Monday, 20th May 2024

ಪ್ರಜೆಗಳ ರಾಜ್ಯದಲ್ಲಿ ಐಎಎಸ್ -ಐಪಿಎಸ್‌ಗಳೇ ಶಾಶ್ವತ ಪ್ರಭುಗಳು !

ನೂರೆಂಟು ವಿಶ್ವ

vbhat@me.com

ಬೀದರ, ಕಲಬುರ್ಗಿ ಮತ್ತು ವಿಜಯಪುರಗಳ ಡಿಸಿ ಬಂಗಲೆಗಳು ಒಂದು ಕಾಲಕ್ಕೆ ಅಂದಿನ ರಾಜ-ಮಹಾರಾಜರ, ಬ್ರಿಟಿಷ್ ಆಡಳಿತಗಾರರ ನಿವಾಸಗಳಾಗಿದ್ದವು. ಈಗ ಆ ನಿವಾಸದಲ್ಲಿ ಐಎಎಸ್ ಅಧಿಕಾರಿಗಳು ವಾಸವಾಗಿzರೆ. ಮುಖ್ಯಮಂತ್ರಿ ಮತ್ತು ಸಚಿವರಿಗೂ ಅಂಥ ಬಂಗ್ಲೆಗಳಿಲ್ಲ. ರಾಜ್ಯಪಾಲರು ವಾಸಿಸುವ ರಾಜಭವನವನ್ನೂ ನಾಚಿಸುವ, ಅದಕ್ಕಿಂತ ವಿಶಾಲವಾದ, ಸುಂದರ ವಾದ ಜಿಲ್ಲಾಧಿಕಾರಿಗಳ ನಿವಾಸಗಳಿವೆ.

ಸಾರ್ವಜನಿಕ ನಲ್ಲಿಗಳ ಮುಂದೆಯೂ ಎಲ್ಲಾ ಹೆಂಗಸರೂ ಸಭ್ಯ ರೀತಿಯಲ್ಲಿ, ಮರ್ಯಾದೆಯಿಂದ ವರ್ತಿಸಬೇಕು ಎಂದು ಎಲ್ಲರೂ ಬಯಸುತ್ತಾರೆ. ಹೀಗಿರುವಾಗ ಸರಕಾರದ ಉನ್ನತ ಹುದ್ದೆಯಲ್ಲಿರುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಂದ ಜನ ಎಂಥ ಉದಾತ್ತ ನಡೆ ನೀರಿಕ್ಷಿಸಬಹುದು ಎಂಬು ದನ್ನು ಅವರವರ ಊಹೆಗೆ ಬಿಡೋಣ.

ಆದರೆ ಕಳೆದ ಕೆಲವು ದಿನಗಳಿಂದ ರಾಜ್ಯದ ಮಹಿಳಾ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಬ್ಬರು ಸಾರ್ವಜನಿಕ ಚರ್ಚೆಯನ್ನು ಚ‘ರಂಡಿ’ ಮಟ್ಟಕ್ಕೆ ಇಳಿಸಿರುವುದನ್ನು ನೋಡಿ, ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ. ಇಷ್ಟಕ್ಕೂ ಈ ಇಬ್ಬರೂ ಮಹಿಳಾಮಣಿಗಳು ಬೀದಿಗೆ ಬಿದ್ದವರಂತೆ ಜಗಳವಾಡು ತ್ತಿರು ವುದು ಸಾರ್ವಜನಿಕ ಹಿತಾಸಕ್ತಿ ವಿಚಾರಕ್ಕಲ್ಲ. ತಮ್ಮ ತಮ್ಮ ವೈಯಕ್ತಿಕ ಹೊಲಸು, ಕೊಚ್ಚೆಯನ್ನು ಸಾರ್ವಜನಿಕವಾಗಿ (washing their dirty linen in public) ತೊಳೆದುಕೊಳ್ಳುತ್ತಿದ್ದಾರಷ್ಟೇ.

