Saturday, 27th July 2024

ಕರೋನಾ ನಿಯಂತ್ರಣಕ್ಕೆ ಪಕ್ಷಭೇದ ಮರೆಯಬೇಕು

ಪ್ರಚಲಿತ

ಡಾ.ಎಚ್.ಸಿ.ಮಹದೇವಪ್ಪ

ಲಸಿಕೆ ನೀಡುವುದರಿಂದ ಸೋಂಕು ತಡೆಗಟ್ಟಲು ಸಾಧ್ಯವಿರುವ ಕಾರಣ ಸರಕಾರವು ಆದಷ್ಟು ಶೇ.೮೦ರಿಂದ ೮೫ ಜನರಿಗೆ ಲಸಿಕೆ ನೀಡುವತ್ತ ಗಂಭೀರವಾಗಿ ಚಿಂತಿಸಬೇಕು. ಲಸಿಕೆ ನೀಡದೇ ಕೇವಲ ಲಾಕ್‌ಡೌನ್ ಮಾಡಿದರೆ ಅದು ಸೋಂಕನ್ನು ಮುಂದೂಡಿದಂತೆಯೇ ಸರಿ.

ಕರೋನಾ ಎರಡನೆಯ ಅಲೆಯನ್ನು ನಿರ್ವಹಿಸಲು ಆರೋಗ್ಯ ಸಚಿವಾಲಯವು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದೇ ಇರುವುದು ರಾಜ್ಯದ ಜನರ ಹಿತದ ದೃಷ್ಟಿಯಿಂದ ನನ್ನಲ್ಲಿ ಆತಂಕ ಮೂಡಿಸಿದೆ. ಈ ಹಿಂದೆ ಕರೋನಾ ನಿರ್ವಹಣೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದರೂ ಆ ಪತ್ರಕ್ಕೆ ಅವರಿಂದ ಉತ್ತರ ಬರಲಿಲ್ಲ.

ಆದಾಗ್ಯೂ ಕೂಡಾ ಐದು ವರ್ಷಗಳ ಕಾಲ ಆರೋಗ್ಯ ಮಂತ್ರಿಯಾಗಿ ಕೆಲಸ ಮಾಡಿರುವ ಅನುಭವದ ಹಿನ್ನಲೆಯಲ್ಲಿ ಈ ಸಾಂಕ್ರಾಮಿಕ ರೋಗದ ನಿಯಂತ್ರಣ ದೆಡೆಗೆ ಸರಕಾರದೊಂದಿಗೆ ಸಹಕಾರ ನೀಡುವುದಕ್ಕೆ ಸಂಬಂಧಿಸಿದಂತೆ ಹಲವು ತಜ್ಞರೊಂದಿಗೆ ಮಾತನಾಡಿದಾಗ ಇನ್ನಷ್ಟು ಪರಿಹಾರ ಕ್ರಮಗಳನ್ನು ಸರಕಾರ ಅಳವಡಿಸಿಕೊಳ್ಳಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಅಂಶಗಳನ್ನು ತಿಳಿಸಬೇಕಿದೆ.

ಮೊದಲನೆಯದಾಗಿ ಕರೋನಾ ಸೋಂಕು ಬಹಳಷ್ಟು ಪ್ರಮಾಣದಲ್ಲಿ ಏರುಗತಿಯಲ್ಲಿದ್ದರೂ ಕೂಡಾ ಸರಕಾರ ಕರೋನಾ ಸೋಂಕು ಪರೀಕ್ಷೆಯನ್ನು ಕಡಿಮೆಗೊಳಿಸಿ ಸೋಂಕಿತರ ಪ್ರಮಾಣ ಇಳಿಮುಖಗೊಂಡಿದೆ ಎಂದು ಹೇಳಲು ಹೊರಟಿರುವುದು, ನಿಜಕ್ಕೂ ಕೂಡಾ ಅಪಾಯಕಾರಿ ಸಂಗತಿ. ಇದರಿಂದ ಸೋಂಕು ಪ್ರಮಾಣ ಹೆಚ್ಚಿದ್ದರೂ ಕೂಡಾ ಕಡಿಮೆ ಸೋಂಕಿನ ಲೆಕ್ಕದಲ್ಲಿ ಆರೋಗ್ಯ ಸೌಲಭ್ಯಗಳ ಅಗತ್ಯವನ್ನು ಸರಕಾರ ಸೃಷ್ಟಿಸುವುದರಿಂದ ಹೆಚ್ಚು ಜನರಲ್ಲಿ ಅನಾನುಕೂಲಕರವಾದ
ಜ್ಞತಾವರಣ ಸೃಷ್ಟಿಯಾಗಲಿದೆ.

