Wednesday, 23rd October 2024

ಮುಖ್ಯಮಂತ್ರಿ ಅವರಿಂದ ಆಲದ ಮರದ ಉದ್ಯಾನವನ ಪ್ರೆಸ್ ಕ್ಲಬ್ ತುಮಕೂರು ಇವರಿಗೆ ಹಸ್ತಾಂತರ

ತುಮಕೂರು: ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರು ಆಲದಮರ ಪಾರ್ಕ್ ನಿರ್ವಹಣೆ ಹೊಣೆ ತುಮಕೂರು ಪ್ರೆಸ್ ಕ್ಲಬ್ ಗೆ ಹಸ್ತಾಂತರವಾಗಿದೆ.

ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸೋಮವಾರ ಪಾರ್ಕ್ ಗೆ ಭೇಟಿ ನೀಡಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಿರುವ ಆಲದಮರ ಪಾರ್ಕ್ ನಿರ್ವಹಣೆ ಜವಾಬ್ದಾರಿ ಯನ್ನು ಪ್ರೆಸ್‌ ಕ್ಲಬ್‌ಗೆ ವಹಿಸಿಕೊಟ್ಟರು. ಪಾರ್ಕ್‌ನಲ್ಲಿ ಆಲದ ಸಸಿ ನೆಟ್ಟು ನೀರೆರೆಯುವ ಮೂಲಕ ಪ್ರೆಸ್‌ಕ್ಲಬ್ ಕಾರ್ಯ ಚಟುವಟಿಕೆಗೆ ವಿದ್ಯುಕ್ತ ಚಾಲನೆ ನೀಡಿ ಶುಭ ಹಾರೈಸಿದರು.

ಆಲದಮರದ ಪಾರ್ಕ್‌ನಲ್ಲಿ ಸಿದ್ದಗೊಳಿಸಿದ್ದ ವೇದಿಕೆಯಲ್ಲಿ ಪ್ರೆಸ್‌ಕ್ಲಬ್‌ನ ಉಪಾಧ್ಯಕ್ಷರಾದ ಶ್ರೀನಿವಾಸ ರೆಡ್ಡಿ, ಜಿ.ಕರುಣಾಕರ್, ಮಾರುತಿ ಗಂಗಹನುಮಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಎಲ್.ಯೋಗೇಶ್ ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಜತೆ ಪಾರ್ಕ್ ನಿರ್ವಹಣೆ ಕುರಿತು ಮಾಡಿಕೊಂಡಿರುವ ಒಡಂಬಡಿಕೆ ಪ್ರತಿಯನ್ನು ಸಿಎಂ ಅವರಿಂದ ಸ್ವೀಕರಿಸಿಸರು. ಆಲದ ಮರದ ಪಾರ್ಕ್ ನಿರ್ವಹಣೆ ಹೊಣೆಯನ್ನು ದಾಖಲಾತಿ ಹಸ್ತಾಂತರಿಸುವ ಮೂಲಕ ಪಾರ್ಕ್ ನಿರ್ವಹಣೆ ಹೊಣೆ ಪಡೆದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಆಲದ ಮರದ ಪಾರ್ಕ್‌ನ ನಿರ್ವಹಣೆಯ ಜವಾಬ್ದಾರಿಯನ್ನು ಪ್ರೆಸ್‌ಕ್ಲಬ್‌ಗೆ ವಹಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇದರಿಂದ ಪ್ರೆಸ್‌ಕ್ಲಬ್ ಸಾಮಾಜಿಕ ಹೊಣೆಗಾರಿಕೆ, ಪರಿಸರ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಶ್ಲಾಘಿಸಿದರು.

ಸಾಮಾಜಿಕ ಹೊಣೆಗಾರಿಕೆ ಎಂಬುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಂದು ಸಂಘ, ಸಂಸ್ಥೆಗಳು ಸಹ ಪ್ರಯತ್ನಗಳನ್ನು ನಡೆಸಲಿ ಎಂದು ಮನವಿ ಮಾಡಿದರು. ಸರ್ಕಾರದ ಆಯವ್ಯಯದಲ್ಲಿ ಪ್ರಥಮ ಬಾರಿಗೆ ಎಕೋ ಬಜೆಟ್ ಮಾಡಿದ್ದೇವೆ. ಈ ಮೂಲಕ ಪರಿಸರ ಸಂರಕ್ಷಣೆ, ಅರಣ್ಯ, ಸಸ್ಯೋದ್ಯಾನ ವನಗಳನ್ನು ಬೆಳೆಸುವುದಕ್ಕೂ ಒತ್ತು ನೀಡಲಾಗುತ್ತಿದೆ ಎಂದರು.

ಪ್ರತಿ ವರ್ಷವೂ ಪರಿಸರವನ್ನು ಗಾಳಿ, ನೀರು, ಭೂಮಿ, ಗಿಡ, ಅರಣ್ಯ ಎಲ್ಲವನ್ನೂ ಹೊಂದಾಣಿಕೆ ಮಾಡಿಕೊಂಡು ಹೋದಾಗ ಮಾತ್ರ ಕರ್ನಾಟಕ ಒಳ್ಳೆಯ ಪರಿಸರ ಯುಕ್ತವಾದ ನಾಡಾಗಲಿದೆ ಎಂದು ತಿಳಿಸಿದರು. ಮನುಕುಲಕ್ಕೆ ನಿಸರ್ಗ ದೊಡ್ಡ ಕೊಡುಗೆ ನೀಡುತ್ತಿದೆ. ನಾವು ಸಹ ಪರಿಸರವನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಚಾಚೂ ತಪ್ಪದೇ ನಿರ್ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ವೈ.ಎ.ನಾರಾಯಣಸ್ವಾಮಿ, ಚಿದಾನಂದಗೌಡ, ಕುಂದರನಹಳ್ಳಿ ರಮೇಶ್ ಹಾಗೂ ಪ್ರೆಸ್‌ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಜಗನಾಥ್ ಕಾಳೇನಹಳ್ಳಿ ಕಾರ್ಯ ಕ್ರಮ ನಿರೂಪಿಸಿದರು.