Thursday, 24th October 2024

Justin Trudeau : ಭಾರತ ವಿರುದ್ಧ ಹೇಳಿಕೆ ನೀಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಸ್ವಪಕ್ಷದ ಸಂಸದರಿಂದ ತಪರಾಕಿ; ರಾಜೀನಾಮೆಗೆ ಒತ್ತಾಯ

Justin Trudeau

ಬೆಂಗಳೂರು: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ನೀಡಿದ ಭಾರತ ವಿರೋಧಿ ಹೇಳಿಕೆ ಅವರಿಗೆ ತಿರುಗುಬಾಣವಾಗುವ ಲಕ್ಷಣ ತೋರುತ್ತಿದೆ. ಅವರು ತಮ್ಮದೇ ಪಕ್ಷ ಸದಸ್ಯರಿಂದಲೇ ಟೀಕೆ ಎದುರಿಸುತ್ತಿದ್ದಾರೆ, ಲಿಬರಲ್ ಪಕ್ಷದ (Canada liberal Party) ಹಲವಾರು ಸಂಸದರು ಈಗ ನಾಯಕನನ್ನು ನಾಲ್ಕನೇ ಅವಧಿಗೆ ಸ್ಪರ್ಧಿಸದಂತೆ ಆಗ್ರಹಿಸಿದ್ದಾರೆ. ನಿರ್ಧಾರವನ್ನು ತೆಗೆದುಕೊಳ್ಳಲು ಅಕ್ಟೋಬರ್ 28ರ ಗಡುವು ನೀಡಿದ್ದಾರೆ. ಕೆಲವು ಲಿಬರಲ್ ಸಂಸದರು ಟ್ರುಡೊ “ಅಕ್ಟೋಬರ್ 28 ರೊಳಗೆ ನಿರ್ಗಮಿಸಬೇಕು” ಇಲ್ಲದಿದ್ದರೆ ದೀರ್ಘ ಕಾಲದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ ಎಂಬುದಾಗಿ ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.

ತಮ್ಮ ಪಕ್ಷದ ಸದಸ್ಯರೊಂದಿಗೆ ಸಭೆ ನಡೆಸಿದ ಬಳಿಕ ಟ್ರುಡೊ ಲಿಬರಲ್‌ಗಳು ಬಲಶಾಲಿಗಳು ಮತ್ತು ಒಗ್ಗಟ್ಟಾಗಿದ್ದಾರೆ” ಎಂದು ಹೇಳಿದ್ದರು. ಆದರೆ, ಅವರ ಪಕ್ಷದ ಸುಮಾರು 20 ಸಂಸದರು ನೀಡಿದ ಗಡುವು ವಿಭಿನ್ನ ಕಥೆಯನ್ನು ನಿರೂಪಿಸುತ್ತದೆ. ಮುಂದಿನ ಚುನಾವಣೆಗೆ ಮುನ್ನ ಟ್ರುಡೊ ಅವರನ್ನು ಹುದ್ದೆಯಿಂದ ಕೆಳಗಿಳಿಯುವಂತೆ ಆಗ್ರಹಿಸಿದ 20ಕ್ಕೂ ಹೆಚ್ಚು ಸಂಸದರಲ್ಲಿ ಮೂವರು ಲಿಬರಲ್ ಪಕ್ಷದವರೂ ಇದ್ದಾರೆ.

