿಬಂದಿದ್ದ ಆ
ವಯರಿಗೆ ತಮ್ಮ ಗೂಡನ್ನು ಅಂಟಿಸಿದ ಅವುಗಳ ಕೌಶಲ ವಿಶಿಷ್ಟ. ತರಗಲೆ, ಬೂರುಗದ ಹತ್ತಿಯ ಚೂರು, ಜೇಡರ ಬಲೆ ಮೊದಲಾದ ಸಾಮಗ್ರಿಗಳಿಂದ ತಯಾರಿಸಿದ ಆ ಗೂಡಿಗೆ ಒಂದು ಪ್ರವೇಶದ್ವಾರ. ನಮ್ಮ ಮನೆಯ ಎದುರಿನಲ್ಲಿ ಸದಾ ನೀರಿನಿಂದ ತುಂಬಿರುತ್ತಿದ್ದ ಅಗೇಡಿಯ ಮೇಲೆ ಜೋತಾಡುವಂತಿದ್ದ ಆ ಗೂಡಿನ ಪ್ರವೇಶ ದ್ವಾರವು, ಬಯಲಿನ ಕಡೆಗೆ ತೆರೆದುಕೊಂಡಿತ್ತು.

ಆ ಸಂಜೆ ಗೂಡು ಕಟ್ಟುವ ಕೆಲಸ ಮುಗಿದಿರಬೇಕು. ಆ ಪುಟಾಣಿ ಸೂರಕ್ಕಿ, ತನ್ನ ಉದ್ದನೆಯ ಕೊಕ್ಕನ್ನು ಹೊರಗೆ ಚಾಚಿಕೊಂಡು, ಆ ಗೂಡಿನಲ್ಲಿ ಹುದುಗಿ ಕುಳಿತಿತ್ತು! ಮೊಟ್ಟೆಯಿಟ್ಟು, ಆ ಮೊಟ್ಟೆಗಳಿಗೆ ಕಾವುಕೊಡಲು ಕುಳಿತಿತ್ತು ಎನಿಸುತ್ತದೆ. ನಮ್ಮ ಮನೆಯ ಮುಂಭಾಗದ ಜಗಲಿಯಲ್ಲಿ ನಿಂತರೆ, ಆರೇಳು ಅಡಿ ಎತ್ತರದಲ್ಲಿ ಇದ್ದ ಆ ತೂಗಾಡುವ ಗೂಡು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆ ಸೂರಕ್ಕಿ ಹೊರಗೆ ಚಾಚಿದ್ದ ಒಂದಿಂಚು ಉದ್ದದ ಕೊಕ್ಕಿನ ವಿನ್ಯಾಸ, ಆ ಕೊಕ್ಕಿನ ತುದಿಯಿಂದ ಆಗಾಗ ಹೊರಗೆ ಚಾಚುತ್ತಿದ್ದ ತೆಳ್ಳನೆಯ ನಾಲಗೆಯಂತಿರುವ ಹೀರುಕೊಳವೆ ಕಾಣಿಸುತ್ತಿತ್ತು.ಆ ಸೂರಕ್ಕಿ ದಂಪತಿಗಳು ಮೊಟ್ಟಯಿಟ್ಟು ಮರಿ ಮಾಡಿ, ಮರಿಗಳಿಗೆ ಹಾರಲು ಕಲಿಸಿ ಕರೆದುಕೊಂಡು ಹೋದವು! ತಮ್ಮ ಮರಿಗಳಿಗೆ ಪ್ರತಿದಿನ ಅವು ಕೀಟಗಳನ್ನು ತಂದು ತಿನ್ನಿಸುವುದನ್ನು ಹತ್ತಿರದಿಂದ ನೋಡುವ ಅವಕಾಶ. ಜತೆಯಲ್ಲೇ, ಗೂಡಿನಲ್ಲಿದ್ದ ಕಲ್ಮಶಗಳನ್ನು ಸಹ ಕೊಕ್ಕಿನಲ್ಲಿ ಕಚ್ಚಿ ಹೊರಗೆ ಕೊಂಡೊಯ್ದು ದೂರದಲ್ಲಿ ಎಸೆದು, ಚೊಕ್ಕಟ ವಾಗಿಡುತ್ತಿದ್ದವು!

