Thursday, 19th September 2024

ಭಾರತೀಯ ಕಿಸಾನ್​ ಯೂನಿಯನ್ ನಾಲ್ಕು ಸದಸ್ಯರ ಬಂಧನ ?

ಕುರುಕ್ಷೇತ್ರ : ಹರಿಯಾಣದ ಕುರುಕ್ಷೇತ್ರದಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ನಾಯಕರು ಬಿಜೆಪಿಯ ಕುರುಕ್ಷೇತ್ರ ಲೋಕಸಭಾ ಸದಸ್ಯ ನಾಯಾಬ್ ಸಿಂಗ್ ಅವರನ್ನು ಎಳೆದಾಡಿ, ಕಾರಿನ ಗಾಜು ಒಡೆದು ಗಲಭೆ ಎಬ್ಬಿಸಿರುವುದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ್​ ಯೂನಿಯನ್(ಬಿಕೆಯು)ನ ನಾಲ್ಕು ಸದಸ್ಯರನ್ನು ಬಂಧಿಸಿರುವ ಪೊಲೀಸರು, ಗಲಭೆ, ಕಾರು ಹಾನಿ ಮತ್ತು ಕೊಲೆಯ ಯತ್ನದ ಕೇಸು ದಾಖಲಿಸಿದ್ದಾರೆ.

ಸಂಸದ ನಾಯಾಬ್ ಸಿಂಗ್ ಅವರು ಮಂಗಳವಾರ ಕುರುಕ್ಷೇತ್ರದ ಮಾಜ್ರಿ ಮೊಹಲ್ಲಾಗೆ ಹೋಗಿದ್ದಾಗ ಸ್ಥಳದಲ್ಲಿ ಜಮಾಯಿಸಿದ ರೈತ ಚಳುವಳಿಕಾರರು, ಸಿಂಗ್​ ಅವರು ಕಾರಿನೊಳಗೆ ಕೂತಾಗ ಕಪ್ಪು ಬಾವುಟ ತೋರಿಸುತ್ತಾ ವಾಹನವನ್ನು ಸುತ್ತುವರೆದರು. ಸಿಂಗ್​ರನ್ನು ಹಿಡಿದು ಹೊರಗೆಳೆಯಲು ಪ್ರಯತ್ನಿಸಿದರು.

ಕೆಲವರು ಗಾಜನ್ನು ಒಡೆದರು. ಸಿಂಗ್ ಅವರು ಸ್ವಲ್ಪದರಲ್ಲೇ ಪಾರಾಗಿದ್ದು, ಅವರನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಕೊಂಡೊ ಯ್ದರು ಎಂದು ಎಫ್​ಐಆರ್​ ನಲ್ಲಿ ಹೇಳಲಾಗಿದೆ. ಈ ಬಗ್ಗೆ ಮೊಕದ್ದಮೆ ದಾಖಲಿಸಿದ ಶಹಬಾದ್ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily