Monday, 28th October 2024

Karnataka Cabinet Meeting: ಒಳಮೀಸಲು ನಿರ್ಧಾರಕ್ಕೆ ಸಮಿತಿ, ಹೊಸ ಪ್ರವಾಸೋದ್ಯಮ ನೀತಿ: ಸಂಪುಟ ಸಭೆ ತೀರ್ಮಾನ

Cabinet Meeting

ಬೆಂಗಳೂರು: ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಒಳಮೀಸಲು (Internal reservation) ನೀಡುವಿಕೆಗೆ ಸಂಬಂಧಿಸಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ನಡೆದ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Karnataka Cabinet Meeting) ಈ ತೀರ್ಮಾನ ಮಾಡಲಾಗಿದೆ.

ದಲಿತ ಒಳ ಮೀಸಲಾತಿ ಜಾರಿ ವಿಚಾರವಾಗಿ ಚರ್ಚಿಸಲಾಗಿದೆ. ಒಳ‌ಮೀಸಲಾತಿ ಕಲ್ಪಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್ (HK Patil) ಅವರು ಮಾಹಿತಿ ನೀಡಿದರು. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಕಮಿಟಿ ರಚನೆ ಮಾಡಲಾಗುತ್ತದೆ. ಡಾಟಾ ಪಡೆದು ಸಮಗ್ರವಾಗಿ ಪರಿಶೀಲಿಸಿ ವರದಿ ನೀಡಲಾಗುತ್ತದೆ. ಮೂರು ತಿಂಗಳೊಳಗೆ ವರದಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ನೇಮಕಾತಿ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದೆ. ಯಾವುದೇ ನೇಮಕಾತಿ ಮಾಡದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಬೀಜೋತ್ಪಾದನಾ ಕೇಂದ್ರಗಳು,ರೈತ ಸಂಪರ್ಕ ಕೇಂದ್ರ, ಕೃಷಿ ಯಂತ್ರ ಕೇಂದ್ರ,ಜೈವಿಕ ನಿಯಂತ್ರಣ ಪ್ರಯೋಗಾಲಯ, ಇದೆಲ್ಲವುಗಳನ್ನೂ ಒಂದೇ ಕಡೆ ತರುವ ನಿರ್ಧಾರ ಕೈಗೊಳ್ಳಲಾಗಿದೆ. ಹಾಗಾಗಿ ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ಮೂರು ಕ್ಷೇತ್ರಗಳಿಗೆ ಉಪಚುನಾವಣೆ, ಮಾದರಿ ನೀತಿ ಸಂಹಿತೆಯನ್ನ‌ಗಮಿಸಿದ್ದೇವೆ. ಗುತ್ತಿಗೆ ಆದಾರದ ಮೇಲೆ 12 ಮಂದಿ ನೇಮಕಕ್ಕೆ ನಿರ್ಧರಿಸಲಾಗಿದೆ. ಮಾರುತಿ ಪ್ರಸನ್ನ ಮೇಲಿನ ತನಿಖೆ ಶಿಫಾರಸು ವಾಪಸ್, ಲೋಕಾಯುಕ್ತ ತನಿಖೆ ಶಿಫಾರಸು ವಾಪಸ್ ಗೆ ನಿರ್ಧರಿಸಲಾಗಿದೆ ಎಂದರು.

ಕರ್ನಾಟಕ ಸರಕು, ತೆರಿಗೆ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ. ವಿವಾದಿತ ತೆರಿಗೆ ಮಿತಿಯನ್ನ ತರಲು ಅನುಕೂಲವಾಗಲಿದೆ. 40 ಕೋಟಿಗೆ ರಿಸ್ಟ್ರಿಕ್ಟ್ ಮಾಡಲು ಒಪ್ಪಿಗೆ ನೀಡಲಾಗಿದೆ. ಜಿಎಸ್ ಟಿ ಮೇಲ್ಮನವಿ ಹಕ್ಕು ಸ್ಥಾಪನೆಗೆ ಅವಕಾಶ ನೀಡಲಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕಕ್ಕೆ ನಿರ್ಧರಿಸಲಾಗಿದೆ. 7045 ವೈದ್ಯಾಧಿಕಾರಿಗಳ ನೇಮಕ ಮುಂದುವರಿಕೆ ಒಪ್ಪಿಗೆ ನೀಡಲಾಗಿದೆ ಎಂದರು.

