Thursday, 19th September 2024

ರೈತ ವರ್ಗಕ್ಕೆ ರಾಜಕಾರಣಿಗಳ ಕೊಡುಗೆ ಏನು ?

ಅವಲೋಕನ 

ಪ್ರಶಾಂತ್‌ ಕೆ.ಪದ್ಮನಾಭ

ಭಾರತದ ಕೃಷಿಯ ಬಹುದೊಡ್ಡ ಸವಾಲು ಸಣ್ಣ ಮತ್ತು ಅತಿಸಣ್ಣ ರೈತರು ಹಾಗೂ ಅವರಿಗಿರುವ ಜಮೀನಿನ ವಿಸ್ತೀರ್ಣ. 2015ರ ಅಂಕಿಅಂಶಗಳ ಪ್ರಕಾರ ಭಾರತದ ಶೇ.87ರಷ್ಟು ರೈತರ ಹತ್ತಿರ ಇರುವ ಜಮೀನು 2 ಹೆಕ್ಟೇರ್(4.7ಎಕರೆ)ಗಿಂತ ಕಡಿಮೆ ಹಾಗೂ ಈ ಪ್ರಮಾಣದ ಜಮೀನಿನಲ್ಲಿ ಕೃಷಿಗೆ ಯೋಗ್ಯವಾದ ಜಮೀನು ಕೇವಲ ಶೇ.47. ಅಂದರೆ ಅಷ್ಟು ಕಡಿಮೆ ಜಮೀನು ಇರುವ ರೈತ, ಸಾಲ ಮಾಡುವ ಪ್ರಕ್ರಿಯೆಯಿಂದ ಹಿಡಿದು ತಾನು ಬೆಳೆದ ಅಷ್ಟೋ ಇಷ್ಟೋ ಬೆಳೆಯನ್ನು ಮಾರುವವರೆಗೂ ಹಣಕಾಸಿನ ವ್ಯವಹಾರದ ನಷ್ಟದ ಕಡೆಗೆ ಇರುತ್ತಾನೆ.

You can’t bargain from weaker side ಅನ್ನುವಂತೆ, ದುರ್ಬಲ ಸ್ಥಾನದಲ್ಲಿ ನಿಂತ ರೈತ ಯಾವುದೇ ವ್ಯವಹಾರದಲ್ಲೂ ತಾನು ಲಾಭವಾಗುವಂಥ ಸ್ಥಿತಿ ನಿರ್ಮಾಣ ಮಾಡಿಕೊಳ್ಳಲು ಆಗುವುದಿಲ್ಲ. ಭಾರತದ ರೈತನ ಸರಾಸರಿ ಆದಾಯ ಒಂಭತ್ತು ಸಾವಿರಕ್ಕಿಂತ ಕಡಿಮೆ ಇದೆ ಅನ್ನುವುದು ತೀರಾ ನಾಚಿಕೆಗೇಡಿನ ಸಂಗತಿ. ಅದಕ್ಕಿಂತ ಹೆಚ್ಚು ಆತ ಬೇರೆ ಯಾವುದೇ ಕೆಲಸ ಮಾಡಿದರೂ ಸಂಪಾದನೆ ಮಾಡಬಹುದು. ಇದು ಇಷ್ಟು ವರ್ಷ ನಮ್ಮನ್ನಾಳಿದ ರಾಜಕಾರಣಿಗಳು ಹಾಗೂ ಅಡಳಿತವರ್ಗ ಕೊಟ್ಟ ಕೊಡುಗೆ.

ಈಗ ಈ ಸ್ಥಿತಿ ಬದಲಾಗುವ ಲಕ್ಷಣಗಳು ಗೋಚರಿಸುತ್ತಿದೆ. ರೈತ ರಾಜಕಾರಣಿಗಳ ಭಾಷಣದಲ್ಲಿ ಮಾತ್ರ ಇರುತ್ತಾನೆ, ಆದರೆ ಆತ ಯಾವತ್ತೂ ರಾಜಕಾರಣದ ಅಂತಃಕರಣದಲ್ಲಿ ಇರಲೇ ಇಲ್ಲ. ಇದ್ದಿದ್ದರೆ ರೈತನ ಇಂದಿನ ಜೀವನ ಎಷ್ಟೋ ಸುಧಾರಿಸಿದ
ಮಟ್ಟದಲ್ಲಿ ಇರುತಿತ್ತು. ಹಾಗದರೆ ಏನಿದು ಹೊಸ ಕೃಷಿ ಕಾಯ್ದೆ! ಈ ಬಗ್ಗೆ ಏನೇನು ಗೊತ್ತಿಲ್ಲದ ನನ್ನನ್ನು ಈ ವಿಷಯದ ಬಗ್ಗೆ
ಗಮನ ಸೆಳೆದಿದ್ದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಇದರ ಬಗ್ಗೆ ಮಾತನಾಡಿ, ಇದು ಭಾರತದ ಆಂತರಿಕ ವಿಷಯವಾದರೂ, ಪಂಜಾಬಿನ ರೈತರಿಗೆ ಬೆಂಬಲ ಸೂಚಿಸಿದ್ದು.

