Saturday, 26th October 2024

Bihar Shootout: ದುರ್ಗಾ ಪೆಂಡಾಲ್‌ಗೆ ನುಗ್ಗಿದ ದುಷ್ಕರ್ಮಿಗಳಿಂದ ಫೈರಿಂಗ್;‌ ನಾಲ್ವರಿಗೆ ಗಂಭೀರ ಗಾಯ

shootout

ಪಾಟ್ನಾ: ದುರ್ಗಾ ಪೂಜಾ ಪೆಂಡಾಲ್‌(Druga Pedal)ಗೆ ನುಗ್ಗಿದ ದುಷ್ಕರ್ಮಿಗಳು ಗುಂಡಿನ ದಾಳಿ(Bihar Shootout) ನಡೆಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ದುರ್ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅರ್ರಾದಲ್ಲಿ ಭಾನುವಾರ ಮುಂಜಾನೆ ದುರ್ಗಾಪೂಜಾ ಪೆಂಡಾಲ್‌ನಲ್ಲಿ ಈ ದಾಳಿ ನಡೆದಿದೆ. ಅಪರಿಚಿತ ಶೂಟರ್‌ಗಳು ಎರಡು ದ್ವಿಚಕ್ರ ವಾಹನಗಳಲ್ಲಿ ಪೆಂಡಾಲ್‌ಗೆ ನುಗ್ಗಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳದಿಂದ ಎರಡು ಬುಲೆಟ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಗಾಯಗೊಂಡವರನ್ನು ಅರ್ಮಾನ್ ಅನ್ಸಾರಿ (19), ಸುನಿಲ್ ಕುಮಾರ್ ಯಾದವ್ (26), ರೋಷನ್ ಕುಮಾರ್ (25) ಮತ್ತು ಸಿಪಾಹಿ ಕುಮಾರ್ ಎಂದು ಗುರುತಿಸಲಾಗಿದೆ. ಅವರನ್ನು ಚಿಕಿತ್ಸೆಗಾಗಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರನ್ನು ಶಸ್ತ್ರಚಿಕಿತ್ಸೆಗೊಳಪಡಿಸಲಾಗಿದೆ. ಗಾಯಾಳುಗಳ ಸ್ಥಿತಿ ಸ್ತಿರವಾಗಿದೆ ಎಂದು ಡಾ.ವಿಕಾಶ್ ಸಿಂಗ್ ತಿಳಿಸಿದ್ದಾರೆ.

ಈ ಹಿಂಸಾತ್ಮಕ ಕೃತ್ಯದ ಹಿಂದಿನ ಉದ್ದೇಶ ತಿಳಿದಿಲ್ಲ. ದಾಳಿಗೆ ಕಾರಣರಾದವರನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭಯಾನಕತೆಯನ್ನು ವಿವರಿಸಿದ ಯಾದವ್, ಬಂದೂಕುಧಾರಿಗಳು ಬೈಕ್‌ಗಳಲ್ಲಿ ಬಂದು ಯಾವುದೇ ಎಚ್ಚರಿಕೆ ನೀಡದೆ ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ಹೇಳಿದರು. ಈ ಘಟನೆ ಸ್ಥಳೀಯರಲ್ಲಿ ಭಯವನ್ನು ಹುಟ್ಟುಹಾಕಿದೆ ಮತ್ತು ಹಬ್ಬದ ಸೀಸನ್‌ನಲ್ಲಿ ಈ ಪ್ರದೇಶದಲ್ಲಿ ಭಾರೀ ಭದ್ರತೆಯ ಕಾಳಜಿಯನ್ನು ಹುಟ್ಟುಹಾಕಿದೆ.

ನಿನ್ನೆಯಷ್ಟೇ ಕೋಲ್ಕತ್ತಾದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದ್ದು, ಅನ್ಯಕೋಮಿನ ದುಷ್ಕರ್ಮಿಗಳ ಗುಂಪೊಂದು ದುರ್ಗಾ ಪೂಜಾ ಪೆಂಡಾಲ್‌ಗೆ ನುಗ್ಗಿ ಧಾರ್ಮಿಕ ಆಚರಣೆಗಳನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ನ್ಯೂ ಬೆಂಗಾಲ್ ಸ್ಪೋರ್ಟಿಂಗ್ ಕ್ಲಬ್‌ನ ಪೂಜಾ ಪೆಂಡಾಲ್‌ ಮುಸ್ಲಿಮ್ ಗುಂಪೊಂದು ನುಗ್ಗಿ ಹಿಂದೂ ಆಚರಣೆಗಳನ್ನು ನಿಲ್ಲಿಸುವಂತೆ ಪೂಜಾ ಸಂಘಟಕರಿಗೆ ಬೆದರಿಕೆ ಹಾಕಿದೆ. ಸುಮಾರು 50-60 ಸದಸ್ಯರನ್ನು ಒಳಗೊಂಡ ಮುಸ್ಲಿಂ ಗುಂಪು ಆಚರಣೆಯನ್ನು ನಿಲ್ಲಿಸದಿದ್ದರೆ ದುರ್ಗೆಯ ಮೂರ್ತಿಯನ್ನು ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದರು.

ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದ ನ್ಯೂ ಬೆಂಗಾಲ್ ಸ್ಪೋರ್ಟಿಂಗ್ ಕ್ಲಬ್ ದುರ್ಗಾ ಪೂಜೆಯನ್ನು ಆಯೋಜಿಸಿತ್ತು. ಈ ವೇಳೆ ಪೆಂಡಾಲ್‌ಗೆ ನುಗ್ಗಿದ ದುಷ್ಕರ್ಮಿಗಳ ತಂಡ ಗದ್ದಲ ಸೃಷ್ಟಿಸಿದೆ. ಅಲ್ಲದೇ ಆಚರಣೆಗಳನ್ನು ನಿಲ್ಲಿಸದಿದ್ದರೆ ದುರ್ಗಾ ಮಾತೆಯ ವಿಗ್ರಹವನ್ನು ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲೇ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯಿಸಿ ಕಾರ್ಯಕ್ರಮದ ಆಯೋಜಕರು ಪೊಲೀಸರಿಗೆ ದೂರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Petrol bomb: ದುರ್ಗಾ ಪೂಜಾ ಪೆಂಡಾಲ್‌ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ; ದುಷ್ಕೃತ್ಯದ ವಿಡಿಯೋ ಇಲ್ಲಿದೆ