Friday, 18th October 2024

ಆಸೀಸ್‌ನ ಬಿರುಸಿನ ಆಟಕ್ಕೆ ಕಡಿವಾಣ: ಸಾಥ್‌ ನೀಡಿದ ಮಳೆ

ಬ್ರಿಸ್ಬೇನ್: ಭಾರತ ತಂಡದ ವಿರುದ್ಧ ಕೊನೆಯ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಿರುಸಿನ ಬ್ಯಾಟಿಂಗ್‌ಗೆ ಕಡಿವಾಣ ಹಾಕುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.

ಆಸ್ಟ್ರೆಲಿಯಾ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದೆ. ಮೊದಲ ಇನಿಂಗ್ಸ್ ಮುನ್ನಡೆ ಸೇರಿ ಒಟ್ಟು 276 ರನ್ ಮುನ್ನಡೆಯಲ್ಲಿದೆ. ಬಾಲಂಗೋಷಿಗಳಾದ ಪ್ಯಾಟ್ ಕಮ್ಮಿನ್ಸ್ ಮತ್ತು ಸ್ಟಾರ್ಕ್‌ ಆಟ ಮುಂದು ವರಿಸಿದ್ದಾರೆ.

ಭಾರತದ ಯುವ ವೇಗಿ ಮುಹಮ್ಮದ್ ಸಿರಾಜ್ ಒಂದೇ ಓವರ್ ನಲ್ಲಿ 2 ವಿಕೆಟ್ ಕಿತ್ತರಲ್ಲದೆ ಬಿರುಸಿನ ಅರ್ಧ ಶತಕ ಬಾರಿಸಿ ಮುನ್ನುಗ್ಗುತ್ತಿದ್ದ ಸ್ಟೀವನ್ ಸ್ಮಿತ್(55) ಅವರಿಗೆ ಪೆವಿಲಿಯನ್ ಗೆ ದಾರಿ ತೋರಿಸಿದರು.

ನಾಲ್ಕನೇ ದಿನ ಆಸ್ಟ್ರೇಲಿಯಾ ಆರಂಭಿಕ ಆಟಗಾರರು ಭಾರತದ ಬೌಲರ್‌ಗಳ ಮೇಲೆ ಸವಾರಿ ಮಾಡುವ ಮೂಲಕ ಒತ್ತಡ ಹೇರುವ ಪ್ರಯತ್ನದಲ್ಲಿದ್ದಾಗಲೇ ಭಾರತೀಯ ಬೌಲರ್‌ಗಳು ಪರಿಣಾಮಕಾರಿ ಬೌಲಿಂಗ್‌ನಿಂದ ಅತಿಥೇಯರ ರನ್ ಧಾವಂತಕ್ಕೆ ಕಡಿವಾಣ ಹಾಕಿದರು.

ಆರಂಭಿಕ ಆಟಗಾರ ಮಾರ್ಕ್ಯೂಸ್ ಹ್ಯಾರಿಸ್ (38) ಅವರು ಶಾರ್ದೂಲ್ ಬೌಲಿಂಗ್‌ನಲ್ಲಿ ಕೀಪರ್ ಪಂತ್‌ಗೆ ಕ್ಯಾಚ್ ನೀಡಿ ಮೊದಲನೆಯವಾಗಿ ಔಟ್ ಆದ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಡೇವಿಡ್ ವಾರ್ನರ್ (48) ಅವರನ್ನು ವಾಷಿಂಗ್ಟನ್ ಸುಂದರ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಲಂಬುಶೆನ್ (26) ಮತ್ತು ಮ್ಯಾಥ್ಯೂ ವೇಡ್ (0) ಅವರ ವಿಕೆಟ್ ಪಡೆಯುವ ಮೂಲಕ ಮುಹಮ್ಮದ್ ಸಿರಾಜ್ ಭಾರತಕ್ಕೆ ಮೇಲುಗೈ ದೊರಕಿಸಿಕೊಟ್ಟರು. ಇವರಿಗೆ ಇನ್ನೋರ್ವ ವೇಗಿ ಶಾರ್ದೂಲ್‌ ಉತ್ತಮ ಬೆಂಬಲ ನೀಡಿದರು.