Friday, 18th October 2024

ವಿಶ್ವನಾಥ ಆರೋಪಗಳಿಗೆ ಉತ್ತರಿಸಿ

ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ನಾಯಕತ್ವದ ಹಾವು ಏಣಿಯಾಟದ ನಡುವೆಯೇ, ವಿಧಾನ ಪರಿಷತ್ತಿನ ಸದಸ್ಯ ಎಚ್. ವಿಶ್ಚನಾಥ್ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಹೊರಹಾಕಿರುವ ಅಸಮಾಧಾನದ ಮಾತುಗಳು ನಿಜಕ್ಕೂ
ಚಿಂತನಾರ್ಹವಾಗಿವೆ.

ಬಹುತೇಕ ಶಾಸಕರು, ಮುಖ್ಯಮಂತ್ರಿಗಳ ಪರವಾಗಿ ಕೈ ಎತ್ತಿದ್ದರೂ, ಒಂಟಿ ಸಲಗದಂತೆ ಕಾಣುವ ವಿಶ್ವನಾಥ್ ತಮಗೆ ಅನ್ನಿಸಿ ದ್ದನ್ನು ಯಾರ ಮುಲಾಜಿಗೂ ಒಳಗಾಗದೇ ಹೇಳಿzರೆ. ಅವರು ಯಾವ ಪಕ್ಷದ ಇರಲಿ, ನಿಷ್ಠುರ ಸತ್ಯವನ್ನೇ ಹೇಳಿ ಬಿಡುವ ಜಾಯಮಾನದವರು. ಕಳೆದ ನಾಲ್ಕು ದಶಕಗಳಿಂದ ಈ ನಿಯಮವನ್ನು ಬಿಡದೇ ಪಾಲಿಸಿಕೊಂಡು ಬಂದಿರುವ ವಿಶ್ವನಾಥ್, ಮುಖ್ಯವಾಗಿ ರಾಜ್ಯದ ಎಲ್ಲಾ ಇಲಾಖೆಗಳಲ್ಲೂ ಮುಖ್ಯಮಂತ್ರಿ ಪುತ್ರ ವಿಜಯೇಂದ್ರರವರ ಹಸ್ತಕ್ಷೇಪವನ್ನು ಪ್ರಶ್ನಿಸಿದ್ದಾರೆ.

ವಿಶ್ವನಾಥರ ವಿರುದ್ಧ ರೇಣುಕಾಚಾರ್ಯ, ಹರತಾಳು ಹಾಲಪ್ಪ ಮುಂತಾದವರು ತಿರುಗಿ ಬಿದ್ದಿದ್ದಾರೆ. ಆದರೆ, ವಿಶ್ವನಾಥ ಅವರಿಗೆ ಅವರ ಪೂರ್ವಾಶ್ರಮದ ಕಥೆ ಜ್ಞಾಪಿಸಿ, ಸರಿಯಾದ ಬಿಸಿ ಮುಟ್ಟಿಸಿದ್ದಾರೆ. ವಿಶ್ವನಾಥ್ ಬಾಯಿ ಮುಚ್ಚಿಸುವ ಕೆಲಸ ಸತ್ಯದ ಬಾಯಿ ಮುಚ್ಚಿದಂತೆಯೇ ಸರಿ ಎಂಬುದನ್ನು ಬಿಜೆಪಿ ವರಿಷ್ಠ ಮಂಡಳಿ ಮನಗಾಣಬೇಕು.
– ಕೆ.ವಿ.ವಾಸು ಮೈಸೂರು

ಪರ ಭಾಷೆ ಚಿತ್ರಗಳ ಪ್ರಚಾರ ಸಲ್ಲ
ಬಹಳಷ್ಟು ಕನ್ನಡದ ಟಿವಿ ಮನೋರಂಜನೆ ವಾಹಿನಿಗಳು ಮತ್ತು ವಾರ್ತಾ ವಾಹಿನಿಗಳು ಬಹಳ ವರ್ಷಗಳಿಂದ ತಮ್ಮ ಟಿಆರ್‌ಪಿ
ಹೆಚ್ಚಿಸಿಕೊಳ್ಳಲು ಪರಭಾಷೆಗಳಾದ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಚಲನಚಿತ್ರಗಳನ್ನು ಪ್ರಚಾರ
ಮಾಡುತ್ತಿರುವುದು ಸ್ವಚ್ಛ ಮನಸ್ಸಿನ ಕನ್ನಡಿಗರಿಗೆ ನೋವುಂಟು ಮಾಡಿದೆ.

