Friday, 20th September 2024

ನಾವಿಕೋತ್ಸವದ ಹಿಂದಿನ ರೋಚಕ ಕತೆ !

ಆಭಿವ್ಯಕ್ತಿ
ಬೆಂಕಿ ಬಸಣ್ಣ ನ್ಯೂಯಾರ್ಕ್

ಇತ್ತೀಚಿಗೆ ನಡೆದ ನಾವಿಕೋತ್ಸವದ ಸ್ಪರ್ಧೆಯೊಂದರಲ್ಲಿ ಸೇಂಟ್ ಮಾರ್ಟಿನ್ ದೇಶದ ಹೆಸರನ್ನು ವಿಜೇತರ ಪಟ್ಟಿಯಲ್ಲಿನೋಡಿ ದಾಗ ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ!

ಇಂತಹ ದೊಂದು ದೇಶ ಈ ಭೂಮಿಯ ಮೇಲೆ ಇದೆಯೇ? ಇದ್ದರೂ ಸಹ ಆ ದೇಶದಲ್ಲಿ ಕನ್ನಡಿಗರು ಇದ್ದಾರಾ? ಅಲ್ಲಿ ಕನ್ನಡಿಗ ರಿದ್ದರೂ ಜಾಗತಿಕ ಮಟ್ಟದಲ್ಲಿ ಬಹುಮಾನ ಗೆಲ್ಲುವಂಥ ಪ್ರತಿಭಾನ್ವಿತ ಕನ್ನಡಿಗರು ಇರಲು ಸಾಧ್ಯವೇ? ಇವೆಲ್ಲವೂ ಸಾಧ್ಯವಾಗಲು
ಕಾರಣ ನಾವಿಕ ಸಂಸ್ಥೆೆಯವರು ಇತ್ತೀಚಿಗೆ ಜಗತ್ತಿನ ತುಂಬೆಲ್ಲ ನೆಲೆಸಿರುವ ಅನಿವಾಸಿ ಕನ್ನಡಿಗರನ್ನು ಒಂದೆಡೆ ಸೇರಿಸಿ ನಡೆಸಿ ಕೊಟ್ಟ, ಪ್ರಥಮ ಅಂತರ್ಜಾಲ ಚಾಲಿತ (virtual)ವಿಶ್ವ ಕನ್ನಡ ಸಮ್ಮೇಳನ ನಾವಿಕೋತ್ಸವ-2020! ನಾನು ಗೂಗಲ್ ನಲ್ಲಿ ಹುಡುಕಿದಾಗ ಗೊತ್ತಾಗಿದ್ದು ಸೆಂಟ್ ಮಾರ್ಟನ್ ಕೆರೆಬಿಯನ್ ಸಮುದ್ರದಲ್ಲಿ ಇರುವ ಬರೀ 87 ಚದರ ಕಿ ಮೀ ವಿಸ್ತಾರವಿರುವ ಹಾಗೂ ಕೇವಲ 77,800 ಜನಸಂಖ್ಯೆೆಯಿರುವ ಪುಟ್ಟ ದ್ವೀಪ.

ಅಮ್ಮನಿಗೆ ಹೆಮ್ಮೆಯ ಕಾಣಿಕೆ: ಈ ನಾವಿಕೋತ್ಸವ ಸಮ್ಮೇಳನ ಮುಗಿದ ನಾಲ್ಕೇ ದಿನಗಳಲ್ಲಿ ನಮ್ಮ ನಾವಿಕ ಸಂಸ್ಥೆೆಯ ಅಧ್ಯಕ್ಷರಾದ ವಲ್ಲೀಶ್ ಶಾಸ್ತ್ರಿಯವರ ತಾಯಿ ಜಾನಕಮ್ಮನವರು ನಿಧನರಾದ ವಾರ್ತೆ ನಮ್ಮನ್ನೆಲ್ಲಾ ಆಘಾತಗೊಳಿಸಿತು. ಆ ಮಹಾತಾಯಿಯು ತನ್ನ ಪುತ್ರ ವಲ್ಲೀಶ, ಹಗಲಿರುಳು ದುಡಿದು ಮಾಡಿದ ಮಹಾ ಸಮ್ಮೇಳನವನ್ನು ಕಣ್ಣಾರೆ ನೋಡಿ, ಮನಸಾರೆ ಮೆಚ್ಚಿ, ಪರಮಾನಂದ ಪಟ್ಟು, ತನ್ನ ಮಗನ ಸಾಧನೆ ಬಗ್ಗೆೆ ಹೆಮ್ಮೆ ಪಟ್ಟು, ಸಮಾಧಾನದಿಂದ, ತೃಪ್ತಿಯಿಂದ ಈ ಭೂಲೋಕವನ್ನು ತ್ಯಜಿಸಿದರು. ಈ ಯಶಸ್ವಿ ಸಮ್ಮೇಳನವು ಮಗನೊಬ್ಬನು ತನ್ನ ತಾಯಿಗೆ ಕೊಡಬಹುದಾದ ಅತ್ಯುತ್ತಮ ಕಾಣಿಕೆ ಎಂದರೆ ತಪ್ಪಾಗಲಾರದು.

