Friday, 25th October 2024

Sanjay Verma: ಕೆನಡಾದಲ್ಲಿ ಖಲಿಸ್ತಾನಿಗಳಿಂದ ದಾಳಿ; ಭಯಾನಕ ಮಾಹಿತಿ ಹಂಚಿಕೊಂಡ ಹೈಕಮಿಷನರ್‌

Sanjay Verma

ಒಂದೆರಡು ಬಾರಿ ಖಲಿಸ್ತಾನಿ (Khalistani) ದುಷ್ಕರ್ಮಿಗಳು ನನ್ನ ಮೇಲೂ ಖಡ್ಗದಿಂದ ದಾಳಿ ಮಾಡಿದರು. ಖಡ್ಗ ದೇಹದ ಸಮೀಪ ಸುಮಾರು 2ರಿಂದ 2.5 ಇಂಚುಗಳಷ್ಟು ಹತ್ತಿರಕ್ಕೆ ಬಂದಿತ್ತು ಎಂದು ಕೆನಡಾದಿಂದ (canada) ಮರಳಿ ಕರೆಸಿಕೊಳ್ಳಲಾದ ಭಾರತೀಯ ಹೈಕಮಿಷನರ್ ( Indian high commissioner) ಸಂಜಯ್ ವರ್ಮಾ (Sanjay Verma) ಹೇಳಿದರು. ಅಲ್ಬರ್ಟಾದಲ್ಲಿ ಖಲಿಸ್ತಾನಿ ದುಷ್ಕರ್ಮಿಗಳು ಕತ್ತಿಯಿಂದ ದಾಳಿ ಮಾಡಿದ ಭಯಾನಕ ಘಟನೆಯನ್ನು ಸುದ್ದಿಗಾರರ ಮುದೆ ವಿವರಿಸಿದ ಅವರು, ಈ ದಾಳಿಯ ಸಂದರ್ಭದಲ್ಲಿ ಪತ್ನಿಯೂ ನನ್ನ ಜೊತೆ ಇದ್ದಳು ಎಂದರು.

ಅಲ್ಬರ್ಟಾ ನಗರದಲ್ಲಿ ಭಾರತೀಯರು ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೆನಡಾದ ಹಲವಾರು ಉದ್ಯಮಿಗಳು ಅಲ್ಲಿದ್ದರು. ವ್ಯಾಪಾರ ಸಂಬಂಧಗಳನ್ನು ಹೇಗೆ ಮುಂದುವರಿಸುವುದು, ಯಾವ ಹೊಸ ಕ್ಷೇತ್ರಗಳನ್ನು ತೆರೆಯಬಹುದು ಎನ್ನುವ ಕುರಿತು ಅಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಆ ದಿನ ಖಲಿಸ್ತಾನಿಗಳು ನಿರ್ಗಮನ ದ್ವಾರದ ಬಳಿ ಸುತ್ತುವರಿದು ನಮ್ಮ ಮೇಲೆ ದಾಳಿ ಮಾಡಿದರು. ಸುಮಾರು 150 ಜನರು ಖಲಿಸ್ತಾನ್ ಹೆಸರಿನಲ್ಲಿ ನಾನು ಹೊರಹೋಗಬೇಕಿದ್ದ ಪ್ರವೇಶದ್ವಾರದಲ್ಲಿ ಸುತ್ತುವರಿದರು. ನಮ್ಮ ಜೊತೆ ಇದ್ದ ಪೊಲೀಸರು ನಮ್ಮನ್ನು ಸುತ್ತುವರಿದು ಮುನ್ನಡೆಯುವಂತೆ ಮಾಡಿದರು. ಆದರೆ ನನ್ನ ಮತ್ತು ಹೆಂಡತಿಯ ಸಮೀಪದಿಂದಲೇ ಅವರು ಬೀಸಿದ ಖಡ್ಗ ಹಾದುಹೋಗಿತ್ತು. ಸ್ಥಳೀಯ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಅವರನ್ನು ಹಿಂದಕ್ಕೆ ತಳ್ಳಿದರು. ದೇವರ ಕೃಪೆಯಿಂದ ನಾವು ಬದುಕಿದೆವು. ಎಂದು ಸಂಜಯ್ ವರ್ಮಾ ಅಲ್ಲಿ ನಡೆದ ಭಯಾನಕ ಕ್ಷಣವನ್ನು ಅವರು ನೆನಪಿಸಿಕೊಂಡರು. ಬಳಿಕ ಸ್ಥಳೀಯ ಪೊಲೀಸರು ಈ ಕುರಿತು ವಿಚಾರಣೆ ನಡೆಸಿದ್ದು, ಅದರ ಬಗ್ಗೆ ನಮಗೆ ಯಾವುದೇ ವಿವರಗಳನ್ನು ನೀಡಿಲ್ಲ ಎಂದು ವರ್ಮಾ ತಿಳಿಸಿದರು.

