Saturday, 18th May 2024

ಮೆರೆಯದಿರು ಮಾನವ!

ಪ್ರಸ್ತುತ

ವಿದ್ಯಾಶಂಕರ ಶರ್ಮಾ

‘ಜಗತ್ತಿನ ಎಲ್ಲ ಸಮಸ್ಯೆಗಳ ಮೂಲ ನಾನು’. ನಾನು, ನನ್ನಿಂದಲೇ ಎಲ್ಲ ಎಂಬ ಹಮ್ಮು ನಮ್ಮನ್ನು ಅಂಧರನ್ನಾಗಿ ಮಾಡಿಬಿಡಬಹುದು. ಮಾನವ ಸಂಬಂಧಗಳಾಗಲೀ, ವ್ಯವಹಾರಿಕವಾಗಿರಲಿ, ನಾನು ಎಂಬ ಅಹಂ ಭಾವ ಬಹಳಷ್ಟು ತೊಡಕುಗಳಿಗೆ ದಾರಿಯಾಗುವುದು ನಮ್ಮ ಅನುಭವಕ್ಕೆ ಬರುತ್ತದೆ. ನನ್ನದೇ ನೆಡೆಯಬೇಕೆಂಬ ಹಠದಲ್ಲಿ ಎರಡು ರೀತಿಯ ಸಮಸ್ಯೆಗಳಿವೆ.

ಒಂದು, ಇನ್ನೊಬ್ಬರ ಅಭಿಪ್ರಾಯಕ್ಕೆ ಬೆಲೆ ಕೊಡದಿರುವುದು, ಇನ್ನೊಂದು ತನಗೆ ಅನಿಸಿದ ಹಾಗೆ ನೆಡೆಯದಿzಗ ನಿರಾಶೆ ಮತ್ತು ಹತಾಶೆಗೆ ಈಡು ಮಾಡಿ ಕೊಳ್ಳುವುದು. ಇದರಿಂದ ದಿಕ್ಕು ತಪ್ಪಿದ ಸಂಬಂಧಗಳು, ಕೈ ತಪ್ಪಿದ ಕಾರ್ಯ ಸಾಧನೆಯ ಅವಕಾಶ ಹೀಗೆ ಏನೇನೋ ಎಡವಟ್ಟುಗಳು ಆಗಿ ಬಿಡುತ್ತವೆ. ಇಷ್ಟೆ ಆದರೂ ಅದರ ಅರಿವು ನಮಗೆ ಆಗುವುದೇ ಇಲ್ಲ, ಏಕೆಂದರೆ ನಮ್ಮ ಜಂಭದ ಸವಾರಿ ಕಣ್ಣನ್ನು ಮಂಜಾಗಿಸಿಬಿಡುತ್ತದೆ. ‘ನಾನೇ’ ಎಂಬ ಭಾವವೇ ನಮ್ಮ ಲೌಕಿಕ ಮತ್ತು ಆಧ್ಯಾತ್ಮಿಕ ಇವೆರಡರ ಸಾಧನೆಗೆ ಅಡ್ಡ ಬರುವಂಥದ್ದು.

ಹಾಗಾಗಿ ಅದನ್ನು ಚಿಗುರಿನಲ್ಲಿಯೇ ಚಿವುಟಿ ಹಾಕದಿದ್ದರೆ, ಮರವಾಗಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಎಷ್ಟೋ ಬಾರಿ ಬೇರೆಯವರ ಬಗ್ಗೆ, ಅವರ ನಡವಳಿಕೆಯ ಮೇಲೆ ಬಹಳ ಸುಲಭವಾಗಿ ಅಭಿಪ್ರಾಯ ತಂದುಕೊಂಡು ನಮ್ಮದೇ ಆದ ವಿಮರ್ಶೆ ಕೂಡ ಮಾಡಿ ಅದನ್ನು ಜಗಜ್ಜಾಹೀರು ಮಾಡುವ ತವಕಕ್ಕೆ ಬಿದ್ದು ಬಿಡುತ್ತೇವೆ. ನಮಗೆ ಎಲ್ಲವೂ ಗೊತ್ತಿದೆ ಎಂಬ ಭ್ರಮೆ ನಮ್ಮನ್ನು ಗೊತ್ತಿಲ್ಲದಂತೆ ಆವರಿಸಿಕೊಳ್ಳುತ್ತದೆ. ಇದರಿಂದ ಬೇರೆಯವರ ಮೇಲೆ ಆಗುವ ಪರಿಣಾಮದ ಬಗ್ಗೆ ನಾವು ಸ್ವಲ್ಪವೂ ಯೋಚಿಸುವುದಿಲ್ಲ. ಇದಕ್ಕೆಲ್ಲ ನಮಗಿರುವ eನದ ಕೊರತೆಯೇ ಕಾರಣ.