ನಾವಿಕೋತ್ಸವದ ಹಿಂದಿನ ರೋಚಕ ಕಥೆ: ಶ್ರೀವತ್ಸ ಜೋಶಿಯವರು ನಾವಿಕೋತ್ಸವದ ಕನ್ನಡ-ಕಲಿ ಸ್ಪರ್ಧೆಗಳ ಬಗ್ಗೆ ವಿಶ್ವವಾಣಿ ಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಓದುಗರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಆದರೆ ಈ ಕನ್ನಡ  ಕಲಿ ಕಾರ್ಯಕ್ರಮಗಳು ನಾವಿಕೋತ್ಸವ ಮಹಾಸಮ್ಮೇಳನ ಒಂದು ಚಿಕ್ಕ ಭಾಗ ಮಾತ್ರ ಆಗಿದ್ದವು. ಈ ಲೇಖನದಲ್ಲಿ ಈ ಮಹಾ
ಸಮ್ಮೇಳನದ ಆಯೋಜಕರಲ್ಲಿ ನಾನು ಒಬ್ಬನಾಗಿ, ಪರದೆಯ ಹಿಂದಿನ ರೋಚಕ ಕಥೆಯನ್ನು, ಎದುರಿಸಿದ ನೂರಾರು ಸವಾಲು
ಗಳನ್ನು ನಿಮ್ಮೊೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅನಿವಾಸಿ ಕನ್ನಡಿಗರಲ್ಲಿ ಬಹುಸಂಖ್ಯಾತ ಜನರು ವಾಸವಾಗಿರುವ ದೇಶವೆಂದರೆ ಅಮೆರಿಕಾ ! ಆದರೆ ಕನ್ನಡ-ಕಲಿ ಸ್ಪರ್ಧೆಗಳ ಫಲಿತಾಂಶಗಳನ್ನು ನೋಡಿದರೆ. ಅರ್ಧಕ್ಕಿಿಂತಲೂ ಹೆಚ್ಚು ಬಹುಮಾನಗಳನ್ನು ಗೆದ್ದವರೆಂದರೆ ಸಿಂಗಪುರ್, ಆಸ್ಟ್ರೇಲಿಯಾ, ಕುವೈತ್, ದುಬೈ, ಯುರೋಪಿನಂಥ ಅಮೆರಿಕೇತರ ಕನ್ನಡಿಗರು.

ಇದು ತುಂಬಾ ಅಚ್ಚರಿ ಕೊಡುವ ವಿಷಯವಲ್ಲವೇ? ಜಗತ್ತಿನ ಯಾವುದೋ ಮೂಲೆಗಳಲ್ಲಿ ಅಡಗಿದ್ದ ಕನ್ನಡ ಪ್ರತಿಭಾ ರತ್ನಗಳನ್ನು ಹೊರಗೆ ತಂದ ಕೀರ್ತಿ ಈ ಸಮ್ಮೇಳನಕ್ಕೆ ದೊರೆಯುತ್ತದೆ. ನಾವಿಕ ಸಂಸ್ಥೆೆಯು ಒಂದು ವರ್ಷ ಅಮೆರಿಕದಲ್ಲಿಯೂ,
ಇನ್ನೊೊಂದು ವರ್ಷ ಕರ್ನಾಟಕದಲ್ಲಿಯೂ ಮಹಾ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿದೆ. ಮೊದಲ ಮೂರು
ನಾವಿಕೋತ್ಸವ ಸಮ್ಮೇಳನಗಳನ್ನು ಬೆಂಗಳೂರಿನಲ್ಲಿಯೂ ಮತ್ತು ನಾಲ್ಕನೇ ನಾವಿಕೋತ್ಸವ ಸಮ್ಮೇಳನವನ್ನು 2018ರಲ್ಲಿ ಮೈಸೂರಿನಲ್ಲಿ ನಡೆಸಲಾಯಿತು. ಈ ಬಾರಿ ನಾವಿಕೋತ್ಸವವನ್ನು ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಅಥವಾ ಬಳ್ಳಾರಿಯಂಥ ಯಾವುದಾದರೂ ಒಂದು ದೊಡ್ಡ ಊರಿನಲ್ಲಿ ಮಾಡಬೇಕು ಎನ್ನುವ ಪ್ರಸ್ತಾಪ ನಮ್ಮ ಮುಂದೆ ಇತ್ತು.