1996 ರಿಂದ 1999ರ ಅವಧಿನ ಸಾಂಕ್ರಾಮಿಕ ರೋಗಗಳ ನಿರ್ವಹಣೆಗೆ ಸಂಬಂಧಿಸಿದಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ವ್ಯವಸ್ಥೆಯ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳ ಸಹಯೋಗದೊಂದಿಗೆ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಳಸಿಕೊಂಡು ಜನರಿಗೆ ಆರೋಗ್ಯ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಸರಕಾರ ಮಾಡಬೇಕು. ಇನ್ನು ಇದಕ್ಕೆ Link Workers (ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕ ಸಿಬ್ಬಂದಿ) ಅವರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚುನಾಯಿತರಾದ ಸದಸ್ಯರು ಮತ್ತು ಗ್ರಾಮ ಲೆಕ್ಕಾಧಿಕಾರಿ ಹಾಗೂ ಅಂಗನವಾಡಿ ಶಿಕ್ಷಕರನ್ನು ಒಳಗೊಂಡಂತಹ ಗ್ರಾಮೀಣ ಮಟ್ಟದ ಟಾಸ್ಕ್ ಫೋರ್ಸ್‌ ಗಳನ್ನು ರಚಿಸಿ ಅಲ್ಲಿ ಕರೋನಾ ಸೋಂಕಿತರಿಗೆ ಸರಿಯಾಗಿ ಆರೋಗ್ಯ ಮತ್ತು ಆಹಾರ ಸೌಲಭ್ಯ ದೊರಕುತ್ತಿದೆಯೇ ಎಂಬುದನ್ನು
ಖಚಿತಪಡಿಸಿಕೊಳ್ಳಬೇಕು. ಇನ್ನು ತಮಿಳುನಾಡಿನ ನೂತನ ಸರಕಾರವು ಮನೆ ಮನೆಗೆ ಲಸಿಕೆ ಎಂಬಂತಹ ಉತ್ತಮವಾದ ಕಲ್ಪನೆಯನ್ನು ಜಾರಿಗೆ ತಂದಿದ್ದು ಇದೇ
ಮಾದರಿಯನ್ನು ಕರ್ನಾಟಕ ಸರಕಾರವು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬೇಕು.

ಮನೆ ಮನೆಗೆ ಲಸಿಕೆ ನೀಡುವ ಸಲುವಾಗಿ ಸರಕಾರವು ಮೇಲೆ ಹೇಳಲಾದ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಅನ್ನು ಬಳಸಿಕೊಂಡು ಕೆಲಸ ಮಾಡುವುದು ಹೆಚ್ಚು
ಸೂಕ್ತವೆನಿಸುತ್ತದೆ. ಕರೋನಾ ಸೋಂಕು ಗ್ರಾಮೀಣ ಮಟ್ಟಕ್ಕೆ ವ್ಯಾಪಿಸುತ್ತಿರುವ ಈ ವೇಳೆ ಸ್ಥಳೀಯ ಆರೋಗ್ಯ ಕೇಂದ್ರಗಳ ವೈದ್ಯರು ಮತ್ತು ಗ್ರಾಮೀಣ ಟಾಸ್ಕ್ ಫೋರ್ಸ್ ವತಿಯಿಂದ ಹಳ್ಳಿಯ ಜನರಿಗೆ Motivation ಮಾಡುವ ಕಡೆ ಸರಕಾರ ಗಮನಹರಿಸಬೇಕು. ಇದು ಕರೋನಾ ಕುರಿತಂತಹ ಭಯವನ್ನು ಒಂದಷ್ಟು ಮಟ್ಟಿಗೆ ಹೋಗಲಾಡಿಸಬಹುದು. ಕೆಲವೊಂದು ಮಾಧ್ಯಮದಲ್ಲಿ ಪ್ರಕಟವಾದಂತೆ ಕೆಲವೆಡೆ ಲಸಿಕೆ ನೀಡಲು ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡಲಾಗು ತ್ತಿದ್ದು, ಹಣವಿಲ್ಲದೇ ಲಸಿಕೆಯಿಲ್ಲ ಎಂಬಂತಹ ಪರಿಸ್ಥಿತಿ ಇದೆ.

