Friday, 20th September 2024

ಕನ್ನಡ ಬ್ರಾಹ್ಮಣ, ಇಂಗ್ಲೀಷ್ ಶೂದ್ರ

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್, ಬರಹಗಾರ ಶಿಕ್ಷಕ

1965ರಲ್ಲಿ ಅನಂತಮೂರ್ತಿಯವರು ಇಂಗ್ಲಿಷ್ ಬ್ರಾಹ್ಮಣ, ಕನ್ನಡ ಶೂದ್ರ ಎಂಬ ದೀರ್ಘ ಲೇಖನದಲ್ಲಿ ನಮ್ಮ ಮೂಳೆ ಇಲ್ಲದ ಕನ್ನಡ, ರಕ್ತವಿಲ್ಲದ ಇಂಗ್ಲಿಷನ್ನು ಕಂಡು ನಾಚಿಕೆಯಾಗುತ್ತದೆ ಎಂದಿದ್ದರು.

ಸುಮಾರು 54 ವರ್ಷಗಳ ಹಿಂದೆಯೇ ಸಾಮ್ರಾಜ್ಯಷಾಹೀ ಭಾಷೆಯೆದುರು ಕನ್ನಡದ ಉಳಿವಿನ ಅನಿವಾರ್ಯತೆ, ಅಗತ್ಯತೆ, ಆವಶ್ಯ ಕತೆಯ ಚಿಂತನೆಯನ್ನು ಮಾಡಿದ್ದ ಅವರು ಆಗ ಏನು ಹೇಳಿದ್ದರೋ ಅವೆಲ್ಲವೂ ಸರಿಹೊತ್ತಲ್ಲಿಯೂ ನಿಜವಾಗೇ ಇದೆ. ಕನ್ನಡ ಮಾತಾಡುತ್ತೇವೆ ಎಂಬುದೇ ಕೀಳಾಗಿ, ಅಥವಾ ಅದೇ ಒಂದು ದೊಡ್ಡ ಸಾಹಸವಾಗಿ, ಅಥವಾ ಅದೇ ಒಂದು ದೊಡ್ಡ ಹೆಮ್ಮೆಯಂತೆ ಕಾಣುವವರ ಜಗತ್ತಿನಲ್ಲಿ ಕನ್ನಡದ ಬಡತನದ ಅಸ್ಮಿತೆಯಿದೆ.

ಅನಂತಮೂರ್ತಿ ಹೇಳಿದ ಹಾಗೆ, ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದವರೆಂದರೆ ಈಗಲೂ ಹೆಬ್ಬೆಟ್ಟಿನ ಸಹಿ ಹಾಕುವ ನಮ್ಮ ಹಳ್ಳಿಗರು. ಸಾಹಿತ್ಯದ ಕೃತಿಗಳಲ್ಲಿ ಈ ಹಳ್ಳಿಗರು ಕಾಣುತ್ತಾರೆ. ಭಾವನಾತ್ಮಕವಾಗಿ ಕನ್ನಡದೊಂದಿಗೆ ಬಾಂಧವ್ಯವನ್ನು ಹೊಂದಿದವರೂ ಇವರೇ. ಆದರೆ ಯಕ್ಷಗಾನ, ಕೀರ್ತನೆ, ಜನಪದೀಯ ಕಲೆಗಳಿಗೆ ಜಾಗತೀ ಕರಣದ ಪ್ರಭಾವದಲ್ಲೂ ಯಾವ
ಸೋಂಕು ತಟ್ಟಿಲ್ಲ. ಇದೇ ಕನ್ನಡದ ನಿಜವಾದ ಅಂತಃಶಕ್ತಿ.

ಇಂಗ್ಲಿಷ್ ಭಾಷೆಯ ಮೂಲಕ ಹಿಗ್ಗಿದ ನಮ್ಮ ವಿಚಾರಗಳನ್ನು ಜಾನಪದ ಜೀವನಕ್ಕೆ ನಾವು ಒಯ್ಯುತ್ತಿಲ್ಲ. ಅನ್ಯಭಾಷೆಗಳಿಂದ ನಾವು ಪಡೆದದ್ದನ್ನು ನಮ್ಮ ಜಾನಪದಕ್ಕೆ ಒಯ್ದದ್ದೇ ಆದರೆ ನಿತ್ಯ ಬದುಕಿನಲ್ಲಿ ಅದು ಅನುಭವವಾಗಿ ಹೊಸರೂಪ ತಾಳಿ ತಿರುಗಿ ನಮಗೆ ಸಿಗುವುದು ಸಾಧ್ಯವಾಗುತ್ತದೆಂದು ಅನಂತಮೂರ್ತಿ ಹೇಳುತ್ತಾರೆ. ನಮ್ಮೊಳಗಿನ ನ್ಯೂನತೆಗಳನ್ನು ನಿವಾರಿಸುವ ಮಾಧ್ಯಮ ವಾಗಿ ದೇಶಭಾಷೆ ನಮ್ಮನ್ನು ಐಕ್ಯಗೊಳಿಸಿದೆ.

ಯಾವಾಗ ಇಂಗ್ಲಿಷಿನ ಆಧಿಪತ್ಯಕ್ಕೆ ಶರಣಾದೆವೋ ಅಂದೇ ನಮ್ಮ ಸೃಷ್ಟಿಶೀಲತೆಗೆ ಆಘಾತ ವಾಗುತ್ತಾ ಬಂತು. ತನ್ನೊಳಗೇ
ಹುಟ್ಟುವ ಚಿಂತನೆಗಳು, ಭಾವಗಳು, ಆಲೋಚನೆಗಳು ಯಾವ ಬಾಹ್ಯ ಸ್ಪರ್ಶವಿಲ್ಲದೆ ಆಕಾಶಮುಖಿಯಾಗಿ ಚಿಗುರೊಡೆಯುತ್ತವೆ.
ಈ ಅಸಾಮಾನ್ಯಶಕ್ತಿ ವರ್ತಮಾನದಲ್ಲಿ ಶೂನ್ಯವನ್ನು ಕನ್ನಡದಲ್ಲಿ ಸೃಷ್ಟಿಸಿವೆ. ಅದಕ್ಕಾಗಿ ಕನ್ನಡದಲ್ಲಿ ಹಿಂದಿನ ತಲೆಮಾರಿನಂತೆ ಕಸುವುಳ್ಳ, ನೆಲದ ಗಾಢ ತಾದಾತ್ಮ್ಯದ ಚಿಂತನೆಗಳುಳ್ಳ ಕೃತಿಗಳು ಹುಟ್ಟುತ್ತಿಲ್ಲ.

