Saturday, 21st September 2024

ಚಿತ್ತೋರ್​ಗಢ ಅಪಘಾತದಲ್ಲಿ ಏಳು ಸಾವು: ಪ್ರಧಾನಿ ಮೋದಿ ಸಂತಾಪ

ಜೈಪುರ: ಟ್ರಕ್​- ಜೀಪ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಮೃತಪಟ್ಟ ಘಟನೆಗೆ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಿತ್ತೋರ್​ಗಢದ ನಿಕುಂಭ್​ನಲ್ಲಿ ಸಂಭವಿಸಿದ ಅಪಘಾತದಲ್ಲಿ ಕೆಲವರು ಪ್ರಾಣ ಕಳೆದುಕೊಂಡಿರುವ ಬಗ್ಗೆ ನನಗೆ ನೋವಿದೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ದುಃಖಿತ ಕುಟುಂಬದ ಜತೆ ಇವೆ. ಗಾಯಗೊಂಡವರು ಬೇಗ ಗುಣಮುಖರಾಗ ಲೆಂದು ಪ್ರಾರ್ಥಿಸುತ್ತೇನೆಂದು ಪ್ರಧಾನಿ ತಿಳಿಸಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಸಹ ಸಂತಾಪ ಸೂಚಿಸಿದ್ದು, ದುಃಖಿತ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಬಯಸುತ್ತೇನೆಂದು ಟ್ವೀಟ್​ ಮಾಡಿದ್ದಾರೆ.

ರಾಜಸ್ಥಾನದ ಚಿತ್ತೋರ್​ಗಢ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸುಧಾಲ್ಖೇರಾ ಬಳಿಯ ಉದಯ್​ಪುರ್​-ನಿಂಬಾಹೇರಾ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಚಿತ್ತೋರ್​ಗಢ ಜಿಲ್ಲಾಧಿಕಾರಿ ಕಿಶೋರ್​ ಕುಮಾರ್​ ಶರ್ಮಾ, ಅಪಘಾತದಲ್ಲಿ ಏಳು ಮಂದಿ ಸಾವಿಗೀಡಾಗಿ, ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.