ಭಾರತದ ರೈತ ಈಗ ಅಂತಾರಾಷ್ಟ್ರೀಯ ರಾಜಕಾರಣದ ಪಗಡೆಯಾಟದ ಕಾಯಿ. ಕೆನಾಡದಲ್ಲಿರುವ ಪಂಜಾಬಿ ವೋಟ್ ಬ್ಯಾಂಕನ್ನು ಖುಷಿ ಪಡಿಸುವ ಸಲುವಾಗಿ ನೀಡಿದ ಹೇಳಿಕೆ ಎಂಬುದು ಬಹುತೇಕ ಎಲ್ಲರಿಗೂ ತ್ವರಿತವಾಗಿ ಅರ್ಥವಾಗಿ ಬಿಡುತ್ತದೆ. ಆದರೆ ಪಂಜಾಬಿನ ಬಹುತೇಕ ರೈತ ಮುಖಂಡರು, ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರೀಡಾ ಪಟುಗಳು, ಪಂಜಾಬಿ ಪಾಪ್
ಗಾಯಕರು ಪಕ್ಷಾತೀತವಾಗಿ ಇದಕ್ಕೆೆ ಬೆಂಬಲ ಸೂಚಿಸುತ್ತಿರುವುದು ಹಾಗೂ ಇದಕ್ಕೆ ಕಳಶವಿಟ್ಟಂತೆ ಶಿರೋಮಣಿ ಅಕಾಲಿ ದಳ ತನ್ನ ಒಬ್ಬರೇ ಕೇಂದ್ರ ಮಂತ್ರಿಯಾದ ಹರ್ಮನ್ ಪ್ರೀತ್ ಕೌರ್‌ರ ರಾಜಿನಾಮೆ ಕೊಡಿಸಿದ ಘಟನೆ ಹಾಗೂ ಎನ್‌ಡಿಎಯೊಂದಿಗೆ ತನ್ನ ಬಹುವರ್ಷದ ಸಂಬಂಧ ಕಡಿದುಕೊಂಡಿದ್ದು ನನ್ನನ್ನು ಈ ವಿಷಯದ ಕಡೆ ಹೊರಳುವಂತೆ ಮಾಡಿತ್ತು.

ಹಾಗಾದರೆ ನಾವು ಈ ವಿಷಯವಾಗಿ ಏನೇನು ತಿಳಿದುಕೊಳ್ಳಬೇಕು.
1. ಕೃಷಿಕಾಯ್ದೆ ಅಂದರೆ ಏನು. ಅದರ ಅನುಕೂಲಗಳು ಹಾಗೂ ಅನಾನುಕೂಲಗಳು.
2.ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶದ ಕೆಲವು ರೈತರ ವಿರೋಧಕ್ಕೆ ಕಾರಣ. ಕೃಷಿ ಕಾಯಿದೆ ಒಂದೇ ಕಾಯಿದೆಯಲ್ಲ. ಅದರೊಳಗೆ ಒಟ್ಟು ಮೂರು ಕಾಯಿದೆಗಳಿವೆ.

1. Farmers Produce Trade and Commerce (Promotion and Faciliation) Act..ಅಂದರೆ ರೈತ ತಾನು ಬೆಳೆದಿದ್ದನ್ನು APMC
ಮಾತ್ರವಲ್ಲದೆ, ಎಲ್ಲಿ ಬೇಕಾದರೂ ಮಾರಬಹುದಾದ ಕಾನೂನು.

2. The farmer (Empowerment and Protection) Agreement on Price Assurance and Farm services Act..  ಅಂದರೆ ಕಾಂಟ್ರಾಕ್ಟ್ ಫಾರ್ಮಿಂಗ್.. ಯಾವುದೇ ಕಂಪನಿಯ ಜತೆ ಕರಾರು ಪತ್ರ ಮಾಡಿಕೊಂಡು ಫಸಲು ಬೆಳೆಯುವ ವಿಧಾನ.
3. Essential commodities (Amendment) Act.. ಇದು ಮುಂಚೆಯೇ ಇದ್ದ ಕಾನೂನು. ಇದನ್ನು ಮಾರ್ಪಾಡು ಮಾಡಿ ಈಗ ಈರುಳ್ಳಿ ಇತ್ಯಾದಿಗಳನ್ನು ತೆಗೆದು ಹಾಕಲು ಅಗತ್ಯ ಸರಕುಗಳ ಪಟ್ಟಿಯನ್ನು ಪರಿಷ್ಕರಿಸುವ ಕಾನೂನು.

