Friday, 25th October 2024

Viral News: ಪ್ರೇಯಸಿಯ ವರಿಸಲು ಬದುಕಿರುವ ಪತ್ನಿಯ ಶ್ರಾದ್ಧ ನೆರವೇರಿಸಿದ ಭೂಪ!

Viral News

ಲಖನೌ: ಪತಿ-ಪತ್ನಿಯರ ನಡುವೆ ವಿರಸ, ಜಗಳ ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಈ ಜಗಳ ಅತಿರೇಕಕ್ಕೆ ಹೋಗಿ ಕೊಲೆ ಮಾಡಿಸುವ ಮಟ್ಟಕ್ಕೂ ತಲುಪುತ್ತದೆ. ತನ್ನ ಪ್ರಿಯತಮೆ/ಪ್ರಿಯತಮನೊಂದಿಗೆ ಬಾಳಲು ಸಂಗಾತಿಯನ್ನೇ ಕೊಲೆ ಮಾಡಲೂ ಕೆಲವರು ಹೇಸುವುದಿಲ್ಲ. ಇಂತಹದ್ದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ ಪ್ರೇಯಸಿಯನ್ನು ಮದುವೆಯಾಗಲು ಪತಿಯೊಬ್ಬ ತನ್ನ ಪತ್ನಿಯ ಶ್ರಾದ್ಧ ನೆರವೇರಿಸಿದ್ದಾನೆ. ಅದರಲ್ಲೇನು ವಿಶೇಷ ಎಂದು ಹುಬ್ಬೇರಿಸಿದ್ದೀರಾ? ಇಲ್ಲಿದೆ ಟ್ವಿಸ್ಟ್‌. ಪತ್ನಿ ಇನ್ನೂ ಬದುಕಿದ್ದಾರೆ. ಅಚ್ಚರಿ ಎಂದರೆ ಆಕೆಯೇ ಸ್ವತಃ ತನ್ನ ನಕಲಿ ʼಮರಣ ವಾರ್ತೆʼಯನ್ನು ಆನ್‌ಲೈನ್‌ನಲ್ಲಿ ಓದಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದೆ (Viral News).

ಉತ್ತರ ಪ್ರದೇಶದ ಕನೌಜ್‌ನಲ್ಲಿ ಈ ಘಟನೆ ನಡೆದಿದೆ. ಈ ವ್ಯಕ್ತಿ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಪತ್ನಿ ಮರಣ ಹೊಂದಿದ್ದಾರೆ ಎಂದು ಪೋಸ್ಟ್‌ ಹಾಕಿದ್ದಲ್ಲದೆ ಸಂಬಂಧಿಕರನ್ನು ಮನೆಗೆ ಕರೆದು ಆಕೆಯ ಅಂತಿಮ ವಿಧಿ ವಿಧಾನ, ಶ್ರಾದ್ಧ ನೆರವೇರಿಸಿದ್ದಾನೆ. ಆನ್‌ಲೈನ್‌ನಲ್ಲಿ ತನಗೆ ಅನೇಕರು ಶ್ರದ್ಧಾಂಜಲಿ ಅರ್ಪಿಸುವುದನ್ನು ಗಮನಿಸಿದ ಮಹಿಳೆ ಶಾಕ್‌ಗೆ ಒಳಗಾಗಿದ್ದಾರೆ. ಬಳಿಕ ಆಕೆಗೆ ಪತಿಯ ಕಳ್ಳಾಟ ತಿಳಿದು ಬಂದಿದೆ. ಇದರಿಂದ ಆಘಾತಕ್ಕೊಳಗಾದ ಆಕೆ ಇದೀಗ ಪತಿಯ ವಿರುದ್ಧ ಕನೌಜ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆಯ ವಿವರ