ಅವರ ತಕರಾರುಗಳೇನೇ ಇದ್ದರೂ ವೈಯಕ್ತಿಕ ನೆಲೆಯಲ್ಲಿ ಪರಿಹರಿಸಿಕೊಳ್ಳುವುದನ್ನು ಬಿಟ್ಟು, ಮುಖ್ಯಮಂತ್ರಿ ಮತ್ತು ಕೋರ್ಟ್ ತನಕ ತೆಗೆದುಕೊಂಡು ಹೋಗಿದ್ದು ದುರ್ದೈವ. ತನ್ನ ಗಂಡನನ್ನು ಐಎಎಸ್ ಅಧಿಕಾರಿಣಿ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ ಎಂದು ಐಪಿಎಸ್ ಅಧಿಕಾರಿಣಿ ದೂರು ವುದೇ ಅಸಹ್ಯಕರ. ಬುಟ್ಟಿಗೆ ಬಿದ್ದವರೂ ಐಎಎಸ್ ಅಽಕಾರಿ ಎಂಬುದು ಇನ್ನೂ ಅಸಹ್ಯಕರ. ಮನೆಯ ನಾಲ್ಕು ಗೋಡೆ ಮಧ್ಯೆ ಇತ್ಯರ್ಥಪಡಿಸಿ ಕೊಳ್ಳಬಹುದಾದ, ಇತ್ಯರ್ಥಪಡಿಸಿಕೊಳ್ಳಬೇಕಾದ ವಿಷಯವನ್ನು ವಿಧಾನಸೌಧದ ಮೆಟ್ಟಿಲುಗಳ ತನಕ ತೆಗೆದುಕೊಂಡು ಹೋಗಿದ್ದು ಹೇಸಿಗೆ ಹುಟ್ಟಿಸುವಂಥದ್ದು. ತಮ್ಮ ಸಮಸ್ಯೆಯನ್ನೇ ಬಗೆಹರಿಸಿಕೊಳ್ಳದವರು ಜನರ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೋ ಎಂದು ಜನಸಾಮಾನ್ಯನಿಗೆ ಅನಿಸಿದ್ದರೆ ಅಚ್ಚರಿಯೇನೂ ಇಲ್ಲ.

ಇಡೀ ಪ್ರಹಸನ ನಮ್ಮ ಅಧಿಕಾರಶಾಹಿಯ ಚುಕ್ಕಾಣಿ ಹಿಡಿದವರ ಕೊಳಕು ಮತ್ತು ವ್ಯವಸ್ಥೆಯ ಹೂರಣವನ್ನು ನಿವಾಳಿಸಿ ಹಾಕಿದೆ. ಇವರ ಜಗಳವನ್ನು ನೋಡಿ ಕುದ್ದು ಹೋದ ಸರಕಾರ, ಬೇರೆ ದಾರಿ ಕಾಣದೇ, ಹಠಾತ್ ಇಬ್ಬರನ್ನೂ ಅವರವರ ಸ್ಥಾನದಿಂದ ವರ್ಗ ಮಾಡಿ, ಯಾವುದೇ ಸ್ಥಾನ ಕೊಡದೇ
ಸುಮ್ಮನೆ ಕುಳ್ಳಿರಿಸಿದೆ. ಇವರ ಜಗಳ ಮುಖ್ಯಮಂತ್ರಿ ಅಥವಾ ಸರಕಾರಕ್ಕೆ ಅದೆಂಥ ಹೇವರಿಕೆ ಹುಟ್ಟಿಸಿರಬಹುದು ಎಂಬುದನ್ನು ಊಹಿಸಬಹುದು. ವೈಯಕ್ತಿಕ ಜಗಳವೇನೇ ಇರಲಿ, ಅದನ್ನು ಮೂವರು ಒಂದೆಡೆ ಕುಳಿತು ಇತ್ಯರ್ಥಪಡಿಸಿಕೊಳ್ಳಬಹುದಿತ್ತು. ಆ ಮೂವರು ಒಟ್ಟಿಗೆ ಕುಳಿತಿಲ್ಲ ಎಂದಿಲ್ಲ.

ಲೋಕಾಯುಕ್ತಕ್ಕೆ ಉತ್ತರ ಬರೆಯುವ ಸಂದರ್ಭ ದಲ್ಲಿ ಮೂವರೂ ಒಟ್ಟಿಗೆ ಕುಳಿತು ಒಕ್ಕಣೆ ಹಾಕಿದ್ದಾಗಿ ಆ ಪೈಕಿ ಒಬ್ಬರು ಹೇಳಿದ್ದಾರೆ. ಹೀಗಿರುವಾಗ ಈ ಭಿನ್ನಾಭಿಪ್ರಾಯವನ್ನೂ ಅದೇ ರೀತಿ ಬಗೆಹರಿಸಿಕೊಳ್ಳಬಹುದಿತ್ತು. ಅದುಸಮಂಜಸ ಮಾರ್ಗವೂ ಆಗಿತ್ತು. ಅದರ ಬದಲು ಸಾಮಾಜಿಕ ಜಾಲತಾಣ ವೆಂಬ ‘ಸಾರ್ವತ್ರಿಕ ಕೊಳಾಯಿ’ ಮುಂದೆ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿದ್ದು ನಮ್ಮ ಅಧಿಕಾರಶಾಹಿಯ ಅಂತಃಸತ್ವವನ್ನು ಗಾಳಿಗೆ ತೂರಿ, ಹರಾಜು ಹಾಕಿದೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಬಗ್ಗೆ ಜನ ಕೊಳಕಾಗಿ, ಲಘುವಾಗಿ ಮಾತಾಡುವಂತಾಗಿದೆ.

ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು (ಎಲ್ಲರೂ ಅಲ್ಲ) ನಮ್ಮ ಮಧ್ಯ ಹುಟ್ಟಿ ಬಂದವರಲ್ಲ, ಅವರು ಬೇರೆ ಲೋಕದಿಂದ ಅವತರಿಸಿ, ಇಳಿದು ಬಂದವರಂತೆ ವರ್ತಿಸುವು ದನ್ನು ನಾವೆ ನೋಡಿದ್ದೇವೆ. ಇವರು ಯಾರ ಅಂಕೆ- ಲಗಾಮಿಗೂ ಸಿಗುವವರಲ್ಲ. ಅವರ ಲೋಕವೇ ಬೇರೆ. ಅವರು ಸಾಮಾನ್ಯರಿಂದ ದೂರ. ಕೆಲವು ದಿನಗಳ ಹಿಂದೆ, ನಾನೊಬ್ಬ ಐಎಎಸ್ ಅಧಿಕಾರಿಯೊಬ್ಬರನ್ನು ಭೇಟಿ ಮಾಡಲು ಹೋಗಿದ್ದೆ. ಅವರ ಜತೆ ಮಾತಾ ಡುವಾಗ, ಅವರ ಪೆನ್ನಿನ ಮುಚ್ಚಳ ಅಚಾನಕ್ ಆಗಿ ಕೆಳಗೆ ಬಿತ್ತು. ತಮ್ಮ ಕಾಲ ಬುಡದಲ್ಲಿ ಬಿದ್ದ ಆ ಮುಚ್ಚಳವನ್ನು ಅವರು ಬಗ್ಗಿ ಎತ್ತಿಕೊಳ್ಳಬಹು ದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ.

ಬೆಲ್ ಮಾಡಿ, ತಮ್ಮ ಕೋಣೆಯ ಹೊರಗೆ ನಿಂತ ಸೇವಕನನ್ನು ಕರೆದರು. ಆತ ಒಂದು ಬೆಲ್‌ಗೆ ಬರಲಿಲ್ಲ. ಮೂರ್ನಾಲ್ಕು ಸಲ ಬೆಲ್ ಅದುಮಿದರು.
‘ಎಲ್ಲಿ ಹೋಗಿz ಈಡಿಯಟ?’ ಎಂದು ಅವನನ್ನು ಜರೆದರು. ‘ನಿಮಗೆ ಕಾಫಿ ತರಲು ಹೋಗಿದ್ದೇ ಸರ್’ ಎಂದ. ಆದರೂ ಅವರ ಕೋಪಾಗ್ನಿ ಶಮನ ಆಗಿರಲಿಲ್ಲ. ‘ಒಂದೇ ಬೆಲ್‌ಗೆ ಬರಬೇಕು ಅಂತ ಎಷ್ಟು ಸಲ ಹೇಳಿದ್ದೇನೆ ನಿನಗೆ’ ಎಂದು ಗದರಿದರು. ಆತ ಸುಮ್ಮನೆ ಗೋಣು ಹಾಕಿದ.