ಒಟ್ಟಿನಲ್ಲಿ, ತಾನು ಬೆಳೆದ ಬೆಳೆಯನ್ನು ರೈತ ಕಡಿಮೆ ಬೆಲೆಗೆ ಮಾರುತ್ತಾನೆ, ನಾವು ಕೊಂಡುಕೊಳ್ಳುವವರು ಹೆಚ್ಚು ಬೆಲೆಗೆ ಕೊಂಡುಕೊಳ್ಳುತ್ತೇವೆ. ನಾವು ಕೊಟ್ಟ ಹೆಚ್ಚು ಹಣ ರೈತರ ಕೈಗೆ ಸೇರದೆ, ಒಂದು ಇಂಚು ಕೃಷಿ ಭೂಮಿಯಿಲ್ಲದ, ಕಷ್ಟ ಪಡದ, ಬೆಳೆ ಯದ ಮಧ್ಯವರ್ತಿಗಳ ಪಾಲಾಗುತ್ತದೆ. ಈ ಮಧ್ಯವರ್ತಿಗಳ ವ್ಯವಹಾರದ ತಳಪಾಯವೇ APMC ಮಾರುಕಟ್ಟೆ ಅಥವ ಮಂಡಿ ಗಳು. ಈ APMC ಮಂಡಿಗಳು ಕೇವಲ ಮಾರಾಟಕ್ಕೆೆ ಮಾತ್ರವಲ್ಲದೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹಕ್ಕೂ ಸಹಕಾರಿ.

ತಾನು ಬೆಳೆದ ಬೆಳೆಯನ್ನು ರೈತ ಯಾವುದೋ ಲಾರಿಯಲ್ಲಿ ತುಂಬಿ, ಸಾಗಾಣಿಕೆಯ ಬಾಡಿಗೆ ಭರಿಸಿ ಮಂಡಿಗೆ ತಂದು, ಮಂಡಿಯಲ್ಲಿ ನೋಂದಣಿ ಯಾಗಿರುವ ಯಾವುದಾದರು ವ್ಯಾಪಾರಿಗಳಿಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಬೇಕು. ಯಾವ
ವ್ಯಾಪಾರಿ ಜಾಸ್ತಿ ಮೊತ್ತದ ಹರಾಜು ಕೂಗುತ್ತಾನೋ ರೈತ ಅವರಿಗೆ ತನ್ನು ಬೆಳೆಯನ್ನು ಮಾರಿ ಲಾಭ ಮಾಡಿಕೊಳ್ಳಬೇಕು. ಜೊತೆಗೆ ಸಾಮಗ್ರಿಗಳ ತೂಕ ಹಾಕುವುದು ಇತ್ಯಾದಿ, ಹಾಗೂ ಈ ಹರಾಜು ಪ್ರಕ್ರಿಯೆಯಲ್ಲಿ ರೈತನಿಗೆ ಅನುಕೂಲವಾಗಲೆಂದು ಕೆಲವು ಮಧ್ಯವರ್ತಿಗಳಿರುತ್ತಾರೆ.

ಅವರು ಪೂರ್ತಿ ವ್ಯಾಪಾರ ಮುಗಿಸಿದ ಮೇಲೆ ಶೇ.6ರಷ್ಟು ಕಮಿಷನ್ ಪಡೆಯುತ್ತಾರೆ. ಅಂದರೆ ನೂರು ರುಪಾಯಿ ವ್ಯಾಪಾರ ವಾದರೆ, 94 ರುಪಾಯಿ ರೈತರಿಗೆ, 6 ರುಪಾಯಿ ಮಧ್ಯವರ್ತಿಗೆ ಸಿಗಬೇಕು. ಈ ಪ್ರಕ್ರಿಯೆ ಇಷ್ಟೇ ಸರಳವಾಗಿದ್ದರೆ, ಇವತ್ತಿಗೆ ರೈತ
ಸಮೃದ್ಧವಾದ ಜೀವನ ನಡೆಸುತ್ತಿದ್ದನೆನೋ. ಅದರೆ ಮಂಡಿಯ ವ್ಯಾಪಾರಿಗಳು, ಮಧ್ಯವರ್ತಿಗಳು ಸೇರಿ ರೈತರಿಗೆ ಮೋಸ ಮಾಡುವ ಬಹುದೊಡ್ಡ ಜಾಲ APMC ಮಂಡಿಗಳಲ್ಲಿವೆ. ಎಲ್ಲಾ ವ್ಯಾಪಾರಿಗಳು ಸೇರಿ ಒಂದೇ ಬೆಲೆ ನಿರ್ಧರಿಸುತ್ತಾರೆ.