ಅಚ್ಚರಿ ಎಂದರೆ, ಮುಂದಿನ ವರ್ಷವೂ ಅದೇ ವಯರಿಗೆ ಆ ಸೂರಕ್ಕಿಗಳು ತಮ್ಮ ಗೂಡನ್ನು ಅಂಟಿಸಿದ್ದವು. ಆದರೆ ಆ
ವರ್ಷ ಒಂದು ಪುಟ್ಟ ಅನಾಹುತವಾಯಿತು. ಆಗಿನ್ನೂ ಗೂಡು ಶೇ.೯೦ರಷ್ಟು ಮುಗಿದಿತ್ತು ಅಥವಾ ಪೂರ್ತಿಯಾ ಗಿತ್ತೋ ಸರಿಯಾಗಿ ನೆನಪಿಲ್ಲ. ಅದೇ ಸಮಯದಲ್ಲಿ ದೀಪಾವಳಿ ಹಬ್ಬ ಬಂತು. ಆಗಿನ ದಿನಗಳಲ್ಲಿ ಪಟಾಕಿಗಳನ್ನು ಸುಡುವುದೆಂದರೆ ನಮ್ಮಪ್ಪನಿಗೆ ವಿಪರೀತ ಹುಚ್ಚು. ದೂರದ ಊರಿನಲ್ಲಿ ವೃತ್ತಿಯಲ್ಲಿದ್ದ ಅವರು, ದೀಪಾವಳಿಗೆ ಬರುವಾಗ ತಪ್ಪದೇ ಒಂದಿಷ್ಟು ಪಟಾಕಿಗಳನ್ನು ಉತ್ಸಾಹದಿಂದ ತರುತ್ತಿದ್ದರು. ದೀಪಾವಳಿಯ ರಾತ್ರಿ ಗದ್ದೆಗೆ ದೀಪ ಹಚ್ಚಿ ಬಂದ ನಂತರ, ಹಲವು ಪಟಾಕಿ ಸುಟ್ಟು ನಂತರ, ಒಂದೆರಡು ಬಿರುಸುಗಳನ್ನು ಹಕ್ಕಿ ಗೂಡಿನ ಕೆಳಗೆ, ಜಗಲಿಯ ಮೇಲೆ ಇಟ್ಟು ಹಚ್ಚಿದರು ನಮ್ಮಪ್ಪ.

‘ಆ ಜಗಲಿಯ ಮೇಲೆ ಬಿರುಸನ್ನಿಟ್ಟು ಹಚ್ಚಬೇಡಿ, ಅಲ್ಲೇ ಮೇಲೆ ಸೂರಕ್ಕಿಯ ಗೂಡು ಇದೆ’ ಎಂದು ನಾನು ಕೂಗಿ ಕೊಂಡೆ. ‘ಏನೂ ಆಗಲ್ಲ ಬಿಡು, ಗೂಡು ತುಂಬಾ ಮೇಲಿದೆ’ ಎಂದು, ಅಲ್ಲೇ ಇಟ್ಟು ಬಿರುಸಿಗೆ ಬೆಂಕಿ ಹಚ್ಚಿದರು. ಬರ್ ಎಂದು ಮೇಲಕ್ಕೆ ನೆಗೆದ ಬಿರುಸಿನ ಕಿಡಿಗಳು ಸೂರಕ್ಕಿಯ ಗೂಡಿಗೆ ತಗುಲಿದವು. ಒಂದೇ ಕ್ಷಣದಲ್ಲಿ ಸೂರಕ್ಕಿಯ ಗೂಡು ಭಸ್ಮ! ಪಾಪ, ಮರುದಿನ ಬೆಳಿಗ್ಗೆ ಅಲ್ಲೇ ಸುತ್ತ ಮುತ್ತ ಹಾರಾಡುತ್ತಿದ್ದ ಸೂರಕ್ಕಿಗಳು, ತಮ್ಮ ಉರಿದು ಹೋದ ಗೂಡನ್ನು ಕಂಡು ಮರುಗಿದವೋ ಏನೋ. ಇನ್ನು ನಮ್ಮ ಮನೆಯ ಹತ್ತಿರ ಅವು ಗೂಡು ಕಟ್ಟುವುದಿಲ್ಲವೇನೋ ಎಂದುಕೊಂಡೆ ನಾನು!