‘ಸಾರ್, ಏನು ಕರೆದಿದ್ದು?’ ಎಂದು ಕೇಳಿದಾಗ, ತಮ್ಮ ಕಾಲ ಕಡೆ ದೃಷ್ಟಿ ಬೀರಿ ಅದನ್ನು ಎತ್ತಿ ಕೊಡುವಂತೆ ಸಂe ಮಾಡಿದರು. ಅವರ ಆ ಸನ್ನೆಯಲ್ಲಿ ಅದೆಂಥ ಽಮಾಕು ಇತ್ತೆಂದರೆ, ತನ್ನ ಸೇವೆ ಮಾಡುವುದೇ ಆತನ ಬಾಳಿನ ಗುರಿ ಎಂಬಂತಿತ್ತು. ಆ ಬಡಪಾಯಿ ಸೇವಕ ಸಾಹೇಬ್ರ ಕಾಲ ಬುಡದಲ್ಲಿ ಬಿದ್ದಿದ್ದ ಪೆನ್ನಿನ ಮುಚ್ಚಳವನ್ನು ಎತ್ತಿಟ್ಟು ಹೋದ. ನನಗೆ ಆ ಐಎಎಸ್ ಅಧಿಕಾರಿ ಪೊಗರು-ಪೊಳಿಸ್ತು ನೋಡಿ ಮೈ ಉರಿದು ಹೋಯಿತು. ಅವರು ತಮ್ಮ ಸಿಬ್ಬಂದಿಯನ್ನು ಕಾಲ ಕಸಕ್ಕಿಂತ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದಾರೆನಿಸಿತು. ಎಲ್ಲರೂ ಇಂಥವರಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಲೇ, ಇಂಥ
ಐಎಎಸ್ ಅಧಿಕಾರಿಗಳ ಸಂತತಿ ಕಮ್ಮಿಯಿಲ್ಲ ಎಂಬುದನ್ನು ಸಹ ಮನಗಾಣಲೇಬೇಕಿದೆ.

ಮೊನ್ನೆ ನಡೆದ ವಿಧಾನಸಭಾ ಕಲಾಪದಲ್ಲಿ ಜೆಡಿಎಸ್ ಸದಸ್ಯ ಸಾ.ರಾ.ಮಹೇಶ್, ಐಎಎಸ್ – ಐಪಿಎಸ್ ಅಧಿಕಾರಿಗಳ ನಡೆವಳಿಕೆ, ಅವರ ದರ್ಬಾರು ಮತ್ತು ರುಬಾಬಿನ ಬಗ್ಗೆ ಮಾತಾಡಿದ್ದನ್ನು ನಾನು ಗಮನವಿಟ್ಟು ಕೇಳಿಸಿಕೊಂಡೆ. ಅದ್ಯಾಕೋ ಗೊತ್ತಿಲ್ಲ, ಅವರ ಮಾತು ಮರುದಿನ ಪತ್ರಿಕೆಗಳಲ್ಲಿ ಪ್ರಧಾನವಾಗಿ ವರದಿಯಾಗಲಿಲ್ಲ. ಆದರೆ ಮಹೇಶ್ ಮಾತ್ರ ವಸ್ತುಸ್ಥಿತಿಯನ್ನು ಢಾಳಾಗಿ ತೆರೆದಿಟ್ಟಿದ್ದರು. ಅವರಿಗೆ ಇನ್ನಷ್ಟು ಮಾತಾಡಲು ಸ್ಪೀಕರ್ ಅವಕಾಶ ಕೊಡಬೇಕಿತ್ತು. ಅವರೂ ಮಧ್ಯೆ ಪ್ರವೇಶಿಸಿ, ಮಹೇಶ್ ಮಾತಿನ ಓಘಕ್ಕೆ ಕಡಿವಾಣ ಹಾಕಿದರು. ಆದರೆ ಅಷ್ಟರಲ್ಲಿ ಮಹೇಶ್ ಹೇಳಬೇಕಾದು ದನ್ನು ಹೇಳಿದ್ದರೆನ್ನಿ.