ಇಂಗ್ಲಿಷಿನ ಪ್ರಭಾವ ಎಷ್ಟೆಂದರೆ, ನಮ್ಮಲ್ಲಿ ಅಂತರ್ಗತವಾಗಿ ಮಾನವೀಯವಾಗಿ ಉಳಿಯು ವಂಥ ಜೀವನಮೌಲ್ಯಗಳು ಬರಿದಾಗಿ ಶುಷ್ಕವಾದ ಬುದ್ಧಿ ಮತ್ತು ಮನಸ್ಸನ್ನು ಹೊಂದುವಂತೆ ನಮ್ಮ ಮಕ್ಕಳನ್ನು ಬೆಳೆಸುತ್ತಿದ್ದೇವೆ. ನಮ್ಮ ಹಿರಿಯರನ್ನು ನೆನಪಿಟ್ಟು ಕೊಂಡು ಸ್ಮರಿಸುವ ನಮ್ಮ ಔದಾರ್ಯವೂ ಹೀನವಾಗಿ ಕೃಶವಾಗಿ ಕೃತಕವಾಗಿ ಸೃಷ್ಟಿಸಿಕೊಂಡ ಆಮದು ಸರಕಂತಾಗಿದೆ.
ಇಂಗ್ಲಿಷನ್ನು ಸ್ವಲ್ಪವೂ ತಪ್ಪದೇ ಮಾತಾಡಬೇಕೆಂಬ ದೊಡ್ಡ ಎಚ್ಚರವನ್ನು ಕನ್ನಡದಲ್ಲಿ ಮಾತಾಡುವಾಗ ನಾವು ಹೊಂದಿರ
ಲಾರೆವು. ದೇಶಭಾಷೆಯ ಬಗೆಗಂತೂ ಈ ಎಚ್ಚರ ಬಹುದೂರದ ಮಾತು.

ಈ ಶುಶ್ರೂಷೆಯಿಂದಾಗಿ ದೇಶಭಾಷೆಗಳು ವಾತಗ್ರಸ್ತವಾಗಿದೆ. ಬಹುಪ್ರಯಾಸದ ನುಡಿಯಾಗಿ, ಕೇಳಲು ಯಾವ ಅಭೀಷ್ಟವೂ ಇಲ್ಲದ ಸ್ಥಿತಿಗೆ ಅವು ತಲುಪಿವೆ ಎಂದು ಅಂದು ಬರೆದದ್ದು ಇಂದಿಗೆ ಹೆಚ್ಚು ಪ್ರಸ್ತುತವೆನಿಸತೊಡಗಿದೆ. ಜನಪದೀಯ ಸ್ಪರ್ಶವಿಲ್ಲದೆ ಯಾವ ಭಾಷೆಯೂ ಸಿರಿಗೊಳ್ಳದೆ ಈ ಕಾಲಘಟ್ಟದಲ್ಲೂ ಕಾಡುವಾಸಿಯಾಗಿ ಬೌದ್ಧಿಕವಾದ ವಿಕಾಸಕ್ಕೆ ಒಳಗಾಗದೆ, ಜನಸಂಪರ್ಕ ದಿಂದಲೂ ಮರೆಯಾಗಿ, ತನ್ನೊಳಗೇ ತಾನು ಅನಾಥವಾಗಿ ಶೂದ್ರಾವಸ್ಥೆಗೆ ತಲುಪುತ್ತದೆ. ಮುಖ್ಯವಾಗಿ ಅನಂತಮೂರ್ತಿ ಹೇಳುವ ಮಾತುಗಳಲ್ಲಿ ಇಂಗ್ಲಿಷ್ ಬ್ರಾಹ್ಮಣ, ಕನ್ನಡ ಶೂದ್ರವೆಂಬ ಎರಡು ಅಮಾನುಷ ಜಾತಿಗಳು ಹುಟ್ಟಿ ಯಂತ್ರನಾಗರಿಕತೆಯ ಒತ್ತಡ ದಲ್ಲಿ ನಮ್ಮ ಮಾನವತ್ವವನ್ನು ರಕ್ಷಿಸುವಂಥ ಯಾವ ನಮ್ಮ ಗತಕಾಲದ ನೆನಪೂ ನಮಗೆ ಉಳಿಯದೆ ಹೋಗುತ್ತದೆ.

ಇದಕ್ಕೆ ಪರಿಹಾರವೆಂದರೆ, ಇಂಗ್ಲಿಷನ್ನು ಕನ್ನಡದ ಜಗತ್ತಿನೊಳಗೆ ದಕ್ಕಿಸಿಕೊಳ್ಳುವುದು. ಯಾವುದೇ ಅಭಿವ್ಯಕ್ತಿಯಿದ್ದರೂ
ಕನ್ನಡದ ಮೂಲಕವೇ ಸಾಧ್ಯವಾಗಿಸುವುದು. ಇಂಗ್ಲಿಷನ್ನು ದಕ್ಕಿಸಿಕೊಂಡು ಹೊಸದನ್ನು ಕನ್ನಡದಲ್ಲಿ ಸೃಜಿಸಲು ಸಾಧ್ಯವಾಗಿಸಿ
ಕೊಳ್ಳುವುದು. ಇಂಗ್ಲಿಷ್ ಜಗತ್ತಿನ ಜ್ಞಾನವಾಹಿನಿಯೆಂಬುದು ನಿಸ್ಸಂದೇಹ. ಆ ಜ್ಞಾನವನ್ನು ಪಡೆಯುವ ಸಲುವಾಗಿ ಇಂಗ್ಲಿಷ್
ಮಾಧ್ಯಮ ಬೇಕೇ ಬೇಕು.

ಹಾಗೆ ಒದಗಿಬಂದ ಜ್ಞಾನವು ಕನ್ನಡದಲ್ಲಿ ಮರುಹುಟ್ಟು ಪಡೆಯಬೇಕು. ಆದರೆ, ಬಾಲ್ಯದ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಿ ದರೆ ಚಿಂತನೆಯ ಸಾಮರ್ಥ್ಯ ಕುಸಿಯುತ್ತದೆ. ಇಂಗ್ಲಿಷಿಗಿರುವ ದೊಡ್ಡ ಶಕ್ತಿಯೆಂದರೆ, ಅದು ಯಾವ ಭಾಷೆಯನ್ನೂ ನಾಶ ಮಾಡಿ ಬಿಡುತ್ತದೆ. ಇಂಗ್ಲಿಷನ್ನು ಕಲಿಯುವಾಗಲೂ, ಇಂಗ್ಲಿಷಿನಲ್ಲಿ ಕಲಿಯುವಾಗಲೂ ನಮ್ಮಭಾಷೆಯನ್ನು ಬೆಳಸುವ, ಅದಕ್ಕೆರವಾಗು ವಂತೆ ನಮ್ಮ ಚಿಕಿತ್ಸಕ ದೃಷ್ಟಿಯನ್ನು, ಬುದ್ಧಿಯನ್ನು ವಿಸ್ತರಿಸಿಕೊಳ್ಳುತ್ತಾ, ಯಾವುದನ್ನೂ ಬಿಡದೆ ನಮ್ಮ ಭಾಷೆಯ ಏಳ್ಗೆಗೆ ಬೇಕಾಗಿ ಆಲೋಚಿಸುತ್ತಾ ಶ್ರಮಿಸುತ್ತಿರಬೇಕು. ನಮ್ಮ ಅರಿವಿಗೆ ಅದು ದಕ್ಕುವಂತೆ ಬಗ್ಗಿಸಿಕೊಂಡು ಒಗ್ಗಿಸಿಕೊಳ್ಳ ಬೇಕು.