ಆದರೆ, ಸೂರಕ್ಕಿಗಳು ಯಾವುದೇ ಭಯವಿಲ್ಲದೇ, ಮರುವರ್ಷವೂ ಅದೇ ಜಾಗದಲ್ಲಿ ತಮ್ಮ ಗೂಡು ಕಟ್ಟಿದವು.
ನಮ್ಮ ಮನೆಯ ಪರಿಸರದ ಮೇಲೆ, ಆ ಕಪ್ಪನೆಯ ವಯರಿನ ಮೇಲೆ ಆ ಸೂರಕ್ಕಿಗಳಿಗಿದ್ದ ವಿಶ್ವಾಸ ಕಂಡು ನಮಗೆಲ್ಲಾ ಹೆಮ್ಮೆ, ಅಚ್ಚರಿ. ಆದರೆ ಈ ವರ್ಷ ಮತ್ತೊಂದು ಗಂಡಾಂತರ ಕಾದಿತ್ತು. ನಮ್ಮ ಹಳ್ಳಿ ಮನೆಯ ಉಪ್ಪರಿಗೆಯ ಮಾಡಿಗೆ ತಾಗಿಕೊಂಡಿದ್ದ ಒಂದು ದೊಡ್ಡ ಹಲಸಿನ ಮರದ ಕೊಂಬೆಗಳು ಚಾಚಿಕೊಂಡಿರುವುದು ಮಾಮೂಲು. ಅವು ಚಾವಣಿಯ ಮೇಲೆ ಮುಚ್ಚಿಕೊಂಡಿದ್ದರೂ, ಆ ಕೊಂಬೆಗಳನ್ನು ಕಡಿದು ಹಾಕುವ ಪದ್ಧತಿ ಅಂದು ಇರಲಿಲ್ಲ. ನಮ್ಮ ಉಪ್ಪರಿಗೆಯ ತುದಿಯಲ್ಲಿ, ದೊಂಬೆ ಹೆಂಚಿನ ಉದ್ದನೆಯ ಸಂದಿಯಲ್ಲಿ ಇಲಿಗಳು ವಾಸಿಸುತ್ತಿದ್ದುದು ಸಹ ಸಾಮಾನ್ಯ ಸಂಗತಿ. ಆ ಇಲಿಗಳನ್ನು ಹುಡುಕಿಕೊಂಡು ಹಗಲಿನ ಹೊತ್ತಿನಲ್ಲಿ ನಾಗರ ಹಾವುಗಳು ಸಹ ಬರುತ್ತಿದ್ದವು! ನಮ್ಮೂರಿನವರು ಆ ಹಾವಿಗೆ ಅದೆಷ್ಟು ಗೌರವ, ಭಯ, ಭಕ್ತಿ ತೋರುತ್ತಿದ್ದರೆಂದರೆ, ಅದನ್ನು ದೇವರ ಹಾವು ಎಂದು ಕರೆದು, ಅದಕ್ಕೆ ಯಾವುದೇ ಅಪಾಯವಾಗದಂತೆ ನೋಡಿಕೊಳ್ಳುತ್ತಿದ್ದರು! ಮನೆಯ
ಮಾಡಿನ ಮೇಲೆ ಹಾವು ನಿಧಾನವಾಗಿ ಸಂಚರಿಸುತ್ತಾ, ಇಲಿಗಳ ವಾಸನೆಯನ್ನು ಗ್ರಹಿಸಲು ತನ್ನ ನಾಲಗೆಯನ್ನು ಝಳಪಿಸುತ್ತಾ ಓಡಾಡುವುದನ್ನು ನಾನು ಹಲವು ಬಾರಿ ಕಂಡಿದ್ದೆ.


