Saturday, 21st September 2024

ಪತ್ರಕರ್ತರಿಗೆ ಸಂಪಾದಕ ಎಂಬ ಹುದ್ದೆ, ಗೌರವಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಪತ್ರಕರ್ತರಿಗೆ ಯಾರಾದರೂ Go to hell ಅಂತ ಬೈದರೆ, ತಕ್ಷಣ hell ಗೆ ಹೋಗಲು ಸಾಧ್ಯವಾಗುವುದಾದರೆ ಅದರಂಥ ಅದ್ಭುತ ಇನ್ನೊಂದಿಲ್ಲವಂತೆ. ಕಾರಣ ನರಕದಲ್ಲಿ ಸಿಗುವಷ್ಟು ಸ್ಟೋರಿಗಳು ಬೇರೆಲ್ಲೂ ಸಿಗುವುದಿಲ್ಲವಂತೆ. ಅದೇ ಯಾರಾದರೂ ಪತ್ರಕರ್ತರನ್ನು ಸ್ವರ್ಗಕ್ಕೆ ಕಳಿಸಿದರೆ ಹೆಚ್ಚೆಂದರೆ ಅಲ್ಲಿ ಆತನಿಗೆ ಭಾನುವಾರದ ಪುರವಣಿಗೆ ಮುಖಪುಟ ಲೇಖನಕ್ಕೆ ಒಂದು ವಸ್ತು ಸಿಗಬಹುದು.

ಪತ್ರಕರ್ತರು ರಬೇಕಾದ ಜಾಗ ನರಕವೇ ಹೊರತು ಸ್ವರ್ಗವಲ್ಲ. ಒಂದು ವೇಳೆ ಒಬ್ಬ ಕ್ರಿಯಾಶೀಲ ಪತ್ರಕರ್ತನನ್ನು ಪ್ರಧಾನಿ ಅಥವಾ ಮುಖ್ಯಮಂತ್ರಿಯ ಮಾಧ್ಯಮ ಕಾರ್ಯದರ್ಶಿಯನ್ನಾಗಿ ನೇಮಿಸಿದರೆ ಏನಾಗುತ್ತದೆ? ಅಲ್ಲಿಗೆ ಅವನಲ್ಲಿರುವ ಪತ್ರಕರ್ತನನ್ನು ಕತ್ತು ಹಿಸುಕಿ ಸಾಯಿಸಿದಂತಾಗುತ್ತದೆ. ಅಲ್ಲಿಗೆ ಒಂದು ಅಧ್ಯಾಯ ಮುಗಿದಂತಾಗುತ್ತದೆ. ಪತ್ರಕರ್ತ ಕೆಟ್ಟು ಎಲ್ಲಿ ಬೇಕಾದರೂ ಸೇರಬಹುದು. ಆದರೆ ಅಧಿಕಾರದ ಅಂತಃಪುರವನ್ನು ಮಾತ್ರ ಸೇರಬಾರದು. ಕಾರಣ ಆತ ಜನ್ಮೇಪಿ ಸೇರಬೇಕಾದ ಜಾಗ ಅದಲ್ಲ. ಅಧಿಕಾರಕ್ಕೂ ಪತ್ರಕರ್ತನಿಗೂ ಸೇರಿ ಬರುವುದೇ ಇಲ್ಲ. ಪತ್ರಕರ್ತನಾದವನು ಯಾವಾಗ ಅಧಿಕಾರದ ಪಡಸಾಲೆಯಲ್ಲಿ ನೆರಳು ಕಂಡುಕೊಳ್ಳುತ್ತಾನೋ, ಅಂದು ಅಲ್ಲಿ ಅವನ ಸಮಾಧಿ ಆದ ಹಾಗೆ. ಆತ ಮತ್ತೆಂದೂ ಮೊದಲಿನ ವರ್ಚಸ್ಸು, ಧೀಮಾಕು, ಧೀಮಂತತನ ಪ್ರದರ್ಶಿಸಲಾರ. ಆತ ಯಾವ ರಾಜಕಾರಣಿಯ ಚಾಕರಿ ಮಾಡಿದ್ದನೋ ಅವನ ಸೇವಕನಾಗಿ, ಹಂಗಿನ ಅರಮನೆಯ ದಾಸನಾಗಿ ಇರುವುದರಲ್ಲಿ ಆನಂದ ಕಾಣುತ್ತಾನೆಯೇ ಹೊರತು ಪತ್ರಕರ್ತನ ನಿರ್ಭೀತತನ, ಧಾಡಸಿತನ, ನೇರವಂತಿಕೆಯೆಲ್ಲ ಮಡಚಿಟ್ಟ ಹಾಸಿಗೆಯಂತೆ ನಾಗಂತಿಕೆ ಸೇರಿರುತ್ತದೆ.

ಪತ್ರಕರ್ತ ಮತ್ತು ಅಧಿಕಾರದಲ್ಲಿರುವ ರಾಜಕಾರಣಿ ಎಷ್ಟು ಹತ್ತಿರ ಇರಬೇಕು ಎಂದು ಒಮ್ಮೆ ಖ್ಯಾತ ಪತ್ರಕರ್ತ ಪೊತೆನ್ ಜೋಸೆ- ಅವರನ್ನು ಕೇಳಿದರಂತೆ ಅದಕ್ಕೆ ಅವರು ಹೇಳಿದ್ದು – ‘ಪತ್ರಕರ್ತರು ರಾಜಕಾರಣಿಗಳಿಗೆ ಎಂದೂ ಹತ್ತಿರ ಇರಲೂ ಬಾರದು ಮತ್ತು ಹತ್ತಿರವಾಗಲೂಬಾರದು.’ ‘ಹಾಗಾದರೆ ಪತ್ರಕರ್ತರು ರಾಜಕಾರಣಿಗಳಿಂದ ಎಷ್ಟು ದೂರ ಇರಬೇಕು?’ ಎಂದು ಅವರನ್ನು ಕೇಳಿದಾಗ, ಪೊತೆನ್ ಜೋಸೆಫ್ ಹೇಳಿದ್ದು – ‘ಎಷ್ಟು ಸಾಧ್ಯವೋ ಅಷ್ಟು ದೂರ ಇರಬೇಕು.’