ಟ್ರುಡೊ ಜನರ ಮಾತುಗಳನ್ನು ಕೇಳಲು ಪ್ರಾರಂಭಿಸಬೇಕು ಎಂದು ನ್ಯೂಫೌಂಡ್‌ಲ್ಯಾಂಡ್‌ನ ಲಿಬರಲ್ ಸಂಸತ್ ಸದಸ್ಯ ಕೆನ್ ಮೆಕ್ಡೊನಾಲ್ಡ್ ಹೇಳಿದ್ದಾರೆ. ಅವರು ಪತ್ರಕ್ಕೆ ಸಹಿ ಹಾಕಿದ್ದುಅದಿನ್ನೂ ಸಾರ್ವಜನಿಕವಾಗಿ ಬಹಿರಂಗಗೊಂಡಿಲ್ಲ.ಟ್ರುಡೊ ಕಾರಣಕ್ಕೆ ಲಿಬರಲ್‌ ಪಕ್ಷದ ಜನಪ್ರಿಯತೆ ಕುಸಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮೂರು ಗಂಟೆಗಳ ಕಾಲ ನಡೆದ ಲಿಬರಲ್‌ ಪಕ್ಷದ ಸಭೆಯಲ್ಲಿ ಟ್ರುಡೊ ಅವರ ಮುಂದೆ ಈ ಪತ್ರವನ್ನು ಓದಲಾಗಿದೆ ಎಂದು ವರದಿಯಾಗಿದೆ, ಪ್ರಧಾನಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ನಾಲ್ಕನೇ ಅವಧಿಗೆ ಸ್ಪರ್ಧಿಸಬಾರದು ಎಂಬ ವಾದಗಳನ್ನು ಮಂಡಿಸಿದ್ದಾರೆ. 28ರೊಳಗೆ ಈ ಬೇಡಿಕೆಯನ್ನು ಈಡೇರಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಮೌನಕ್ಕೆ ಶರಣಾದ ಟ್ರುಡೊ

ಈ ಹಿಂದೆ ಮರು ಸ್ಪರ್ಧೆಗೆ ಬಯಸುವುದಾಗಿ ಹೇಳಿದ್ದ ಟ್ರುಡೊ, ಸಭೆಯ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸದೇ ಹೋಗಿದ್ದರು. ಅಂದ ಹಾಗೆ 100 ವರ್ಷಗಳ ಇತಿಹಾಸದಲ್ಲಿ ಕೆನಡಾದ ಯಾವುದೇ ಪ್ರಧಾನಿ ಸತತ ನಾಲ್ಕು ಬಾರಿ ಗೆದ್ದಿಲ್ಲ.

ಇದನ್ನೂ ಓದಿ: India Canada Row : ಭಾರತಕ್ಕೆ ಬೆದರಿದ ಕೆನಡಾ; ನಿಜ್ಜರ್‌ ಕೊಲೆಯಲ್ಲಿ ಭಾರತ ಭಾಗಿಯಾಗಿದ್ದಕ್ಕೆ ಸಾಕ್ಷಿಗಳೇ ಇಲ್ಲ ಎಂದ ಪ್ರಧಾನಿ ಟ್ರುಡೊ!

ಟ್ರುಡೊ ಅವರ ಲಿಬರಲ್ಸ್ ಟೊರೊಂಟೊ ಮತ್ತು ಮಾಂಟ್ರಿಯಲ್‌ನಲ್ಲಿ ನಡೆದ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿತ್ತು. ಹೀಗಾಗಿ ಟ್ರುಡೊ ಅವರ ನಾಯಕತ್ವದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಆದಾಗ್ಯೂ, ಲಿಬರಲ್ ಸಂಸದರು ತಮಗೆ ಸಲ್ಲಿಸಿದ ಪತ್ರಕ್ಕೆ ಟ್ರುಡೊ ಇನ್ನೂ ಸಹಿ ಹಾಕಿಲ್ಲ. ಬೇಡಿಕೆಗಳನ್ನು ಪರಿಗಣಿಸಲು ಯೋಜಿಸುತ್ತಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿದ್ದಾರೆ ಎಂದು ಜಸ್ಟಿನ್ ಟ್ರುಡೊ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ತೀವ್ರ ಸಂಘರ್ಷಕ್ಕೆ ಒಳಗಾಗಿವೆ. ಟ್ರುಡೊ ಅವರ ಆರೋಪಗಳನ್ನು “ಅಸಂಬದ್ಧ” ಎಂದು ಭಾರತ ಹೇಳಿದೆ.