‘ನಾವು ರಾಜಕಾರಣಿಗಳು ಶಾಸಕ ಮತ್ತು ಸಚಿವರಾಗಿ ಹೆಚ್ಚೆಂದರೆ ಐದು-ಹತ್ತು ವರ್ಷ ಅಧಿಕಾರದಲ್ಲಿರುತ್ತೇವೆ. ಆದರೆ ಐಎಎಸ್ -ಐಪಿಎಸ್ ಅಧಿಕಾರಿಗಳು ಮೂವತ್ತು- ಮೂವತ್ತೈದು ವರ್ಷ ಅಧಿಕಾರ ಚಲಾಯಿಸುತ್ತಾರೆ. ಅವರಿಗೆ ಕೈಗೆ-ಕಾಲಿಗೆ ಆಳು-ಕಾಳು. ಅವರಿಗೆ, ಅವರ ಹೆಂಡತಿ-ಮಕ್ಕಳಿಗೆ ಓಡಾಡಲು ಸರಕಾರಿ ಕಾರು. ಒಬ್ಬೊಬ್ಬ ಅಧಿಕಾರಿ ಎರಡು-ಮೂರು ವಾಹನಗಳನ್ನು ಬಳಸುತ್ತಾನೆ. ಸರಕಾರಿ ಬಂಗಲೆ ಮತ್ತು ಸೇವೆಗೆ ಸಿಬ್ಬಂದಿ ಎಂದೂ ಕೊರತೆ ಆಗುವುದಿಲ್ಲ. ಒಮ್ಮೆ ಐಎಎಸ್ ಸೇವೆಗೆ ಸೇರಿದರೆ, ಸಾಯುವ ತನಕವೂ ಇವರ ಜೀವನ ಸರಕಾರದ ಖರ್ಚಿನಲ್ಲಿ, ಜನರ
ತೆರಿಗೆ ಹಣದಲ್ಲಿ ನಡೆಯುತ್ತದೆ. ಇಷ್ಟಾದರೂ ಇವರು ಜನರ ಸೇವೆ ಮಾಡದೇ ತಮ್ಮ ಸೇವೆಗೆ ತಮ್ಮ ಅಧಿಕಾರವನ್ನು ಬಳಸಿಕೊಳ್ಳುತ್ತಾರೆ. ರಾಜಕಾರಣಿಗಳು ಹಣ ಮಾಡುತ್ತಾರೆ ಅಂತ ಜನ ಭಾವಿಸುತ್ತಾರೆ.’

‘ಆದರೆ ಒಬ್ಬೊಬ್ಬ ಐಎಎಸ್ – ಐಪಿಎಸ್ ಅಧಿಕಾರಿ ಮಾಡುವ ಹಣದ ಅಂದಾಜು ಊಹೆಗೂ ನಿಲುಕುವುದಿಲ್ಲ. ಆ ಪರಿ ಹಣ ಮಾಡುತ್ತಾರೆ. ಬೇರೆ ರಾಜ್ಯಗಳಿಂದ ಬರುವ ಅಧಿಕಾರಿಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಅಪಾರ ಆಸ್ತಿ-ಪಾಸ್ತಿ ಮಾಡಿರುವ ಬಗ್ಗೆ ಆರೋಪಗಳಿವೆ. ಇಲ್ಲಿನ ಹಣ ಲೂಟಿ
ಮಾಡಿ, ತಮ್ಮ ರಾಜ್ಯದಲ್ಲಿ ಅಸ್ತಿ ಮಾಡಿಕೊಳ್ಳುವ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಇವರನ್ನು ನಿಯಂತ್ರಿಸುವವರು ಯಾರೂ ಇಲ್ಲ. ಇವರು ಮಂತ್ರಿಗಳ ಮಾತನ್ನೂ ಕೇಳುವುದಿಲ್ಲ. ಆ ಪರಿಯ ಧೀಮಾಕು ಪ್ರದರ್ಶಿಸುತ್ತಾರೆ.

ಅನೇಕ ಸಚಿವರು ಐಎಎಸ್ ಅಧಿಕಾರಿಗಳ ಮುಂದೆ ಗೋಣು ಹಾಕುವುದನ್ನು ನೋಡಿದ್ದೇನೆ. ಇನ್ನು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಮಾತಂತೂ ದೂರವೇ ಉಳಿಯಿತು.’ ‘ನಾವು ಹೆಚ್ಚೆಂದರೆ ಐದು ವರ್ಷ ಅಧಿಕಾರ ಮಾಡಿ ಹೋದರೆ, ಇವರು ಯಾವತ್ತೂ ಅಧಿಕಾರದಲ್ಲಿರುತ್ತಾರೆ.
ಯಾವ ಪಕ್ಷ ಅಧಿಕಾರದಲ್ಲಿರಲಿ, ಯಾರೇ ಮುಖ್ಯಮಂತ್ರಿ ಆಗಲಿ, ಇವರ ಆಡಳಿತ, ದರಬಾರು ಅಬಾಧಿತ. ಇವರು ಆಡಿದ್ದೇ ಆಟ, ಮಾಡಿದ್ದೇ ನಿಯಮ. ಹೇಳುವವರು, ಕೇಳುವವರು ಯಾರೂ ಇಲ್ಲ. ಕನಿಷ್ಠ ನಮ್ಮನ್ನು ಮತದಾರ ಕೇಳುತ್ತಾನೆ. ಅವನ ಮುಂದೆ ನಿಂತು ನಾವು ಮತ ಪಡೆದು ಆರಿಸಿ ಬರಬೇಕು. ಇವರು ಯಾರಿಗೂ ಬಾಧ್ಯಸ್ಥರಲ್ಲ. ಜನರಿಗೂ ಅಲ್ಲ, ಸರಕಾರಕ್ಕೂ ಅಲ್ಲ.

