Friday, 20th September 2024

ಸಾವಿರ ಸನಿಹದಲ್ಲಿ ಕರೋನಾ ಪ್ರಕರಣಗಳು

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಾಜ್ಯದಲ್ಲಿ ಒಟ್ಟಾರೆ 987 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 35 ಜನ ಸಾವನ್ನಪ್ಪಿದ್ದು, 460 ಜನ ಗುಣಮುಖರಾಗಿ ಹಿಂತಿರುಗಿದ್ದಾರೆ. ಉಳಿದ 482 ಪ್ರಕರಣಗಳಲ್ಲಿ ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ, 9 ಜನರನ್ನು ತೀವ್ರ ನಿಗಾ ಘಟಕಗಳಲ್ಲಿರಿಸಲಾಗಿದೆ.
 ಗುರುವಾರ 28 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಜಿಲ್ಲಾಡಳಿತಗಳು‌ ಪ್ರಕರಣಗಳ‌ ಬಗ್ಗೆ ತೀವ್ರ ನಿಗಾ ವಹಿಸಿ ನಿಯಂತ್ರಣಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ.
ರಾಜ್ಯಾದ್ಯಂತ ಒಟ್ಟು 21383 ವ್ಯಕ್ತಿಗಳನ್ನು ನಿಗಾವಣೆಯಲ್ಲಿಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಪರೀಕ್ಷಿಸಲಾಗಿರುವ 128373 ಮಾದರಿಗಳ ಪೈಕಿ 987 ಮಾದರಿಗಳು ಖಚಿತಗೊಂಡಿವೆ. ಇಂದು 7195 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.
ಮಂಡ್ಯದಲ್ಲಿ 5, ಬೆಂಗಳೂರು- 5, ಗದಗ- 4, ಬೀದರ್- 7, ಕಲಬುರ್ಗಿ-2, ದಾವಣಗೆರೆ- 3, ಬಾಗಲಕೋಟೆ- 1, ಬೆಳಗಾವಿ – 1 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡ ಮತ್ತು ಬೆಂಗಳೂರಿನಲ್ಲಿ ತಲಾ ಒಬ್ಬರು ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ 189, ಬೆಳಗಾವಿಯಲ್ಲಿ 114, ದಾವಣಗೆರೆ ಮತ್ತು ಮೈಸೂರಿನಲ್ಲಿ 88, ಕಲಬುರ್ಗಿಯಲ್ಲಿ 83 ಕೊರೋನಾ ಕೇಸುಗಳು ಪತ್ತೆಯಾಗಿವೆ. ಈ ಮೂಲಕ ಈ 5 ಜಿಲ್ಲೆಗಳು ಸೋಂಕಿತ ಪ್ರಕರಣಗಳಲ್ಲಿ ಟಾಪ್​ ಪಟ್ಟಿಯಲ್ಲಿವೆ.
 *ಆಯ್ದ ವರ್ಗದ ವ್ಯಕ್ತಿಗಳಿಗೆ ಸಾಂಸ್ಥಿಕ ಕ್ವಾರಂಟೇನ್ ನಿಂದ ವಿನಾಯಿತಿ*
ಈಗಾಗಲೇ ಕರ್ನಾಟಕಕ್ಕೆ ಹೊರರಾಜ್ಯಗಳಿಂದ ರೇಲು ಅಥವಾ ಇತರೆ ಸಾರಿಗೆ ವ್ಯವಸ್ಥೆಯ ಮೂಲಕ ರಸ್ತೆ ಮಾರ್ಗವಾಗಿ ಪ್ರವೇಶಿಸುವ ವ್ಯಕ್ತಿಗಳ ಕುರಿತಂತೆ ನಿಗಾ ವಹಿಸುವಲ್ಲಿ ಮಾರ್ಗದರ್ಶಿ‌ ಸೂತ್ರಗಳನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದು, ಈ ಪೈಕಿ ಗರ್ಭಿಣಿ ಸ್ತ್ರೀಯರು, 10 ವರ್ಷದೊಳಗಿನ ಮಕ್ಕಳು, 80 ವರ್ಷ ಮೀರಿದ ಹಿರಿಯರು ಹಾಗೂ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಗೃಹ ಕ್ವಾರಂಟೈನ್ ಗೆ ಅವಕಾಶ ನೀಡಲಾಗಿದೆ