ಅಸಲಿಗೆ ಹರಾಜು ಪ್ರಕ್ರಿಯೆ ನಡೆಯುವುದೇ ಇಲ್ಲ. ಇನ್ನು ಮಧ್ಯವರ್ತಿಗಳು ರೈತರಿಂದ 100 ರುಪಾಯಿಯಲ್ಲಿ ಕೊಂಡು, ಅದೇ ವ್ಯಾಪಾರಿಗಳಿಗೆ 200 ರುಪಾಯಿಗೆ ಮಾರುತ್ತಾರೆ. ಇನ್ನೂ ಈ ಹೊಸ ಕಾಯಿದೆಯ ಪ್ರಕಾರ ರೈತರು APMC ಹೊರಗಡೆ, ತಮ್ಮದೇ ಊರಿನ ಸಣ್ಣ ವ್ಯಾಪಾರಿಗಳಿಗೆ, ಖಾಸಗಿಯವರಿಗೆ ಅಥವಾ ತಾವೇ ಒಂದು ಸಣ್ಣ ಒಕ್ಕೂಟ ಮಾಡಿಕೊಂಡು ಬೇರೆ ರಾಜ್ಯದ
ಅಇ ಗಳಿಗೂ ಮಾರಾಟ ಮಾಡಬಹುದು.

ಹೊಸ ಕಾಯಿದೆ ಅಷ್ಟು ಚೆನ್ನಾಗಿದ್ದರೂ ಕೆಲವು ರೈತರಿಗೆ ಯಾಕೆ ಭಯವೆಂದರೆ ಮೊದಮೊದಲು ಖಾಸಗಿವರು ಒಳ್ಳೆಯ ಬೆಲೆಕೊಟ್ಟು APMCಯನ್ನು ಮುಗಿಸಿ, ನಾಲ್ಕೈದು ವರ್ಷಗಳ ನಂತರ ತಮ್ಮ ನಿಜ ಸ್ವರೂಪ ಬಯಲು ಮಾಡುತ್ತಾರೆ ಎಂಬುದು.
ಇನ್ನು ಎರಡನೆ ಕಾನೂನು, ರೈತರು ಯಾವುದೇ ಕಂಪನಿಯ ಜತೆ ಒಪ್ಪಂದ ಮಾಡಿಕೊಂಡು ಬೆಳೆ ಬೆಳೆದು ಅವರಿಗೆ ಮಾರ ಬಹುದು. ಕಂಪನಿಯೇ ಮುಂಗಡ ಹಣ ನೀಡುವುದರಿಂದ ರೈತ ಜಾಸ್ತಿ ಬಡ್ಡಿಗೆ ಸಾಲ ಪಡೆಯುವ ಪ್ರಮೇಯವೇ ಇರುವುದಿಲ್ಲ.

ಜತೆಗೆ ಕಂಪನಿಯೇ ಬೀಜ, ಗೊಬ್ಬರ, ಸಾಗಾಣಿಕೆ ಇತ್ಯಾದಿನೋಡಿಕೊಳ್ಳುವುದರಿಂದ ರೈತರಿಗೆ ಒತ್ತಡವೂ ಕಡಿಮೆ. ಇಷ್ಟೆಲ್ಲ ಚೆನ್ನಾಗಿರುವ ಕಾಯ್ದೆಗೆ ರೈತರ ಭಯವೇಕೆ? ಅದು ಖಾಸಗಿ ಕಂಪನಿಯ ಹಣಬಲ, ಭುಜಬಲ ಹಾಗೂ ಕಾನೂನಿನ ಮೇಲೆ  ವರಿಗಿರುವ ಹಿಡಿತದ ಭಯ.. ಇದು ಕಾಂಟ್ರಾಕ್ಟ್‌ ಫಾರ್ಮಿಂಗ್ ಆಗಿರುವುದರಿಂದ, ವ್ಯಾಜ್ಯಗಳು ಇದ್ದೇ ಇರುತ್ತದೆ.. ಕಾಂಟ್ರಾಕ್ಟ್‌ ಗಳು ಕಂಪನಿಯ ಪರವಾಗಿಯೇ ಇರುತ್ತದೆ.. ಬೆಳೆ ಬೆಳೆದ ನಂತರ ಚೆನ್ನಾಗಿಲ್ಲವೆಂದು ಕಂಪನಿ ತಿರಸ್ಕರಿಸಿದರೆ ಅಥವ ಬೆಳೆ ಕೈಗೆ ಬರುವ ಹೊತ್ತಿಗೆ ಕಂಪನಿಯೇ ನಷ್ಟಕ್ಕೆ ಹೋದರೆ ಬೆಳೆ ಬೆಳೆದ ರೈತರ ಗತಿ ಏನು ಎಂಬುದು ಭಯದ ಮೂಲ.

ಜತೆಗೆ ದೊಡ್ಡ ದೊಡ್ಡ ವಕೀಲರು ಕಂಪನಿಯ ಜೇಬಿನಲ್ಲಿರು ವುದರಿಂದ ರೈತರು ಅವರನ್ನು ಎದುರುಹಾಕಿಕೊಳ್ಳಲು ಸಾಧ್ಯವಿಲ್ಲ. ಇನ್ನು ಮೂರನೆಯ ಕಾಯಿದೆ Essential commodities (Amendment) Act..  ಅಗತ್ಯ ಸರಕುಗಳು ಪಟ್ಟಿಯನ್ನು ಪರಿಸ್ಕರಿಸು ವುದರಿಂದ ರೈತರಿಗೆ ಲಾಭವಾಗಬಹುದು. ಸರಕಾರ ಅಕ್ಕಿ, ಬೇಳೆ, ಈರುಳ್ಳಿ ಇತ್ಯಾದಿಗಳನ್ನು ಅಗತ್ಯ ಸರಕುಗಳು ಪಟ್ಟಿಯಲ್ಲಿ ಇಟ್ಟಿರುತ್ತದೆ.