ಪ್ರತಿದಿನ ರಾಜಕಾರಣಿಗಳನ್ನು ಭೇಟಿ ಮಾಡಿ ಮಾಡಿ ಇಬ್ಬರ ಮಧ್ಯೆ ಒಂದು ರೀತಿಯ ಸಲುಗೆ, ಅನ್ಯೋನ್ಯ ಸ್ನೇಹ ಬೆಳೆಯುತ್ತದೆ. ಯಾರಿಗೂ ಸಿಗದ ಸುದ್ದಿ ತನಗೇ ಸಿಗಲಿ ಎಂಬ ಕಾರಣಕ್ಕೆ ಪತ್ರಕರ್ತನಾದವನು ರಾಜಕಾರಣಿಯ ಸಾಮೀಪ್ಯ ಬಯಸುತ್ತಾನೆ.

ಈ ಅನ್ಯೋನ್ಯತೆಯಿಂದ ಯಾರಿಗೂ ಸಿಗದ ಸುದ್ದಿ ತನಗೆ ಮಾತ್ರ ಸಿಗುತ್ತದೆ ಎಂಬ ಭ್ರಮೆಯಲ್ಲಿ ಇರುವಂತೆ ರಾಜಕಾರಣಿ ಮಾಡುತ್ತಾನೆ ಎಂಬ ಸಂಗತಿ ಪತ್ರಕರ್ತನಿಗೆ ಕೊನೆಗೂ ಗೊತ್ತಾಗುವುದಿಲ್ಲ. ಈ ಕಾರಣಕ್ಕೇ ರಾಜಕಾರಣಿಗೆ ಹತ್ತಿರವಾಗಬಾರದು. ಅದರಲ್ಲೂ ಪತ್ರಕರ್ತನಾಗಿಯೇ ರಾಜಕಾರಣಿಯ ಹಿಂದೆ
ಹೋಗಬಾರದು. ತನ್ನ ಹಿಂದೆ ರಾಜಕಾರಣಿ ಬರುವಂಥ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ ಮಾತ್ರ ಅಂಥ ಅನ್ಯೋನ್ಯತೆಯಲ್ಲಿ ಸುದ್ದಿ ಸಿಗಲು ಸಾಧ್ಯ. ಇಲ್ಲವಾದರೆ ರಾಜಕಾರಣಿಯ ಮನೆ ಮರ್ಜಿ ಕಾಯುವುದಷ್ಟೇ ಪತ್ರಕರ್ತನ ಕೆಲಸವಾಗುತ್ತದೆ. ಆಗ ಘನತೆಯನ್ನು ಅಡ ಇಟ್ಟು ಅಲ್ಲಿಗೆ ಹೋಗಿರುತ್ತಾನೆ.

ಒಮ್ಮೆ ಈ ರೀತಿ ಅಡ ಇಡುವವರು ಎಂಬುದು ಗೊತ್ತಾದರೆ ಅಡ ಇಟ್ಟಿದ್ದನ್ನು ವಾಪಸ್ ಪಡೆಯಲು ಆಗುವುದಿಲ್ಲ. ರಾಜಕಾರಣಿಯ ಜತೆ ಸಂಪರ್ಕ ಇರುವುದು ತಪ್ಪಲ್ಲ, ಆದರೆ ಇದು ಸಂಬಂಧವಾಗಿ ಅಥವಾ ಸಖ್ಯವಾಗಿ ಪರಿವರ್ತನೆ ಆಗಲು ಬಿಡಬಾರದು. ಸಂಪರ್ಕದಲ್ಲಿ ಬೆಳೆದ ಬಳ್ಳಿ ಬೆಳೆಯುತ್ತಾ ಸಂಬಂಧಕ್ಕೆ ತಳಕು ಹಾಕುವುದಕ್ಕೆ ಬಿಡಬಾರದು. ಹಾಗಂತ ಪರಸ್ಪರರು ವೈರಿಗಳಲ್ಲ. ಆ ರೀತಿ ವರ್ತಿಸಬೇಕಿಲ್ಲ. ಬ್ರಿಟನ್ನಿನಲ್ಲಿ ಎಪ್ಪತ್ತರ ದಶಕದವರೆಗೂ ಒಂದು ಸಂಪ್ರದಾಯವಿತ್ತು. ಅಧಿಕಾರವಹಿಸಿಕೊಂಡ ನಂತರ ಮೊದಲ ಬಾರಿಗೆ ಪ್ರಧಾನಿ ಹಾಗೂ ಪತ್ರಕರ್ತರು ಮುಖಾಮುಖಿಯಾದಾಗ, ಹಿರಿಯ ಪತ್ರಕರ್ತ ಎದ್ದು ನಿಂತು ತನ್ನ ಸಹೋ ದ್ಯೋಗಿಗಳೆಲ್ಲರ ಪರವಾಗಿ, ‘ಇಷ್ಟು ದಿನ ನಾವಿಬ್ಬರೂ ಅನ್ಯೋನ್ಯವಾಗಿದ್ದೆವು.

