Thursday, 19th September 2024

ಮತದಾರರೇ ಪಂಜಾಬ್‌ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲಿ: ಕೇಜ್ರಿವಾಲ್

ಚಂಡೀಗಢ್: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ವಾಟ್ಸಪ್, ವಾಯ್ಸ್ ಸಂದೇಶದ ಮೂಲಕ ಹೆಸರನ್ನು ಸೂಚಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುರುವಾರ ಘೋಷಿಸಿದ್ದಾರೆ.

ಪಂಜಾಬ್ ನ ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂದು ಮತದಾರರು ಜ.17ರ ಸಂಜೆ 5ಗಂಟೆವರೆಗೆ ಎಸ್ ಎಂಎಸ್, ಅಥವಾ ವಾಟ್ಸಪ್, ಧ್ವನಿ ಸಂದೇಶದ ಮೂಲಕ ಆಯ್ಕೆ ಮಾಡಲು ಮೊಬೈಲ್ ನಂಬರ್ ಅನ್ನು ಅರವಿಂದ್ ಕೇಜ್ರಿವಾಲ್, ಆಪ್ ನ ಪಂಜಾಬ್ ರಾಜ್ಯಾಧ್ಯಕ್ಷ ಭಗವಂತ್ ಮಾನ್ , ಪಕ್ಷದ ಹಿರಿಯ ಮುಖಂಡ ರಾಘವ್ ಚಡ್ಡಾ ಅವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದ್ದು, ಈ ಆಯ್ಕೆಯಲ್ಲಿ ತಾನು ಸೇರ್ಪಡೆಗೊಂಡಿಲ್ಲ ಎಂದು ತಿಳಿಸಿದ್ದಾರೆ.

2021ರ ಜೂನ್ ನಲ್ಲಿ ಅರವಿಂದ್ ಕೇಜ್ರಿವಾಲ್ ಅವರು 2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸಿಖ್ ಸಮುದಾಯದ ವ್ಯಕ್ತಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಿಸಿದ್ದರು. ತನ್ನ ಆಯ್ಕೆ ಭಗವಂತ್ ಮನ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿದ್ದರು. ಆದರೆ ಇದೀಗ ಪಂಜಾಬ್ ಮತದಾರರೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿ ಎಂದು ಸೂಚಿಸಿದ್ದಾರೆ.

ನಾಲ್ಕು ಗೋಡೆಗಳ ನಡುವೆ ಮುಖ್ಯಮಂತ್ರಿಯ ಹೆಸರನ್ನು ನಿರ್ಧರಿಸುವ ಸಂಪ್ರದಾಯ ನಿಲ್ಲಬೇಕು ಎಂದು ಭಗವಂತ್ ಮನ್ ಹೇಳಿರುವುದಾಗಿ ಕೇಜ್ರಿವಾಲ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.

ಪಂಜಾಬ್ ಮತದಾರರು 7074870748 ಈ ನಂಬರ್ ಗೆ ಸಂದೇಶ, ವಾಟ್ಸಪ್ ಸಂದೇಶ ಅಥವಾ ಧ್ವನಿ ಸಂದೇಶದ ಮೂಲಕ ಸಿಎಂ ಅಭ್ಯರ್ಥಿಯ ಹೆಸರನ್ನು ಸೂಚಿಸಬೇಕು. ಜನವರಿ 17ರ ಸಂಜೆ 5ಗಂಟೆವರೆಗೆ ಸಂದೇಶ ಕಳುಹಿಸಲು ಅವಕಾಶ ಇದೆ.