ಈ ಘಟನೆಯ ಬಗ್ಗೆ ಕೆನಡಾದ ಜಾಗತಿಕ ವ್ಯವಹಾರಗಳಿಗೂ ನಾವು ಮಾಹಿತಿ ನೀಡಿದ್ದೇವೆ. ಇದು ಸರಿಯಲ್ಲ ಎಂದು ಅವರೂ ಹೇಳಿದ್ದಾರೆ. ಖಡ್ಗ ಮತ್ತು ಸಿಖ್ಖ್ ಸಮುದಾಯ ಬಳಸುವ ಕಿರ್ಪಾನ್ ಆಯುಧದ ನಡುವೆ ವ್ಯತ್ಯಾಸವಿದೆ ಎಂದು ನಾವು ಅವರಿಗೆ ವಿವರಿಸಲು ಪ್ರಯತ್ನಿಸಿದ್ದೇವೆ. ಇದು ಅವರು ಸಾಗಿಸಬಹುದಾದ ಧಾರ್ಮಿಕ ವಸ್ತುವಲ್ಲ ಎಂದರು. ಭಾರತೀಯ ರಾಜತಾಂತ್ರಿಕರಿಗೆ ತೊಂದರೆಯಾಗಬಹುದು ಎನ್ನುವ ಕಾರಣದಿಂದ ಬಳಿಕ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ನಮಗೆ ರಕ್ಷಣೆಯನ್ನು ಒದಗಿಸಿದರು ಎಂದು ಅವರು ತಿಳಿಸಿದರು.

ಎರಡು ದೇಶಗಳ ನಡುವಿನ ಸಂಬಂಧವನ್ನು ಪುನಃಸ್ಥಾಪಿಸಬೇಕು ಎಂಬುದು ನನ್ನ ಮುಖ್ಯ ಉದ್ದೇಶ ಎಂದಿರುವ ವರ್ಮಾ, ಖಲಿಸ್ತಾನಿ ಗೂಂಡಾಗಳು ಶಾಂತಿಪ್ರಿಯ ಇಂಡೋ- ಕೆನಡಿಯನ್ನರಿಗೆ ಬೆದರಿಕೆ ಹಾಕುತ್ತಾರೆ ಮತ್ತು ಅವರ ಪೂಜಾ ಸ್ಥಳವನ್ನು ಧ್ವಂಸಗೊಳಿಸುತ್ತಾರೆ ಎಂದು ತಿಳಿಸಿದರು. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳನ್ನು ವರ್ಮಾ ನಿರಾಕರಿಸಿದರು.

ಭಾರತದ ರಾಜತಾಂತ್ರಿಕರು ಕೆನಡಾದಿಂದ ಮರಳಿ ಬಂದಿರುವುದು ಏಕೆ?

ಕಳೆದ ವರ್ಷ ಕೆನಡಾದ ಸಂಸತ್ತಿನಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಡಲು ಪ್ರಾರಂಭಿಸಿತ್ತು. ಭಾರತವು ಎಲ್ಲಾ ಆರೋಪಗಳನ್ನು ನಿರಾಕರಿಸಿದೆ.

India v/s Canada Row: ಭಾರತೀಯ ವಿದ್ಯಾರ್ಥಿಗಳ ಮೇಲೆ ಖಲಿಸ್ತಾನಿ ಉಗ್ರರ ಪ್ರಭಾವ ಹೇಗಿದೆ ಗೊತ್ತಾ? ಕೆನಡಾದಲ್ಲಿ ಏನ್‌ ನಡೀತಿದೆ? ಇಲ್ಲಿದೆ ಡಿಟೇಲ್ಸ್‌

2020ರಲ್ಲಿ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಭಯೋತ್ಪಾದಕ ಎಂದು ಗುರುತಿಸಿರುವ ನಿಜ್ಜರ್‌ನನ್ನು ಕಳೆದ ವರ್ಷ ಜೂನ್‌ನಲ್ಲಿ ಸರ್ರೆಯ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಇದಕ್ಕೆ ಸಂಬಂಧಿಸಿ ಭಾರತವು ಆರು ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿದೆ ಮತ್ತು ಭಾರತದ ರಾಜತಾಂತ್ರಿಕರನ್ನು ಮರಳಿ ಕರೆಸಿಕೊಂಡಿದೆ.