Friday, 20th September 2024

ಮಾವೋವಾದಿ ಸಂಘಟನೆಯ ಉನ್ನತ ಮುಖಂಡ ಅಕ್ಕಿರಾಜು ನಿಧನ

ನವದೆಹಲಿ: ಆಂಧ್ರಪ್ರದೇಶ ಸರ್ಕಾರದ ಜೊತೆ ಶಾಂತಿ ಮಾತುಕತೆಗೆ ( 2004ರಲ್ಲಿ) ಕಾರಣಕರ್ತ ನಾಗಿದ್ದ ನಿಷೇಧಿತ ಮಾವೋವಾದಿ ಸಂಘಟನೆಯ ಉನ್ನತ ಮುಖಂಡ ಅಕ್ಕಿರಾಜು ಹರಗೋಪಾಲ್ ಅಲಿಯಾಸ್ ರಾಮಕೃಷ್ಣ(58) ಅನಾರೋಗ್ಯದಿಂದ ಛತ್ತೀಸ್ ಗಢದಲ್ಲಿ ನಿಧನರಾದರು.

ಆರ್ ಕೆ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ-ಮಾವೋವಾದಿ ಕೇಂದ್ರ ಸಮಿತಿಯ ಸದಸ್ಯ ಮತ್ತು ನಿಷೇಧಿತ ಸಂಘಟನೆಯ ಆಂಧ್ರ-ಒಡಿಶಾ ಗಡಿ ವಿಶೇಷ ವಲಯ ಸಮಿತಿಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿರುವುದಾಗಿ ವರದಿ ವಿವರಿಸಿದೆ.

ಮಾವೋವಾದಿ ಉನ್ನತ ನಾಯಕನ ನಿಧನದ ಸುದ್ದಿಯನ್ನು ಚತ್ತೀಸ್ ಗಢ್ ಪೊಲೀಸರು ಖಚಿತಪಡಿಸಿ ದ್ದಾರೆ. ಗುಪ್ತಚರ ಇಲಾಖೆ ಕೂಡಾ ಸ್ಪಷ್ಟಪಡಿಸಿ ರುವುದಾಗಿ ವರದಿ ತಿಳಿಸಿದೆ.

2016ರ ಅಕ್ಟೋಬರ್ ನಲ್ಲಿ ಒಡಿಶಾ ಮಲ್ಕಾನ್ ಗಿರಿ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆರ್ ಕೆ ಗಾಯಗೊಂಡಿದ್ದು, ಈ ಸಂದರ್ಭದಲ್ಲಿ ನಡೆದ  ಎನ್ ಕೌಂಟರ್ ನಲ್ಲಿ 30 ಮಂದಿ ಮಾವೋವಾದಿಗಳು ಮೃತಪಟ್ಟಿದ್ದರು.

ಮಾವೋವಾದಿ ಸಂಘಟನೆಯಲ್ಲಿ ಪ್ರಮುಖ ವಿಚಾರವಾದಿಯಾಗಿದ್ದ ಆರ್ ಕೆ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದವು, ಅಷ್ಟೇ ಅಲ್ಲ ಆರ್ ಕೆ ಬಗ್ಗೆ ಮಾಹಿತಿ ಕೊಟ್ಟವರಿಗೆ 97 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು.