ಆಳಂದ: ಜಾನಪದ ಕಲೆಗಳು ಸಂಸ್ಕೃತಿಯ ಪ್ರತೀಕ ಈ ನಾಡಿನ ಅಸಂಖ್ಯಾತ ಜಾನಪದ ಕಲೆಗಳು ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಆಳಂದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಣಮಂತ ಶೇರಿ ಅಭಿಪ್ರಾಯ ಪಟ್ಟರು.
ಸೋಮವಾರ ಆಳಂದ ತಾಲೂಕಿನ ಗಡಿಗ್ರಾಮ ತುಗಾಂವನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಅಕುಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವೆಲ್ಫೆರ್ ಚಾರಿಟೇಬಲ್ ಟ್ರಸ್ಟ್ ಕಲಬುರಗಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಗಡಿನಾಡು ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲೆಗಳಿಗೆ, ಕಲಾವಿದರಿಗೆ ಸಾವಿಲ್ಲ ಜಾನಪದ ಕಲಾವಿದರು ವಂಶಪಾರಂಪರ್ಯವಾಗಿ ತಮ್ಮ ಆತ್ಮಸಂತೃಪ್ತಿಗಾಗಿ ಕಲೆಯನ್ನು ಉಳಿಸಿ ಬೆಳಸಿಕೊಂಡು ಬಂದಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವೀರಭದ್ರ ಖೂನೆ, ಪ್ರಕಾಶ ಕಟಕೆ, ವೈಶಾಲಿ ಕಾಂಬಳೆ, ಅರುಣ ಯಾದವ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿ ದ್ದರು. ಪ್ರಕಾಶ ಢೋಲೆ ಗಡಿಭಾಗದಲ್ಲಿ ಕನ್ನಡದ ಸ್ಥಿತಿಗತಿ ಕುರಿತು, ಧೂಳಪ್ಪ ದ್ಯಾಮನಕರ ಗಡಿಭಾಗದ ಜಾನಪದ ಸಂಸ್ಕೃತಿ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶೃತಿ ಬಿರಾದಾರ ಶ್ರೀಹರ್ಷಾ ಅಧ್ಯಕ್ಷತೆ ವಹಿಸಿದರು. ತುಗಾಂವ, ಅಣೂರ, ಹೊದಲೂರಿನ ಜಾನಪದ ಕಲಾ ತಂಡಗಳು ಕಲೆಯನ್ನು ಪ್ರಸ್ತುತ ಪಡಿಸಿದವು.