Sunday, 27th October 2024

ಮಸೀದಿಯಲ್ಲಿದ್ದ ತಬ್ಲಿಘಿಗಳ ಮೇಲೆ ಎಫ್ ಐ ಆರ್

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು:

ಇಂಡೋನೇಷ್ಯಾ, ಕಿರ್ಗಿಸ್ತಾನ್ ಮತ್ತು ಕಜಕಿಸ್ತಾನ್ ದೇಶದ 37 ಪ್ರಜೆಗಳು ಮಾರ್ಚ್‌ನಲ್ಲಿ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದು ಬೆಂಗಳೂರು ಸೇರಿದಂತೆ ದೇಶದ ವಿವಿಡೆದೆ ನಡೆದ ತಬ್ಲಿಘಿ ಧಾರ್ಮಿಕ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಬಳಿಕ ಪಾದರಾಯನಪುರದ ಸುಬಾನಿಯ ಮಸೀದಿಗೆ ಬಂದು ನೆಲೆಸಿರುವುದಾಗಿ 19 ಜನರ ವಿರುದ್ಧ ಜೆಜೆನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಇವರೆಲ್ಲರೂ ವಿದೇಶಿಗರಾಗಿದ್ದು, ಮಸೀದಿಗೆ ಬಂದು ಹೋಗಿರುವ ಜನರನ್ನು ಸಂಪರ್ಕಿಸಿರುವ ಸಾಧ್ಯತೆ ಇದೆ. ಇದು ಮತ್ತಷ್ಟು ಕರೋನಾ ಭೀತಿ ಹೆಚ್ಚಿಸಿತ್ತು. ಆದರೆ, ಇಲ್ಲಿನ ಜನರು ಮಾತ್ರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇವು ಅಷ್ಟೆ ಅಲ್ಲದೇ ಈವರೆಗೂ 37 ವಿದೇಶಿಗರ ವಿರುದ್ಧ ಒಟ್ಟು 19 ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶದಿಂದ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದ 19 ವಿದೇಶಿ ಪ್ರಜೆಗಳು ಬೆಂಗಳೂರು ಸೇರಿ ವಿವಿಧೆಡೆ ಧಾರ್ಮಿಕ ಪ್ರಚಾರದಲ್ಲಿ ತೊಡಗಿದ್ದರು. ಇದರಲ್ಲಿ ಇಂಡೋನೇಷ್ಯಾದ 10 ಮತ್ತು ಕಜಾಕಿಸ್ತಾನ್ ದೇಶದ 9 ಮಂದಿ ಪ್ರಜೆಗಳ ವಿರುದ್ಧ ದೂರು ದಾಖಲಾಗಿದೆ. ಎಲ್ಲರನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ದೆಹಲಿಯಲ್ಲಿ ತಬ್ಲಿಘಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಧಾರ್ಮಿಕ ಪ್ರಚಾರ ನಡೆಸಿದ್ದಾರೆ. ಬಳಿಕ ಮಾ.16ರಂದು ಬೆಂಗಳೂರಿನ ಪಾದರಾಯನಪುರ 1ನೇ ಕ್ರಾಸ್‌ನಲ್ಲಿರುವ ಸುಬಾನಿಯ ಮಸೀದಿಗೆ ಬಂದಿದ್ದರು. ಇಲ್ಲಿಯೂ ಕೂಡ ಧರ್ಮ ಪ್ರಚಾರ ನಡೆಸಿದ್ದಾರೆ. ಕರೋನಾ ಭೀತಿ ಹಿನ್ನೆಲೆಯಲ್ಲಿ ತಬ್ಲಿಘಿ ಧಾರ್ಮಿಕ ಪ್ರಚಾರದಲ್ಲಿ ಪಾಲ್ಗೊಂಡಿದ್ದವರ ಪತ್ತೆಗೆ ತನಿಖೆ ಕೈಗೊಳ್ಳಲಾಗಿತ್ತು.

ಸುಬಾನಿಯ ಮಸೀದಿಯಲ್ಲಿ ವಿದೇಶಿಗರು ಧರ್ಮ ಪ್ರಚಾರ ಮಾಡುತ್ತಿರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಬಳಿಕ ಮಸೀದಿಗೆ ಹೋಗಿ ಇವರೆಲ್ಲರನ್ನು ವಶಕ್ಕೆ ಪಡೆದುಕೊಂಡಿದ್ದರು. ಕರೋನಾ ಸೋಂಕು ತಗುಲಿರುವ ಶಂಕೆ ಮೇರೆಗೆ ಇಂದಿರಾನಗರದಲ್ಲಿರುವ ಸಿ.ವಿ.ರಾಮನ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. 19 ಮಂದಿಯಲ್ಲೂ ಕರೋನಾ ನೆಗೆಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಬೆಂಗಳೂರಿನ ಸಾರಾಯಿಪಾಳ್ಯದಲ್ಲಿರುವ ಹಜ್ ಭವನದಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.