Wednesday, 23rd October 2024

BBK 11: ರಂಜಿತ್​ನ ಕಳುಹಿಸಬೇಡಿ ಎಂದು ಬಿಗ್ ಬಾಸ್ ಬಳಿ ಅಂಗಲಾಚಿದ ಸ್ಪರ್ಧಿಗಳು

Manju Bhavya Gowda and Trivikram

ಕನ್ನಡ ಬಿಗ್ ಬಾಸ್ ಸೀಸನ್ 11 (Bigg Boss Kannada 11) ಶುರುವಾದ ಮೊದಲ ಎರಡು ವಾರ ಹೆಚ್ಚು ಜಗಳಗಳಿಂದಲೇ ಸುದ್ದಿಯಲ್ಲಿತ್ತು. ಆದರೆ, ಮೂರನೇ ವಾರಕ್ಕೆ ಇದು ವಿಕೋಪಕ್ಕೆ ತಿರುಗಿ ಶೋನಲ್ಲಿ ಇದೀಗ ಮ್ಯಾನ್ ಹ್ಯಾಂಡ್ಲಿಂಗ್ ನಡೆದು ಇಬ್ಬರು ಸ್ಪರ್ಧಿಗಳು ಮನೆಯಿಂದ ಔಟ್ ಆಗಿದ್ದಾರೆ. ಜಗದೀಶ್ ಮತ್ತು ರಂಜಿತ್ ನಡುವೆ ಚಿಕ್ಕ ಮಟ್ಟದ ಕ್ಲ್ಯಾಶ್ ಆಗಿದೆ. ಇವರಿಬ್ಬರನ್ನೂ ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿದೆ.

ಜಗದೀಶ್‌ ಆರಂಭದಿಂದ ಕೇವಲ ಮನೆಯ ಸ್ಪರ್ಧಿಗಳ ವಿರುದ್ಧ ಮಾತ್ರವಲ್ಲದೆ ಬಿಗ್‌ಬಾಸ್‌ ಕಾರ್ಯಕ್ರಮದ ಬಗ್ಗೆ ಕೂಡ ಹಗುರವಾಗಿ ಮಾತನಾಡಿದ್ದರು. ಅದರಲ್ಲೂ ನಿನ್ನೆ ಬಿಗ್ ಬಾಸ್ ಶೋ ಬಗ್ಗೆ ಕೆಟ್ಟದಾಗಿ ಮಾತಾಡಿದ್ದರು. ಇದಕ್ಕೆ ಇಡೀ ಮನೆಯ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಇಲ್ಲಿಂದ ಮನೆಯಲ್ಲಿ ಬೆಂಕಿ ಹತ್ತಿಕೊಂಡಿದೆ. ಬಳಿಕ ಹಂಸ ಅವರ ಬಗ್ಗೆ ಕೆಟ್ಟ ಶಬ್ದ ಉಪಯೋಗಿಸಿದ್ದಕ್ಕಾಗಿ ಜಗದೀಶ್ ಮೇಲೆ ಮನೆಯವರ ಕೋಪ ತಲೆಗೆ ಏರಿದೆ.

ಮಾನಸಾ ಜೊತೆ ಜಗಳಕ್ಕಿಳಿದಾಗ ಜಗದೀಶ್ ಅವರನ್ನು ರಂಜಿತ್ ತಳ್ಳಿದ್ದಾರೆ. ಈ ಸಂದರ್ಭ ಮಧ್ಯ ಪ್ರವೇಶಿಸಿದ ಬಿಗ್ ಬಾಸ್ ಎಲ್ಲ ಸರ್ಧಿಗಳನ್ನು ಕೂರಲು ಹೇಳಿ ಸಮಾಧಾನ ಪಡಿಸಲು ಯತ್ನಿಸಿದರು. ಆದರೂ ರಂಜಿತ್-ಜಗದೀಶ್ ಕೆಟ್ಟ ಮಾತುಗಳಲ್ಲಿ ಬೈದುಕೊಂಡಿದ್ದಾರೆ. ಬಳಿಕ ಬಿಗ್ ಬಾಸ್ ಜಗದೀಶ್ ಮತ್ತು ರಂಜಿತ್‌ ಅವರನ್ನು ಮುಖ್ಯದ್ವಾರದಿಂದ ಆಚೆ ಬನ್ನಿ ಎಂದು ಆದೇಶ ನೀಡಿದ್ದಾರೆ. ರಂಜಿತ್‌ ಎಲಿಮಿನೇಟ್ ಆಗುತ್ತಿರುವ ವಿಚಾರ ಇತರೆ ಸ್ಪರ್ಧಿಗಳಿಗೆ ದುಃಖ ತಂದಿದೆ.