ಆದರೆ ಕಿನ್ಯಾ ದೇಶದ ಕನ್ನಡಿಗರ ಒತ್ತಾಯದ ಮೇರೆಗೆ ಆಫ್ರಿಕಾ ಖಂಡದಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವ ಕನ್ನಡ  ಸಮ್ಮೇಳನವನ್ನು ನಡೆಸಿ ದಾಖಲೆ ಸೃಷ್ಟಿಸುವ ಬಗ್ಗೆೆ ಎಲ್ಲಾ ರೀತಿಯ ತಯಾರಿಗಳು ಜನವರಿ ತಿಂಗಳಿನಲ್ಲಿಯೇ ನಡೆದಿದ್ದವು. ವಿಶ್ವದ ಬೇರೆ ಬೇರೆ ದೇಶಗಳಿಂದ ಆಫ್ರಿಕಾಕ್ಕೆೆ ಬರುವ ಜನರ ಸಲುವಾಗಿ ಮೂರು ದಿವಸ ನಾವಿಕೋತ್ಸವ ಮತ್ತು ನಾಲ್ಕು ದಿವಸಗಳ ಆಫ್ರಿಕನ್ ಸಫಾರಿ/ ಪ್ರವಾಸ ಹೀಗೆ ಒಂದು ವಾರದ ಪ್ಯಾಕೇಜನ್ನು ಸಿದ್ಧಗೊಳಿಸುವ ಬಗ್ಗೆ ಟ್ರಾವೆಲ್ ಕಂಪನಿಗಳ ಜೊತೆ ಮಾತುಕತೆ ಪ್ರಾರಂಭಿಸಿದ್ದೆವು. ಆದ್ರೆ ಯಾರೂ ನಿರೀಕ್ಷಿಸಿರದ, ಮಹಾಮಾರಿ ಕರೋನಾ ವೈರಸ್, ಲಾಕ್ ಡೌನ್, ವಿಮಾನ ಪ್ರಯಾಣಗಳ ರದ್ದು, ನಮ್ಮ ಯೋಜನೆಗಳನ್ನೆಲ್ಲ ತಲೆಕೆಳಗೆ ಮಾಡಿದವು.