ಕನ್ನಡದಲ್ಲಿ ಓದುವುದಕ್ಕೂ, ಕನ್ನಡವನ್ನು ಓದುವುದಕ್ಕೂ ಇರುವ ಅಂತರ ಇದೇ. ದೇಶಭಾಷೆಗಳ ಮನಸ್ಸಿಗೆ ಅನ್ಯಭಾಷೆಯಲ್ಲಿ ಪಡೆಯುವ ಜ್ಞಾನವನ್ನು ಅಂತರಂಗದ ಭಾಷೆಗೆ ಎರವಾಗಿಸಿಕೊಳ್ಳುವ ಸಾಮರ್ಥ್ಯವಿದೆ. ಇಂಗ್ಲಿಷಿನಲ್ಲಿ ಮಾತಾಡುವಾಗಲೂ ಮನಸ್ಸು ಮಾತೃಭಾಷೆಗೆ ತರ್ಜುಮೆ ಮಾಡುತ್ತಿರುತ್ತದೆ.

ಮಾತೃಭಾಷೆಯ ಅನನ್ಯತೆಯಿದು. ಇಂಗ್ಲಿಷಿಗೂ ಅದರದ್ದೇ ಆದ ಜನಪದೀಯ ಸ್ಪರ್ಶವಿರುವ ಗ್ರಾಂಥಿಕವಲ್ಲದ ಇಂಗ್ಲಿಷ್ ಇದೆ.
ಇಂಗ್ಲಿಷಿನಲ್ಲಿ ಬರೆದ ಕವನಗಳನ್ನು ಬಹಿರಂಗವಾಗಿ ಅಭಿವ್ಯಕ್ತಿಸಲು ಇಂಗ್ಲಿಷ್ ಕವಿಗಳೇ ಅಂಜುವ ಕಾಲವೊಂದಿತ್ತು. ಇಂದು ಇಂಗ್ಲಿಷಿನಲ್ಲಿ ಬರೆದರೆ ಮಾತ್ರ ವಿಶ್ವಮಾನ್ಯತೆ ಸಿಗುತ್ತದೆ. ಇಂಗ್ಲಿಷಿಗಿದ್ದ ಆ ಅಂಜುವ ಕಾಲ ಅಥವಾ ದುಸ್ಥಿತಿ ಈಗ ಕನ್ನಡಕ್ಕೊದ ಗಿದೆ. ಇದಕ್ಕೆ ಕಾರಣ, ಕನ್ನಡಿಗರಾಗಿ ಕನ್ನಡವನ್ನು ನಾವೇ ಕೀಳಾಗಿ ನೋಡಿ, ಇಂಗ್ಲಿಷಿನ ಹುಚ್ಚು ಹೆಚ್ಚಾಗಿ ಅದನ್ನೇ ನಿತ್ಯಜೀವನಕ್ಕೆ ಬಳಸಿದುದರ ಪರಿಣಾಮದಿಂದ.

ಬಳಸಿದರಲ್ಲವೇ ಭಾಷೆ ಯೊಂದು ಬೆಳೆಯುವುದು, ತನ್ಮೂಲಕ ಉಳಿಯುವುದು! ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದ ಓದಿದವರು ಅನಂತರದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಯಶಸ್ಸನ್ನು ಕಂಡ ಪ್ರಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್, ವಿದ್ವಾಂಸರಾದ ಕೆ.ಎಸ್.ನಾರಾಯಣ ಆಚಾರ್ಯ, ಬನ್ನಂಜೆ, ಇನೋಸಿಸ್ ಸುಧಾಮೂರ್ತಿ, ಶತಾವಧಾನಿ ಆರ್. ಗಣೇಶ್, ಅನೇಕ ವಿದ್ವಾಂಸರು, ಬರಹಗಾರರು, ಪತ್ರಿಕಾ ಸಂಪಾದಕರು, ಚಿಂತಕರು, ಸಾಹಿತಿಗಳು, ಪ್ರಾಧ್ಯಾಪಕರು, ಉಪನ್ಯಾಸಕರುಗಳಿzರೆ. ಇವರೆ ಕನ್ನಡವನ್ನು ಓದಲು, ಬರೆಯಲು ಸ್ಪಷ್ಟವಾಗಿ ಬಲ್ಲರು.

ಒಂದು ಭಾಷೆಯಲ್ಲಿ ಪಡೆಯುವ ಪ್ರಭುತ್ತ್ವದಿಂದ ಮತ್ತೊಂದು ಭಾಷೆಯಲ್ಲಿ ನೈಪುಣ್ಯವನ್ನು ಗಳಿಸಬಹುದು. ಇಂಗ್ಲೆಂಡಿನ ಒಬ್ಬ ರಾಜಕೀಯ ಶಾಸ್ತ್ರಜ್ಞನಾಗಲೀ, ತತ್ತ್ವ ಶಾಸ್ತ್ರಜ್ಞನಾಗಲೀ, ಬ್ಲೇಕ್, ಲಾರೆನ್ಸ್, ವಡ್ ವರ್ತ್‌ನಲ್ಲಿ ಅಭಿವ್ಯಕ್ತವಾದ ಜನಾಂಗದ ವಿಶೇಷ ಪ್ರಜ್ಞೆಯನ್ನು ಗಣನೆಗೆ ತೆಗೆದುಕೊಳ್ಳದೆ ಹೊಸವಿಚಾರ ಮಾಡಲಾರ. ನಾವು ನಮ್ಮ ತತ್ತ್ವಜ್ಞಾನಿಗಳ, ಸಂತರ, ಚಿಂತಕರ, ದಾರ್ಶ ನಿಕರ, ಆಧುನಿಕ ಕನ್ನಡ ಸಾಹಿತ್ಯದ ದರ್ಶನದ ಪ್ರಭಾವವಿಲ್ಲದೆ ಇಂಗ್ಲಿಷಿನ ಹೊಸತನ್ನು ಸೃಷ್ಟಿಸುವ ಸಾಹಸಕ್ಕೆ ಕೈಹಾಕುತ್ತೇವೆ.

ಇದರಿಂದಾಗಿ ಕನ್ನಡದಲ್ಲಿ ಯಾವೊಂದು ಸೃಷ್ಟಿಶೀಲ ಕೃತಿಯೊಂದನ್ನು ರಚಿಸಲು ಸಾಧ್ಯವಾಗದೇ ಹೋಗುತ್ತಿದೆಯೆಂದು ಅನಿಸುತ್ತಿದೆಯೆಂದು ಅನಂತಮೂರ್ತಿ ಹೇಳುತ್ತಾರೆ. ತನ್ನ ಭಾಷೆಯ ಏನನ್ನೂ ಸೃಷ್ಟಿಸಲು ಸಾಧ್ಯವಾಗದೆ ಅನ್ಯಭಾಷೆಯಿಂದ ಎರವಲು ಪಡೆದ ಜ್ಞಾನದಿಂದ ಪ್ರತಿಭಾಶೀಲ ಕೃತಿಯೊಂದನ್ನು ಸೃಷ್ಟಿಸಲು ಸಾಧ್ಯವೆಂಬುದೇ ಕನ್ನಡದ ಮಟ್ಟಿಗೆ ದೊಡ್ಡ ಪ್ರಶ್ನೆ ಯಾಗಿದೆ. ಇದು ಕನ್ನಡದ ಸಮಸ್ಯೆ ಮಾತ್ರವಲ್ಲ, ಎಲ್ಲಾ ದೇಶಭಾಷೆಗಳ ಜ್ವಲಂತ ಸಮಸ್ಯೆ.

