Sunday, 27th October 2024

Manipur Violence: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಬಾಂಬ್‌ ಸ್ಫೋಟ, ಗುಂಡಿನ ಚಕಮಕಿ

Manipur Violence

ಇಂಫಾಲ್‌: ಕಳೆದ ಕೆಲ ದಿನಗಳಿಂದ ತಣ್ಣಗಾಗಿದ್ದ ಮಣಿಪುರದಲ್ಲಿ(Manipur Violence) ಇದೀಗ ಮತ್ತೆ ಗುಂಡಿನ ಸದ್ದು ಕೇಳಿದೆ. ಶನಿವಾರ ಎರಡು ಬೇರೆ ಬೇರೆ ಪ್ರದೇಶದಲ್ಲಿ ಬಾಂಬ್‌ ಸ್ಫೋಟ ಸೇರಿದಂತೆ ಗುಂಡಿನ ಚಕಮಕಿ ನಡೆದಿರುವ ವರದಿಯಾಗಿದೆ. ಇಂಫಾಲ್‌ನ ಪಶ್ಚಿಮ ಜಿಲ್ಲೆಯ ಕೌತ್ರುಕ್ ಮತ್ತು ಬಿಷ್ಣುಪುರ್ ಜಿಲ್ಲೆಯ (Koutruk and Tronglaobi villages) ಟ್ರೋಂಗ್ಲೋಬಿಯಲ್ಲಿ ಘಟನೆ ಸಂಭವಿಸಿದೆ. ಅಸ್ಸಾಂನ ಗಡಿಗೆ ಸಮೀಪದ ಈ ಗ್ರಾಮಗಳಲ್ಲಿ ಪ್ರಧಾನವಾಗಿ ಮೈತೆಯಿ ಸಮುದಾಯದ (Meti militants) ಜನರು ಅಲ್ಲಿ ವಾಸವಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಗಳು ತಿಳಿಸಿದ್ದಾರೆ.

ಕುಕಿ ಸಮುದಾಯಕ್ಕೆ ಸೇರಿದ ಬಂಡುಕೋರರು (Kuki militants) ಅತ್ಯಾಧುನಿಕ ಬಂದೂಕು ಮತ್ತು ಬಾಂಬ್‌ಗಳನ್ನು ಬಳಸಿ ಲಮ್‌ಶಾಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಕೌಟ್ರುಕ್ ಚಿಂಗ್ ಲೈಕೈ ಗ್ರಾಮದಲ್ಲಿ ರಾತ್ರಿ 7 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ಈ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್‌ ಪಡೆ ಪ್ರತಿದಾಳಿ ನಡೆಸಿದ್ದು, ಭಾರೀ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಗುಂಡಿನ ದಾಳಿಯ ಸಮಯದಲ್ಲಿ ಕುಕಿ ಜನ ನಿರ್ಮಿಸಿದ ಶಂಕಿತ ಡ್ರೋನ್ ಕಂಡುಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ. “ಗ್ರಾಮಸ್ಥರು ವೈಮಾನಿಕ ದಾಳಿಗೆ ಹೆದರುತ್ತಾರೆ, ಏಕೆಂದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಗ್ರಾಮದ ಮೇಲೆ ಡ್ರೋನ್ ಬಾಂಬ್ ದಾಳಿಯನ್ನು ಮಾಡಲಾಗಿತ್ತು ಎಂದು ಅದೇ ಗ್ರಾಮದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಎರಡು ಪಿಎಲ್‌ಎ ಕಾರ್ಯಕರ್ತರ ಬಂಧನ

ನಿಷೇಧಿತ ಸಂಘಟನೆ ಪೀಪಲ್ಸ್ ಲಿಬರೇಶನ್ ಆರ್ಮಿಯ ಇಬ್ಬರು ಕಾರ್ಯಕರ್ತರನ್ನು ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಎನ್ ಪ್ರಿಯೋ ಸಿಂಗ್ (21) ಮತ್ತು ಎಸ್ ದೇವಜಿತ್ ಸಿಂಗ್ (21) ಎಂದು ಗುರುತಿಸಲಾಗಿದ್ದು, ಅಸ್ಸಾಂ ರೈಫಲ್‌ ತಂಡ ಅವರನ್ನು ಪಲ್ಲೆಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.

ಇದನ್ನೂ ಓದಿ: Manipur Unrest: ಮಣಿಪುರ ಜನಾಂಗೀಯ ಘರ್ಷಣೆ ಅಂತ್ಯ; ನಾಳೆ ಕುಕಿ ಹಾಗೂ ಮೈತೈ ಶಾಸಕರ ಶಾಂತಿ ಮಾತುಕತೆ

ಮಣಿಪುರದಲ್ಲಿ ಕುಕಿ ಹಾಗೂ ಮೈತೈ ಸಮುದಾಯಗಳ ಮಧ್ಯೆ 2023ರ ಮೇ 3ರಿಂದಲೂ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹಿಂಸಾಚಾರ ಭುಗಿಲೆದ್ದಿದೆ. ಇದುವರೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಸುಮಾರು 200ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಿದ್ಧ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದರೂ ಹಿಂಸಾಚಾರ ನಿಲ್ಲುತ್ತಿಲ್ಲ. ಅಲ್ಲದೆ, ಮಣಿಪುರ ಹಿಂಸಾಚಾರ ಪ್ರಕರಣವು ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಮಣಿಪುರದಲ್ಲಿ ಶಾಂತಿಸ್ಥಾಪನೆಯ ಭರವಸೆ ನೀಡಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಎರಡೂ ಸಮುದಾಯಗಳ ಶಾಸಕರ ನಡುವೆ ಸಂಧಾನ ಮಾತುಕತೆ ನಡೆದಿತ್ತು.