ಈ ಅಧಿಕಾರಿಗಳು ಒಮ್ಮೆ ಸೇವೆಗೆ ಸೇರಿದರೆ, ಅವರಿಗೆ ಲಂಗು-ಲಗಾಮು ಯಾವುದೂ ಇಲ್ಲ. ಎಂಥ ಕೆಟ್ಟ ಹುzಗೆ ವರ್ಗ ಮಾಡಿದರೂ, ಅಲ್ಲಿ ಅವರಿಗೆ ಸೇವಕರು, ಮನೆ, ವಾಹನ, ಭತ್ಯೆ, ವೈದ್ಯಕೀಯ ಸೇವೆ, ಸಂಬಳಕ್ಕೆ ತತ್ವಾರ ಇಲ್ಲ. ಸೇವೆಯಿಂದ ನಿವೃತ್ತಿಯಾದ ಬಳಿಕ ಪಿಂಚಣಿ ಕಟ್ಟಿಟ್ಟ ಬುತ್ತಿ. ಒಮ್ಮೆ ಈ ಸೇವೆಗೆ ಸೇರಿದರೆ ಈ ಜೀವನ ಪಾವನ.’ ಮಹೇಶ್ ಹೇಳಿದ್ದರಲ್ಲಿ ಕೊಂಚವೂ ಉತ್ಪ್ರೇಕ್ಷೆ ಇಲ್ಲ. ಅವರು ಹೇಳಬೇಕಾದ ಯಾವ ಸಂಗತಿಯನ್ನೂ ಬಾಕಿ ಉಳಿಸಿರಲಿಲ್ಲ. ’ಊರ ಮೇಲೆ ಊರು ಹೋದರೂ, ಶಾನಭೋಗನಿಗೆ ಸಂಬಂಧವಿಲ್ಲ’ ಎಂಬುದು ಐಎಎಸ್ -ಐಪಿಎಸ್ ಅಧಿಕಾರಿಗಳ (ಎಲ್ಲರೂ ಅಲ್ಲ) ಧೋರಣೆ. ಈ ಅಧಿಕಾರಿಗಳನ್ನು ನಿಯಂತ್ರಿಸಲಾಗದ ಅನೇಕ ಸಚಿವರ ಪೀಕಲಾಟವನ್ನು ನಾನು ನೋಡಿದ್ದೇನೆ. ಹೆಚ್ಚೆಂದರೆ ಇಂಥ ಹಠಮಾರಿ, ತಿಕ್ಕಲು, ಜಗಳಗಂಟ, ಒಂಟು ಹಿಡಿತದ, ಹೇಳಿದ್ದನ್ನು ಕೇಳದ ಅಽಕಾರಿಗಳನ್ನು ಅಷ್ಟೇನೂ ಮಹತ್ವವಲ್ಲದ ಹುದ್ದೆಗೆ ಅಥವಾ ನೀರು-ನೆರಳು ಇಲ್ಲದ
ಊರುಗಳಿಗೆ ವರ್ಗ ಮಾಡಬಹುದು. ಅದನ್ನು ಬಿಟ್ಟು ಮುಖ್ಯಮಂತ್ರಿಯಾದರೂ ಏನು ಮಾಡಬಹುದು? ಉಹುಂ.. ಏನೂ ಇಲ್ಲ. ಅಂಥ ಊರುಗಳಿಗೆ ವರ್ಗ ಮಾಡಿದರೆ, ರಜೆ ಹಾಕಿ ಬೆಂಗಳೂರಿನಲ್ಲಿಯೇ ಉಳಿದು ಬಿಡುತ್ತಾರೆ. ಇ ಅಂದ್ರೆ ಕೆಎಟಿ (ಕರ್ನಾಟಕ ಅಡ್ಮಿನಿ ಸ್ಟ್ರೇಟಿವ್ ಟ್ರಿಬ್ಯೂನಲ್) ಗೆ ಹೋಗಿ ತಮ್ಮ ವರ್ಗಾವಣೆ ಯನ್ನು ರದ್ದುಪಡಿಸಿಕೊಂಡು ಬರುತ್ತಾರೆ.