ಈ ಹಿನ್ನೆಲೆಯಲ್ಲಿ ಎಲ್ಲಾ ದೇಶಭಾಷೆಗಳು ಬ್ರಾಹ್ಮಣತ್ವವನ್ನು ಪಡೆಯಬೇಕಾಗಿದೆ. ಇಂಗ್ಲಿಷಿನ ಹಂಗಿನಿಂದ ಹೊರಬಂದು. ಅಭಿವೃದ್ಧಿ ಹೊಂದಿದ ದೊಡ್ಡದೊಡ್ಡ ರಾಷ್ಟ್ರಗಳಲ್ಲಿ ಆರಂಭದ ಕಲಿಕೆ ದೇಶಭಾಷಾ ಮಾಧ್ಯಮದಲ್ಲಿದೆ. ತನ್ನ ಭಾಷೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಸಂಸ್ಕೃತಿಯನ್ನು ಜತನವಾಗಿಟ್ಟುಕೊಳ್ಳುವ ಜವಾಬ್ದಾರಿಯಿಂದ. ಇಂಗ್ಲಿಷನ್ನು ಹೊರತುಪಡಿಸಿದ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂಬ ಭ್ರಮೆ ನಮ್ಮಲ್ಲಿದೆ. ಇದು ಸತ್ಯವೂ ಹೌದು.

ಆಧುನಿಕ ಮತ್ತು ವಿಶ್ವಪಾರಂಪರಿಕ ಲೌಕಿಕ ಜ್ಞಾನವನ್ನು ಇಂಗ್ಲಿಷೂ ಸೇರಿ ಜಗತ್ತಿನ ಇತರ ಭಾಷೆಗಳಿಂದ ಪಡೆಯಬೇಕೆಂಬುದು ಸತ್ಯ. ಹಾಗೆ ಸಂಸ್ಕೃತದಲ್ಲಿರುವ ಜ್ಞಾನನಿಧಿಯನ್ನು ಪಡೆಯಲು ವಿಶ್ವವೇ ಸಂಸ್ಕೃತದ ಮೊರೆಹೋಗ ಬೇಕಾದುದೂ ಅಷ್ಟೇ ಸತ್ಯ. ಆದ್ದರಿಂದ ನಮ್ಮೊಳಗಿನ ಸೃಜನಶೀಲತೆಯನ್ನು ಪ್ರತಿಭಾವಂತ ಗೊಳಿಸಲು ಕನ್ನಡವೂ ಸೇರಿದಂತೆ ಸಂಸ್ಕೃತವನ್ನೂ ನಾವು ಬೋಧಿಸಬೇಕು. ಕನ್ನಡ ಮಾತ್ರ ಬಲ್ಲವರು ಶೂದ್ರರೆಂಬ ಭಾವವೂ, ಇಂಗ್ಲಿಷೊಂದೇ ಅನ್ನಕೊಡುವ ಭಾಷೆಯೆಂಬ ಮೇಲರಿಮೆ ಯೂ ತೊಲಗಬೇಕು. ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ವಾಹಕವಾಗಿ ಕನ್ನಡವು ನಮ್ಮ ಬದುಕನ್ನು ಜೀವಂತಗೊಳಿಸಿ ಅರ್ಥ ಪೂರ್ಣವಾಗಿಸುತ್ತದೆಂಬ ಅರಿವನ್ನು ಬೆಳೆಸಿ ಜಾಗೃತಗೊಳಿಸಬೇಕಿದೆ.

ಸಾಹಿತ್ಯದ ಅಭಿರುಚಿ ಬದುಕನ್ನು ಢಾಳಾಗಿ ಅನುಭವಿಸುವುದಕ್ಕೆ ಕಲಿಸುತ್ತದೆ ಮಾತ್ರವಲ್ಲ ಸಂಸ್ಕರಿಸುತ್ತದೆ. ಎಲ್ಲ ಅನುಭವ ವನ್ನೂ ದಕ್ಕಿಸಿಕೊಳ್ಳುವ ತಾಕತ್ತನ್ನು ನೀಡುತ್ತದೆ. ಕಲ್ಪನಾಲೋಕವನ್ನು ಅನನ್ಯಗೊಳಿಸುತ್ತದೆ. ಭಾವಲೋಕ ವನ್ನು ಶುದ್ಧ ಗೊಳಿಸುತ್ತದೆ. ಎಲ್ಲ ಬಗೆಯ ಚಿಂತನೆಗಳನ್ನು ಸ್ವೀಕರಿಸುವಂತೆ ಮಾಡುತ್ತದೆ. ಸಮೂಹವೊಂದು ಸ್ವೀಕರಿಸುವ ಸಂವೇದನೆಯ ಮನಸ್ಸನ್ನು ಬೆಳೆಸುತ್ತದೆ. ಈ ಸಂವೇದನೆಯೆಂಬುದು ವಿಸ್ತಾರವಾದ ಮನುಷ್ಯ ಪ್ರಪಂಚದ ಅನನ್ಯತೆಯ ಮುಖಗಳನ್ನು ಪರಿಚಯಿಸುತ್ತದೆ. ಪುಸ್ತಕ ಲೋಕದ ಸಾಂಗತ್ಯವನ್ನು ಬೆಳೆಸುತ್ತದೆ.

ಇವೆಲ್ಲವೂ ಆಗೋದು ಮನೆಯ ವಾತಾವರಣ ಹುಟ್ಟಿಸುವ ಸನ್ನಿವೇಶ ಗಳಿಂದ. ಮನೆಯೇ ಮೊದಲ ಪಾಠಶಾಲೆ ಎನ್ನುವುದು ಈ ಕಾರಣದಿಂದ. ಮನೆಯಲ್ಲಿದ್ದವರ ಮಾತು, ವರ್ತನೆ, ಅಭಿವ್ಯಕ್ತಿ ಸರಿಯಾಗಿರುವುದರ ಜೊತೆಯಲ್ಲಿ ಸಹಜತೆಗೆ ಪ್ರಾಮುಖ್ಯವನ್ನು ನೀಡಬೇಕು. ಪ್ರತಿ ಮನೆಯೂ ದಿನಪತ್ರಿಕೆ ಗಳನ್ನು, ವಿಶೇಷಾಂಕಗಳನ್ನು, ಸಾಹಿತ್ಯದ ಪುಸ್ತಕಗಳನ್ನು ತರುವಂತಾದರೆ ಮಕ್ಕಳ ಅಭಿವ್ಯಕ್ತಿಯ ವಿಕಾಸಕ್ಕೆ ಅಂತ ಇರುವ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಈಗಂತೂ ಪ್ರತಿ ದಿನ ಮತ್ತು ವೃತ್ತಪತ್ರಿಕೆಗಳು ಮಕ್ಕಳ ಪ್ರತಿಭೆಗೆ ಅವಕಾಶ ನೀಡುತ್ತಿದೆ. ಸಂಗೀತದ, ನಾಟ್ಯ ಪ್ರಾಕಾರದ ಡಿವಿಡಿ ಗಳನ್ನು ತಂದುಕೊಟ್ಟರೆ ಮನರಂಜನೆಯ ಜೊತೆಗೆ ಉತ್ತಮ ಹವ್ಯಾಸಗಳನ್ನು ಮಕ್ಕಳಲ್ಲಿ ಬೆಳೆಸಬಹುದು. ಸಾವಿರ  ರುಪಾಯಿ ಗಳನ್ನು ಮೊಬೈಲಿಗೆ, ಶೂಗೆ, ಬಟ್ಟೆಗೆ, ಜಂಕ್ ತಿಂಡಿ ತಿನಿಸುಗಳಿಗೆ ಮತ್ತು ಆರೋಗ್ಯ ಕೆಡಿಸುವಂಥ ದ್ದನ್ನು ತಿಂದು ಮಜಾ ಮಾಡೋಕೆ ಅಂತ ಹಣವನ್ನು ವ್ಯಯಿಸುವ ಬದಲು ಇಂಥವುಗಳಿಗೆ ಹಣ ವ್ಯಯಿಸುವುದೊಳಿತು.