ಜೂನ್ ತಿಂಗಳ ನಾವಿಕ ಕಮಿಟಿಯ ಮೀಟಿಂಗಿನಲ್ಲಿ ಈ ಬಾರಿಯ ನಾವಿಕೋತ್ಸವವನ್ನು ಅಂತರ್ಜಾಲದಲ್ಲಿ ಮಾಡಬೇಕು
ಎಂದು ತೀರ್ಮಾನಿಸಲಾಯಿತು ಹಾಗೂ ಈ ಸಮ್ಮೇಳನಕ್ಕೆ ಸಂಚಾಲಕರನ್ನಾಗಿ ಡಾಕ್ಟರ್ ಅಶೋಕ್ ಕಟ್ಟಿಮನಿ ಹೆಸರನ್ನು ಅಧ್ಯಕ್ಷ
ವಲ್ಲೀಶ ಶಾಸ್ತ್ರಿ ಸೂಚಿಸಿದಾಗ ಅದನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು. ಮೂರು ದಿವಸಗಳ ಕಾಲ ನಡೆಯುವ
ಈ ಮಹಾ ಸಮ್ಮೇಳನಕ್ಕೆ ಸಿದ್ಧತೆ ಮಾಡಲು ಸುಮಾರು 20 ವಿವಿಧ ಸಮಿತಿಗಳನ್ನು ರಚಿಸಲಾಯಿತು. ಅಲಮೇಲು ಅಯ್ಯಂಗಾರ್,
ಮಂಜೂರಾವ್, ಶ್ರೀಕಾಂತ್ ಪ್ರಧಾನ್ ಸಾಂಸ್ಕೃತಿಕ ಕಮಿಟಿಯ ಜವಾಬ್ದಾರಿಯನ್ನು, ಶಿವಕುಮಾರ್, ನಾಗರಾಜ್ ರೆಡ್ಡಿ ಮತ್ತು
ಪ್ರಕಾಶ್ ಬಾಣವಾರ ಜಾಹೀರಾತು, ಹಣಕಾಸು, ಪ್ರಾಯೋಜಕರನ್ನು ತರುವ ಜಾವಾಬ್ದಾರಿಯನ್ನು ಮತ್ತು ರಾಮರಾವ್ ಕನ್ನಡ –
ಕಲಿ ಸ್ಪರ್ಧೆಗಳ ಹೊಣೆಯನ್ನು ಹೊತ್ತರು. ಇಂಡಿಯಾ ಸಮಿತಿಯ ಶ್ರೀನಾಥ್ ವಸಿಷ್ಠ, ಬಿಂದು ಮಾಧವ್, ಸಮೀರ್ ಭಾರದ್ವಾಜ,
ಅನಿಲ್ ಭಾರದ್ವಾಜ್, ಅಶ್ವಿನಿ ಕೃಷ್ಣಮೂರ್ತಿ ಕರ್ನಾಟಕದಲ್ಲಿ ಸ್ಟುಡಿಯೋ ಹುಡುಕುವ, ಪ್ರಸಿದ್ಧ ಕಲಾವಿದರನ್ನು ಸಂಪರ್ಕಿಸುವ, ಅವರ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡುವ ಜವಾಬ್ದಾರಿ ಹೊತ್ತರು.

ನನ್ನನ್ನು ಮೀಡಿಯಾ ಮತ್ತು ಪಬ್ಲಿಸಿಟಿ ಸಮಿತಿಯ ಚೇರ್ಮನ್ ಮಾಡಿ ಅದರ ಸಂಪೂರ್ಣ ಜವಾಬ್ದಾರಿಯನ್ನು ಹೊರಿಸಲಾಯಿತು. ನಾವಿಕೋತ್ಸವ ಅಂದರೆ ಕೇವಲ ಅಮೆರಿಕವಲ್ಲ ಎಂಬ ಸಂದೇಶ ವನ್ನು ಸಾರಲು, ನಾನು ದುಬೈನಲ್ಲಿ
ವಾಸವಾಗಿರುವ ಬಾಲ ಪ್ರತಿಭೆ, ಅದ್ಭುತ ಹಾಡುಗಾರ 12 ವರ್ಷದ ಅಮೋಘವರ್ಷ ಭಟ್ಟನಿಂದ ಬಲು ಸುಂದರ ಪ್ರೋಮೊ
ವಿಡಿಯೋವನ್ನು ಮಾಡಿಸಿದೆನು. ಅದು ವಿವಿಧ ದೇಶಗಳಲ್ಲಿರುವ ಕನ್ನಡಿಗರಲ್ಲಿ ರೋಮಾಂಚನ ಸೃಷ್ಟಿಸಿ ತಾವು ಸಹ ಭಾಗವಹಿಸಬೇಕೆಂಬ ಆಸೆ ಹುಟ್ಟಿಸಿತು.

ತಮ್ಮ ಜೀವದ ಹಂಗನ್ನು ತೊರೆದು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತರಿಗೆ ಧನಸಹಾಯ
ಮಾಡುವುದು ಈ ಸಮ್ಮೇಳನದ ಉದ್ದೇಶವಾಗಿತ್ತು. ವಿಶ್ವದ ಅನೇಕ ದೇಶಗಳಲ್ಲಿ ನಡೆಸಿರುವ ಅನಿವಾಸಿ ಕನ್ನಡಿಗರೆಲ್ಲಾ ಇದರಲ್ಲಿ
ಉತ್ಸಾಹದಿಂದ ಭಾಗವಹಿಸುವಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ವಿಶ್ವದ ಎಲ್ಲಾ ಕನ್ನಡ ಸಂಘಗಳನ್ನು ಒಟ್ಟು ಸೇರಿಸಲು ಪುಷ್ಪಲತಾ ಮತ್ತು ಆರುಡಿ ರಾಜಗೋಪಾಲ್ ಹಗಲಿರುಳು ದುಡಿದರು. ವಿವಿಧ ದೇಶಗಳಲ್ಲಿ ವಿವಿಧ ಟೈಮ್
ಜೋನ್ ಇರುವುದರಿಂದ ಒಂದೇ ವಿಡಿಯೋ ಕಾನ್ಫರೆನ್‌ಸ್‌ ಮೀಟಿಂಗಿನಲ್ಲಿ ಎಲ್ಲರನ್ನೂ ತರುವುದು ಸಾಧ್ಯವೇ ಆಗಲಿಲ್ಲ.
ಹೀಗಾಗಿ ಪ್ರತ್ಯೇಕ ಮೀಟಿಂಗ್‌ಗಳನ್ನು ಮಾಡಿ ಅದೇ ವಿಷಯವನ್ನು ರಿಪೀಟ್ ಮಾಡಬೇಕಾಗಿ ಬಂದಿತು. ಕನ್ನಡ ಸಂಘಗಳಲ್ಲದೆ,
ದುಬೈನಲ್ಲಿರುವ ಬಸವ ಸಮಿತಿಯವರು ನಾವಿಕೋತ್ಸವದಲ್ಲಿ ತಮ್ಮ ಪುಟ್ಟ ಮಕ್ಕಳಿಂದ 12ನೇ ಶತಮಾನದ ಶರಣ-ಶರಣೆಯರ
ಬಗ್ಗೆ ಕಾರ್ಯಕ್ರಮ ನಡೆಸಿಕೊಡಲು ಅವಕಾಶ ಕೊಟ್ಟೆವು. ಜತೆಗೆ ಅಮೆರಿಕದಲ್ಲಿ ನೆಲೆಸಿರುವ ಉತ್ತರ – ಕರ್ನಾಟಕ ಮಂದಿಯನ್ನು
ಒಂದುಗೂಡಿಸಿ ಇತ್ತೀಚಿಗೆ ಸ್ಥಾಪಿತವಾದ ನೌಕಾ (NAUKA – North American Uttara Karnataka Association) ಸಂಸ್ಥೆಯು
ನಾವಿಕೋತ್ಸವದಲ್ಲಿ ಭಾಗವಹಿಸಲು ಸಹ ಅವಕಾಶ ನೀಡಲಾಯಿತು.

ಈ ಸಮ್ಮೇಳನಕ್ಕೆೆ ತೊಂದರೆಗಳು, ನೂರಾರು ಸಮಸ್ಯೆಗಳು ಸಮುದ್ರದ ಅಲೆಗಳಂತೆ ಒಂದರ ಮೇಲೊಂದು ಉಕ್ಕಿ ಬಂದವು.
ಕರ್ನಾಟಕ ಸಂಪೂರ್ಣ ಲಾಕ್‌ಡೌನ್ ಆಗಿ, ರೆಕಾರ್ಡಿಂಗ್‌ಗೆ ಯಾವುದೇ ಸ್ಟುಡಿಯೋಗಳು ಸಿಗಲಿಲ್ಲ. ಕೆಲವು ಕಲಾವಿದರು
ಕೋವಿಡ್- 19 ಪಾಸಿಟಿವ್ ಬಂದಿದ್ದರಿಂದ ಕೊನೆ ಕಾಲದಲ್ಲಿ ಅನಿವಾರ್ಯವಾಗಿ ಕೈ ಕೊಟ್ಟರು. ನಮ್ಮ ಮುಖ್ಯಮಂತ್ರಿಗಳಾದ
ಯಡಿಯೂರಪ್ಪನವರು ಅನಾರೋಗ್ಯದಿಂದಾಗಿ ಒಂದು ವಾರ ಅನುಪಸ್ಥಿತಿಯಲ್ಲಿ ಇದ್ದುದರಿಂದ ಅವರ ಉದ್ಘಾಟನಾ ಭಾಷಣ
ಸಿಗುವುದು ಸಹ ಸಂಶಯವಾಗಿತ್ತು. ದೇವರ ದಯೆಯಿಂದ ಅವರು ಗುಣಮುಖವಾಗಿ ಕೊನೆ ಗಳಿಗೆಯಲ್ಲಿ ನಾವಿಕೋತ್ಸವದಲ್ಲಿ
ಭಾಗವಹಿಸಿದರು.

ಪ್ರತಿ ವಾರವೂ ಒಂದೊಂದು ಹೊಸ ಪ್ರೋಮೊ ರಿಲೀಸ್ ಮಾಡುವುದು ನಮ್ಮ ಗುರಿಯಾಗಿತ್ತು. ನನ್ನ ವೈಯಕ್ತಿಕ ಬದುಕಿನಲ್ಲಿ
ನನ್ನ ದೊಡ್ಡಪ್ಪ ಚಿತ್ರಶೇಖರಪ್ಪ , ಅತ್ತೆ ಯಶೋದಮ್ಮ, ಅಕ್ಕ ಸುಮಾ ಮತ್ತು ಕರೋನಾದಿಂದ ನನ್ನ ಚಿಕ್ಕಪ್ಪ ಹನುಮಂತಪ್ಪ ಬೆಂಕಿ, ಮುಂತಾದವರನ್ನು ಕೇವಲ ನಾಲ್ಕು ವಾರಗಳಲ್ಲಿ ಕಳೆದುಕೊಂಡು, ಅವರ ಅಂತ್ಯಸಂಸ್ಕಾರಕ್ಕೂ ಸಹ ಹೋಗಲಾರದ ಅಸಹಾಯ ಸ್ಥಿತಿಯಿಂದ ಕಂಗಾಲಾಗಿ ಹೋದೆನು. ಜತೆಗೆ ಆಫೀಸ್‌ನಲ್ಲಿ ಅದೇ ವೀಕೆಂಡ್‌ನಲ್ಲಿ (ಶುಕ್ರವಾರ ಸಂಜೆಯಿಂದ ಸೋಮವಾರ ಮುಂಜಾನೆಯವರೆಗೆ) ಪ್ರೊಡಕ್ಷನ್ ಮೈಗ್ರೇಶನ್ ಬೇರೆ ಬಂದಿತ್ತು.

ಕಷ್ಟಗಳು ಬಂದರೆ ಸುರಿಮಳೆಯಂತೆ, ಚಂಡಮಾರುತದಂತೆ ಎಲ್ಲವೂ ಒಟ್ಟಿಗೆ ಬರುತ್ತವೆ ಎನ್ನುವ ಮಾತು ಸತ್ಯವೆನಿಸಿತು!.
ನನ್ನೆಲ್ಲಾ ವೈಯಕ್ತಿಕ ಸಮಸ್ಯೆಗಳನ್ನು ಬದಿಗಿಟ್ಟು ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ, ಪ್ರೇಮ ಸಾಹಿತಿ ಜಯಂತ್
ಕಾಯ್ಕಿಣಿ, ಜಾನಪದ ಗೀತೆಗಳ ಪ್ರಸಿದ್ಧ ಗಾಯಕಿ ಸವಿತಕ್ಕ, ಭಾವಗೀತೆಗಳ ಪ್ರವೀಣ್ ಮತ್ತು ಪ್ರದೀಪ್, ಸಿನಿಮಾ ಹಾಗೂ
ಕಿರುತೆರೆ ತಾರೆ ಯಮುನಾ ಶ್ರೀನಿಧಿ ಹೀಗೆ ಮುಂತಾದವರನ್ನು ಸಂಪರ್ಕಿಸಿ, ಜತೆಗೆ ವಿಶ್ವದ ವಿವಿಧ ಕನ್ನಡ ಸಂಘಗಳ ಅಧ್ಯಕ್ಷರಗಳ
ಸಂದೇಶಗಳೊಂದಿಗೆ ಪ್ರೋಮೊ ವಿಡಿಯೋಗಳನ್ನು ತಯಾರಿಸಿ ಬಿಡುಗಡೆ ಮಾಡಿಸಲು ಹಗಳಿರಿಲು ಶ್ರಮಿಸಿದೆನು. ಇದಲ್ಲದೇ
ದಿಗ್ವಿಜಯ ಟಿವಿಯಲ್ಲಿ, ವಿಶ್ವವಾಣಿ, ವಿಜಯ ಕರ್ನಾಟಕ ಮುಂತಾದ ದಿನಪತ್ರಿಕೆಗಳಲ್ಲಿ, ವಿವಿಧ ಸಾಮಾಜಿಕ ತಾಣಗಳಲ್ಲಿ,
ನಾವಿಕೋತ್ಸವದ ಕಾರ್ಯಕ್ರಮಗಳ ವಿವರಗಳನ್ನು ನಿರಂತರವಾಗಿ ಪ್ರಕಟಿಸಲಾಯಿತು.