ಇಂತಹ ಪರಭಾಷೆ ಪ್ರೀತಿ ನಮ್ಮ ಕನ್ನಡ ವಾಹಿನಿಗಳಲ್ಲಿ ಮಾತ್ರ ಕಂಡು ಬಂದಿರುವುದು ದುರಾದೃಷ್ಟಕರ ಸಂಗತಿ. ಅದೇ ಪರಭಾಷೆಯ ಟಿವಿ ವಾಹಿನಿಗಳು ಕನ್ನಡ ಚಲನಚಿತ್ರಗಳ ಪ್ರಚಾರ ಇರಲಿ ಕನ್ನಡದ ಬಗ್ಗೆ ಕರ್ನಾಟಕದ ಬಗ್ಗೆ ಕಿಂಚಿತ್ತೂ ಅಥವಾ ತೃಣ ಮಾತ್ರದಷ್ಟು ಸುದ್ದಿಯಾಗಲಿ ಮಾಹಿತಿಯಾಗಲಿ ಪ್ರಸಾರ ಮಾಡುವುದಿಲ್ಲ. ಪರಭಾಷೆ ಚಿತ್ರಗಳಲ್ಲಿ ಅದರಲ್ಲೂ ತೆಲುಗು ಸಿನಿಮಾದವರು ಇಲ್ಲಿವರೆಗೂ ನಮ್ಮ ಅವಿಭಾಜ್ಯ ಜಿಲ್ಲೆಯಾದ ಬಳ್ಳಾರಿ ಜಿಯನ್ನು ತೆಲಂಗಾಣವೆಂದು ಬಿಂಬಿಸಿ ಚಿತ್ರಿಸುತ್ತಾ
ಬಂದಿದ್ದಾರೆ.

ಇದೇ ರೀತಿ ಮಲಯಾಳಂನಲ್ಲಿ ಮಂಗಳೂರನ್ನು ವಂಗಳಾವರಂ ಎಂದು ಹೆಸರಿಸಿ ಮಂಗಳೂರನ್ನು ಕೇರಳದ ಭಾಗ ಎಂದು
ಮಲಯಾಳಂ ಚಿತ್ರಗಳಲ್ಲಿ ತೋರಿಸುತ್ತಿzರೆ. ಇನ್ನೂ ತಮಿಳು ಚಿತ್ರಗಳಲ್ಲಿ ಚಾಮರಾಜನಗರ ಜಿಯ ಬಹು ಭಾಗವನ್ನು ತಮಿಳುನಾಡು ಎಂದು ಬಿಂಬಿಸುತ್ತಿರುವುದು ಶೋಚನೀಯ ಸಂಗತಿ. ಕನ್ನಡ ಟಿವಿ ವಾಹಿನಿಗಳು ಪರಭಾಷಾ ಚಲನಚಿತ್ರಗಳನ್ನು ಪ್ರಮೋಟ್ ಮಾಡುವುದು ತಪ್ಪಲ್ಲ ಆದರೆ ವರ್ಷ ಪೂರ್ತಿ ಕನ್ನಡ ಚಲನಚಿತ್ರಗಳೇ ನೂರಾರು ಸಂಖ್ಯೆಯಲ್ಲಿ ತೆರೆ ಕಾಣುತ್ತಿರುವಾಗ ಇವುಗಳ ಸಂಪೂರ್ಣ ಮಾಹಿತಿಯಾಗಲಿ ಪ್ರಚಾರವಾಗಲಿ ಎಲ್ಲೂ ಕಾಣಸಿಗದಿರುವುದು ಖೇದಕರ ಇದರ ನಿಮಿತ್ತ ಇನ್ನು
ಮುಂದಾದರೂ ನಮ್ಮ ಕನ್ನಡ ವಾಹಿನಿಗಳು ಮೊದಲು ಎಲ್ಲಾ ವಿಧವಾದ ಕನ್ನಡದ ಚಲನಚಿತ್ರಗಳು ಅರ್ಥಾತ್ ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳ ಮಾಹಿತಿ ಪ್ರಚಾರ ಮಾಡಿ. ತದನಂತರ ಪರಭಾಷೆ ಚಿತ್ರಗಳನ್ನು ಪ್ರಚಾರ ಮಾಡಲಿ. ನಮ್ಮ ಟಿವಿ ವಾಹಿನಿಗಳು ಕನ್ನಡ ಮತ್ತು ಕನ್ನಡ ಸಿನಿಮಾಗಳಿಗೆ ಒತ್ತು ನೀಡಲೇಬೇಕು ಎಂಬುದು ನಿಜ ಕನ್ನಡಿಗರ
ಕೂಗು.
– ವಿಜಯಕುಮಾರ್ ಎಚ್. ಕೆ ರಾಯಚೂರು

