Monday, 16th September 2024

ಛಾವಣಿ ಕುಸಿತ; ತಪ್ಪಿದ ಭಾರೀ ಅನಾಹುತ

-ಏಳು ಜನರು ಪ್ರಾಣಪಾಯದಿಂದ ಪಾರು

ಗದಗ: ಸತತ ಜಿಟಿ ಜಿಟಿ ಮಳೆಯ ಪರಿಣಾಮ ಶನಿವಾರ ನಸುಕಿನಲ್ಲಿ ಗದಗ‌ ಜಿಲ್ಲೆಯ ರೋಣ ತಾಲೂಕಿನ ಮೇಗೂರಿನ ಶಿವಾನಂದ ಅರಹುಣಸಿ ಎಂಬುವರ ಮನೆಯ ಛಾವಣಿ ಸಂಪೂರ್ಣ ನೆಲಕಚ್ಚಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಶಿವಾನಂದ ಅರಹುಣಸಿ ಎಂಬುವರ ಮನೆಯೊಳಗೆ ರಾತ್ರಿ ಕುಟುಂಬದ ಏಳು ಸದಸ್ಯರು ಮಲಗಿ ನಿದ್ರಿಸುತ್ತಿದ್ದರು. ನಸುಕಿನ ವೇಳೆ ಯಲ್ಲಿ ದೊಡ್ಡದಾದ ಸದ್ದು ಕೇಳಿ ಬರತೊಡಗಿತು. ಏಕಾಏಕಿ ಕೇಳಿ ಬಂದ ಶಬ್ಧ ಎಲ್ಲಿಂದ, ಏನು ಎಂದೂ ಯೋಚಿಸದೇ ತಕ್ಷಣ ಮನೆಯಿಂದ ಹೊರಭಾಗಕ್ಕೆ ಬಂದು ನಿಂತಿದ್ದು ನೋಡ ನೋಡುತ್ತಿದ್ದಂತೆ ಇಡೀ ಮನೆಯ ಛಾವಣಿ ಕುಸಿದು ನೆಲಕ್ಕೆ ಬಿತ್ತು ಎನ್ನಲಾಗಿದೆ.

ತಕ್ಷಣ ಎಚ್ಚೆತ್ತು ಸ್ಥಳದಿಂದ ಹೊರಕ್ಕೆ ಬಂದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿ ಸಿಲ್ಲ. ಛಾವಣಿ ಕುಸಿದ ಪರಿಣಾಮವಾಗಿ ಲಕ್ಷಾಂತರ ರೂ. ಮೌಲ್ಯದ ಅಡುಗೆ ಸಾಮಗ್ರಿ ಹಾಗೂ ಇನ್ನಿತರೇ ವಸ್ತುಗಳು ಹಾನಿಗೊಂಡಿವೆ.

ವಿಷಯ ತಿಳಿಯುತ್ತಿದ್ದಂತೆಯೇ ಜಿ.ಪಂ ಸದಸ್ಯ ಶಿವಕುಮಾರ ನೀಲಗುಂದ ಸ್ಥಳಕ್ಕೆ ಆಗಮಿಸಿ ಹಾನಿಯನ್ನು ಪರಿಶೀಲಿಸಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.