‘ಅದು ಅದರ ಪಾಡಿಗೆ ಬಂದು ಹೋಗುತ್ತದೆ, ನಮಗೆ ಏನೂ ಮಾಡುವುದಿಲ್ಲ’ ಎನ್ನುತ್ತಿದ್ದರು ನಮ್ಮ ಅಮ್ಮಮ್ಮ!
ಆ ವರ್ಷ, ಆ ರೀತಿ ಉಪ್ಪರಿಗೆಯ ಮಾಡಿನ ಮೇಲೆ ಇಲಿಗಳನ್ನು ಹುಡುಕುತ್ತಾ ಬಂದ ಒಂದು ನಾಗರಹಾವು,
ನಿಧಾನವಾಗಿ ಸೂರಕ್ಕಿಯ ಗೂಡಿನ ಕಡೆ ಚಲಿಸಿತು. ಆ ನಾಗರಹಾವಿಗೆ ಅದೆಂತಹ ಕೌಶಲವಿತ್ತೆಂದರೆ, ಗೂಡಿನ ಕಡೆ
ನಿಧಾನವಾಗಿ ಚಲಿಸಿ, ವಯರಿಗೆ ಅಂಟಿಕೊಂಡಿದ್ದ ಸೂರಕ್ಕಿಯ ಗೂಡನ್ನು ಪತ್ತೆ ಮಾಡಿ, ವಯರನ್ನು ಮತ್ತು ಗೋಡೆಯನ್ನೇ ಆಧಾರ ಮಾಡಿಕೊಂಡು, ಅದರೊಳಗೆ ಇಣುಕಿತು! ಹತ್ತಿರದಲ್ಲೇ ಇದ್ದ ಸೂರಕ್ಕಿಗಳು ಅತ್ತಿತ್ತ ಹಾರಾಡುತ್ತಾ ಆರ್ತನಾದ ಮಾಡುತ್ತಿದ್ದವು. ಆ ನಾಗರಹಾವು ಸೂರಕ್ಕಿಯ ಗೂಡಿಗೆ ಭೇಟಿ ಇತ್ತಾಗ, ಅಲ್ಲಿ ಮೊಟ್ಟೆ ಇತ್ತೋ ಇಲ್ಲವೋ ನನಗೆ ಸ್ಪಷ್ಟವಾಗಿ ಗೊತ್ತಿಲ್ಲ; ಹಾವು ಮೊಟ್ಟೆಯನ್ನು ನುಂಗಿದ್ದನ್ನು ಸಹ ನಾನು ಕಣ್ಣಾರೆ ನೋಡಿರಲಿಲ್ಲ. ಆದರೆ, ಆ ಎರಡು ಹಕ್ಕಿಗಳು ಅತ್ತಿಂದಿತ್ತ ಹಾರಾಡುತ್ತಾ, ಸನಿಹದ ಮಾವಿನ ಮರದ ಟೊಂಗೆ
ಯ ಮೇಲೆ ಒಮ್ಮೊಮ್ಮೆ ಕುಳಿತು, ಮತ್ತೆ ಇತ್ತ ಹಾರಿ ಬರುತ್ತಾ, ಕೂಗುತ್ತಿದ್ದ ಪರಿಯನ್ನು ಕಂಡರೆ ಮಾತ್ರ, ಏನೋ ದೊಡ್ಡ ಅನಾಹುತ ಆಗಿರಲೇ ಬೇಕು ಎನಿಸಿತು. ಕೆಲವು ನಿಮಿಷಗಳ ನಂತರ ಹಾವು ಕೆಳಗಿಳಿದು, ಹೊರಟುಹೋಯಿತು. ಸೂರಕ್ಕಿಗಳಿಗೆ ತಮ್ಮ ಗೂಡಿಗೆ ಭೇಟಿಕೊಟ್ಟ ಆ ನಾಗರಹಾವನ್ನು ಕಂಡು ಏನು ಅನಿಸಿತೋ, ಎಷ್ಟು ಭಯಪಟ್ಟವೋ!

