Thursday, 24th October 2024

Untouchability Case: ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಕೇಸ್‌; 98 ಮಂದಿಗೆ ಜೀವಾವಧಿ ಶಿಕ್ಷೆ

Untouchability case

ಕೊಪ್ಪಳ: ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣದಲ್ಲಿ (Untouchability Case) ಬರೋಬ್ಬರಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5 ಸಾವಿರ ರೂ. ದಂಡ ವಿಧಿಸಿ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಪ್ರಕರಣ ಉಳಿದ 3 ಅಪರಾಧಿಗಳಿಗೆ 5 ವರ್ಷ ಜೈಲು ಹಾಗೂ ತಲಾ 2 ಸಾವಿರ ರೂ. ದಂಡ ಹಾಕಿ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ಐತಿಹಾಸಿಕ ಆದೇಶ ಹೊರಡಿಸಿದ್ದಾರೆ.

ಪ್ರಕರಣದಲ್ಲಿ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಒಟ್ಟು 117 ಜನರ ವಿರುದ್ದ ‌ಆರೋಪಪಟ್ಟಿ ಸಲ್ಲಿಸಿದ್ದರು. ಈ ಪೈಕಿ ಹಲವರು ಮೃತಪಟ್ಟಿದ್ದಾರೆ. ಇನ್ನು ಕೆಲವರ ಹೆಸರು ರಿಪೀಟ್ ಆಗಿದ್ದಾರೆ. ಉಳಿದ 101 ಆರೋಪಿಗಳು ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಮಾನಿಸಿತ್ತು. ಈ ಪೈಕಿ 3 ಅಪರಾಧಿಗಳು ಎಸ್ಸಿ/ ಎಸ್ಟಿ‌ ವರ್ಗಕ್ಕೆ ಸೇರಿದ್ದಾರೆ. ಈ ಹಿನ್ನೆಲೆ ಅವರಿಗೆ ಅಟ್ರಾಸಿಟಿ ಕಾಯ್ದೆ ಅನ್ವಯವಾಗದ ಹಿನ್ನೆಲೆ ಮೂವರು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಕಡಿಮೆ ಆಗಿದೆ ಎನ್ನಲಾಗಿದೆ.

ಗಂಗಾವತಿ ತಾಲೂಕು ಮರಕುಂಬಿ ಗ್ರಾಮದಲ್ಲಿ ಕಳೆದ 2014ರ ಆ.28 ರಂದು ಘಟನೆ ನಡೆದಿತ್ತು. ಬರೋಬ್ಬರಿ 10 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅ.21 ರಂದು ಆರೋಪ ಪಟ್ಟಿಯಲ್ಲಿನ ಎಲ್ಲ ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಮಾನಿಸಿ, ಶಿಕ್ಷೆ ಪ್ರಮಾಣದ ಆದೇಶ ಕಾಯ್ದಿರಿಸಿದ್ದರು. ಗುರುವಾರ ಸಂಜೆ ಸುಮಾರು 6 ಗಂಟೆಗೆ ನ್ಯಾಯಾಧೀಶರು ಆದೇಶ ಪ್ರಕಟಿಸಿದರು.

ಪ್ರಕರಣದ ಹಿನ್ನೆಲೆ?

ಗಂಗಾವತಿ ತಾಲೂಕು ಮರಕುಂಬಿ ಗ್ರಾಮದಲ್ಲಿ ಕಳೆದ 2014ರ‌ ಆ.29 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಆದೇಶ ನೀಡಿದೆ. ಕ್ಷೌರದ ಅಂಗಡಿ ಮತ್ತು ಹೋಟೆಲ್‌ಗೆ ಪ್ರವೇಶಕ್ಕೆ ಸಂಬಂಧಿಸಿದಂತೆ, ದಲಿತರು ಮತ್ತು ಗ್ರಾಮದ ಸವರ್ಣೀಯರ ನಡುವೆ ಗಲಾಟೆ ನಡೆದಿತ್ತು. ನಂತರ ಗಂಗಾವತಿಯ ಚಿತ್ರಮಂದಿರದಲ್ಲಿ ಆರಂಭವಾದ ಗಲಾಟೆ ಮರಕುಂಬಿ ಗ್ರಾಮದಲ್ಲಿ ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ‌ ಇಡುವ ಹಂತ ತಲುಪಿತ್ತು. ಗಲಾಟೆ ಹಿನ್ನೆಲೆ ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟು ತನಿಖೆ ಆರಂಭಿಸಿದ್ದರು. ಆದರೆ,‌ ಅದೇ ರಾತ್ರಿ ಆರೋಪಿಗಳು ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಇಟ್ಟಿದ್ದರು ಎಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿರಲಿಲ್ಲ. ತನಿಖೆ ನಡೆಸಿದ ಪೊಲೀಸರು ಒಟ್ಟು 117 ಜನರ ವಿರುದ್ಧ ದೋಷಾರೋಪ‌ ಪಟ್ಟಿ ಸಲ್ಲಿಸಿದ್ದರು.

ಅಪರಾಧಿಗಳ ಸಂಬಂಧಿಕರ ಆಕ್ರೋಶ !

ನ್ಯಾಯಾಧೀಶರು ಆದೇಶ ಪ್ರಕಟಿಸುತ್ತಿದ್ದಂತೆಯೇ ನ್ಯಾಯಾಲಯದ ಆವರಣದಲ್ಲಿ ಸೇರಿದ್ದ ಅಪರಾಧಿಗಳ ಸಂಬಂಧಿಕರು ಮತ್ತು ಕುಟುಂಬಸ್ಥರು ರೋಧನ ಮುಗಿಲು ಮುಟ್ಟಿತ್ತು. ಕೆಲವು ಮಹಿಳೆಯರು ಆದೇಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇನ್ನೂ ಹಲವರು ಘಟನೆ ನಡೆದ ದಿನ ಗ್ರಾಮದಲ್ಲಿ ‌ಇರದ ವ್ಯಕ್ತಿಗಳಿಗೂ ಜೀವಾವಧಿ ಶಿಕ್ಷೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾತಿ ನಿಂದನೆ‌ ಹಾಗೂ ಅಸ್ಪೃಶ್ಯತೆ ಆಚರಣೆಯ ಒಂದೇ ಪ್ರಕರಣದಲ್ಲಿ ಇಷ್ಟೊಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಮಾಡಿರುವುದು ದೇಶದಲ್ಲಿ ಇದೇ ಮೊದಲ ಪ್ರಕರಣ ಎನ್ನಲಾಗಿದೆ.

ಕಳೆದ ಅ.21 ರಂದು 101 ಜನರೂ ಅಪರಾಧಿಗಳು ಎಂದು ತೀರ್ಮಾನಿಸಿದ್ದ ನ್ಯಾಯಾಲಯ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಈ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಉಳಿದ 3 ಅಪರಾಧಿಗಳಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ನೀಡಲಾಗಿದೆ. ಈ ಮೂವರಿಗೆ ಅಟ್ರಾಸಿಟಿ ಕಾಯ್ದೆ ಅನ್ವಯ ಆಗಿಲ್ಲ. ಇದರಿಂದ ಶಿಕ್ಷೆ ಪ್ರಮಾಣ ಕಡಿಮೆ ಆಗಿದೆ.
| ಅರ್ಪಣಾ ಬಂಡಿ, ಸರಕಾರಿ‌ ಅಭಿಯೋಜಕರು, ಕೊಪ್ಪಳ