ಗಿರೀಶ್ ನಿಂಬೇಕಾಯಿ ಅಧ್ಯಕ್ಷರಾಗಿದ್ದ ಬಿಜಿನೆಸ್ ಫೋರಮ್ ನಲ್ಲಿ ಅನೇಕ ಗಣ್ಯ ಉದ್ಯಮಿಗಳನ್ನು ಸಂದರ್ಶನ ಮಾಡುವ
ಅವಕಾಶ ಸಿಕ್ಕಿತ್ತು. ಸುಮಾರು ಆರು ಗಂಟೆಗಳ ಬಿಸಿನೆಸ್ ಫೋರಮ್ ನ ವಿಡಿಯೋಗಳನ್ನು ಕೇವಲ 45 ನಿಮಿಷಕ್ಕೆೆ ಇಳಿಸುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಎಲ್ಲಾ ಭಾಗಗಳಲ್ಲಿಯೂ ತುಂಬಾ ಮಹತ್ವದ ವಿಷಯಗಳು ತುಂಬಿದ್ದರಿಂದ, ಯಾವ ಭಾಗವನ್ನು ಇಟ್ಟು ಕೊಳ್ಳುವುದು ಮತ್ತು ಯಾವ ಭಾಗವನ್ನು ಕಟ್ ಮಾಡುವುದು ಎಂದು ತಲೆ ದೊಡ್ಡ ತಲೆನೋವಾಗಿತ್ತು. ಇದಕ್ಕಾಗಿ ನಾನು ರಾತ್ರಿಯೆಲ್ಲಾ ಕುಳಿತು ವಿಡಿಯೋ ಎಡಿಟ್ ಮಾಡಿದೆ.

ಎರಡು ನೂರಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಸ್ನೇಹ ಸಂಗಮ ಎಂಬ ಸ್ಮರಣ ಸಂಚಿಕೆ ತುಂಬಾ ಅದ್ಭುತವಾಗಿ
ಮೂಡಿಬಂದಿದೆ.( please visit https://navika.org/navikotsava/sneha&sangama/ for e-Souvenir ) ಇದರಲ್ಲಿ ಮನಮೋಹಕ ಕವಿತೆಗಳು ಮತ್ತು ಸ್ವಾರಸ್ಯಕರ ಲೇಖನಗಳ ಜತೆಗೆ ಕರ್ನಾಟಕದ ಕಥೆಗಾರರಿಗಾಗಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಬಹುಮಾನ ಪಡೆದ ಮೂರು ಕಥೆಗಳು ಇವೆ. ವಿಶ್ವವಾಣಿ ಪತ್ರಿಕೆಯು ಕಥಾಸ್ಪರ್ಧೆಯ ವಿವರಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರಿಂದ ಕರ್ನಾಟಕದಲ್ಲಿರುವ ಕತೆಗಾರರಿಂದ ಅಭೂತ ಪೂರ್ವ ಪ್ರತಿಕ್ರಿಯೆ ದೊರೆಯಿತು.

ಈ ಸಮ್ಮೇಳನಕ್ಕೆ ಟೆಕ್ನಾಲಜಿ ದೊಡ್ಡ ಸವಾಲಾಗಿತ್ತು. ನಾವು ಪ್ಲಾಟ್ಫಾರ್ಮ್ ಉಪಯೋಗಿಸಿ ಯಾವುದೇ ಬಪ್ಪರಿಂಗ್
ತೊಂದರೆಗಳಿಲ್ಲದೆ, ಹೈ ರೆಸೊಲ್ಯೂಷನಲ್ಲಿ ಜಗತ್ತಿನ ಮೂಲೆಮೂಲೆಗಳಿಗೂ ವಿಡಿಯೋ ಪ್ರಸಾರ ಮಾಡಿದೆವು. ಟೆಕ್ನಾಲಜಿ ವಿಭಾಗದಲ್ಲಿ ಸತತವಾಗಿ ದುಡಿದ ಶ್ರೀನಾಥ್ ವಶಿಷ್ಠ,  ವಲ್ಲೀಶ ಶಾಸ್ತ್ರಿ, ತೇಜಸ್, ಮಂಜುನಾಥ್, ರಾಹುಲ್, ಅಜಿತ್ ಮುಂತಾದವರ ಶ್ರಮ ಅಪಾರ.