ಮಿಲಿಟರಿ ಸೆಂಟ್ರಲ್ ಕಮಾಂಡ್ ಸೆಂಟರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. 3.16 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. 102.80 ಕೋಟಿ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಐಜಿ ಆಫೀಸ್ ಆವರಣದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಅನೇಕಲ್ ಬಳಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ 100 ಕೋಟಿ ಅಂದಾಜು ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಗೆ ಅನುದಾನವಾಗಿ 127 ಕೋಟಿ ಪರಿಷ್ಕೃತ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಲಾಗುತ್ತದೆ. ಪರಿಹಾರ ಬಾರದಿದ್ದರೆ ಅದನ್ನ ಪರಿಶೀಲಿಸುತ್ತೇವೆ ಎಂದರು.

ಮಾಲೂರು ಹೊಸಕೋಟೆ ಹೈಬ್ರಿಡ್ ರಸ್ತೆ ನಿರ್ಮಾಣ ಮಾಲು 3190 ಕೋಟಿಗಳ ವೆಚ್ಚಕ್ಕೆ ಸಂಪುಟ ಸಮ್ಮತಿ ನೀಡಲಾಗಿದೆ. ದೇವನಹಳ್ಳಿ ಏರ್ಪೋರ್ಟ್ ಗೆ ಕನೆಕ್ಟ್ ಮಾಡುವ ರಸ್ತೆ, ನ್ಯಾಷನಲ್ ಹೈವೇ ಮಾದರಿಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ 110 ಕಿಮೀ ದೂರದವರೆಗೆ ಹೈಬ್ರಿಡ್ ರಸ್ತೆ, ಪಿಪಿಪಿ ಮಾಡೆಲ್ ನಡಿ ಕಾರಿಡಾರ್ ನಡುವೆ ನಿರ್ಮಾಣ ಮಾಡಲಾಗುವುದು.

ಅರಣ್ಯ ವಾಸಿಗಳ ಭೂ ಸಾಗುವಳಿ ಮಂಜೂರು ಮಾಡಲು ತಲಾ ಎರಡು ಎಕರೆ ಜಮೀನು ನೀಡಿಕೆ ಮಾಡಲಾಗುವುದು. 14 ಕುಟುಂಬಗಳಿಗೆ ಭೂಮಿ ನೀಡಲು ಒಪ್ಪಿಗೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಅರಣ್ಯವಾಸಿಗಳು ಎಂದರು. 33 ಮಂದಿ ವೃತ್ತಿ ಶಿಕ್ಷಕರಿಗೆ ಬಡ್ತಿ ನೀಡಲು ಒಪ್ಪಿಗೆ ನೀಡಲಾಗಿದೆ. ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಇವರಾಗಿದ್ದಾರೆ ಎಂದರು.

ಮುಧೋಳ ನಗರಕ್ಕೆ ಕುಡಿಯುವ ನೀರು ಪೂರೈಕೆ, ಕೃಷ್ಣಾ ನದಿಯಿಂದ ನೀರು ಪೂರೈಕೆಗೆ ಯೋಜನೆಗಾಗಿ 177.10 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಈಕ್ವಿಟಿ ಷೇರು ಹೆಚ್ಚಳ ಮಾಡಲಾಗುತ್ತಿದೆ. ಶೇ.49% ರಿಂದ 90ಕ್ಕೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. BMWML ನಲ್ಲಿನ ಸರ್ಕಾರದ ಷೇರು ಪ್ರಮಾಣ ಹೆಚ್ಚಳ ಮಾಡಲಾಗುತ್ತಿದೆ ಎಂದರು.

ಬೆಳಗಾವಿ ಚಳಿಗಾಲದ ಅಧಿವೇಶನದ ಚರ್ಚೆ ನಡೆಸಲಾಯಿತು. ದಿನಾಂಕ ನಿರ್ಣಯ ಸಿಎಂ ವ್ಯಾಪ್ತಿಗೆ ಬಿಡಲಾಗಿದೆ. ಡಿಸೆಂಬರ್ 2 ಇಲ್ಲವೇ 3ನೇ ವಾರ ಬರಲಿದೆ. ಕಾಂಗ್ರೆಸ್ ಎಐಸಿಸಿ ಅಧಿವೇಶನ ಇದೆ. ಅದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಯ ಹೊಂದಾಣಿಕೆ ಮಾಡಲಾಗುವುದು. ಸಿಎಂ ಅಂತಿಮ ನಿರ್ಣಯ ಮಾಡ್ತಾರೆ ಎಂದರು.