ಅಂದರೆ ಅದನ್ನು ಯಾರೂ ದಾಸ್ತಾನು ಮಾಡುವ ಹಾಗಿಲ್ಲ. ಮಾಡಿದರೆ ದಂಡ ಹಾಗೂ ಜೈಲು ಪಾಲಾಗುವ ಸಾಧ್ಯತೆ ಇರುತ್ತದೆ.ಗ ಈ ಪಟ್ಟಿಯಿಂದ ಈರುಳ್ಳಿ, ಆಲೂಗೆಡ್ಡೆ ಇತ್ಯಾದಿಗಳನ್ನು ತೆಗೆದಿರುವುದರಿಂದ ರೈತರೇ ದಾಸ್ತಾನು ಮಾಡಿಕೊಂಡು ಬೆಲೆ
ಜಾಸ್ತಿಯಾದಾಗ ಮಾರಬಹುದು. ಮುಖ್ಯವಾದ ಪ್ರಶ್ನೆಯೆಂದರೆ, ಈಗ ಸದ್ಯಕ್ಕೆ ಪಂಜಾಬ್, ಹರಿಯಾಣ ಹಾಗೂ ಉತ್ತರಪ್ರದೇಶದ
ರೈತರ ವಿರೋಧಕ್ಕೆ ಕಾರಣ. ಇದರ ಉತ್ತರ ಬಲು ಸುಲಭ. ಹಾಗೂ ಅದು MSP.. (Minimum Support Price) ಅಥವಾ ಕನಿಷ್ಠ ಬೆಂಬಲ ಬೆಲೆ.

ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶದ ರೈತರ ಇಷ್ಟು ಹೋರಾಟದ ಮೂಲವೇ ಖ.. ಸರಕಾರ ಕೆಲವು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿರುತ್ತದೆ. ಅಕ್ಕಿ, ಬೇಳೆ, ಗೋಧಿ, ರಾಗಿ ಇತ್ಯಾದಿ ಬೆಳೆಗಳು. ರೈತರಿಗೆಯಲ್ಲಿ ಕಡಿಮೆ ಬೆಲೆ ಸಿಗುತ್ತಿದೆ ಅಂತ ಅನ್ನಿಸಿದರೆ, ನೇರವಾಗಿ ಸರಕಾರದ ಬಳಿ ಹೋಗಿ MSP ಬೆಲೆಗೆ ತಮ್ಮ ಬೆಳೆಯನ್ನು ಮಾರಬಹುದು. ಆದರೆ ಅದರಲ್ಲೂ ಸರಕಾರಿ ಅಧಿಕಾರಿಗಳು ರೈತರಿಗೆ ಅಲೆದಾಡುವಂತೆ ಮಾಡಿ, MSPಗಿಂತ ಕಡಿಮೆ ಬೆಲೆಗೆ ಕೊಂಡು, ತಾವೇ ಅದನ್ನು MSP ಬೆಲೆಗೆ
ಕಡತಗಳಲ್ಲಿ ಲೆಕ್ಕ ಬರೆದು ಲಾಭ ಮಾಡಿಕೊಳ್ಳುತ್ತಾರೆ.

ಖಯ ಇನ್ನೊಂದು ಅನಾನುಕೂಲವೆಂದರೆ APMC ಮಂಡಿಗಳಲ್ಲೂ ಅದೇ ಬೆಲೆಯ ಸುತ್ತ ಹರಾಜು ಮೊತ್ತ ಸುತ್ತುತ್ತಿರುತ್ತದೆ. ಇದರಿಂದ MSP Minimum ಬದಲು Maximum Support Price ಆಗಿ ಪರಿವರ್ತನೆಯಾಗಿದೆ. ಆದರೆ MSPಯ ಬಹುದೊಡ್ಡ ಫಲಾನುಭವಿಗಳು ಪಂಜಾಬ್ ಮತ್ತು ಹರ್ಯಾಣದ ರೈತರು. ಸರಕಾರ ಖರೀದಿಸುವ ಒಟ್ಟು ಅಕ್ಕಿ ಹಾಗೂ  ಗೋಧಿಯ ಶೇ.75 ಭಾಗ ಪಂಜಾಬ್ ಮತ್ತು ಹರಿಯಾಣದ ರೈತರಿಂದ ಖರೀದಿಸುತ್ತದೆ.

