Monday, 28th October 2024

ಮದ್ಯದ ಅಮಲಿನಲ್ಲಿ ಸ್ನೇಹಿತನ ಕೊಲೆ: ವಿಡಿಯೋ ಸಾಕ್ಷಿ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:

ಮದ್ಯದ ಅಮಲಿನಲ್ಲಿ ಯುವಕನ ಕೊಲೆ ಪ್ರಕರಣಕ್ಕೆೆ ಸಂಬಂಧಿಸಿದಂತೆ ಕೆಲವೊಂದು ದೃಶ್ಯಾವಳಿ ವೈರಲ್ ಆಗಿವೆ.

ಬೆಂಗಳೂರು ಹೊರವಲಯ ಸಿಡೇದಹಳ್ಳಿಯಲ್ಲಿ ಹಾಡ ಹಗಲೇ ಯುವಕನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಜನನಿಬಿಡ ಪ್ರದೇಶದಲ್ಲಿ ಇಬ್ಬರು ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದು ಒಬ್ಬ ಮತ್ತೊಬ್ಬನಿಗೆ ಚಾಕುವಿನಿಂದ ಇರಿದಿದ್ದ. ನಂತರ ಆಸ್ಪತ್ರೆಗೆ ಸಾಗಿಸಿ ಎಂದು ಬೇಡಿಕೊಳ್ಳುತ್ತಿದ್ದ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಅದು ಪೊಲೀಸರಿಗೆ ಲಭ್ಯವಾಗಿದೆ. ಬಾಗಲಗುಂಟೆ ಪೊಲೀಸ್ ಠಾಣಾ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಡಿಯೊದಲ್ಲಿ ಏನಿದೆ?
ಸಿಡೆದಹಳ್ಳಿ ಬಳಿ ರೌಡಿಶೀಟರ್ ಕರಣ್ ಸಿಂಗ್ ಸೋಮವಾರ ಮದ್ಯ ಖರೀದಿಸಿದ್ದ. ನಂತರ ಮದ್ಯ ಖರೀದಿಸಿದ ಹುಮ್ಮಸ್ಸಿನಲ್ಲಿ ಸ್ನೇಹಿತ ಪ್ರಭು ಎಂಬಾತನ ಜತೆ ಪಾರ್ಟಿ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಇಬ್ಬರು ಜಗಳ ತೆಗೆದು ರಸ್ತೆಗೆ ಇಳಿದು ಗಲಾಟೆ ಮಾಡಿದ್ದಾರೆ. ಈ ವೇಳೆ ಪ್ರಭು, ಕರಣ್ ಸಿಂಗ್ ಎದೆಗೆ ಚಾಕು ಚುಚ್ಚಿ ಕೊಲೆ ಮಾಡಿದ್ದಾನೆ. ಈ ಕೊಲೆ ಮಾಡುವ ಮುಂಚೆ ಅವರಿಬ್ಬರ ನಡುವೆ ನಡೆದ ಮಾತಿನ ಚಕಮಕಿಯ ದೃಶ್ಯವನ್ನು ಸ್ಥಳೀಯ ನಿವಾಸಿಗಳು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಆ ವಿಡಿಯೋ ಈಗ ವೈರಲ್ ಆಗಿದೆ. ಈ ಬಗ್ಗೆೆ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಚಲನವಲನದ ಆಧಾರದ ಮೇರೆಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.