ಪ್ರತಿ ಮಕ್ಕಳು ತಮ್ಮ ಹುಟ್ಟುಹಬ್ಬಕ್ಕೆ ಕನಿಷ್ಠ ಅಂದರೂ ಒಂದು ಕನ್ನಡದ ಪುಸ್ತಕವನ್ನು ಕೊಂಡು ಓದಿದರೆ ಕನ್ನಡದ ಏಳ್ಗೆಗೆ ಶ್ರಮಿಸಿದಂತೆ. ಒಂದು ಭಾಷೆಯನ್ನು ಜೀವಂತವಾಗಿ ಉಳಿಸಿಕೊಳ್ಳುವು ದರ ಆ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿದೆ. ಭಾಷೆಯನ್ನು ಸಾಯಲು ಬಿಟ್ಟು ಸಾಹಿತ್ಯದ ವಿಕಾಸವೆಂಬುದು ವಾಸ್ತವ ಮತ್ತು ಅನುಭವವೇ ಇಲ್ಲದ ಪ್ರಪಂಚದಲ್ಲಿ ಕನಸಿನ ವಿನ್ಯಾಸಗಳನ್ನು ಕಲ್ಪಿಸಿಕೊಂಡಂತೆ. ಮಕ್ಕಳಲ್ಲಿ ಭಾಷೆಯ ಪ್ರಭುತ್ವವನ್ನು ಮನೆಯಿಂದಲೇ ಸರಿಯಾಗಿ ರೂಢಿಗೊಳಿಸಿದರೆ ಶಾಲೆಯಲ್ಲಿ ಅದು ವಿಸ್ತೃತರೂಪವನ್ನು ಪಡೆದುಕೊಳ್ಳುತ್ತದೆ.

ಮುಂದೆ ಅದು ಸೃಜನಶೀಲವಾಗಿ ಮೈದುಂಬಿಕೊಳ್ಳುತ್ತದೆ. ಹಿರಿಯರು ಬೆಳೆಸಿ ಉಳಿಸಿದ ಶ್ರೀಮಂತವಾದ ಕನ್ನಡಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ ಬಾಳಿಸುವಂತಾಗಲು ಅದರ ಸಂಸ್ಕಾರವನ್ನು ನಮ್ಮ ಕನ್ನಡದ ಮಕ್ಕಳಿಗೆ ಅವರ ಬಾಲ್ಯದ ಶ್ರೀಮಂತವಾಗಿ ಎರೆಯಬೇಕಾಗಿದೆ. ಅಧ್ಯಾಪಕರಾಗಿ, ಎ ಅಧ್ಯಾಪಕರಿಗೂ ಒಳತೋಟಿಯಲ್ಲಿ ಅನಿಸಿ ಅನ್ವಯಿಸಿ ಬರೆದ ಅನಂತಮೂರ್ತಿಯವರ ಈ ಮಾತು ಬಹು ಮಹತ್ವದ್ದು, ಗಂಭೀರವಾದದ್ದು: ಮೂಲಗ್ರಂಥವನ್ನು ಓದುವಷ್ಟು ಇಂಗ್ಲಿಷ್ ಭಾಷೆಯ ವ್ಯಾಕರಣ ಇತ್ಯಾದಿ ಗಳನ್ನು ವಿದ್ಯಾರ್ಥಿಗಳಿಗೆ ಕಲಿಸೋಣ.

ಆದರೆ ಅವರು ಇಂಗ್ಲಿಷ್ ಸಾಹಿತ್ಯವನ್ನು ಓದಿ ಪಡೆದ ಅನುಭವವನ್ನು ತಮ್ಮ ಭಾಷೆಯಲ್ಲಿಯೇ ವ್ಯಕ್ತಪಡಿಸಲು ಅವಕಾಶ ಕಲ್ಪಿಸೋಣ. ಪರೀಕ್ಷೆಯಲ್ಲಿ ಅವರ ಇಂಗ್ಲಿಷ್ ಭಾಷೆಯನ್ನು ಅಳೆಯುವುದು ನಮ್ಮ ಗುರಿಯಾದರೆ ವ್ಯಾಕರಣ, ವಾಕ್ಯರಚನೆಯ ಪ್ರಶ್ನೆಗಳನ್ನು ಕೇಳೋಣ. ಅಥವಾ ಅವರ ಸಾಹಿತ್ಯಾನುಭವವನ್ನು, ಸಂವೇದನಾ ಶಕ್ತಿಯನ್ನು ಅಭಿರುಚಿಯನ್ನು ಪರೀಕ್ಷಿಸುವುದು ನಮ್ಮ ಗುರಿಯಾದರೆ ತಮ್ಮ ಅನುಭವವನ್ನು ಸಹಜವಾಗಿ ವ್ಯಕ್ತಪಡಿಸಲು ಸಾಧ್ಯವಾದ ಭಾಷೆಯಲ್ಲಿಯೇ ಅವರಿಗೆ ಬರೆಯಲು ಬಿಡೋಣ. ಆದರೆ ನಾವು ಈಗ ಪರೀಕ್ಷೆಯಲ್ಲಿ ಅವರ ಇಂಗ್ಲಿಷ್ ಭಾಷಾಜ್ಞಾನವನ್ನು ಪರೀಕ್ಷಿಸದೆ, ಅವರ ಸಾಹಿತ್ಯಾನುಭವವನ್ನೂ ತೂಗದೆ ನೂರರಲ್ಲಿ ಎಂಬತ್ತು ಜನರನ್ನು ಇಂಗ್ಲಿಷಿನಲ್ಲಿ ಫೇಲ್ ಮಾಡುತ್ತಿದ್ದೇವೆ. (ಈಗ ಇಷ್ಟು ಪ್ರಮಾಣದಲ್ಲಿ ಫೇಲ್ ಮಾಡ ಲಾಗುತ್ತಿಲ್ಲ ಎಂಬ ಸಮಾಧಾನವಿದೆ)