ಆ ದಿನ ತಮ್ಮ ಗೂಡನ್ನೇ ಬಿಟ್ಟು ಹೋದವು. ಮಾತ್ರವಲ್ಲ, ಮುಂದೆಂದೂ ಆ ವಯರಿಗೆ ಅಂಟಿದಂತೆ ತಮ್ಮ ಗೂಡನ್ನು ಕಟ್ಟಲೇ ಇಲ್ಲ. ದೀಪಾವಳಿ ದಿನ ಬೆಂಕಿ ತಗುಲಿ ಗೂಡು ಭಸ್ಮವಾದರೂ, ಅವು ಬೆದರಲಿಲ್ಲ. ಆದರೆ ನಾಗರಹಾವು ತಮ್ಮ ಗೂಡಿಗೆ ಭೇಟಿಕೊಟ್ಟದ್ದನ್ನು ಕಂಡು ಹೆದರಿದವು. ನಂತರದ ವರ್ಷಗಳಲ್ಲಿ ನಮ್ಮ ಮನೆಯ ಸುತ್ತ ಮುತ್ತ ಮೂರು ಪ್ರಭೇದದ ಸೂರಕ್ಕಿಗಳು ಹಾರಾಡುವುದನ್ನು ಕಂಡಿದ್ದೆನಾದರೂ, ಆ ಜಾಗದಲ್ಲಿ ಗೂಡು ಕಟ್ಟಲಿಲ್ಲ.

ಮನೆಯ ಕಿಟಿಕಿಗೆ ತಾಗಿಕೊಂಡಂತೆ ಕಟ್ಟಿದ್ದ ಸೂರಕ್ಕಿಯ ಗೂಡನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದರೂ,
ಅಂದು ಅದರ ಛಾಯಾಚಿತ್ರ ತೆಗೆಯುವ ಅವಕಾಶ ನನಗಿರಲಿಲ್ಲ. ಅಂದಿನ ದಿನಗಳಲ್ಲಿ ನಮ್ಮ ಹಳ್ಳಿಯಲ್ಲೇ ಯಾರ
ಬಳಿಯಲ್ಲೂ ಕ್ಯಾಮೆರಾ ಇರಲಿಲ್ಲ! ನಂತರದ ದಶಕಗಳಲ್ಲಿ, ನಾನು ಉದ್ಯೋಗಸ್ಥನಾದ ನಂತರ, ಒಂದು ಫಿಲಂ ಕ್ಯಾಮೆರಾ ಕೊಂಡುಕೊಂಡೆ. ‘ಹಕ್ಕಿಯ ಗೂಡು ಕಂಡರೆ ತಿಳಿಸು, ಫೋಟೋ ತೆಗೆಯುತ್ತೇನೆ’ ಎಂದು ತಾರಿಕಟ್ಟೆ ಯಲ್ಲಿದ್ದ ಬಂಧು, ರಾಜಣ್ಣನಿಗೆ ಹೇಳಿದ್ದೆ. ‘ಮನೆಯ ಹತ್ತಿರವೇ ಪುಟಾಣಿ ಹಕ್ಕಿಯೊಂದು ಗೂಡು ಕಟ್ಟಿದೆ, ಫೋಟೋ ತೆಗೆಯಬಹುದು, ಬಾ’ ಎಂದು ರಾಜಣ್ಣ ಕಾಗದ ಬರೆದ. ಅದೇ ಶನಿವಾರ ಕ್ಯಾಮೆರಾ ಮತ್ತು ಲೆನ್ಸ್ ಹೊತ್ತು ತಾರಿಕಟ್ಟೆಗೆ ಹೋದೆ. ರಾಜಣ್ಣನ ಮನೆಯ ಎದುರು ತುಸು ದೂರದಲ್ಲಿದ್ದ ತೇಗದ ಗಿಡದಲ್ಲಿ ದರ್ಜಿ ಹಕ್ಕಿಯೊಂದು (ಟೇಲರ್ ಬರ್ಡ್) ಗೂಡುಕಟ್ಟಿತ್ತು. ನೆಲದಿಂದ ಕೇವಲ ಮೂರು ಅಡಿ ಎತ್ತರದಲ್ಲಿ, ಎರಡು ತೇಗದ ಎಲೆಗಳನ್ನು ತನ್ನ ಕೊಕ್ಕಿನಿಂದಲೇ ಹೊಲಿದು ಗೂಡು ಕಟ್ಟಿ, ಮರಿ ಮಾಡಿತ್ತು.

