Friday, 25th October 2024

Koppal Breaking: ಒಂದೇ ಪ್ರಕರಣದಲ್ಲಿ ‌101 ಮಂದಿಗೆ ಶಿಕ್ಷೆ; ಒಬ್ಬ ಅಪರಾಧಿ ಸಾವು

ಕೊಪ್ಪಳ: ಮರಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ 101 ಮಂದಿ ಪೈಕಿ ಅಪರಾಧಿ ಶುಕ್ರವಾರ ಮೃತಪಟ್ಟಿದ್ದಾನೆ.

ರಾಮಪ್ಪ ಲಕ್ಷ್ಮಣ ಭೋವಿ (44) ಮೃತ ಅಪರಾಧಿ. ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟ ಮಾಡುತ್ತಿದ್ದಂತೆಯೇ ಅಪರಾಧಿ ರಾಮಪ್ಪ ಕೋರ್ಟ್ ‌ಆವರಣದಲ್ಲೇ ಕುಸಿದು ಬಿದ್ದಿದ್ದರು. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ.

ಪ್ರಕರಣದಲ್ಲಿ ದೋಷಿಗಳಾಗಿದ್ದ 101 ಮಂದಿಯ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಉಳಿದ ಮೂವ ರಿಗೆ 5 ವರ್ಷ ಸಾದಾ ಶಿಕ್ಷೆ ವಿಧಿಸಲಾಗಿತ್ತು. ಕಡಿಮೆ ಶಿಕ್ಷೆಗೆ ಗುರಿಯಾಗಿದ್ದ ಮೂವರ ಪೈಕಿ ಒಬ್ಬ ಅಪರಾಧಿ ಮೃತಪಟ್ಟಿದ್ದಾನೆ.

ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕಣದಲ್ಲಿ 98 ಮಂದಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದ ಪ್ರಕರಣದಲ್ಲೇ 5 ವರ್ಷ ಶಿಕ್ಷೆಗೆ ಗುರಿಯಾದ ಒಬ್ಬ ಆರೋಪಿ ಈತ. ಗಂಗಾವತಿ ತಾಲೂಕು ಮರಕುಂಬಿ ಗ್ರಾಮದಲ್ಲಿ 2014 ಅಕ್ಟೋಬರ್‌ 28 ರಂದು ಗಲಾಟೆ ನಡೆದಿತ್ತು. ದಲಿತರು ಹಾಗೂ ಸವರ್ಣಿಯರ ನಡುವೆ ಗಲಾಟೆ ನಡೆದು ದಲಿತ ಕೇರಿಯ ಗುಡಿಸಲಿಗೆ ಬೆಂಕಿ ಹಚ್ಚಲಾಗಿತ್ತು.

ಕೊಪ್ಪಳ ಜಿಲ್ಲಾಸ್ಪತ್ರೆ ಮುಂದೆ ಮೃತನ‌ ಪತ್ನಿ ಮತ್ತು ಸಂಬಂಧಿಕರು ಜಮಾಯಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದ ನೂರಾರು ಜನರು ಆಸ್ಪತ್ರೆ ಮುಂದೆ ಜಮಾಯಿಸುತ್ತಿದ್ದು, ಜನರನ್ನು ನಿಯಂತ್ರಿಸಲು ಪೊಲೀ ಸರು ಪರದಾಡುತ್ತಿದ್ದಾರೆ.

ಇದನ್ನೂ ಓದಿ: Koppal News: ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆ ಶಂಕೆ