ಇನ್ನು ಮುಂದೆ ನಾವು ಪತ್ರಕರ್ತರು ಮತ್ತು ನೀವು ಪ್ರಧಾನಿ. ನಿಮ್ಮನ್ನು ಟೀಕಿಸುವ ನಮ್ಮ ಹಕ್ಕನ್ನು ಗೌರವಿಸಿ, ನಮ್ಮ ಹಕ್ಕನ್ನು ಸಂಪೂರ್ಣವಾಗಿ ಚಲಾಯಿಸುವು ದನ್ನು ಒಪ್ಪಿಕೊಳ್ಳಿ’ ಎಂದು ಹೇಳುತ್ತಿದ್ದ. ಅಲ್ಲಿ ತನಕ ‘ಹಾಯ್ ಜಾನ್’, ‘ಹಾಯ್ ಟೋನಿ’ ಎಂದು ಕರೆಯುತ್ತಿದ್ದ ಪತ್ರಕರ್ತರು, ಆತ ಅಧಿಕಾರದಿಂದ ಕೆಳಗಿಳಿಯುವ ತನಕ ಮಿಸ್ಟರ್ ಜಾನ್, ಮಿಸ್ಟರ್ ಪ್ರೈಮ್ ಮಿನಿಸ್ಟರ್, ಮಿಸ್ಟರ್ ಟೋನಿ ಎಂದು ಸಂಬೋಧಿಸುತ್ತಿದ್ದರು. ಇದು ಇಂದಿನಿಂದ ಪತ್ರಕರ್ತರು ಮತ್ತು ಅಧಿಕಾರ ದಲ್ಲಿರುವವರ ನಡುವೆ ಒಂದು ಗೋಡೆ ನಿರ್ಮಾಣವಾದುದರ ಸಂಕೇತ ಎಂದು ಪರಿಗಣಿಸುತ್ತಿದ್ದರು.

ಇದು ಅಧಿಕಾರದಲ್ಲಿರುವ ರಾಜಕಾರಣಿ ಜತೆ ಪತ್ರಕರ್ತರು ಒಂದು ಅಂತರ ಕಾಪಾಡಿಕೊಳ್ಳಬೇಕು ಎಂಬುದರ ದ್ಯೋತಕವಾಗಿತ್ತು. ಪ್ರಧಾನಿ ಕಾರ್ಯಾಲಯದಲ್ಲಿ ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ಪತ್ರಿಕಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ, ಕನ್ನಡಿಗ ಎಚ್.ವೈ.ಶಾರದಾ ಪ್ರಸಾದ ಅವರು ‘ದಿ ಏಶಿಯನ್ ಏಜ್’ ಪತ್ರಿಕೆಯಲ್ಲಿ ಬರೆದ How Much Distance Is Too Much With ಎಂಬ ಲೇಖನ ಓದುತ್ತಿದ್ದೆ. ಪತ್ರಕರ್ತರೆಲ್ಲ ಓದಲೇ ಬೇಕಾದ ಲೇಖನವಿದು. ಶಾರದಾ ಪ್ರಸಾದ ಅವರು ‘ಫ್ರೀ ಪ್ರೆಸ್ ಜರ್ನಲ್’ ಮತ್ತು ‘ಇಂಡಿಯನ್ ಎಕ್ಸ್‌ಪ್ರೆಸ್ ’ ಪತ್ರಿಕೆಯಲ್ಲಿ ಬಹಳ ವರ್ಷಗಳ ಕಾಲ ಉಪ ಸಂಪಾದಕರಾಗಿ, ಸುದ್ದಿ ಸಂಪಾದಕರಾಗಿ ಕೆಲಸ ಮಾಡಿದವರು. ನಂತರ ಕೇಂದ್ರ ಸರಕಾರದ ಯೋಜನಾ ಆಯೋಗ ಪ್ರಕಟಿಸುತ್ತಿದ್ದ ‘ಯೋಜನಾ’ ಪತ್ರಿಕೆಯ ಸಂಪಾದಕರಾದರು.

ಆ ಸಂದರ್ಭದಲ್ಲಿ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸಂಪರ್ಕಕ್ಕೆ ಬಂದರು. ಇಂದಿರಾ ಅವರು ಶಾರದಾ ಪ್ರಸಾದ ಅವರ ಕೆಲಸವನ್ನು ಪ್ರತ್ಯಕ್ಷ ವಾಗಿ ಬಲ್ಲವರಾಗಿದ್ದರು. ಒಂದು ದಿನ ಶಾರದಾ ಪ್ರಸಾದ ಅವರಲ್ಲಿ ‘ನೀವು ನನ್ನ ಪತ್ರಿಕಾ ಕಾರ್ಯದರ್ಶಿಯಾಗಿ ಕೆಲಸ ಮಾಡಬಹುದಾ?’ ಎಂದು ಕೇಳಿದರಂತೆ. ಸಾಮಾನ್ಯವಾಗಿ ಪ್ರಧಾನಿ ಅವರಿಂದ ಇಂಥ ಕೋರಿಕೆ ಬಂದಾಗ ಯಾರೂ ಇಲ್ಲ ಎನ್ನುವುದಿಲ್ಲ ಮತ್ತು ಸ್ಥಳದಲ್ಲಿಯೇ ಒಪ್ಪಿಗೆ ಸೂಚಿಸಿ ಬಿಡುತ್ತಾರೆ. ಪ್ರಧಾನಿ ಕಾರ್ಯಾಲಯ (ಪಿಎಂಒ) ದಲ್ಲಿ ಕೆಲಸ ಮಾಡುವುದೆಂದರೆ ಸಾಮಾನ್ಯದ ಸಂಗತಿಯೇನಲ್ಲ. ನಸೀಬು ಚೆನ್ನಾಗಿರುವವರಿಗೆ ಮಾತ್ರ ಅಂಥ ಲಾಟರಿ ಹೊಡೆಯು ವುದು.