ಮಕ್ಕಳಲ್ಲಿ ಭಯ ಹುಟ್ಟಿಸಬೇಡಿ
ಈಗಷ್ಟೆ ಎರಡನೇ ಅಲೆಯ ಭಯ ಕಡಿಮೆ ಅಗುತಿದ್ದಂತೆ ಮೂರನೇ ಅಲೆ ಭೀಕರವಾಗಿ ಬರುವುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ ಮತ್ತು ಕೆಲವರು ಮೂರನೇ ಅಲೆ ಮಕ್ಕಳಿಗೆ ಬರುವುದೆಂದು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಮತ್ತು
ಜನರು ಮಕ್ಕಳನ್ನು ಹೆದರಿಸುವುದನ್ನು ಬಿಟ್ಟು ಮಕ್ಕಳಲ್ಲಿ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು. 3ನೇ ಅಲೆ ಆಗಸ್ಟ್‌ನಲ್ಲಿ ಬರುವುದೆಂದು ಬರೀ ಅಭಿಪ್ರಾಯ ಅಥವಾ ಕಾಲeನವಷ್ಟೆ ಇನ್ನು ನಿಶ್ಚಯವಾಗಿಲ್ಲ. ಈ ಕಾರಣದಿಂದಾಗಿ ಮಕ್ಕಳನ್ನು ಈಗಿ ನಿಂದಲೇ ಹೆದರಿಸುವುದನ್ನು ಬಿಟ್ಟು ಅವರಲ್ಲಿ ಅರಿವನ್ನು ಮೂಡಿಸಿ ಸರಕಾರ ಮತ್ತು ಎಲ್ಲರೂ ಮಕ್ಕಳ ಜತೆ ಇರುವರೆಂದು ಧೈರ್ಯ ತುಂಬಿ. ಬರಿ ಮಕ್ಕಳನ್ನು ಹೆದರಿಸಿದರೆ ಮೂರನೇ ಅಲೆ ತಡೆಯಲು ಸಾಧ್ಯವಿಲ್ಲ.
– ಪೃಥ್ವಿರಾಜ ಕುಲಕರ್ಣಿ ವಿಜಯಪುರ

ಹೇಳಿದ ಮಾತನ್ನು ಉಳಿಸಿಕೊಳ್ಳಲಿ
ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯ ಕೂಗು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದು ಮಾತನಾಡಿದ ಮೇಲೂ ಅಂತ್ಯ ಕಾಣುವ ಲಕ್ಷಣಗಳು ಕಾಣುತ್ತಿಲ್ಲ. ಬಿಜೆಪಿ ಶಿಸ್ತಿನ ಪಕ್ಷ ಎಂಬುದು ಬೇರೆ ಪಕ್ಷದ ನಾಯಕರುಗಳು ಒಪ್ಪುವ
ಮಾತಾಗಿತ್ತು. ಆದರೆ ಸುಮಾರು ಒಂದುವರೆ ವರ್ಷದಿಂದ ನಡೆಯುತ್ತಿರುವ ಬೆಳವಣಿಗೆಗಳು ಅದನ್ನು ಸುಳ್ಳಾಗಿಸುತ್ತಿವೆ. ಹೇಳುವುದೇ ಒಂದು ಮಾಡುವುದೇ ಇನ್ನೊಂದು ಎನ್ನುವಂತಾಗಿದೆ.