ನೂತನ ಪ್ರವಾಸೋಧ್ಯಮ ನೀತಿಗೆ ಒಪ್ಪಿಗೆ ನೀಡಲಾಗಿದೆ. ಸಾಹಸ, ಕೃಷಿ, ಕರಾವಳಿ, ಬೀಚ್ ಪ್ರವಸೋಧ್ಯಮ, ಪಾರಂಪರಿಕ, ಪರಿಸರ, ಶೈಕ್ಷಣಿಕ ಪ್ರವಾಸೋದ್ಯಮ, ಒಳನಾಡು, ಸಾಹಿತ್ಯ, ಕಡಲು, ವೈದ್ಯಕಿಯ ಪ್ರವಾಸೋದ್ಯಮ, ಗಣಿಗಾರಿಕೆ, ರಾಜಕೀಯ, ಆಧ್ಯಾತ್ಮ, ಧಾರ್ಮಿಕ ಪ್ರವಾಸೋಧ್ಯಮ, ಬುಡಕಟ್ಟು, ವಿವಾಹ ಪ್ರವಾಸೋದ್ಯಮಗಳು ಬರಲಿವೆ ಎಂದರು.

ಮೈಸೂರು ವಿಶ್ವೇಶ್ವರ ತಾಂತ್ರಿಕ ವಿವಿ ಆವರಣದಲ್ಲಿ ಬಹುಕೌಶಲ್ಯ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. 35 ಕೋಟಿ ವೆಚ್ಚದಲ್ಲಿ ಸ್ಥಾಪನೆ ಮಾಡಲಾಗುವುದು. ಬೀದರ್ ವಿಮಾನ ಕಾರ್ಯಾಚರಣೆ ಅನುಮೋದನೆ ನೀಡಲಾಗಿದೆ. ಆದಿಚುಂಚನಗಿರಿ ಮಠಕ್ಕೆ ಭೂಮಿ ನೀಡಲು ಒಪ್ಪಿಗೆ ನೀಡಲಾಗಿದೆ. ಹಾಸನ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ ನೀಡಲಾಗಿದೆ ಎಂದರು.

ಒಬಿಸಿ ಹಾಸ್ಟೆಲ್ ಗಳಿಗೆ ಮೂಲ ಸೌಕರ್ಯ ಕಲ್ಪಿಸಲು 39.07 ಕೋಟಿ ವೆಚ್ಚಕ್ಕೆ ಸಂಪುಟ ಒಪ್ಪಿಗೆ ನೀಡಲಾಗಿದೆ. ರಾಯಚೂರು ವಿವಿಗೆ ವಾಲ್ಮೀಕಿ ಹೆಸರು ನಾಮಕರಣ ಮಾಡಲಾಗುತ್ತಿದೆ. ಮರು ನಾಮಕರಣಕ್ಕೆ ಸಂಪುಟದ ಸಮ್ಮತಿ ನೀಡಿದೆ ಎಂಬುದಾಗಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

ಈ ಬಳಿಕ ಮಾತನಾಡಿದಂತ ಸಚಿವ ಹೆಚ್.ಸಿ ಮಹದೇವಪ್ಪ ಅವರು, ಸದಾಶಿವ ಆಯೋಗದ ವರದಿ ತಿರಸ್ಕಾರಿಸಲಾಗಿತ್ತು. ಹಿಂದೆ ಬಿಜೆಪಿ ಸರ್ಕಾರವೇ ತಿರಸ್ಕರಿಸಿತ್ತು. ಮಾಧುಸ್ವಾಮಿ ನೇತೃತ್ವದ ಕಮಿಟಿ ರಚಿಸಿತ್ತು. ವರದಿಯಲ್ಲಿನ ಹಲವು ಅಂಶಗಳನ್ನ ಬಿಟ್ಟಿದ್ದರು. ಹಾಗಾಗಿ ನಾವು ವರದಿ ಜಾರಿಗೆ ಹೊರಟಿದ್ದೇವೆ ಎಂದರು.