ತಲ್‌ಗ್ರಾಮ್‌ ಠಾಣೆ ವ್ಯಾಪ್ತಿಯ ಮಾಧವ ನಗರದ ಭವಾನಿ ಸರೈ ಪ್ರದೇಶದ ನಿವಾಸಿ ಪವನ್‌ ಪಟೇಲ್‌ ಈ ನಾಟಕವಾಡಿದ ಭೂಪ. ಆತನ ಪತ್ನಿ ಪೂಜಾ ಠಾಣೆ ಮೆಟ್ಟಿಲೇರಿದವರು. ಪೂಜಾ ಮೂಲತಃ ಕಾನ್ಪುರದವರು. ಪವನ್‌ ಮತ್ತು ಪೂಜಾ ಅವರ ವಿವಾಹ 2009ರಲ್ಲಿ ನಡೆದಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಕೆಲವು ವರ್ಷಗಳ ಹಿಂದೆ ಪವನ್‌ ಮನೆಗೆ ಮಹಿಳೆಯೊಬ್ಬರನ್ನು ಕರೆ ತಂದಿದ್ದ. ʼʼಪವನ್‌ ಮನೆಗೆ ಮಹಿಳೆಯೊಬ್ಬಳನ್ನು ಕರೆತಂದು ಆಕೆಯೊಂದಿಗೆ ಜೀವಿಸಿತೊಡಗಿದ್ದ. ಇದನ್ನು ವಿರೋಧಿಸಿದ್ದಕ್ಕೆ ಕುಪಿತನಾದ ಆತ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸತೊಡಗಿದ. ನಮ್ಮನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಹೀಗಾಗಿ ಬೇಸೆತ್ತು ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ತೆರಳಿದ್ದೆʼʼ ಎಂದು ಪೂಜಾ ದೂರಿನಲ್ಲಿ ತಿಳಿಸಿದ್ದಾರೆ.

ಪೂಜಾ ಮೃತಪಟ್ಟಿದ್ದಾಗಿ‌ ಪವನ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಲ್ಲದೆ ಆಕೆಯ ಶ್ರಾದ್ಧವನ್ನು ನೆರವೇರಿಸುವುದರೊಂದಿಗೆ ಈ ಘಟನೆಗೆ ರೋಚಕ ತಿರುವು ಲಭಿಸಿತು. ಮನೆಯಲ್ಲಿ ಪೂಜಾ ಅವರ ಫೋಟೊ ಇಟ್ಟು ಅದರ ಮುಂದೆ ಅಂತಿಮ ವಿಧಿ ವಿಧಾನ ನಡೆಸುವುದನ್ನು ಪೋಸ್ಟ್‌ ಮಾಡಿದ್ದಾನೆ. ಪತ್ನಿ ಮೃತಪಟ್ಟಿರುವುದಾಗಿ ನಂಬಿಸಿ ತನ್ನ ಪ್ರೇಯಸಿಯನ್ನು ಗುಟ್ಟಾಗಿ ಮದುವೆಯಾಗಿದ್ದಾನೆ.

ಇಷ್ಟು ಮಾತ್ರವಲ್ಲದೆ ಆತ ಪೂಜಾಳ ಅನುಮತಿ ಇಲ್ಲದೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ. ಇದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ʼʼಶಾಲೆಯಿಂದ ಮಕ್ಕಳನ್ನು ನೇರ ಕರೆದುಕೊಂಡು ಹೋಗಿದ್ದಾನೆ. ಮಕ್ಕಳಿಗೆ ಏನಾದರೂ ಸಂಭವಿಸಿದರೆ ಆತನೇ ಹೊಣೆʼʼ ಎಂದು ಪೂಜಾ ತಿಳಿಸಿದ್ದಾರೆ. ಸದ್ಯ ದೂರು ದಾಖಲಿಸಲಾಗಿದ್ದು, ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಹಿಂದೂ ಹೆಸರು ಇಟ್ಟುಕೊಂಡು ‘ಲವ್‌ ಜಿಹಾದ್‌’ಗೆ ಯತ್ನ; ಸದ್ದಾಂ ಅನ್ಸಾರಿ ಅರೆಸ್ಟ್