ಹರಿಯಾಣದ ಶೇ.85 ಹಾಗೂ ಪಂಜಾಬಿನ ಶೇ.75 ರೈತರು ತಮ್ಮ ಬೆಳೆಗಳನ್ನು ಮಾರಲು MSPಯ ಮೇಲೆಯೇ ಅವಲಂಬಿತವಾಗ ಬೇಕಿದೆ. ಜತೆಗೆ ಪಂಜಾಬ್ ಮತ್ತು ಹರಿಯಾಣದಲ್ಲಿ APMC ಮಂಡಿಗಳು ಬಹಳ ಶಕ್ತಿಯುತವಾಗಿದೆ ಹಾಗೂ ರೈತರ ಪರವಾಗಿದೆ. ಹಾಗೂ ಅದರಿಂದ ಪಂಜಾಬ್ ಸರಕಾರಕ್ಕೂ ತೆರಿಗೆ ರೂಪದಲ್ಲಿ ಸರಾಸರಿ 2000 ರಿಂದ 3500 ಸಾವಿರ ಕೋಟಿ ಆದಾಯವಿದೆ.

ಅದನ್ನೇ ಪಂಜಾಬ್ ಸರಕಾರ ರೈತರಿಗೆ ಉಚಿತ ವಿದ್ಯುತ್ ಹಾಗೂ ಇತರೆ ಸಬ್ಸಿಡಿಗಳಿಗೆ ಬಳಸಿಕೊಳ್ಳುತ್ತದೆ. ಖಾಸಗಿ ಕಂಪನಿಗಳ ಆಗಮನದಿಂದ ಅಲ್ಲಿನ APMC ಮಂಡಿಗಳು ಮುಚ್ಚಿದರೆ ಎನ್ನುವುದು ಅವರ ಇನ್ನೊಂದು ಭಯ. ಇದೇ MSP ಯ ಇನ್ನೊಂದು  ಮುಖವೆಂದರೆ  ಸರಕಾರವೂ ಹಳೆ ಆಲದ ಮರವೆಂದ ರೀತಿ ಅಗತ್ಯವಿಲ್ಲದಿದ್ದರೂ, ಹಳೆ ಸರಕಾರಗಳ ರೀತಿಗೆ ಕಟ್ಟು ಬಿದ್ದು ಅಗತ್ಯವಿಲ್ಲದಿದ್ದರೂ ಪಂಜಾಬ್ ಮತ್ತು ಹರಿಯಾಣ ರೈತರಿಂದ ಅಕ್ಕಿ ಮತ್ತು ಗೋಧಿಯನ್ನು MSPಗೆ ಕೊಂಡುಕೊಳ್ಳುತ್ತಿದೆ.

ಅಂಕಿ ಅಂಶಗಳ ಪ್ರಕಾರ ಸರಕಾರದ ಬಳಿ 300 ಲಕ್ಷ ಟನ್ ಗೋಧಿ ಹಾಗೂ 450 ಲಕ್ಷ ಟನ್ ಅಕ್ಕಿಯ ದಾಸ್ತಾನು ಇದೆ. ಹಾಗೂ ಅದರ ಶೇ.90 ಬಳಸಲು ಯೋಗ್ಯವಾಗಿಯೂ ಇಲ್ಲ. ಜತೆಗೆ MSPಗೆ ಸರಕಾರ 90 ಸಾವಿರ ಕೋಟಿ ಪೋಲು ಮಾಡುತ್ತಿದೆ. ಕೇಂದ್ರ ಸರಕಾರ MSP ಯನ್ನು ಇವತ್ತಲ್ಲಾ ನಾಳೆ ನಿಲ್ಲಿಸುತ್ತದೆ ಎಂಬ ಭಯವೇ ನಾವು ಇವತ್ತು ನೋಡುತ್ತಿರುವ ಪಂಜಾಬ್ ಮತ್ತು ಹರಿಯಾಣದ ರೈತರ ಪ್ರತಿಭಟನೆಯ ಅಡಿಪಾಯ.

ಅಲ್ಲದೆ ಪಂಜಾಬಿನ ಶೇ.35 ಜನಸಂಖ್ಯೆ ನೇರವಾಗಿ ಹಾಗೂ ಇನ್ನು ಶೇ.25 ಪರೋಕ್ಷವಾಗಿ ಕೃಷಿ ಮೇಲೆ ಅವಲಂಬಿತವಾಗಿವೆ. ಅಂದರೆ ಶೇಕಡ 60 ಒಂದಲ್ಲ ಒಂದು ರೀತಿ ಕೃಷಿಯಲ್ಲಿ ಭಾಗಿದಾರರಾಗಿರುವುದರಿಂದ, ಅದು ಅಲ್ಲಿನ ಅತಿ ದೊಡ್ಡ ವೋಟ್
ಬ್ಯಾಾಂಕ್. ಹಾಗಾಗಿ ಅಲ್ಲಿನ ಸರಕಾರಕ್ಕೂ ಹಾಗೂ ರೈತರಿಗೂ MSP ಯನ್ನು ಶತಾಯಗತಾಯ ಉಳಿಸಿಕೊಳ್ಳಲೇ ಬೇಕಿದೆ. ಆದರೆ ಈ ಪ್ರತಿಭಟನೆ ಕರ್ನಾಟಕವೂ ಸೇರಿದಂತೆ ದೇಶದ ಬೇರೆ ರಾಜ್ಯಗಳಿಗೆ ಉಪಯೋಗವಿಲ್ಲ. ಇದು ಕೇವಲ MSP ಮೇಲೆ
ಅವಲಂಬಿಸಿರುವ ಪಂಜಾಬ್ ಹಾಗೂ ಹರಿಯಾಣದ ರೈತರ ಅಸ್ತಿತ್ವದ ಪ್ರಶ್ನೆಯೇ ಹೊರತು ದೇಶದ ಬೇರೆ ರಾಜ್ಯಗಳಿಗೆ ಸಾಸಿವೆ ಕಾಳಷ್ಟು ಉಪಯೋಗವಿಲ್ಲ.