ಮಹತ್ವವಲ್ಲದ ಹುದ್ದೆಯನ್ನು ತೋರಿಸುವ ಹೊರತಾಗಿ ಅವರ ವಿರುದ್ಧ ಯಾವ ಶಿಕ್ಷೆ ಅಥವಾ ಕ್ರಮವನ್ನೂ ತೆಗೆದುಕೊಳ್ಳುವಂತಿಲ್ಲ. ಮುಖ್ಯಮಂತ್ರಿ ಕೂಡ ಗರಿಷ್ಠ ಅವರನ್ನು ಅಮಾನತಿನಲ್ಲಿಡಬಹುದೇ ಹೊರತು ಸೇವೆಯಿಂದ ವಜಾ ಮಾಡುವಂತಿಲ್ಲ. ಅಷ್ಟರಮಟ್ಟಿಗೆ ಅವರ ಕುರ್ಚಿ-ಅಧಿಕಾರ
ಸುರಕ್ಷಿತ ಮತ್ತು ಜೀವನ ಭದ್ರ. ನಾನು ಕೆಲವು ವರ್ಷಗಳ ಹಿಂದೆ, ಉತ್ತರ ಕನ್ನಡದ ಜಿಲ್ಲಾಧಿಕಾರಿಯವರ ಆಹ್ವಾನದ ಮೇರೆಗೆ ಕಾರವಾರದಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ಬೆಳಗಿನ ಉಪಾಹಾರಕ್ಕೆ ಹೋಗಿದ್ದೆ.

ಅರಬ್ಬೀ ಸಮುದ್ರಕ್ಕೆ ಅಭಿಮುಖವಾಗಿ ಎತ್ತರದ ಗುಡ್ಡದ ಮೇಲಿರುವ ಜಿಲ್ಲಾಧಿಕಾರಿಯವರ ನಿವಾಸವನ್ನು ನೋಡಿ ನಾನು ಅಚ್ಚರಿಯಿಂದ ದಂಗಾಗಿ ಹೋಗಿದ್ದೆ. ಆ ಜಾಗವೇ ರಮಣೀಯ ಮತ್ತು ನಯನ ಮನೋಹರ. ಅಂಥ ಜಾಗದಲ್ಲಿ ಕಟ್ಟಿದ ಆ ನಿವಾಸದಲ್ಲಿ ಉಳಿಯಲು ನಿಜಕ್ಕೂ ಪುಣ್ಯ ಮಾಡಿರ ಬೇಕು. ನಮ್ಮ ಮುಖ್ಯಮಂತ್ರಿಗಳಿಗೂ ಆ ಭಾಗ್ಯ ಸಿಗಲಿಕ್ಕಿಲ್ಲ. ಆದರೆ ಆ ಜಿಯ ಡಿಸಿ ಸಾಹೇಬರು ಮಾತ್ರ ಮುಖ್ಯಮಂತ್ರಿ ನಿವಾಸಕ್ಕಿಂತ
ಸುಂದರವಾದ ಬಂಗಲೆಯಲ್ಲಿ ವಾಸಿಸುತ್ತಿದ್ದಾರಲ್ಲ ಎನಿಸಿತು!