ಆ ಗೂಡಿನ ಫೋಟೋ ಕ್ಲಿಕ್ಕಿಸಲು ನನಗೆ ಅನುಕೂಲವಾಗಲೆಂದು, ಸುತ್ತಲಿನ ಕುರುಚಲು ಗಿಡಗಳನ್ನು ರಾಜಣ್ಣ
ಚೊಕ್ಕಟ ಮಾಡಿದ್ದ. ‘ಹಾಗೆ ಮಾಡಬಾರದಿತ್ತು, ಹಕ್ಕಿಗೆ ಹೆದರಿಕೆ ಆಗುತ್ತೆ’ ಎಂದೆ ನಾನು. ಆ ಗೂಡಿನ ಬಳಿ ಹೋಗಿ ನೋಡಿ ದಾಗ, ಎರಡು ಮರಿಗಳಿದ್ದವು. ನಾವಿಬ್ಬರೂ ಗೂಡಿನ ಹತ್ತಿರ ಸುಳಿದಾಡುವುದನ್ನು ಕಂಡು ತಾಯಿ ಹಕ್ಕಿಗೆ ಗಾಬರಿಯಾಗಿರಬೇಕು. ಆಚೀಚಿನ ಗಿಡಗಳಲ್ಲಿ ಕುಳಿತು, ಜೋರಾಗಿ ಕೂಗತೊಡಗಿತು. ನಾನು ಕ್ಯಾಮೆರಾ -ಕಸ್ ಮಾಡಲು ಆರಂಭಿಸಿದೆ. ‘ಇನ್ನೂ ಒಂದೆರಡು ಎಲೆ, ಗೆಲ್ಲು ತೆಗೆದು ಹಾಕಿ, ಇನ್ನಷ್ಟು ಜಾಗ ಮಾಡಿಕೊಡಲೆ?’ ಎಂದು ರಾಜಣ್ಣ ಕೇಳಿದ.

‘ಖಂಡಿತಾ ಬೇಡ, ಆ ಹಕ್ಕಿಗೆ ತೊಂದರೆ ಆಗುತ್ತದೆ’ ಎಂದೆ. ಸ್ಪಷ್ಟವಾಗಿ ಫೋಕಸ್ ಮಾಡಲು ಇನ್ನಷ್ಟು ಹತ್ತಿರ ಹೋದೆ.