ಇನ್ನೊಂದು ಬಗೆಯ ಹಮ್ಮಿನ ಪ್ರದರ್ಶನವೆಂದರೆ, ನಮಗೆ ಗೊತ್ತಿರುವುದು ಹನಿಯಷ್ಟಾದರೂ ಹೇಳಿಕೊಳ್ಳುವುದು ಸಾಗರದಷ್ಟು. ಸುಪ್ರಸಿದ್ಧ ಇಂಗ್ಲಿಷ್ ನಾಟಕಕಾರ ಮತ್ತು ಕವಿ ಶೇಕ್ಸ್ ಪಿಯರ್ ಹೇಳುವ ಹಾಗೆ – ‘ನಿನಗೆ ಗೊತ್ತಿರುವದಕ್ಕಿಂತ ಕಡಿಮೆ ಮಾತನಾಡು, ನೀನು ಪ್ರದರ್ಶಿಸಿರುವದಕ್ಕಿಂತ ಹೆಚ್ಚು ಅರಿವು ನಿನ್ನೊಳಗೆ ಇರಲಿ’. ವಿನಮ್ರತೆ ಎಂದಿಗೂ ನಮ್ಮ ವ್ಯಕ್ತಿತ್ವದ ಭಾಗವಾಗಿರಬೇಕೆಂಬ ಆಶಯವನ್ನು ಈ ಮಾತುಗಳಲ್ಲಿ ಕಾಣಬಹುದು.
ಎಲ್ಲಿಯವರೆಗೆ ನಾನು, ನನ್ನಿಂದಲೇ, ನನ್ನದು, ಎಂಬ ಅಪಸವ್ಯಗಳು ನಮ್ಮನ್ನು ಆವರಿಸಿಕೊಂಡಿರುತ್ತವೆಯೋ ಅಲ್ಲಿಯವರೆಗೂ ಜ್ಞಾನದ ಬೆಳಕು ನಮಗೆ ಕಾಣಲಾರದು. ಡಿವಿಜಿಯವರ ಮಂಕು ತಿಮ್ಮನ ಕಗ್ಗ ಇದನ್ನು ಬಹಳ ಸುಂದರವಾಗಿ ನಿರೂಪಿಸುತ್ತದೆ – ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ |
ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತರ ನೂನದಿಂದೆಲ್ಲವನುವಬ್ಧಿಯೊಳಗದನಿರಿಸೆ |

ಮೌನವದು ಮಣ್ಕರಗಿ – ಮಂಕುತಿಮ್ಮ -೯೦೧ ನೀರು ತುಂಬಿದ ಒಂದು ಚಿಕ್ಕ ಮಣ್ಣಿನ ಕೊಡ, ತನ್ನ ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ಬೀಗುತ್ತದೆ. ಆದರೆ ಅದೇ ಕೊಡವನ್ನು ಅದಕ್ಕಿಂತ ಸಾವಿರ ಪಟ್ಟು ದೊಡ್ಡದಾದ ಸಮುದ್ರದಲ್ಲಿ ಮುಳುಗಿಸಿದಾಗ ಅದು ಕರಗಿ ಹೋಗುತ್ತದೆ. ಕೊಡವನ್ನು ನಮ್ಮ
ಮನಸ್ಸಿಗೆ ಹೋಲಿಸಿಕೊಂಡರೆ, ಕೊಡದೊಳಗಿರುವ ನೀರು ನಮ್ಮ ಅಜ್ಞಾನವನ್ನು ತೋರಿಸುತ್ತದೆ. ನಮಗೆ ಗೊತ್ತಿರುವುದು ಕೊಡದಲ್ಲಿರುವ ನೀರಿನಷ್ಟು, ಗೊತ್ತಿಲ್ಲದಿರುವುದು ಸಾಗರದಷ್ಟು. ಇಂತಹ ಅರಿವು ಮೂಡಿದಾಗ, ನಮ್ಮಲ್ಲಿ ಇರುವ ಅಹಂ ತಾನೇ ತಾನಾಗಿ ಕರಗಿ ಹೋಗುತ್ತದೆ. ನಾವಿಲ್ಲಿ ನಿಮಿತ್ತ ಮಾತ್ರ, ಸನ್ನೆಯ ಮೂಲಕ ಜಗದಾಟವನ್ನು ನೆಡೆಸುವವನು ಬೇರಿಹನು. ಈ ರೀತಿಯ ಚಿಂತನಾ ಮಾರ್ಗ ನಮ್ಮನ್ನು ಮಾಗಿಸುತ್ತ ನಮ್ಮ ಅರಿವಿನ ಆಳ
ಅಗಲಗಳನ್ನು ವಿಸ್ತರಣೆ ಮಾಡಿ ನಮ್ಮ ವ್ಯಕ್ತಿತ್ವವನ್ನು ಸುದೃಢಗೊಳಿಸುತ್ತದೆ.

Leave a Reply

Your email address will not be published. Required fields are marked *

error: Content is protected !!