ಬಿಜೆಪಿಯಲ್ಲಿ 75ವರ್ಷ ಮೀರಿದವರು ಪಕ್ಷದಲ್ಲಿ ಯಾವುದೇ ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ ಎಂದು ಅವರೇ ಹಾಕಿಕೊಂಡ ಕಾನೂನು, ಆ ಕಾನೂನು ಬಿಜೆಪಿಯ ಅಗ್ರಗಣ್ಯ ನಾಯಕರಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸಹಿತ ಇನ್ನಷ್ಟು ನಾಯಕರುಗಳಿಗೆ ಮಾತ್ರ ಜಾರಿಯಾಯಿತು. ಸದ್ಯ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಪ್ರಮುಖ ಕಾರಣವೆಂದರೆ ಅದು ಯಡಿಯೂರಪ್ಪನವರ ವಯಸ್ಸು ಇದೊಂದು ಬಿಟ್ಟರೆ ಸ್ವಪಕ್ಷೀಯ ಪ್ರತಿಪಕ್ಷದ ನಾಯಕರುಗಳಿಗೆ ಬೇರೊಂದು ಕಾರಣವಿಲ್ಲ. ಅಷ್ಟರಮಟ್ಟಿಗೆ ಯಡಿಯೂರಪ್ಪನವರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಯಸ್ಸು ಕೇವಲ ಸಂಖ್ಯೆ ಅಂದುಕೊಂಡು ವಿಶ್ರಾಂತಿ ಬಯಸದೆ ಬೆಳಗ್ಗೆಯಿಂದ ಸಂಜೆಯವರೆಗೂ ಯುವಕರೇ ನಾಚುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಅಂತವರಿಗೆ ಆಡಳಿತ ನಡೆಸಲು ವಯಸ್ಸು ಅಡ್ಡಿ ಎಂದರೆ ನಂಬುವ ಮಾತೇ? ಯಡಿಯೂರಪ್ಪ ನವರಿಗೆ ಸುಮಾರು 78 ವಯಸ್ಸಿರಬೇಕು 2018ರ ಚುನಾವಣೆಯ ಸಮಯದಲ್ಲಿ ಸುಮಾರು 75 ವಯಸ್ಸಿರಬೇಕು ಎಲ್ಲರಿಗೂ
ಒಂದೇ ಕಾನೂನು ಅಂದ ಮೇಲೆ ಚುನಾವಣೆ ಪೂರ್ವವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಅಗತ್ಯವೇನಿತ್ತು? ಘೋಷಿಸದೇ ಹೋಗಿದ್ದರೆ 150ರ ಗುರಿಯಲ್ಲಿ ನೂರನ್ನು ತೆಗೆದು ಕೇವಲ 50 ಸ್ಥಾನಕ್ಕೆ ಬಂದು ತಲುಪುತ್ತೇವೆ ಎಂಬುದು ಹೈ ಕಮಾಂಡಿನ ಎಲ್ಲ ನಾಯಕರುಗಳಿಗೂ ಗೊತ್ತಿರುವ ವಿಷಯವೇ ಆಗಿತ್ತು.

ಅದು ಹೋಗಲಿ ಇತ್ತೀಚೆಗೆ ನಡೆದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಸಿಗಬಹುದೇನೊ ಎಂಬ
ಆಲೋಚನೆ ಯಿಂದ 89ರ ಮೆಟ್ರೋ ಮ್ಯಾನ್ ಶ್ರೀಧರನ್ ಅವರನ್ನುಚುನಾವಣೆಗೂ ಮುಂಚೆಯೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಏಕೆ ಘೋಷಿಸಬೇಕಿತ್ತು. ಹೇಳುವುದು ಶಾಸ್ತ್ರ ತಿನ್ನುವುದು ದನೆಕಾಯಿಯಾಗದಿರಲಿ.
– ಮಣಿಕಂಠ ಪಾ ಹಿರೇಮಠ