ಪಂಜಾಬ್ ಮತ್ತು ಹರಿಯಾಣ ರೈತರ ಬೇಡಿಕೆಗಳೇನು ಎಂದರೆ
1. ಹೊಸ ಕಾಯಿದೆಯನ್ನು ಹಿಂಪಡೆಯಬೇಕು.
2. MSP ಮುಂದುವರಿಸುತ್ತೆವೆಂದು ಕೇಂದ್ರ ಸರಕಾರ ಬರೆದುಕೊಡಬೇಕು.
3. ವಿದ್ಯುತ್ ಮೇಲೆ ಸಬ್ಸಿಡಿ ಮುಂದುವರಿಸಬೇಕು.
4. ಪಂಜಾಬ್ ಮತ್ತು ಹರಿಯಾಣದಲ್ಲಿ Stubble burning  ಕೆಟ್ಟ ಚಾಳಿಯಿದೆ. ಬೆಳೆದ ಭತ್ತದ ಪೈರನ್ನು ಕತ್ತರಿಸಿದ ಮೇಲೆ ಜಮೀನಿನಲ್ಲೇ ಉಳಿದ ಕೊಯ್ದ ಪೈರಿನ ಕೂಳೆಗೆ ಬೆಂಕಿ ಹಚ್ಚುತ್ತಾರೆ. ಇದು ದೆಹಲಿಯ ವಾಯುಮಾಲಿನ್ಯಕ್ಕೆೆ ಮೂಲ ಕಾರಣ.

Stubble burningಗೆ 3 ವರ್ಷ ಜೈಲು ಶಿಕ್ಷೆ ಅಥವಾ 1 ಕೋಟಿ ಜುಲ್ಮಾನೆ ಇದೆ. ಇದನ್ನು ಹಿಂಪಡೆಯಬೇಕು ಹಾಗೂ Stubble burningWæ ಗೆ ಅನುಕೂಲ ಮಾಡಿಕೊಡಬೇಕು..

5.ಈಗಾಗಲೇ ಜೈಲಿನಲ್ಲಿರುವವರನ್ನು ಬಿಡುಗಡೆ ಗೊಳಿಸಬೇಕು.

ಈ ಬೇಡಿಕೆಗಳು ಕರ್ನಾಟಕ ಸೇರಿದಂತೆ ಬೇರೆ ಯಾವ ರೈತರಿಗೆ ಉಪಯೋಗವಾಗುತ್ತದೆ. ಪಟಾಕಿಯ ಹತ್ತು ಸಾವಿರಪಟ್ಟಷ್ಟು ವಾಯು ಮಾಲಿನ್ಯ ಉಂಟು ಮಾಡುವ Stubble burningಗೆ ಅವಕಾಶ ಮಾಡಿಕೊಡಬೇಕೆಂಬುದೇ ಹಾಸ್ಯಾಸ್ಪದ. ಸರಿ, ಇಷ್ಟೆಲ್ಲ
ಹೇಳಿದ ಮೇಲೆ ಕೇಂದ್ರ ಸರಕಾರ ತಂದಿರುವ ಕೃಷಿ ಕಾಯಿದೆಯಲ್ಲಿ ಎಲ್ಲಾ ಸರಿಯಿದೆ ಎಂಬುದನ್ನು ನಾನು ಹೇಳುವುದಿಲ್ಲ. ತಪ್ಪು ಒಪ್ಪುಗಳ ಪರಾಮರ್ಶೆಯಾಗಬೇಕು.

ಉದಾಹರಣೆಗೆ, ಕಾಂಟ್ರಾಕ್ಟ್‌ ಫಾರ್ಮಿಂಗ್‌ನ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಲು ತ್ವರಿತಗತಿಯ ನ್ಯಾಯಾಲಯವಾಗಬೇಕು. ರೈತರು ಯಾವ ಕರಾರಿಗೆ ಸಹಿ ಮಾಡುತ್ತಿದ್ದೇವೆ, ಅದು ಯಾರ ಪರವಾಗಿದೆ ಎಂಬ ಶಿಕ್ಷಣವಿರಬೇಕು. ದೊಡ್ಡ ಕಂಪನಿಗಳೊಂದಿಗೆ
ವ್ಯಾಜ್ಯಗಳನ್ನು ಬಗೆಹರಿಸಲು ವಕೀಲರ ಸಹಾಯ (ಅಥವಾ Legal help) ಸಿಗುವ ಹಾಗೆ ಆಗಬೇಕು.

ತಮ್ಮ ಹಳ್ಳಿಯಲ್ಲಿಯೇ ತಾವೇ ಒಂದು ಸಂಘ ಮಾಡಿಕೊಂಡು ಒಗ್ಗಟ್ಟಾಗಿ ವ್ಯವಸಾಯ ಹಾಗೂ ಮಾರಾಟ ಮಾಡಬೇಕು. ತಾವೇ ಒಗ್ಗಟಾಗಿ ತಮ್ಮ ಬೆಳೆಯನ್ನು ಶೇಖರಿಸಿ, ಒಳ್ಳೆ ಬೆಲೆ ಬಂದಾಗ ಮಾರುವ ಏರ್ಪಾಡು ಗಳನ್ನು ಮಾಡಿಕೊಳ್ಳಬೇಕು.

ಇನ್ನೂ ನಾವು ನಾಳೆ ಈರುಳ್ಳಿ, ಆಲೂಗೆಡ್ಡೆಯ ಬೆಲೆ ಜಾಸ್ತಿಯಾದರೆ, ಬೆಲೆ ಹೆಚ್ಚಳಕ್ಕೆ ಸರಕಾರವನ್ನು ದೂರದೆ, ನಾವು ಕೊಡುತ್ತಿ ರುವ ಬೆಲೆ ರೈತರಿಗೆ ತಲುಪುತ್ತಿದೆ ಎಂದು ಹೆಮ್ಮೆಯಿಂದ ಖರ್ಚು ಮಾಡಬೇಕು. ಇದೆಲ್ಲದರ ಜತೆಗೆ ರೈತರನ್ನು ಭಾವನಾತ್ಮಕವಾಗಿ ನೋಡದೆ, ಬ್ಯುಸಿನೆಸ್ ಮೆನ್‌ಗಳ ತರಹ ನೋಡಬೇಕು. ತಾವು ಬೆಳೆದ ಬೆಳೆಯನ್ನು ಮಾರಿ ಲಾಭ ಮಾಡಿಕೊಂಡು ಕಾರು, ಬಂಗಲೆ ಯಲ್ಲಿ ಕೊಂಡುಕೊಳ್ಳುವ ಹಕ್ಕು ಅವರಿಗೂ ಇದೆ ಎಂಬುದನ್ನು ನಾವು ಮರೆಯಬಾರದು.

ಇನ್ನೂ ಈ ಕೃಷಿ ಕಾಯಿದೆಯಿಂದ ದೊಡ್ಡ ಕಂಪನಿಗಳ ಜತೆಗೆ ಒಂದಷ್ಟು ಉತ್ಸಾಹಿ ಯುವಕರು ಕೃಷಿಗೆ ಸಂಬಂಧಿಸಿದ ಸ್ಟಾರ್ಟ್ ಅಪ್ ಶುರುವಾಗ ಬಹುದು. ಅಂತಹವರಿಗೂ ನಮ್ಮ ಬೆಂಬಲವಿರಬೇಕು. ಇನ್ನು ಈ ಕಾಯಿದೆ ಜಾರಿಗೊಳಿಸುವ ವೇಳೆಗೆ ಕೇಂದ್ರ ಸರಕಾರಕ್ಕೆೆ ಪಂಜಾಬ್ ಮತ್ತು ಹರಿಯಾಣದಿಂದ ಹೋರಾಟ ನಡೆಯುವ ಮುನ್ಸೂಚನೆ ಖಂಡಿತವಾಗಿಯೂ ಇತ್ತು ಹಾಗೂ ತಯಾರಾಗಿಯೂ ಇದ್ದರು. ಅದನ್ನು ಮೋದಿ ಹಾಗೂ ಅಮಿತ್ ಶಾ ಬಗೆಹರಿಸುತ್ತಾರೆ. ಉಳಿದ ಸಂಸದರು ಇದರ ಸಮಗ್ರ ವಿಚಾರವನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು. ಇದಕ್ಕೆ ನಾನು ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮುಂತಾದ ಯುವ ಹಾಗೂ ಉತ್ಸಾಹಿ ಸಂಸದರ ಕಡೆಗೆ ಭರವಸೆಯಿಂದ ನೋಡುತ್ತಿದ್ದೇನೆ. ಇನ್ನೂ ನಾವು ನೀವು ಕೂಡ ಇದಕ್ಕೆ ಆದಷ್ಟು ಕೈ ಜೋಡಿಸಬೇಕು. ಹಾಗಾದಾಗ ಮಾತ್ರ ಅನ್ನದಾತ ನಿಜವಾಗಿ ಸುಖವಾಗಿರಲು ಸಾಧ್ಯ.