ತಾಯಿ ಹಕ್ಕಿ ಇನ್ನಷ್ಟು ತೀವ್ರವಾಗಿ ಕೂಗತೊಡಗಿತು. ಮರಿಗಳಿಗೆ ಅಪಾಯ ಮಾಡಲು ಬಂದಿದ್ದೇನೆ ಎಂದೇ ಅದು
ಯೋಚಿಸಿರಬೇಕು. ನಾನಿನ್ನೂ ಒಂದೇ ಒಂದು ಫೋಟೋ ತೆಗೆದಿರಲಿಲ್ಲ, ಅದೇಕೋ ಮನಸ್ಸು ಒಮ್ಮೆಗೇ ಕಲವಿಲ ವಾಯಿತು. ಆ ಪುಟಾಣಿ ಮರಿಗಳ ಹತ್ತಿರ ಹೋಗಿ, ಅವುಗಳ ದಿನಚರಿಗೆ ಭಂಗ ತರುವಂತೆ ನಾನು ಫೋಟೋ ತೆಗೆಯ ಬೇಕೆ? ನಾವಿಬ್ಬರೂ ಅಷ್ಟು ಹತ್ತಿರ ಸುಳಿದಾಡಿದ್ದನ್ನು ಕಂಡು, ತಾಯಿ ಹಕ್ಕಿ, ಬೆದರಿ, ಖಾಯಂ ಆಗಿ ಆ ಜಾಗವನ್ನು ತೊರೆದರೆ, ಆ ಕ್ಷಣದಿಂದಲೇ ಆ ಮರಿಗಳು ಅನಾಥವಾಗಬಹುದಲ್ಲವೆ? ನಾನು ಫೋಟೋ ತೆಗೆಯುವುದು ಮುಖ್ಯವೇ ಅಥವಾ ಆ ಹಕ್ಕಿಗೂಡಿನ ಮರಿಗಳು ತಾಯಿಯ ಆರೈಕೆ ಪಡೆದು, ಬೆಳೆಯುವುದು ಮುಖ್ಯವೆ? ಅದೇಕೋ ಆ ಕ್ಷಣದಲ್ಲಿ, ನಮ್ಮ ಹಳ್ಳಿ ಮನೆಯಲ್ಲಿ ಅಂದು ನಾಗರಹಾವನ್ನು ತಮ್ಮ ಗೂಡಿನ ಬಳಿ ಕಂಡು ಬೆದರಿ, ಆರ್ತನಾದ ಮಾಡುತ್ತಿದ್ದ ಲೋಟೆನ್ಸ್ ಸೂರಕ್ಕಿ ದಂಪತಿಯ ನೆನಪಾಯಿತು.

ನಾಗರಹಾವು ತಮ್ಮ ಗೂಡಿಗೆ ಭೇಟಿ ನೀಡಿದ್ದನ್ನು ಕಣ್ಣಾರೆ ಕಂಡ ಆ ಹಕ್ಕಿಗಳು ಆರ್ತನಾದ ಮಾಡಿ ಗೌಜು ಎಬ್ಬಿಸಿದ್ದು ಮಾತ್ರವಲ್ಲ, ಆ ನಂತರ ಆ ಜಾಗವನ್ನೇ ಬಿಟ್ಟು ದೂರ ಹೊರಟುಹೋದವಲ್ಲ! ದರ್ಜಿ ಹಕ್ಕಿಯ ಕೂಗನ್ನು ಕೇಳಿ, ನನ್ನ ಕಿವಿಯಲ್ಲಿ ಸೂರಕ್ಕಿಗಳ ಯಾತನೆ ಅನುರಣಿಸಿತು. ರಾಜಣ್ಣನಿಗೆ ಹೇಳಿದೆ ‘ಫೋಟೋ ತೆಗೆಯುವುದಿಲ್ಲ ಮಾರಾಯ, ಈ ಹಕ್ಕಿ ತನ್ನ ಮರಿಗಳನ್ನು ಕ್ಷೇಮವಾಗಿ ಬೆಳೆಸಲಿ’ ಎಂದು ಕ್ಯಾಮೆರಾ ಮತ್ತು ಲೆನ್ಸ್‌ನ್ನು ಬ್ಯಾಗಿಗೆ ಸೇರಿಸಿ, ವಾಪಸು ಹೊರಟೆ.

ಇದನ್ನೂ ಓದಿ: Shashidhara Halady Column: ಹಳ್ಳಿಯ ಹಸುಗೂಸಿನ ಹೊಟ್ಟೆ ತಂಪು !