ಸರಕಾರ ಜನರ ಆತಂಕವನ್ನು ಹೆಚ್ಚು ಮಾಡುತ್ತಿರುವ ಇಂತಹ ಕೆಟ್ಟ ನಡವಳಿಕೆಗಳನ್ನು ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್‌
ಗಳನ್ನು ನೋಡಿಕೊಳ್ಳಲು ಮೂರು ಪಂಚಾಯಿತಿಗಳಿಗೆ ಒಬ್ಬ ತಾಲೂಕು ಮಟ್ಟದ ನೋಡಲ್ ಅಧಿಕಾರಿಯನ್ನು ನೇಮಿಸಿದರೆ, ಉತ್ತಮ ಪರಿವೀಕ್ಷಣೆ ಹಾಗೂ ಪರಿಣಾಮಕಾರಿ ಕಾರ್ಯಗತಿಯು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತವಾಗಿ ಚಿಂತಿಸಲಿ. ಇನ್ನು ಮುಖ್ಯವಾಗಿ ಸೋಂಕು ಹರಡುವಿಕೆ ಕುರಿತಂತೆ ರಿಪೋರ್ಟಿಂಗ್ ವ್ಯವಸ್ಥೆಯು ಬಹಳಷ್ಟು ದುರ್ಬಲವಾಗಿರುವ ಕಾರಣ ಸರಕಾರವು ಪಂಚಾಯಿತಿಗಳಿಗೆ ನೇಮಿಸಲಾಗುವ ನೋಡಲ್ ಅಧಿಕಾರಿಗಳ ಸಹಕಾರ ದೊಂದಿಗೆ ಸ್ಥಳೀಯ ಆರೋಗ್ಯ ಸಿಬ್ಬಂದಿಗಳನ್ನು ಬಳಸಿಕೊಂಡು ಸೋಂಕಿತರ ಸಂಖ್ಯೆ ಮತ್ತು ಅವರ ಆರೋಗ್ಯ ಚೇತರಿಕೆಯ ವಿಷಯಕ್ಕೆ ಸಂಬಂಧಿಸಿದಂತೆ
ಪ್ರತಿ ಮೂರ ದಿನಗಳಿಗೊಮ್ಮೆ ವರದಿಯನ್ನು ತರಿಸಿಕೊಂಡು ರೋಗದ ಗತಿಗೆ ಅನುಸಾರವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಜಿಎಂಎಸ್ (ಗರ್ವನ್‌ಮೆಂಟ್ ಮೆಡಿಸಿನ್ ಸಪ್ಲೈ ಯೂನಿಟ್ – ಸರಕಾರಿ ಔಷಧ ಪೂರೈಕೆ ಘಟಕ) ಗಳಿಂದ ಸರಕಾರವು ಸರಿಯಾದ ಪ್ರಮಾಣದಲ್ಲಿ ಔಷಧಿಯನ್ನು ಖರೀದಿಸಿ ಸ್ಥಳೀಯ ಮಟ್ಟದ ಆರೋಗ್ಯ ಕೇಂದ್ರಗಳಿಗೆ ತಲುಪಿಸದೇ ಇರುವ ಕಾರಣ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಸರಿಯಾಗಿ ಔಷಧವನ್ನು ಜನರಿಗೆ ತಲಾಗದೇ ಹತಾಶರಾಗಿದ್ದು ಸಾರ್ವಜನಿಕರಿಂದ ಅನಗತ್ಯ ಟೀಕೆಯನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರವು GMS (Govt Medicine Supply Unit) ಗಳಿಂದ ಔಷಧಗಳನ್ನು ಖರೀದಿಸಿ ವೈದ್ಯರ ಆತಂಕವನ್ನು ದೂರ ಮಾಡಬೇಕು.

ಸರಕಾರದ ಕರೋನಾ ತಡೆ ಮಾರ್ಗಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಎಲ್ಲಾ ವಲಯದ ಆರೋಗ್ಯ ಸಿಬ್ಬಂದಿಗಳಿಗೆ ಮತ್ತು ಕರೋನಾದಿಂದ ಮೃತರಾಗುವ
ಜನರಿಗೆ ಆರೋಗ್ಯ ವಿಮೆಯನ್ನು ಸರಕಾರ ಒದಗಿಸುವ ಬಗ್ಗೆ ಚಿಂತಿಸಬೇಕು. ಈಗಾಗಲೇ ನೆರೆಯ ತಮಿಳುನಾಡಿನಲ್ಲಿ ಇಂತಹ ಕ್ರಮ ಕೈಗೊಂಡಿರುವುದರ ಬಗ್ಗೆ ಗಮನಿಸಿದರೆ ಸೂಕ್ತವಾಗಬಹುದು. ಸರಕಾರ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪ್ಯಾಕೇಜ್ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಈ ಪ್ಯಾಕೇಜ್ ಪ್ರಧಾನಿ ಮೋದಿಯವರ ೨೦ ಲಕ್ಷ ಕೋಟಿ ರುಪಾಯಿ ಪ್ಯಾಕೇಜ್‌ನಂತಾಗದೇ ಎಲ್ಲರಿಗೂ ಸರಿಯಾದ ಪ್ರಮಾಣದಲ್ಲಿ ತಲುಪಲು ಸೂಕ್ತ ಕ್ರಮ ಕೈಗೊಳ್ಳಬೇಕು.