ಆದರೆ ಶಾರದಾ ಪ್ರಸಾದ ಒಂದು ವಾರ ಸಮಯಾವಕಾಶ ಕೇಳಿದರಂತೆ. ಒಂದು ವಾರ ಸಾಕಷ್ಟು ಯೋಚಿಸಿದರಂತೆ. ಸ್ವತಃ ಪ್ರಧಾನಿ ಇಂದಿರಾ ಗಾಂಧಿ ಅವರೇ ಕೇಳಿದ್ದಾರೆ ಎಂದ ಮೇಲೆ ಒಪ್ಪಿಕೊಳ್ಳಬಹುದು. ಆದರೆ ನನ್ನ ಮುಂದಿನ ಜೀವನವೇನು? ಇಷ್ಟು ವರ್ಷಗಳ ಕಾಲ ಪತ್ರಕರ್ತನಾಗಿ ಕೆಲಸ ಮಾಡಿದ್ದೇನೆ, ಆ ವೃತ್ತಿಯ ಜತೆಗಿನ ನನ್ನ ಸಂಬಂಧ ಏನು? ಇಂದಿರಾ ಗಾಂಧಿ ಅಧಿಕಾರದಿಂದ ಕೆಳಗಿಳಿದ ನಂತರ ನನ್ನ ಮುಂದಿನ ಮಾರ್ಗ ಯಾವುದು? ಪತ್ರಕರ್ತನಾಗಿ ನನ್ನ ಅಸ್ತಿತ್ವ ವೇನು?.. ಈ ಎಲ್ಲಾ ಸಂಗತಿಗಳ ಬಗ್ಗೆ ಸುದೀರ್ಘವಾಗಿ ಯೋಚಿಸಿದರಂತೆ.

ಕೊನೆಗೆ ಅವರು ನೋಟ್ಸ್ ಮಾಡಿಕೊಂಡರಂತೆ – ‘ಒಮ್ಮೆ ರಾಜಕಾರಣಿಯ ಜತೆ ಕೆಲಸ ಮಾಡಿದ ನಂತರ ನಾನು ಯಾವುದೇ ಕಾರಣಕ್ಕೂ ಪತ್ರಕರ್ತನಾಗಿ ಕೆಲಸ ಮಾಡಕೂಡದು. ರಾಜಕಾರಣಿಯ ಜತೆ ಕೆಲಸ ಮಾಡುವಾಗ ಪತ್ರಕರ್ತನಾಗಿ ಗಳಿಸಿದ ಅನುಭವ ಸಹಕಾರಿ ಆಗಬಹುದು. ಆದರೆ ಅಂತರಂಗದಲ್ಲಿ ಪತ್ರಕರ್ತ ನಾದವನು ಸತ್ತು ಹೋಗಿರುತ್ತಾನೆ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಇನ್ನು ಮುಂದೆ ಪತ್ರಿಕೆಗಳಲ್ಲಿ ಕೆಲಸ ಮಾಡಬಾರದು. ಇಂದಿಗೆ ನನ್ನೊಳಗಿನ
ಪತ್ರಕರ್ತ ಸತ್ತು ಹೋದ.’ ಈ ನಿರ್ಧಾರದೊಂದಿಗೆ ಅವರು ಇಂದಿರಾ ಗಾಂಧಿ ಅವರಿಗೆ ಪತ್ರಿಕಾ ಕಾರ್ಯದರ್ಶಿಯಾಗಿ ಸೇರಿಕೊಂಡರು.

ಅದಾದ ಬಳಿಕ ಮೊರಾರ್ಜಿ ದೇಸಾಯಿ, ಪುನಃ ಇಂದಿರಾ ಗಾಂಧಿ ಮತ್ತು ನಂತರ ರಾಜೀವ್ ಗಾಂಧಿ ಅವರಿಗೆ ಪತ್ರಿಕಾ ಕಾರ್ಯದರ್ಶಿಯಾಗಿದ್ದರು. ೨೨ ವರ್ಷಗಳ
ಕಾಲ ಪ್ರಧಾನಿ ಕಾರ್ಯಾಲಯದಲ್ಲಿದ್ದಾಗ, ಪತ್ರಿಕಾ ಕಚೇರಿಗಳ ಕಡೆ ಮುಖ ಹಾಕಲಿಲ್ಲ. ಪ್ರಧಾನಿ ಕಾರ್ಯಾಲಯದಿಂದ ಹೊರ ಬಂದ ನಂತರ ಯಾವ ಪತ್ರಿಕೆಗೂ ಎಡತಾಕಲಿಲ್ಲ. ಅವರು ಪತ್ರಿಕೆಗಳಿಗೂ ಬರೆಯಬಾರದು ಎಂದು ನಿರ್ಧರಿಸಿದ್ದರು. ಆದರೆ ಎಂ.ಜೆ.ಅಕ್ಬರ್ ಅವರ ಒತ್ತಾಯಕ್ಕೆ ಮಣಿದು ಸುಮಾರು ಎರಡು ವರ್ಷ ಗಳ ಕಾಲ ‘ಏಶಿಯನ್ ಏಜ್’ ಪತ್ರಿಕೆಗೆ ಬರೆದರು. ಆದರೆ ಶಾರ ದಾ ಪ್ರಸಾದ ಅವರ ಹೆಚ್ಚುಗಾರಿಕೆ ಏನೆಂದರೆ ಅವರು ಪ್ರಧಾ ನಿ ಕಾರ್ಯಾಲಯದಲ್ಲಿದ್ದಾಗ, ಪತ್ರಕರ್ತರಂತೆ ಇದ್ದರು. ಅಲ್ಲಿಂದ ಹೊರ ಬಂದ ನಂತರ ಬುದ್ಧಿಪೂರ್ವಕವಾಗಿ ನೇಪಥ್ಯಕ್ಕೆ ಸರಿದರು.

