Wednesday, 23rd October 2024

Baba Siddiqui: ಬಾಬಾ ಸಿದ್ದಿಕಿ ಹಂತಕನಿಂದ ಸೋಶಿಯಲ್‌ ಮೀಡಿಯಾದಲ್ಲಿ KGF ಸಿನಿಮಾ ಡೈಲಾಗ್‌, BGM ಜತೆ ಎಚ್ಚರಿಕೆಯ ಪೋಸ್ಟ್‌

baba siddiqui

ಮುಂಬೈ: ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ(Baba Siddiqui) ಹತ್ಯೆ ಪ್ರಕರಣದ ಮೂರನೇ ಶೂಟರ್‌ ತಲೆಮರೆಸಿಕೊಂಡಿದ್ದು, ಇದೀಗ ಆತ ಕಳೆದ ಕೆಲವು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿದ್ದ ಪೋಸ್ಟ್‌ವೊಂದು ಭಾರೀ ವೈರಲ್‌ ಆಗುತ್ತಿದೆ. ಉತ್ತರಪ್ರದೇಶ ಮೂಲದ ಹಂತಕ ಶಿವಕುಮಾರ್‌ ಗೌತಮ್‌ ಹಲವು ತಿಂಗಳಿಂದಲೂ ಹತ್ಯೆಗೆ ಸಂಬಂಧಿಸಿದಂತಹ ಪೋಸ್ಟ್‌ಗಳನ್ನು ಪ್ರಕಟಿಸುತ್ತಿದ್ದ ಎನ್ನಲಾಗಿದೆ.

ಜುಲೈ 24 ರಂದು Instagram ನಲ್ಲಿ ಪೋಸ್ಟ್‌ನಲ್ಲಿ, ಗೌತಮ್‌ “ಯಾರ್ ತೇರಾ ಗ್ಯಾಂಗ್‌ಸ್ಟರ್‌ ಹೇ ಜಾನಿ (ಗ್ಯಾಂಗ್‌ಸ್ಟರ್‌ ನಿನ್ನ ಸ್ನೇಹಿತ)” ಎಂದು ಬರೆದಿದ್ದಾನೆ. ಇದರ ಜತೆಗೆ ತಾನು ಬೈಕ್‌ ಕುಳಿತ ಫೋಟೋವನ್ನೂ ಪೋಸ್ಟ್‌ ಮಾಡಿದ್ದಾನೆ. ಇನ್ನು ಶಿವಕುಮಾರ್ ಗೌತಮ್ ಬಹ್ರೈಚ್‌ನ ಗಂದಾರಾ ಗ್ರಾಮದವರು. ಆತನಿಗೆ ಯಾವುದೇ ಅಪರಾಧ ಇತಿಹಾಸವಿಲ್ಲ. ಪುಣೆಯ ಅಂಗಡಿಯೊಂದರಲ್ಲಿ ಕೆಲಸ ಮಾಡಲು ಮಹಾರಾಷ್ಟ್ರಕ್ಕೆ ಬಂದಿದ್ದ ಎನ್ನಲಾಗಿದೆ.

ಜುಲೈ 8 ರಂದು ಕೂಡ ಆತ ಒಂದು ಪೋಸ್ಟ್‌ ಮಾಡಿದ್ದುಮ ನನ್ನ ತಂದೆ ಕಾನೂನು ಪಾಲಿಸುವ ವ್ಯಕ್ತಿ, ನಾನಲ್ಲ. ಮೇ 26 ರಂದು, ಅವರು “ಕೆಜಿಎಫ್” ಚಿತ್ರದ ಹಿನ್ನೆಲೆ ಸಂಗೀತದ ಜೊತೆಗೆ ಇಡೀ ಪುಣೆ ನಗರದ ವಿಡಿಯೋವೊಂದನ್ನು ಹರಿಬಿಟ್ಟಿದ್ದ. ಅದರ ಜೊತೆಗೆ ಚಿತ್ರ ಬಹು ಜನಪ್ರಿಯ ಡೈಲಾಗ್‌ ʼಪವರ್‌ಪುಲ್‌ ಪೀಪಲ್‌ ಮೇಕ್ಸ್‌ ಪ್ಲೇಸ್‌ ಪವರ್‌ಫುಲ್‌ʼ ಅನ್ನು ಪೋಸ್ಟ್‌ ಮಾಡಿದ್ದಾರೆ. ಇನ್ನು ಸಿದ್ದಿಕಿ ಕೊಲೆ ನಂತರ ಶಿವಕುಮಾರ್ ಗೌತಮ್‌ನ Instagram ಫಾಲೋವರ್ಸ್‌ ದುಪ್ಪಟ್ಟಾಗಿದ್ದಾರೆ ಎಂದು ವರದಿಯಾಗಿದೆ.

