Friday, 20th September 2024

ಕಠಿಣ ಸಂದರ್ಭದಲ್ಲಿ ಭಾರತ ಎದೆಗುಂದುವುದಿಲ್ಲ: ರಾಷ್ಟ್ರಪತಿ ಮೆಚ್ಚುಗೆ

ನವದೆಹಲಿ: ಹೊಸ ವರ್ಷ, ಹೊಸ ದಶಕ ಮತ್ತು ಇದೇ ವರ್ಷ ನಾವು 75ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಪ್ರವೇಶಿಸುತ್ತಿದ್ದೇವೆ. ಎಲ್ಲ ಸಂಸದರು ಹಾಜರಾಗುವ ಮೂಲಕ ಯಾವುದೇ ಕಠಿಣ ಸಮಯದಲ್ಲಿ ನಾವು ಮತ್ತು ಭಾರತ ಎಂದಿಗೂ ನಿಲ್ಲುವುದಿಲ್ಲ ಎಂಬ ಸಂದೇಶ ಮತ್ತು ನಂಬಿಕೆಯನ್ನು ಸಾರಿದ್ದೀರಿ ಎಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಹೇಳಿದರು.

ಬಜೆಟ್​ ಅಧಿವೇಶನ ಆರಂಭಕ್ಕೂ ಮುನ್ನ ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾತನಾಡಿ, ಕರೊನಾ ವಿರುದ್ಧ ಹೋರಾಟದಲ್ಲಿ ನಾವು ಅನೇಕರನ್ನು ಕಳೆದುಕೊಂಡಿದ್ದೇವೆ. ಮಾಜಿ ರಾಷ್ಟ್ರಪತಿ ಪ್ರಣಾಬ್​ ಮುಖರ್ಜಿ ತೀರಿಕೊಂಡರು. ಕೋವಿಡ್​ನಿಂದ 6 ಸಂಸದರು ನಮ್ಮನ್ನು ಬಿಟ್ಟು ಹೋದರು.

ಕರೊನಾ ಪ್ರಕರಣಗಳ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಾನವಕುಲದ ಜವಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಭಾರತ ಬೇರೆ ದೇಶಗಳ ಲಕ್ಷಾಂತರ ಲಸಿಕೆಗಳನ್ನು ಒದಗಿಸಿದೆ ಎಂದು ಹೆಮ್ಮೆಪಟ್ಟರು. ದೇಶಾದ್ಯಂತ ಇರುವ 24 ಸಾವಿರದ ಆಸ್ಪತ್ರೆಗಳಲ್ಲಿ ಆಯುಷ್ಮಾನ್​ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.

ಗಣರಾಜ್ಯೋತ್ಸವದಂತಹ ಕಾರ್ಯಕ್ರಮ ದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಯಿತು. ಸಂವಿಧಾನದಲ್ಲಿ ಎಲ್ಲರಿಗೂ ವಾಕ್​ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಲಾಗಿದೆ. ಹಾಗೆಯೇ ಕಾನೂನು ಸುವ್ಯವಸ್ಥೆಯನ್ನು ಗಂಭೀರವಾಗಿ ಅನುಸರಿಸ ಬೇಕೆಂದು ಅದೇ ಸಂವಿಧಾನ ನಮಗೆಲ್ಲ ತಿಳಿಸಿಕೊಟ್ಟಿದೆ ಎಂದು ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆಯಿಂದಾಗ ಗಲಭೆಯನ್ನು ಖಂಡಿಸಿದರು.