ಒಂದು ಒಂದು ಸಲ ಗಾಂಧಿ ಕುಟುಂಬ ದ ಬಗ್ಗೆ ಹೊಗಳಲೂ ಇಲ್ಲ, ತೆಗಳಲೂ ಇಲ್ಲ. ಆ ಕುಟುಂಬದ ವಕ್ತಾರಿಕೆಯನ್ನೂ ಮಾqಲಿಲ್ಲ. ಆ ವಿಷಯವನ್ನು ಎಂದೂ ಟಚ್ ಮಾಡಲೇ ಇಲ್ಲ. ‘ಅಧಿಕಾರದ ಅಂತಃಪುರದೊಳಗೆ ಇದಷ್ಟು ಹೊತ್ತು ನಿಮ್ಮೊಳಗಿನ ಪತ್ರಕರ್ತ ಚೀರುತ್ತಾ, ಸಾಯುತ್ತಾ ಇರುತ್ತಾನೆ. ಅವನನ್ನು ಬದುಕಿಸುವುದು ಬಹಳ ಕಷ್ಟದ ಕೆಲಸ. ಆದರೆ ಬಹಳ ಪತ್ರಕರ್ತರು ಬದುಕಿಸುವ ಪ್ರಯತ್ನ ಮಾಡಿ ವಿಫಲರಾಗುತ್ತಾರೆ. ಅಧಿಕಾರದ ಗರ್ಭ ಗುಡಿಯೊಳಗೆ ಹೋಗಿ
ಬಂದ ನಂತರ ಪುಣ್ಯಕ್ಕಿಂತ ಪಾಪವೇ ಹೆಚ್ಚು ಮೆತ್ತಿಕೊಳ್ಳುತ್ತವೆ. ಈ ಎಚ್ಚರಿಕೆಯಿಂದ ಕೆಲಸ ಮಾಡಿದರೂ ಅದರಿಂದ ಮುಕ್ತರಾಗುವುದು ಸಾಧ್ಯವಿಲ್ಲ’ ಎಂದು ಶಾರದಾ ಪ್ರಸಾದ ಹೇಳುತ್ತಿದ್ದರು. ಇಂದಿಗೂ ಪ್ರಧಾನಿ ಮತ್ತು ಮುಖ್ಯಮಂತ್ರಿಯ ಪತ್ರಿಕಾ ಅಥವಾ ಮಾಧ್ಯಮ ಕಾರ್ಯದರ್ಶಿ ಹೇಗೆ ಕೆಲಸ ಮಾಡಬೇಕು ಮತ್ತು ಹೇಗೆ ವ್ಯಕ್ತಿತ್ವ ಕಾಪಾಡಬೇಕು ಎಂಬುದಕ್ಕೆ ಶಾರದಾ ಪ್ರಸಾದರಂಥ ಇನ್ನೊಬ್ಬ ಆದರ್ಶ ವ್ಯಕ್ತಿ ಇಲ್ಲ.

ಪತ್ರಕರ್ತ ಸಂಜಯ ಬಾರು ಅವರು ಪ್ರಧಾನಿ ಡಾ.ಮನಮೋಹನ ಸಿಂಗ್ ಅವರಿಗೆ ಮಾಧ್ಯಮ ಕಾರ್ಯದರ್ಶಿಯಾಗಿದ್ದರು. ಬಾರು ಅವರಿಗೂ ಶಾರದಾ ಪ್ರಸಾದ ಅವರೇ ಆದರ್ಶ. ಆದರೆ ಅವರು ತಮ್ಮ ಪದವಿಯಿಂದ ನಿರ್ಗಮಿಸುವ ಹೊತ್ತಿಗೆ ಅತ್ಯಂತ ವಿವಾದಾತ್ಮಕ ವ್ಯಕ್ತಿ ಆಗಿದ್ದರು. ಅವರು ಬರೆದ ‘Accidental Prime Minister’ ತೀವ್ರ ವಿವಾದಕ್ಕೆ ಕಾರಣವಾಯಿತು. ಅದನ್ನಾ ಧರಿಸಿ ಸಿನಿಮಾ ಸಹ ಬಂತು. ಇನ್ನು ಮುಂದೆ ಬಾರು ಅಂಕಣ ಬರೆದುಕೊಂಡಿರಬಹುದೇ ಹೊರತು ಯಾವ ಪತ್ರಿಕಾ ಮಾಲೀಕನೂ ಅವರನ್ನು ಸಂಪಾದಕನನ್ನಾಗಿ ನೇಮಿಸಿಕೊಳ್ಳಲಿಕ್ಕಿಲ್ಲ. ಸಾಮಾನ್ಯವಾಗಿ ಪತ್ರಕರ್ತರು ತಮ್ಮ ನಿವೃತ್ತಿಯ ಅಂಚಿನಲ್ಲಿದ್ದಾಗ ಅಥವಾ ನಿವೃತ್ತರಾದ ನಂತರ ಇಂಥ ಅಸೈನ್‌ಮೆಂಟ್ ಗಳನ್ನು ಒಪ್ಪಿಕೊಳ್ಳುತ್ತಾರೆ. ಇನ್ನು ತಮ್ಮ ವೃತ್ತಿ ಬದುಕಿನಲ್ಲಿ ಹೆಚ್ಚಿನ ಅಥವಾ ಮಹತ್ತರವಾದ ಸ್ಥಾನ-ಮಾನ, ಅವಕಾಶ ಸಿಗಲಿಕ್ಕಿಲ್ಲ ಎಂದು ಭಾವಿಸಿದವರು ಮುಖ್ಯಮಂತ್ರಿ ಅಥವಾ ಪ್ರಧಾನಿ ಅವರ ಪತ್ರಿಕಾ/ಮಾಧ್ಯಮ ಕಾರ್ಯದರ್ಶಿ ಯಾಗಿ ಅಥವಾ ಸಲಹೆಗಾರರಾಗಿ ಸೇರುತ್ತಾರೆ. ಈ ರೀತಿ ಸೇರುವುದು ಅಲ್ಲಿ ತನಕ ತಾವು ಸಾಽಸಿದ ವೃತ್ತಿ ಗರಿಮೆಗೆ ತಿಲಾಂಜಲಿ ಇಟ್ಟಂತೆ ಎಂಬ ಎಚ್ಚರಿಕೆ ಮತ್ತು ಅಪಾಯದ ಮುನ್ಸೂಚನೆ
ಇರಲೇಬೇಕು. ಇದು ನಿಜವೂ ಹೌದು.