ಇನ್ನು ಬಾಬಾ ಸಿದ್ದಿಕಿ ಹತ್ಯೆ ಬಗ್ಗೆ ಗೌತಮ್‌ನ ತಾಯಿ ಪ್ರತಿಕ್ರಿಯಿಸಿದ್ದು, ನನ್ನ ಮಗ ಕೊಲೆ ಮಾಡಿದ್ದಾನೆಂದು ನಂಬಲಾಗುತ್ತಿಲ್ಲ. ಹೋಳಿ ಹಬ್ಬದ ವೇಳೆ ಕೊನೆಯ ಬಾರಿಗೆ ಗಂಡಾರೆಗೆ ಮಗ ಭೇಟಿ ನೀಡಿದ್ದ. ಭೇಟಿಯ ನಂತರ ಗೌತಮ್ ಏಪ್ರಿಲ್ ಮೊದಲ ವಾರದಲ್ಲಿ ಪುಣೆಗೆ ತೆರಳಿದ್ದ ಎಂದು ಆಕೆ ಹೇಳಿಕೊಂಡಿದ್ದಾರೆ.

66 ವರ್ಷದ ಎನ್‌ಸಿಪಿ ನಾಯಕನ ಮೇಲೆ ಮುಂಬೈನ ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿ ಅವರ ಶಾಸಕ ಪುತ್ರ ಜೀಶಾನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಆಘಾತಕಾರಿ ಸಂಗತಿಯೆಂದರೆ ದಸರಾ ಆಚರಣೆಯ ದಿನದಂದು ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದ ದಿನದಂದು ಜನನಿಬಿಡ ರಸ್ತೆಯಲ್ಲಿ ಈ ದಾಳಿ ನಡೆಸಲಾಗಿದೆ. ಗಾಯಗೊಂಡ ಸಿದ್ದಿಕ್ಕಿ ಅವರನ್ನು ತಕ್ಷಣ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಬಾಬಾ ಸಿದ್ದಿಕಿ ಅವರ ಹತ್ಯೆಯು ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರಶ್ನಿಸಲು ನಾಯಕರನ್ನು ಪ್ರೇರೇಪಿಸಿತು, ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕನ ಹತ್ಯೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಕೊಲೆ ತನಿಖೆಗೆ ಸಂಬಂಧಿಸಿದಂತೆ, ಮುಂಬೈ ಪೊಲೀಸರು ಮಹಾರಾಷ್ಟ್ರದಾದ್ಯಂತ 15 ತಂಡಗಳನ್ನು ನಿಯೋಜಿಸಿದ್ದಾರೆ ಮತ್ತು ಶೂಟರ್ಗಳಿಗೆ ವ್ಯವಸ್ಥಾಪನಾ ಬೆಂಬಲವನ್ನು ನೀಡಿದವರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಮುಂಬೈನ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ಸಂಜೆ ವರದಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Baba Siddiqui: ಬಿಷ್ಣೋಯ್‌ ಗ್ಯಾಂಗ್‌ ಹಿಟ್‌ ಲಿಸ್ಟ್‌ನಲ್ಲಿ ಬಾಬಾ ಸಿದ್ದಿಕಿ ಪುತ್ರ- ಸ್ಫೋಟಕ ಸಂಗತಿ ಬಾಯ್ಬಿಟ್ಟ ಹಂತಕರು