ಇದರ ಪರಿಣಾಮ: ನಮ್ಮ ವಿದ್ಯಾರ್ಥಿಗಳು ಷೇಕ್ಸ್‌ಪಿಯರನ ಪರಮ ಶತ್ರುಗಳೋ ಅಥವಾ ಷೇಕ್ಸ್ ಪಿಯರಿನ ಬಗ್ಗೆ ನೋಟ್ಸ್
ಬರೆದವನೊಬ್ಬನ ಮಿತ್ರರೊ ಅಥವಾ ಪಾಸಾಗಲಾರದ ತಾವು ಅಪ್ರಯೋಜಕರೆನ್ನುವ ಹತಮತಿಗಳು ಆಗುತ್ತಿದ್ದಾರೆ. ಅಂದರೆ,
ಗ್ರಹಿಕೆಗೆ ಮೂಲಭಾಷೆ, ಅಭಿವ್ಯಕ್ತಿಗೆ ನಮ್ಮ ಭಾಷೆ ಎಂಬ ಸೂಕ್ತವಾದ ಮಾರ್ಗ ಇವರದ್ದು. ಕೊಡುಕೊಳ್ಳುವಿಕೆಯು ಭಾಷಾ ಭಿವೃದ್ಧಿಯ ಯತ್ನದಲ್ಲಿ ತುಂಬಾ ಪ್ರಯೋಜನಕಾರಿ. ಬೆಳೆಯುತ್ತಿರುವ ಭಾಷೆಗೆ ಮೃದುಹಿತವನ್ನು ಇದು ನೀಡುತ್ತದೆ. ಆಗ ಕನ್ನಡದ ಮುಂದೆ ಇಂಗ್ಲಿಷನ್ನು ಶೂದ್ರವಾಗಿ ದಕ್ಕಿಸಿಕೊಳ್ಳಬಹುದು.

ಇಂಗ್ಲಿಷಿನ ಪ್ರಭಾವದಿಂದಾಗಿ ಕನ್ನಡವು ಇಂದು ಅನುಭವಿಸಿರುತ್ತಿರುವ ಅಸಡ್ಡೆ, ಅವಮಾನ, ತಿರಸ್ಕಾರ, ನಿರ್ಲಕ್ಷ್ಯವನ್ನು ಇಂಗ್ಲಿಷ್ ಕೂಡ ಲ್ಯಾಟಿನ್ ಭಾಷೆಯಿಂದ ಅನುಭವಿಸಿತ್ತು. ಆಗೆ ಷೇಕ್ಸ್ ಪಿಯರ್‌ನಂಥವರು ತಾವು ಬರೆದುದನ್ನು ಮುಚ್ಚಿಟ್ಟು ಕೊಳ್ಳುತ್ತಿದ್ದರಂತೆ. ಅಂಥದ್ದರಲ್ಲಿ ಕೇವಲ ಕನ್ನಡಿಗರು ಮಾತ್ರ ಮಾತಾಡುವ ಕನ್ನಡಕ್ಕೆ ಆಧುನಿಕತೆಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು, ಶಕ್ತಿಯನ್ನು ಕನ್ನಡಿಗರು ಕೊಡಬೇಕೇ ವಿನಾ ಅನ್ಯತ್ರ ಮಾರ್ಗವಿಲ್ಲ. ಇಂಗ್ಲಿಷನ್ನೊಳಗೊಂಡಂತೆ ಅದರಲ್ಲಿರುವ ಜ್ಞಾನವನ್ನು ಓದುವಂತೆ ಸಾಧ್ಯವಾಗಿಸಿದ ದೊಡ್ಡಸ್ಥಿಕೆಯನ್ನು ತುಂಬಿದವರು ಇಂಗ್ಲಿಷನ್ನು ಚೆನ್ನಾಗಿಬಲ್ಲ ನಮ್ಮ ಹಿರಿಕಿರಿಯರು.

I is a boy ತಪ್ಪು, I am a boy ಸರಿಯೆಂಬಷ್ಟು ಇಂಗ್ಲಿಷನ್ನು ಹಳ್ಳಿಯವನೊಬ್ಬ ಕಲಿತಿದ್ದಾನೆಂದರೆ ಅದು ಅವರು ಕನ್ನಡದಲ್ಲಿ ಹೊಂದಿರುವ ಪ್ರಭುತ್ವದಿಂದ ಸಾಧ್ಯವಾದದ್ದು. ಚಿಂತಿಸುವ ಹಾಗೇ ತನ್ನೊಳಗೆ ಅರಗಿಸಿಕೊಳ್ಳುವ ಶಕ್ತಿ ಭಾಷೆಗೆ ಬರುವುದು ಹೀಗೆಯೇ. ಒಂದು ಭಾಷೆಯಲ್ಲಿ ನಾವು ಪಡೆಯುವ ಸಾಮಾನ್ಯ ಅರ್ಹತೆಯು ಉಳಿದ ಭಾಷಿಕ ರಚನೆಯನ್ನು ಅರಗಿಸಿಕೊಳ್ಳಲು ಪ್ರೇರಕವಾಗಿರುತ್ತದೆ. ಭಾಷೆಯ ಜೀವಂತಿಕೆಯ ಗಟ್ಟಿ ಬೇರಿರುವುದು ಆಡುಭಾಷೆಯಲ್ಲಿ.

ಶಿಷ್ಟ ಸಾಹಿತ್ಯಕ್ಕೆ ಆಡುಭಾಷೆಯೇ ಮೂಲ. ಇಂಗ್ಲಿಷಿನ eನರಾಶಿಯನ್ನು ಕನ್ನಡದ ತೆಕ್ಕೆಗೆ ತಂದುಕೊಳ್ಳುವ ಮಾರ್ಗವೇ ಕನ್ನಡದ ಸಿರಿಯನ್ನು ಸಂಪನ್ನಗೊಳಿಸುತ್ತದೆ. ಬಲ್ಲವರು ಮಾರ್ಗದರ್ಶನ ನೀಡಿದಾಗ ಕನ್ನಡದ ಮಕ್ಕಳು ಅವುಗಳನ್ನು ಓದಿ ಅರಗಿಸಿ ಕೊಂಡು ಕನ್ನಡತನಕ್ಕೆ ಹೊಂದಿಸಿ ಉದ್ದೀಪಿಸ ಬಲ್ಲರು. ಕಾನ್ವೆಂಟ್ ಶಾಲೆಗಳಲ್ಲಿಯಂತೆ ಇಂಗ್ಲಿಷನ್ನು ಮಾತಾಡುವುದರಿಂದ ಯಾವ ಲಾಭವಿಲ್ಲ. ಇಂಗ್ಲಿಷಿನ ಜ್ಞಾನನಿಧಿಯನ್ನು ಕನ್ನಡದ ಕಣ್ಣಿನಲ್ಲಿ ಓದುವುದರಿಂದ ದ್ವಿಭಾಷೆಯಲ್ಲೂ ಪರಿಣಿತಿಯನ್ನು ಗಳಿಸಬಹುದು. ಮಾತೃಭಾಷೆಗಿರುವ ಅನನ್ಯವಾದ ಶಕ್ತಿಯಿದು. ಕೌಶಲ ಮತ್ತು ಸಾಮರ್ಥ್ಯಾಧಾರಿತ ಕಲಿಕೆ ಸಾಧ್ಯವಾಗುವುದು ಹೀಗೆ.

