Saturday, 26th October 2024

ಲಾಕ್ ಡೌನ್ ಆದೇಶ‌ ಉಲ್ಲಂಘಿಸಿದರೆ ಬಂಧನ: ಪ್ರವೀಣ್ ಸೂದ್

ವಿಶ್ವವಾಣಿ ಸುದ್ದಿ ಮನೆ ಬೆಂಗಳೂರು :

ಕರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಲಾಕ್ ಡೌನ್ ಆದೇಶ ಉಲ್ಲಂಘಿಸಿ, ಸಂಚಾರ ಮಾಡಿದರೆ, ನೈಸರ್ಗಿಕ ವಿಕೋಪ ಕಾಯಿದೆಯಡಿ ಬಂಧನ ಮಾಡಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಶುಕ್ರವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, ದಿನೇ ದಿನೇ ಸೋಂಕಿತ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ, ಹಲವು ಮಂದಿ ನಿರ್ಲಕ್ಷ್ಯ ವಹಿಸಿ ಸಂಚಾರ ಮಾಡುತ್ತಿದ್ದಾರೆ. ಇದಕ್ಕೆ ಸಾಲದೆಂಬಂತೆ ಪೊಲೀಸರ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಸೋಂಕು ಹರಡದಂತೆ ಅನಗತ್ಯವಾಗಿ ಯಾರು ಸಹ ಮನೆಯಿಂದ ಹೊರಬರದಂತೆ ನಿಯಂತ್ರಿಸಲು ನೈಸರ್ಗಿಕ ವಿಕೋಪ ಕಾಯಿದೆಯಡಿ ಐಪಿಸಿ ೧೮೮ರ ಅನ್ವಯ ಬಂಧಿಸಲಾಗುವುದು.
ಒಂದು ವೇಳೆ ತಪ್ಪು ಸಾಬೀತಾದರೆ ೨ ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡವಿಧಿಸಲು ಅವಕಾಶವಿದೆ. ಹೀಗಾಗಿ, ಸುಖಾಸುಮ್ಮನೆ ಹೊರಗೆ ಬಂದರೆ ಅಂತಹವರ ವಿರುದ್ಧ ನಿರ್ದಾರ್ಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದ್ದಾರೆ.