ಬಹಳ ಪತ್ರಕರ್ತರು ಮಾಡುವ ಪ್ರಮಾದವೂ ಇದೇ. ಅಷ್ಟು ವರ್ಷಗಳ ತನಕ ಕಾಪಾಡಿಕೊಂಡಿದ್ದ ನಿಷ್ಪಕ್ಷಪಾತತನ, ವೃತ್ತಿ ಪಾವಿತ್ರ್ಯವೆಲ್ಲ ಒಂದೇ ಸಲಕ್ಕೆ ನೀರಿನಲ್ಲಿ ಹೋಮ ಮಾಡಿಬಿಡುತ್ತಾರೆ. ಅಧಿಕಾರ ಅಥವಾ ಇನ್ನಿತರ ಪ್ರಲೋಭನೆಗಳಿಂದ ರಾಜಕಾರಣದ ಪಡಸಾಲೆಯನ್ನು ಸೇರಿಬಿಡುತ್ತಾರೆ. ಅಲ್ಲಿ ರಾಜಕಾರಣಿ ಗಳ ಚಾಕರಿ ಮಾಡಿಕೊಂಡಿರುತ್ತಾರೆ. ಅದಕ್ಕಿಂತ ಹೆಚ್ಚಾಗಿ ತಾವೇ ರಾಜಕಾರಣಿಗಳ ದಲ್ಲಾಳಿಗಳಂತೆ, ವಕ್ತಾರರಂತೆ ವರ್ತಿಸಲಾರಂಭಿಸುತ್ತಾರೆ. ಅಲ್ಲಿಗೆ ಅವರ ಪತ್ರಿಕೋದ್ಯಮ ಬದುಕು ಮೂರಾಬಟ್ಟೆ ಆದಂತೆ. ಇದನ್ನು ಮಾಡಲು ಪತ್ರಿಕೋದ್ಯಮ ಮಾಡಬೇಕಿರಲಿಲ್ಲ. ಅಷ್ಟು ವರ್ಷಗಳ ಕಾಲ ಪತ್ರಕರ್ತರಾಗಿ ಕೆಲಸ ಮಾಡಬೇಕಿರಲಿಲ್ಲ. ಒಬ್ಬ ಪತ್ರಕರ್ತ ಎಂದೂ ದ್ವೀಪವಲ್ಲ. ಒಬ್ಬ ಸಂಪಾದಕ ನಡುಗಡ್ಡೆಯಲ್ಲ. ಆತ ತನ್ನ ಸುತ್ತ ತನಗರಿವಿಲ್ಲದಂತೆ ಅಪಾರ ಸಂಖ್ಯೆಯ ಅಭಿಮಾನಿ ಗಳನ್ನು, ಅನುಯಾಯಿಗಳನ್ನು ಹೊಂದಿರುತ್ತಾನೆ.

ಪತ್ರಕರ್ತನನ್ನು ಅನುಕರಿಸುವಓದುಗರಿರುತ್ತಾರೆ. ಸಂಪಾದಕರನ್ನು ಅನುಸರಿಸುವ ಜನರಿರುತ್ತಾರೆ. ಒಬ್ಬ ಸಂಪಾದಕನೋ, ಪತ್ರಕರ್ತನೋ ಎಂದಿಗೂ
ಓದುಗನ ಕಣ್ಣಲ್ಲಿ ಸಣ್ಣವರಾಗಬಾರದು. ಆದರ್ಶಮಯ ಬದುಕನ್ನು ಬದುಕಲು ಸಾಧ್ಯವಾಗದಿದ್ದರೂ ನಾವು ಬರೆದಂತಾದರೂ ಬದುಕಬೇಕು. (ಕುಮಾರಸ್ವಾಮಿ ಎರಡು ಮದುವೆಯಾಗಿದ್ದನ್ನು ಟೀಕಿಸಲಿ, ಆದರೆ ಹಾಗೆ ಟೀಕಿಸುವಾಗ ತಾವೂ ಇಬ್ಬಿಬ್ಬರನ್ನು ಕಟ್ಟಿಕೊಂಡಿರಬಾರದು.) ಒಬ್ಬ ಸಂಪಾದಕ ಅಥವಾ ಪತ್ರಕರ್ತ ಏಕಾಏಕಿ ರಾಜಕಾರಣಿಯ ಪಡಸಾಲೆ ಸೇರಿಬಿಟ್ಟರೆ, ಬಹಳ ಬೇಸರವಾಗುವುದು ಅವನನ್ನು ಅಷ್ಟು ವರ್ಷಗಳ ಕಾಲ ಹಿಂಬಾಲಿಸಿದ ಓದುಗರಿಗೆ!

ಓದುಗರು ಇದ್ದಕ್ಕಿದ್ದಂತೆ ಪೆಚ್ಚಾಗಿಬಿಡುತ್ತಾರೆ. ಅವರಿಗೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದು ಗೊತ್ತಾಗುವುದಿಲ್ಲ. ಇದು ಅರುಣ್ ಶೌರಿ ಹಠಾತ್ತನೆ ಬಿಜೆಪಿ ಸೇರಿದಾಗ ಅನೇಕರಿಗೆ ಹೀಗೆ ಆಗಿತ್ತು. ಬರೆದರೆ ಶೌರಿ ಥರ ಬರೆಯಬೇಕು ಎಂದು ಅಂದುಕೊಂಡವರಿಗೆ ಅದನ್ನು ಅರಗಿಸಿಕೊಳ್ಳಲು ಸಾಧ್ಯ ವಾಗಿರಲಿಲ್ಲ. ದೇಶದ ಅಪರೂಪದ ತನಿಖಾ ಪತ್ರಕರ್ತ ಎಂಬ ಜನಪ್ರಿಯತೆಯಲ್ಲಿದ್ದಾಗ ಅವರ ರಾಜಕೀಯ ಪ್ರವೇಶ ಅನೇಕರಿಗೆ ನುಂಗಲಾರದ ತುತ್ತಾಗಿತ್ತು. ಶೌರಿ ಬಿಜೆಪಿಯನ್ನೂ ಸೇರಿದರು, ವಾಜಪೇಯಿ ಸರಕಾರದಲ್ಲಿ ಮಂತ್ರಿಯೂ ಆದರು. ಇಷ್ಟು ವರ್ಷಗಳ ಕಾಲ ಅವರು ಒಂದು ತತ್ತ್ವ, ಸಿದ್ಧಾಂತಗಳಿಗೆ ಹೋರಾಡಿದ್ದು ಕೊನೆಗೆ ಇಷ್ಟಕ್ಕೇ ನಾ ಎಂದು ಅನೇಕರಿಗೆ ಅನಿಸಿದ್ದರೆ ಆಶ್ಚರ್ಯವಿಲ್ಲ. ತಮ್ಮ ಅಪಾರ ಅಭಿಮಾನಿಗಳಲ್ಲಿ ಅವರು ಭ್ರಮನಿರಸನ ಹುಟ್ಟಿಸಿಬಿಟ್ಟರು.