ಉಗ್ರಂ ಮಂಜು ಮನೆಯೊಳಗೆ ಒಂದು ಬಾರಿ ಕಣ್ಣೀರು ಹಾಕಿದ್ದರಷ್ಟೆ. ಭವ್ಯ ಗೌಡ ಕೂಡ ಸ್ಟ್ರಾಂಗ್ ಆಗಿಯೇ ಇದ್ದರು. ಆದರೆ, ರಂಜಿತ್ ಹೋಗಬಾರದು ಎಂದು ಬಿಗ್ ಬಾಸ್ ಇವರು ಕಣ್ಣೀರಿಟ್ಟಿದ್ದಾರೆ. ‘ರಂಜಿತ್ ಅವರು ಬೇಕೆಂದೇ ಈ ರೀತಿ ಮಾಡಿಲ್ಲ, ಸಣ್ಣ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿ ಬಿಗ್ ಬಾಸ್‌. ಅವರಿಗೆ ಇನ್ನೊಂದು ಚಾನ್ಸ್ ನೀಡಿ. ಪ್ಲೀಸ್ ಬಿಗ್ ಬಾಸ್‌.. ಪ್ಲೀಸ್..’ ಎಂದು ರಂಜಿತ್ ಪರವಾಗಿ ಮನೆಯ ಕೆಲ ಸದಸ್ಯರು ಹೇಳಿದ್ದಾರೆ.

ಜಗದೀಶ್ ಹೋಗೋದು ಬೇಡ ಎಂದ ಭವ್ಯಾ-ಚೈತ್ರಾ:

ಜಗದೀಶ್ ಆಡಿದ ಮಾತಿನ ಬಗ್ಗೆ ಬಿಗ್​ಬಾಸ್ ಮನೆಯಲ್ಲಿದ್ದ ಇತರ ಸ್ಪರ್ಧಿಗಳ ಅಭಿಪ್ರಾಯವನ್ನು ಕೇಳಿದೆ. ಈ ಸಂದರ್ಭ ಭವ್ಯಾ ಗೌಡ, ‘ನಾವು ಸೆಲ್ಫ್ ಡಿಫೆನ್ಸ್ ಮಾಡಿಕೊಳ್ಳಲು 5-6 ಸಲ ತಳ್ಳಿದ್ದೇವೆ. ಆ ವ್ಯಕ್ತಿ ಇಷ್ಟು ದಿನ ಮನೆಯಲ್ಲಿರುವುದು ಬೇಡ, ಕಳುಹಿಸಿ ಎಂದು ರಿಕ್ವೆಸ್ಟ್ ಮಾಡ್ತಾ ಇದ್ವಿ. ಇವತ್ತು ನಮ್ಮೆಲ್ಲರ ರಿಕ್ವೆಸ್ಟ್ ಆ ವ್ಯಕ್ತಿ ಮನೆಯಲ್ಲಿರಬೇಕು. ಪ್ರತಿ ದಿನ ನಾನು ಕಂಟೆಂಟ್ ಕೊಡ್ತೇನೆ ಅಂತ ಹೇಳುತ್ತಾರೆ. ಅವರು ಕೊಡುವ ಕಂಟೆಂಟ್ ಕರ್ನಾಟಕ ಜನತೆ ನೋಡ್ಬೇಕು, ಆ ವ್ಯಕ್ತಿಗೆ ಎಂತಾ ವ್ಯಕ್ತಿತ್ವ ಇದೆ ಎಂಬುದನ್ನು ಇಡೀ ಕರ್ನಾಟಕ ನೋಡಬೇಕು,’ ಎಂದು ಹೇಳಿದ್ದಾರೆ.

ಇನ್ನು ಚೈತ್ರಾ ಕುಂದಾಪುರ ಅವರು, ‘ದಯವಿಟ್ಟು ಆ ಮನುಷ್ಯನ ಹೊರಗಡೆ ಕಳುಹಿಸಬೇಡಿ, ಆಟ ಈಗ ಶುರುವಾಗುತ್ತೆ. ಪ್ರೊವೋಕ್ ಮಾಡಿಯೇ ಈ ಮನೆಯವರನ್ನು ವಿಲನ್ ಆಗಿ ತೋರಿಸ್ತೀನಿ ಜಗತ್ತಿನ ಎದುರುಗಡೆ ನಾನೊಬ್ಬ ಪಾಪದವನಾಗಿ, ನಾನೊಬ್ಬ ಕ್ರಶ್ ಆಗಿ ಕಾಣಿಸಿಕೊಳ್ಳುತ್ತೇನೆ ಎಂಬುದಾದ್ರೆ ಈ ಮನುಷ್ಯಾನ ಬಾಯಿಯಲ್ಲಿ ಯಾವ ಪದ ಬಂದಿದೆ ಎಂಬುದು ಕರ್ನಾಟಕದ ಜನತೆ ನೋಡಬೇಕು,’ ಎಂದು ಹೇಳಿದ್ದಾರೆ.

BBK 11: ಬಿಗ್ ಬಾಸ್​ನಿಂದ ಹೊರಬಂದ ಬೆನ್ನಲ್ಲೇ ವೈರಲ್ ಆಗುತ್ತಿದೆ ಜಗದೀಶ್ ಆಡಿಯೋ