ಅದಾದ ಬಳಿಕ ನಾನು ಏನಿಲ್ಲವೆಂದರೂ ಹತ್ತು ಜಿಲ್ಲಾಧಿಕಾರಿಗಳ ಅಽಕೃತ ನಿವಾಸಗಳಿಗೆ ಹೋಗಿದ್ದೇನೆ. ಒಂದಕ್ಕಿಂತ ಒಂದು ಚೆನ್ನಾಗಿವೆ.
ಕೆಲವು ನಿವಾಸಗಳಂತೂ ಐದು-ಹತ್ತು ಎಕರೆ ವಿಶಾಲ ಪರಿಸರದಲ್ಲಿ, ಸುಂದರ ಹೂದೋಟ. ಗಳ ಮಧ್ಯದಲ್ಲಿ ಇವೆ. ಬೀದರ, ಕಲಬುರ್ಗಿ ಮತ್ತು ವಿಜಯಪುರಗಳ ಡಿಸಿ ಬಂಗಲೆಗಳು ಒಂದು ಕಾಲಕ್ಕೆ ಅಂದಿನ ರಾಜ-ಮಹಾರಾಜರ, ಬ್ರಿಟಿಷ್ ಆಡಳಿತಗಾರರ ನಿವಾಸಗಳಾಗಿದ್ದವು. ಈಗ ಆ ನಿವಾಸದಲ್ಲಿ ಐಎಎಸ್ ಅಧಿಕಾರಿಗಳು ವಾಸವಾಗಿದ್ದಾರೆ. ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಮತ್ತು ಸಚಿವರಿಗೂ ಅಂಥ ಬಂಗ್ಲೆಗಳಿಲ್ಲ.
ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ವಾಸಿಸುವ ಕಾರ್ಲಟನ್ ಹೌಸ್ ಬಂಗ್ಲೆ ಮತ್ತು ರಾಜ್ಯಪಾಲರು ವಾಸಿಸುವ ರಾಜಭವನವನ್ನೂ ನಾಚಿಸುವ, ಅದಕ್ಕಿಂತ ವಿಶಾಲವಾದ, ಸುಂದರವಾದ ಜಿಲ್ಲಾಧಿಕಾರಿಗಳ ನಿವಾಸಗಳಿವೆ. ಆ ನಿವಾಸಗಳ ದೇಖ-ರೇಖಕ್ಕೆ ಎಂಟು-ಹತ್ತು
ಸೇವಕರು.

ನಿವಾಸದ ಪಕ್ಕದ ಕಚೇರಿ. ಅಲ್ಲಿಗೆ ಹೋಗಲು ಕಾರು. ಹಿಂದಿನ ಕಾಲದ ರಾಜರಿಗೂ ಇಂಥ ಸುಖ, ಸೌಭಾಗ್ಯವಿರಲಿಲ್ಲ. ಆ ರೀತಿ ಪ್ರತಿ ಜಿಽಕಾರಿಗಳ ದರ್ಬಾರು ನಡೆಯುತ್ತದೆ. ಇವರಾರೂ ಜನಸಾಮಾನ್ಯರನ್ನು ಭೇಟಿ ಮಾಡುವುದಿಲ್ಲ. ಅವರ ಸಮಸ್ಯೆಗಳನ್ನು ಕೇಳಿಸಿಕೊಳ್ಳುವುದಿಲ್ಲ. ಅವರನ್ನು ಯಾರೂ ಕೇಳುವುದಿಲ್ಲ. ಕಿವಿ ಹಿಂಡುವುದಿಲ್ಲ. ಮಂತ್ರಿಗಳೂ ಅವರನ್ನು ಸಂಕೋಚ, ಸಣ್ಣ ಭಯದಿಂದಲೇ ಮಾತಾಡಿಸುತ್ತಾರೆ. ಬ್ರಿಟಿಷರು
ತೊಲಗಿದರೂ, ಐಎಎಸ್ ಎಂಬ ಬ್ರಿಟಿಷ್ ಮನಸ್ಥಿತಿ ಮಾತ್ರ ನಮ್ಮಲ್ಲಿ ಇನ್ನೂ ಆಳದಲ್ಲಿ ನೆಲೆಸಿದೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳು ಅಂತಾರೆ. ಆದರೆ ಅದು ಅಲಂಕಾರಿಕ ಮಾತು. ನಿಜ ಅರ್ಥದಲ್ಲಿ ಅವರಿಗಿಂತ ನಿಜವಾದ ಪ್ರಭುಗಳು ಅಂದ್ರೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು. ಹೀಗಾಗಿ ಪ್ರಜೆಗಳ ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳೇ ನಿಜವಾದ ಶಾಶ್ವತ ಪ್ರಭುಗಳು! ರಾಜಕಾರಣಿ ಗಳು ಆಗಾಗ ಬಂದು ಹೋಗುತ್ತಾರೆ. ಈ ಭಾಗ್ಯ ಯಾರಿಗಿದೆ?! ಜವಾಬ್ದಾರಿಯಿಲ್ಲದ ಸುಖ ಅಂದ್ರೆ ಇದು! ಈ ದೇಶ ಮತ್ತು ಜನ ನೆಗೆದು ಬೀಳಲಿ, ಈ ಅಧಿಕಾರಿಗಳಂತೂ ಆರಾಮವಾಗಿರುತ್ತಾರೆ. ಏಳೇಳು ಜನ್ಮಕ್ಕೂ ಅವರ ಸಂತತಿ ನೆಮ್ಮದಿಯಿಂದ ಬೆಚ್ಚಗಿರುತ್ತದೆ.

error: Content is protected !!