ಮಂತ್ರಿಯಾಗಿ ಮಾಡಿದ್ದು ಅಷ್ಟಕ್ಕಷ್ಟೇ. ಹೇಳಿಕೊಳ್ಳುವಂಥ ಘನಂದಾರಿ ಕೆಲಸವನ್ನೇನೂ ಮಾಡಲಿಲ್ಲ. ಅವರ ರಾಜಕಾರಣವೂ ತೀರಾ abrupt ಆಗಿ ಮುಗಿದು ಹೋಯಿತು. ಅದಕ್ಕಿಂತ ಮೊದಲೇ ಪತ್ರಕರ್ತ ‘ಶೌರಿ’ ಸತ್ತು ಹೋಗಿದ್ದರು! ಪ್ರಜಾವಾಣಿ ಖ್ಯಾತ ಸಂಪಾದಕರಾಗಿದ್ದ ಟಿ.ಎಸ್.ರಾಮಚಂದ್ರರಾಯರು (ಟಿಯೆಸ್ಸಾರ್) ಅಂದಿನ ಮುಖ್ಯ ಮಂತ್ರಿಗಳಾದ ದೇವರಾಜ ಆರಸ ಅವರಿಗೆ ತೀರಾ ಆಪ್ತರಾಗಿದ್ದರು. ಆದರೆ ಟೀಕಿಸುವ ಸಂದರ್ಭ ಬಂದಾಗಲೆಲ್ಲ ರಾಜಿ
ಮಾಡಿಕೊಂಡವರಲ್ಲ. ತಮ್ಮ ಪ್ರಖ್ಯಾತ ‘ಛೂಬಾಣ’ ಅಂಕಣದಲ್ಲಿ ಮುಖ್ಯಮಂತ್ರಿಗಳನ್ನು ತೀಕ್ಷ್ಣವಾಗಿ ಟೀಕಿಸುತ್ತಿದ್ದರು.

ಒಮ್ಮೆ ಅರಸು ಅವರು ತಮ್ಮ ಸಲಹೆಗಾರರಾಗಿ ಬರುವಂತೆ ಟಿಯೆಸ್ಸಾರರರನ್ನು ಕರೆದಿದ್ದರು. ಆದರೆ ಟಿಯೆಸ್ಸಾರ್ ಅದನ್ನು ಒಪ್ಪಿಕೊಳ್ಳಲಿಲ್ಲ. ಸರಕಾರದ ಹೊರಗಿದ್ದೇ ಅರಸು ಅವರಿಗೆ ಸಲಹೆಗಳನ್ನು ನೀಡುತ್ತಿದ್ದರು. ಅರಸು ಎಷ್ಟೇ ವರಾತ ಮಾಡಿದ ರೂ ಟಿಯೆಸ್ಸಾರ್ ಒಪ್ಪಲಿಲ್ಲ. ಗರ್ಲ್ ಫ್ರೆಂಡ್ ಆಗಿರುವುದಕ್ಕೂ,
ಮದುವೆಯಾಗಿ ಹೆಂಡತಿಯಾಗುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂಬುದು ಅವರಿಗೆ ಗೊತ್ತಿತ್ತು. ಹಾಗಂತ ಅರಸು ಅವರ ಸಾಮೀಪ್ಯವನ್ನು ದುರುಪಯೋಗ ಪಡಿಸಿಕೊಳ್ಳಲಿಲ್ಲ. ಟಿಯೆಸ್ಸಾರ್ ನಿಧನರಾಗುವಾಗ ಅವರ ಮನೆಯಲ್ಲಿದ್ದ ಕೈ ಕಿತ್ತುಹೋದ, ಕಾಲು ಮುರಿದು ಹೋದ ಕುರ್ಚಿ ಅವರ ಮತ್ತು ಅರಸು ಗೆಳೆತನದ ನಿಷ್ಠುರತೆಯ ಮೂಕ ಸಾಕ್ಷಿಗಳಾಗಿದ್ದವು. ಇಂದಿಗೂ ಕನ್ನಡ ಪತ್ರಿಕೋದ್ಯಮ ದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಟಿಯೆಸ್ಸಾರ್ ಹೆಸರಿ ನಲ್ಲಿ ಪ್ರಶಸ್ತಿ ಕೊಡುತ್ತಾರೆ. ರಾಜಕೀಯ ಮತ್ತು ಪತ್ರಿಕೋದ್ಯಮ ಮಧ್ಯೆ ಎಷ್ಟು ಅಂತರ ಕಾಪಾಡಬೇಕು ಎಂಬುದಕ್ಕೆ ಅವರು ಉತ್ತಮ ನಿದರ್ಶನ.