ದಲಿತ ಒಳ ಪಂಗಡಗಳು ಚರ್ಚೆ ಮಾಡಿದ್ದೆವು. ದಲಿತ ಒಳ ಪಂಗಡಗಳು ಒಳ‌ಮೀಸಲಾತಿಗೆ ಬದ್ದರಿದ್ದಾರೆ. ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಅವಕಾಶ ನೀಡಲಾಗುತ್ತದೆ. ಕಮಿಟಿಗೆ ಎಂಪರಿಕಲ್ ಡಾಟಾ ಸಂಗ್ರಹಿಸಿ ಕೊಡುವಂತೆ ಸೂಚಿಸಿದ್ದೇವೆ. ಕಮಿಟಿ ಇದೆಲ್ಲವನ್ನೂ ನೋಡಲಿದೆ. ಕೇಂದ್ರದ ಜನಗಣತಿಯೂ‌ ಆಗಬೇಕಿದೆ. ದತ್ತಾಂಶ ಕ್ರೋಡೀಕರಿಸಿ ತೀರ್ಮಾನ ಕೈಗೊಳ್ಳಲಾಗಿದೆ. ನಮ್ಮ‌ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಒಳ‌ಮೀಸಲಾತಿಯನ್ನ ತರಲು ರೆಡಿಯಿದೆ ಎಂದರು.

33 ವಿಶೇಷ ಪೊಲೀಸ್ ಠಾಣೆಗಳ ಸ್ಥಾಪನೆ ಮಾಡಲಾಗುವುದು. 450 ಹುದ್ದೆಗಳ ನೇಮಕಕ್ಕೆ ಮಂಜೂರಾತಿ ನೀಡಲಾಗಿದೆ. ದೌರ್ಜನ್ಯ ಪ್ರಕರಣಗಳ ತುರ್ತು ವಿಲೇವಾರಿಗಾಗಿ ಠಾಣೆಗಳ ಸ್ಥಾಪನೆ ಮಾಡಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಸ್ಥಾಪಿಸಲಾಗುತ್ತಿದೆ. ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗೆ ಒತ್ತು ನೀಡಲಾವುದು. ಇದು ದೇಶದಲ್ಲೇ ಮೊದಲ ಯೋಜನೆಯಾಗಿದೆ ಎಂದರು.

ಪರಿಶಿಷ್ಟರ ಮೇಲೆ ದೌರ್ಜನ್ಯವಾದಾಗ ದೂರು ದಾಖಲು ಮಾಡಲಾಗುವುದು. ಸ್ಥಳೀಯ ಠಾಣೆಗಳಲ್ಲಿ ದೂರು ಸಲ್ಲಿಸಬೇಕು. ಅಲ್ಲಿಂದ ಈ ವಿಶೇಷ ಠಾಣೆಗೆ ವರ್ಗಾವಣೆಯಾಗಲಿದೆ. ಕೂಡಲೇ ಎಫ್ ಐಆರ್ ದಾಖಲಿಸಲು ಅವಕಾಶವಿದೆ ಎಂದರು.

ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ ನಮ್ಮದು 30 ವರ್ಷಗಳ‌ ಹೋರಾಟ. ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಒಟ್ಟಿಗೆ ಮಾಡೋಣ ಎಂಬ ನಿಲುವಿನಲ್ಲಿದ್ದೇವೆ. ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ. ಸಮಾಜ 30 ವರ್ಷಗಳ‌ ಹೋರಾಟಕ್ಕೆ ನ್ಯಾಯ ಸಿಗ್ತಿದೆ. ಮೂರು ತಿಂಗಳಲ್ಲಿ ವರದಿ ಬರಲಿದೆ. ಬೋವಿ, ಛಲವಾದಿ, ಲಂಬಾಣಿ ಎಲ್ಲವೂ ಒಟ್ಟಿಗೆ ಇವೆ. ಮಾದಿಗ, ಬಂಜಾರ ಎಲ್ಲರು ಒಟ್ಟಿಗಿದ್ದೇವೆ. ಪರಮೇಶ್ವರ್, ಮಹದೇವಪ್ಪ ಎಲ್ಲರು ತೀರ್ಮಾನಕ್ಕೆ ಬಂದಿದ್ದೇವೆ. ಮೂರು ತಿಂಗಳಲ್ಲಿ ಮಾಡಲು ಸಲಹೆ ಕೊಟ್ಟಿದ್ದೇವೆ ಎಂದರು.

ಇದನ್ನೂ ಓದಿ: CM Siddaramaiah: ಒಳಮೀಸಲಾತಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಸಿದ್ದರಾಮಯ್ಯ