ನಾವಿಕ ಸಂಸ್ಥೆೆಯ ಮಾಜಿ ಅಧ್ಯಕ್ಷರಾದ ಡಾಕ್ಟರ್ ರೇಣುಕಾ ರಾಮಪ್ಪ ಮತ್ತು ಡಾಕ್ಟರ್ ಕೇಶವ ಬಾಬು ಮುಂತಾದವರ ಮಾರ್ಗ ದರ್ಶನದಲ್ಲಿ ವೈದ್ಯರಿಗೆ ಒಂದು ಸಲಾಂ ಕಾರ್ಯಕ್ರಮದಲ್ಲಿ ಕೋವಿಡ್ ವಿರುದ್ಧ ಹೋರಾಡಿದ ಅನಿವಾಸಿ ಕನ್ನಡಿಗವೈದ್ಯರನ್ನು ಗುರುತಿಸಿ, ಗೌರವಿಸಲಾಯಿತು. ನಮ್ಮ ಕರ್ನಾಟಕದ ರಾಯಚೂರಿನ ಓದುಗರೊಬ್ಬರು, ನಾವಿಕ ಬದಲು ನೀವಿಕ ಹೆಚ್ಚು ಸೂಕ್ತವೆಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಪ್ರಕಾರ, ಕರ್ನಾಟಕದಲ್ಲಿರುವ ಜನರೇ ಕನ್ನಡವನ್ನು ಮರೆತು ಇಂಗ್ಲೀಷ್
ಭಾಷೆಯ ವ್ಯಾಮೋಹದಲ್ಲಿ ಬೀಳುತ್ತಿರುವಾಗ, ಅನಿವಾಸಿ ಕನ್ನಡಿಗರೇ ನಿಜವಾದ, ‘ನೀವಿಕ’ರು ಅಂದ್ರೆೆ ನೀವೇ ವಿಶ್ವ ಕನ್ನಡಿಗರು.
ನಾವಿಕೋತ್ಸವದಲ್ಲಿ ಶ್ರೀಸುಧಾ ಮೂರ್ತಿ ಮತ್ತು ಅದ್ಭುತ ಬರಹಗಾರ, ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಹೇಳಿದ ಹಾಗೆ
ನಮ್ಮ ಕನ್ನಡ ಭಾಷೆ, ಸಂಸ್ಕೃತಿಗೆ ಸಾವಿಲ್ಲ. ಅದು ಕರ್ನಾಟಕದಲ್ಲಿ ಕುಂದಿದರೂ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಅರಳುತ್ತದೆ. ದಿನದ 24 ಗಂಟೆಯೂ ಕ್ರೈಂ, ರೇಪ್, ಸೆಕ್ಸು, ಡ್ರಗ್‌ಸ್‌, ರಾಜಕೀಯ ಹಗರಣ, ಹೀಗೆ ಬರೀ ನೆಗೆಟಿವ್ ನ್ಯೂಸ್ ತೋರಿಸುವ ನಮ್ಮ
ಕನ್ನಡ ಟಿವಿ ಚಾನೆಲ್‌ಗಳು (ಚಂದನ ವಾಹಿನಿ ಹೊರತು ಪಡಿಸಿ) ನಾವಿಕೋತ್ಸವದಂಥ ಸಕಾರಾತ್ಮಕ ಹಾಗೂ ಜನರ ಮನಸ್ಸು ಗಳಲ್ಲಿ ಪಾಸಿಟಿವ್ ಎನರ್ಜಿ ತುಂಬುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ನಮ್ಮ ಸಮಾಜಕ್ಕೆ ಬಹಳಷ್ಟು ಉಪಕಾರ ವಾಗುತ್ತದೆ, ಅಲ್ಲವೇ?