ಇಲ್ಲಿ ಖ್ಯಾತನಾಮ ಪತ್ರಕರ್ತ ಖಾದ್ರಿ ಶಾಮಣ್ಣ ಅವರನ್ನು ನೆನಪಿಸಿಕೊಳ್ಳಬೇಕು. ಖಾದ್ರಿ ಅವರು ಪತ್ರಕರ್ತರಾಗಿದ್ದಾಗಲೇ ರಾಜಕೀಯದಲ್ಲಿ ಕ್ರಿಯಾಶೀಲ ರಾಗಿದ್ದರು. 1951ರ ಲೋಕಸಭಾ ಚುನಾವಣೆಯಲ್ಲಿ ಸೋಷಿಯಲಿ ಪಾರ್ಟಿಯಿಂದ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ಸಿನ ಸಿ.ಆರ್.ಬಸಪ್ಪ ಅವರ ವಿರುದ್ಧ ಸೆಣಸಿ ಸೋತಿದ್ದರು. ಖಾದ್ರಿ ಅವರ ರಾಜಕೀಯ ಒಲವು-ನಿಲುವುಗಳೇನೇ ಇದ್ದರೂ ಜನ ಅವರನ್ನು ಇಷ್ಟಪಟ್ಟಿದ್ದು ಒಬ್ಬ ಧೀಮಂತ ಪತ್ರ ಕರ್ತ ಎನ್ನುವ ಕಾರಣಕ್ಕೆ. ಸಂಪಾದಕೀಯ ಬರಹದ ಮೂಲಕವೇ ಕನ್ನಡದ ಮನೆಮಾತಾದವರು ಖಾದ್ರಿ. ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಅಷ್ಟಾಗಿ ಓದದ ಸಂಪಾದಕೀಯ ಬರಹ ವನ್ನು ಎಲ್ಲರ ಗಮನಸೆಳೆಯುವಂತೆ ಮಾಡಿದವರು ಅವರು.

ಖಾದ್ರಿ ಶಾಮಣ್ಣ ಅವರು ನಿರ್ಭೀತ ಪತ್ರಿಕೋದ್ಯಮಕ್ಕೆ ಹೆಸರಾದವರು. ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಖಾದ್ರಿ ಅವರನ್ನು ವಿಧಾನ ಪರಿಷತ್ತಿನ ಸದಸ್ಯರಾಗಿ ನೇಮಿಸಿದರು. ಖಾದ್ರಿ ಅವರು ಅದಕ್ಕೆ ಅರ್ಹರಾಗಿದ್ದರು. ಆದರೆ ಖಾದ್ರಿ ಅವರು ತಮ್ಮ ಪತ್ರಿಕೆಯನ್ನು ಹೆಗಡೆ ಅವರ ಗುಣಗಾನಕ್ಕೆ ಮೀಸಲಾಗಿಟ್ಟು ಬಿಟ್ಟರು. ಹೆಗಡೆ ಏನೇ ಮಾಡಲಿ, ಹೇಳಲಿ, ಅದು ಮುಖಪುಟ ಸುದ್ದಿಯಾಗುತ್ತಿತ್ತು. ಇದು ಹೆಗಡೆ ಅವರ ಕರವಸ್ತ್ರ ಎಂದು ಓದುಗರು ಮಾತಾಡಿಕೊಳ್ಳುವ ಹಂತ ತಲುಪಿತು. ಪತ್ರಿಕೆಯ ಪ್ರಸಾರವೂ ಕುಸಿಯಿತು. ಎಂಎಲ್‌ಸಿ ಪದವಿ ಕರುಣಿಸಿದ್ದಕ್ಕಾಗಿ ಖಾದ್ರಿ ಅವರು ತಮ್ಮೆಲ್ಲ ಘನತೆಯನ್ನು ಹೆಗಡೆ ಅವರಿಗೆ ಗಿರವಿ ಇಡಬೇಕಿರಲಿಲ್ಲ ಎಂದು
ಓದುಗರು ಮಾತಾಡಿಕೊಳ್ಳುವಂತಾಯಿತು. ಖಾದ್ರಿ ಅವರು ಅಲ್ಲಿಯವರೆಗೆ ಕಾಯಕವಾಗಿ ನೆರವೇರಿಸಿಕೊಂಡ ಬಂದ ನಿರ್ಭೀತ ಮತ್ತು ನಿಷ್ಪಕ್ಷಪಾತ ಪತ್ರಿಕೋ ದ್ಯಮಕ್ಕೆ, ಈ ರಾಜಕೀಯ ಭಿಕ್ಷೆಯಿಂದಾಗಿ ಎಲ್ಲಾ ಕಳಂಕ ತಟ್ಟಿತು. ಇಂಥ ಪ್ರಲೋಭನೆಗಳಿಗೆ ಮಣಿಯುವ ಸಂಪಾದಕರು ಖಾದ್ರಿ ಅವರನ್ನು ನೋಡಿ ಎಚ್ಚೆತ್ತುಕೊಳ್ಳ ಬೇಕು.

ಆತ ಯಾವ ಪತ್ರಿಕೆಯ ಸಂಪಾದಕನೇ ಆಗಿರಬಹುದು, ಅದರ ಪ್ರಸಾರ ಎಷ್ಟೇ ಇರಬಹುದು, ಅವನ ಪಾಲಿಗೆ ಅವನ ಪತ್ರಿಕೆಯ ಸಂಪಾದಕ ಸ್ಥಾನಕ್ಕಿಂತ ಮಿಗಿಲಾದ ಮತ್ತೊಂದು ದೊಡ್ಡ ಸ್ಥಾನ ಇರಲು ಸಾಧ್ಯವೇ ಇಲ್ಲ. ಅದೇ ಪತ್ರಕರ್ತನಿಗೆ ಪರಮ ಭೂಷಣವಾದುದು. ಸಂಪಾದಕ ಸ್ಥಾನವೆಂಬುದು ಅತಿ ದೊಡ್ಡ ಗೌರವ. ಆ ಸ್ಥಾನದ ಮುಂದೆ ಉಳಿದುದೆಲ್ಲವೂ ಚಿಕ್ಕವೇ. ಇನ್ನು ನಿಗಮ, ಮಂಡಳಿ, ಅಕಾಡೆಮಿ ಸ್ಥಾನಗಳೆಲ್ಲ ಯಾವ ಮರದ ತೊಪ್ಪಲು?!