ಇಬ್ಬರು ಕನ್ನಡಿಗರ ಸಂಭಾಷಣೆಯಲ್ಲಿ ಭಾಷಿಕ ರಚನೆಯ ವಿನ್ಯಾಸದ ಜೊತೆಯಲ್ಲಿ ಸಿಗುವ ವಿಷಯಜ್ಞಾನ ಕೃತಕ ಇಂಗ್ಲಿಷಿನ ಸಂಭಾಷಣೆಯಲ್ಲಿ ಸಿಗುವುದಿಲ್ಲ. ಕೇವಲ ವಸ್ತುನಿಷ್ಠ ವಿಚಾರಗಳು ಪರಸ್ಪರ ವಿನಿಮಯವಾಗುವುದೇ ಹೊರತು ಜೀವನಿಷ್ಠ ಮೌಲ್ಯಗಳಲ್ಲ. ಇದು ಬೌದ್ಧಿಕ ವಿಸ್ತಾರವನ್ನು, ಭಾವನಾತ್ಮಕ ಸಂಬಂಧ ವನ್ನು ಗಟ್ಟಿಯಾಗಿ ಬಂಧಿಸದ ಸಾಧ್ಯತೆಯಿರುತ್ತದೆ. ಹೊರಗಿನ ಶುದ್ಧಹವೆಯನ್ನು ಪಡೆದೇ ಸಸ್ಯಗಳು ಆಕಾಶಮುಖೀಯಾಗಿ ಬೆಳೆಯುತ್ತದೆ, ಬೆಳೆಯಬೇಕು. ಎಲ್ಲ ಚಿಂತನೆಗಳು ಅಭಿವ್ಯಕ್ತಿ ಯಾಗುವುದು ಮಾತೃಭಾಷೆಯ. ಇಂಗ್ಲಿಷ್ ಕೂಡ ಇದಕ್ಕೆ ಹೊರತಾಗಿಲ್ಲ.

ಇದು ಪ್ರತಿಭಾಷೆಯ ಮೂಲಭೂತವಾದ ಬದ್ಧತೆ, ಅನಿವಾರ್ಯತೆಯೂ ಹೌದು. ಕನ್ನಡಕ್ಕೆ ಸದ್ಯ ಒದಗ ಬೇಕಾದುದು ಇಂಥ ಅನಿವಾರ್ಯತೆ ಮತ್ತು ಬದ್ಧತೆ. ಕನ್ನಡದ ಆರ್ಷೇಯ ಜ್ಞಾನಸಂಪತ್ತು ಉಳಿದು ಬಂದಿರುವುದು ಪೂರ್ವಿಕರಲ್ಲಿದ್ದ ಇಂಥ
ಅನಿವಾರ್ಯತೆ ಮತ್ತು ಬದ್ಧತೆಯಿಂದಾಗಿ. ಇವು ಕನ್ನಡವನ್ನು ಸದ್ಯ ಮತ್ತು ಶಾಶ್ವತವಾದ ನೆಲೆಯಲ್ಲಿ ಉಳಿಸುತ್ತಿದೆ.

ಮಾತೃಭಾಷೆಯ ಶಿಕ್ಷಣದ ತಳಹದಿಯಿಲ್ಲದೆ ಇಂಗ್ಲಿಷಿನಲ್ಲಿ ಓದಲು ಸಾಧ್ಯವಾಗುವುದಾದರೂ ‘ತನ್ನದೆಂಬ ಸ್ವಂತಿಕೆ’ ಯ ಕಲ್ಪನೆಯ ಕಲಿಕಾಂಶಗಳಿಗೆ ಹೊರತಾಗಿ ಬಿಡುವ ಸಂಭವವೇ ಹೆಚ್ಚು. ಆಗ ಬೋಧನೆ ಯಾಂತ್ರಿಕವಾಗಿಯೂ, ಕಲಿಕೆ ಅಪೂರ್ಣ ವಾಗಿ, ಪರಿಸ್ಥಿತಿ ಹಿಂಸೆಯಾಗಿ ಪರಿವರ್ತಿತಗೊಳ್ಳುತ್ತದೆ. ಮಕ್ಕಳನ್ನು ನಿಯಂತ್ರಿಸಬೇಕೆಂಬ ಬಲವಂತದ ಪ್ರಯತ್ನದಲ್ಲಿ ಶಿಕ್ಷಕರು ಕೊನೆಗೂ ಮೊರೆಹೋಗುವುದು ಕನ್ನಡದ ಪದಗಳಿಗೇ!

ಹೊಸಭಾಷೆಯ ಕಲಿಕೆಯ ಮೊದಲು ಮಾತೃಭಾಷೆಯನ್ನು ವ್ಯವಸ್ಥಿತವಾಗಿ ಕಲಿತಿರಬೇಕು. ಆಗ ಇಂಗ್ಲಿಷ್ ಕಲಿಕೆ ಗುಣಮಟ್ಟ ವನ್ನು ಕಾಯ್ದುಕೊಳ್ಳುತ್ತದೆ. ಇಲ್ಲವಾದಲ್ಲಿ ‘ರೆಡಿಮೇಡ್ ಉಡುಪುಗಳ’ ಹಾಗೆ ಸಿದ್ಧ ವಾಕ್ಯಗಳಂತೆ ಪುನರುಕ್ತಿಯಾಗುತ್ತಲೇ ಇರುತ್ತದೆ. ಆಂಗ್ಲ ಮಾಧ್ಯಮಕ್ಕೆ ಸೇರಿಸಿ ಮಕ್ಕಳನ್ನು ಅತೀ ಬೇಗ ವಿದ್ಯಾವಂತರಾಗಿಸುವುದರ ಪೋಷಕರ ಆಸಕ್ತಿವಿದೆಯೇ ವಿನಾ ಪ್ರತಿಭಾವಂತರನ್ನಾಗಿಸಲು ಪ್ರಯತ್ನಿಸುವುದಿಲ್ಲ. ಕೊನೆಪಕ್ಷ ಚಿಂತಿಸುವುದೂ ಇಲ್ಲ.

ಅಂಕಗಳಿಕೆಯ ಎಲ್ಲ ಕಸರತ್ತುಗಳು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಪ್ರತಿಭಾವಂತರಿಲ್ಲದ ಕೇವಲ ವಿದ್ಯಾವಂತರು, ಬುದ್ಧಿವಂತರಿರುವ ಸಮಾಜ ನಿರ್ಮಾಣ ವಾದೀತು! ಈಗಲೇ ಆಗುತ್ತಿದೆ. ಕನಸುಗಳು, ಅನುಭವಗಳು ಇಲ್ಲದ ಸಮಾಜಕ್ಕೆ ಯಾವ ಭವಿಷ್ಯವೂ ಇರಲಾರದು. ಇಂಗ್ಲಿಷಿನ ದಟ್ಟ ಪ್ರಭಾವದಲ್ಲೂ ನಮ್ಮ ಮಕ್ಕಳು ಪಡೆಯುವ ಜ್ಞಾನ ಮತ್ತು ವಿಷಯಾನುಭವಗಳು ಬದುಕಿನ ಅಂತರಂಗಕ್ಕೆ ತಲುಪಬೇಕಾದರೆ ಕನ್ನಡ ಬ್ರಾಹ್ಮಣವಾಗಿ ಶೂದ್ರ ಇಂಗ್ಲಿಷಿನಲ್ಲಿಯೂ ಪರಿಣಿತಿಯನ್ನು ಪಡೆಯುತ್ತ ಆಲದಮರದಂತೆ ಕನ್ನಡ ಬೃಹದಾಕಾರವಾಗಿ ಬೆಳೆಯಬೇಕು. ಹಾಗಾದಾಗ ಮಾತ್ರ ಕನ್ನಡದಲ್ಲಿ ಸಾರ್ವಕಾಲಿಕ ಚಿಂತನೆಗಳು ಸೃಜಿಸಬಹುದು.

ಹೊರಗಿನ ಗೊಬ್ಬರವನ್ನು ಹಾಕಿ ಬೆಳೆಸಿದ ಇಂಗ್ಲಿಷಿನ ಪ್ರಭುತ್ವದಿಂದ ಕನ್ನಡದ ಗಿಡವು ಕ್ಷೀಣಿಸುವುದನ್ನು ತಪ್ಪಿಸಲು ಇಂಗ್ಲಿಷನ್ನು ಚೆನ್ನಾಗಿ ಬೋಧಿಸುವ ಕನ್ನಡ ಮಾಧ್ಯಮ ಶಾಲೆಗಳು ಎಲ್ಲಾ ದೃಷ್ಟಿಯಿಂದಲೂ ಹಿತವಾದುದ್ದಾಗಿದೆ. ಮನುಷ್ಯ  ಸಂವೇದನೆ ಯೆಂಬುದು ದೇಶ – ಕಾಲ – ಭಾಷೆಯನ್ನು ಮೀರಿರುವಂಥದ್ದು. ಜೀವನ ಮೌಲ್ಯಗಳನ್ನು ನಾವು ಪಡೆಯುವ ಶಿಕ್ಷಣದಿಂದಲೇ ಗಳಿಸಬೇಕೆಂಬುದು ಸತ್ಯ ವಾದರೂ ಮನೆ, ಸಮಾಜ, ಶಾಲೆಯ ಪಾತ್ರವೂ ಮುಖ್ಯವಾಗಿಯೇ ಇದೆ.

ಮಾತೃಭಾಷೆಯ ಮಹತ್ವದ ಅರಿವಾಗುವುದು ಕಲಿಯುವ ಸಂದರ್ಭ ಸನ್ನಿವೇಶಗಳಲ್ಲಿ. ಆಂಗ್ಲಮಾಧ್ಯಮದ ಶಾಲೆಗಳೇ ಹೆಚ್ಚುತ್ತಿರುವ ಕನ್ನಡದ ನೆಲದಲ್ಲಿ ಕನ್ನಡದಂಥ ಮಾತೃಭಾಷೆಯೊಂದು ಹುಟ್ಟಿಸಬಹುದಾದ ಸಂವೇದನೆಯನ್ನು ಕನ್ನಡದ ಮಕ್ಕಳು ಬಾಲ್ಯದಿಂದಲೇ ಕಳೆದುಕೊಳ್ಳುವುದನ್ನು ತಪ್ಪಿಸಬೇಕು. ಒಂದು ಜೀವಂತಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿಗೆ ನಾವೆಲ್ಲ ಹೊಣೆಗಾರರಾಗಿದ್ದೇವೆ. ಉನ್ನತ ವಿದ್ಯಾಭ್ಯಾಸದಲ್ಲಿ ವಿಜ್ಞಾನ, ಗಣಿತವೇ ಮುಂತಾದ ವಿಷಯಗಳನ್ನು ಆಂಗ್ಲ ಮಾಧ್ಯಮದ ಕಲಿಯಬೇಕೆಂಬ ವಾದವಿದ್ದರೂ ಅದು ನಿಜವೇ ಇದ್ದರೂ- ಈ ಜವಾಬ್ದಾರಿಯನ್ನು ಹೊರಲಾರದ ಹೇಡಿತನವಾಗಕೂಡದು.

ಸಾಹಸವಿಲ್ಲದೆ, ಶ್ರಮವಿಲ್ಲದೆ ಯಾವ ಹೊಸ ಸೃಷ್ಟಿಯೂ ಸಾಧ್ಯವಿಲ್ಲ. ಇದು ಬರೀ ಕನ್ನಡದ ಮಮತೆಯ ಪ್ರಶ್ನೆಯಲ್ಲ. ನಮ್ಮ ಭಾಷೆಗಳು ಎಷ್ಟೊಂದು ಹೀನ ಅವಸ್ಥೆಯಲ್ಲಿದ್ದಿರಲಿ – ನಮ್ಮ ಪರಿಸ್ಥಿತಿಯನ್ನು ಸಂಪೂರ್ಣ ಅರಿತುಕೊಂಡು, ಸದಾ ವಿಮರ್ಶಾತ್ಮಕ ದೃಷ್ಟಿ ತಾಳಿದವರಾಗಿ ನಾವು ಈ ಸಾಹಸಕ್ಕೆ ಕೈಹಾಕಬೇಕು. ಅಂದರೆ  ಇಂಗ್ಲಿಷಿಗೆ ಆತುಕೊಂಡಿರುವುದನ್ನು ಬಿಟ್ಟುಬಿಡಬೇಕು ಎನ್ನುತ್ತಾರೆ ಅನಂತಮೂರ್ತಿ. ಕನ್ನಡ ಬ್ರಾಹ್ಮಣವಾಗಬೇಕೆಂದರೆ ಇಂಗ್ಲಿಷ್ ಶೂದ್ರವಾಗಲೇಬೇಕು.

ಕೊನೆಯ ಮಾತು: ಇವತ್ತಿಗೆ ನವೆಂಬರ್ ಮುಗಿಯಿತು. ಅಲ್ಲಿಗೆ ನಮ್ಮ ಕನ್ನಡ ಪ್ರೀತಿ, ಅದರುಳಿವಿನ ಅಬ್ಬರದ ಮಾತೂ ಮುಗಿ ಯಿತು. ಮತ್ತೆ ಮುಂದಿನ ನವೆಂಬರ ಇವುಗಳೆಲ್ಲ ಜೀವಂತಿಕೆ ಪಡೆದು ಅಬ್ಬರಿಸುವುದು. ನವೆಂಬರಲ್ಲಿ ಮಾತ್ರ ಕನ್ನಡದ ಮೇಲೆ ಪ್ರೀತಿ ತೋರುವ – ಉಳಿವಿನ ಚಿಂತನೆ ಮಾಡುವ ನಮಗೆ ಕನ್ನಡ ದಿನಪತ್ರಿಕೆ, ಪುಸ್ತಕಗಳನ್ನು ಕೊಂಡು ಓದುವ ಸಾಮಾನ್ಯ ಔದಾರ್ಯವನ್ನು ಕನ್ನಡಾಂಬೆ ಕರುಣಿಸಲೆಂದು ಪ್ರಾರ್ಥಿಸೋಣ.