ಇನ್ನೂ ವೈದ್ಯರ ಸರಿಯಾದ ಸೂಚನೆ ಮತ್ತು ಅಭಿಪ್ರಾಯ ಪಡೆಯದೇ ಕೆಲ ಬಗೆಯ ಔಷಧಗಳನ್ನು ಸಾರ್ವಜನಿಕರಿಗೆ ನೀಡುತ್ತಿರುವ ಸಂಸ್ಥೆಗಳು ಮತ್ತು ವ್ಯಕ್ತಿ ಗಳು ಕಂಡು ಬಂದರೆ ಅಂಥವರ ಮೇಲೆ ಕಠಿಣವಾದ ಕ್ರಮವನ್ನು ಕೈಗೊಳ್ಳಬೇಕು. ಇನ್ನು ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಕೋವಿಡ್ ಡ್ಯೂಟಿಗೆ ಕರೆದರೂ ಯಾರೂ ಬರುತ್ತಿಲ್ಲ ಎಂದು ಹೇಳಿzರೆ. ಆದರೆ ವಾಸ್ತವವಾಗಿ ಕರೋನಾ ವಾರಿಯರ್ಸ್ ಎಂದು ಕರೆಸಿಕೊಂಡ ವೈದ್ಯಕೀಯ ಸಿಬ್ಬಂದಿಗೆ ಸರಿಯಾದ ಸುರಕ್ಷತೆ, ಆರೋಗ್ಯ ಸೌಲಭ್ಯ ಇಲ್ಲ. ಜತೆಗೆ ಕರೋನಾ ನಿರ್ವಹಣೆ ವೈಫಲ್ಯಕ್ಕೆ ಅವರನ್ನೇ ಗುರಿ ಮಾಡಿ ಸರಕಾರ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿ ಕೊಳ್ಳುತ್ತಿರುವುದೂ  ಡಾ ಇದಕ್ಕೆ ಕಾರಣವಾಗಿದ್ದು, ಇಂತಹ ಕೆಟ್ಟ ಪ್ರವೃತ್ತಿಗಳು ನಿಲ್ಲಬೇಕು.

ಆಗ ಆರೋಗ್ಯ ಸಿಬ್ಬಂದಿಗಳು ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಲಸಿಕೆ ನೀಡುವುದರಿಂದ ಸೋಂಕು ತಡೆಗಟ್ಟಲು ಸಾಧ್ಯವಿರುವ ಕಾರಣ ಸರಕಾರವು ಆದಷ್ಟು ಶೇ.೮೦ರಿಂದ ೮೫ ಜನರಿಗೆ ಲಸಿಕೆ ನೀಡುವತ್ತ ಗಂಭೀರವಾಗಿ ಚಿಂತಿಸಬೇಕು. ಲಸಿಕೆ ನೀಡದೇ ಕೇವಲ ಲಾಕ್‌ಡೌನ್ ಮಾಡಿದರೆ ಅದು ಸೋಂಕನ್ನು
ಮುಂದೂಡಿದಂತೆಯೇ ಸರಿ. ಬಹುಮುಖ್ಯವಾಗಿ ಕರೋನಾ ಸೋಂಕು ವೈದ್ಯಕೀಯಕ್ಕೆ ಸಂಬಂಽಸಿದ ಸಂಗತಿಯಾಗಿದ್ದು ಇದರ ನೆಪದಲ್ಲಿ ಹರಡಲಾಗುವ ಮೌಡ್ಯತೆಯನ್ನು ತಡೆಯಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಈಗಾಗಲೇ ಜನರು ಆತಂಕದಲ್ಲಿರುವ ಕಾರಣ ಸರಕಾರದ ಸಚಿವರು, ಮತ್ತು ವಿವಿಧ ಶಾಸಕರು ವಿಷಯವನ್ನರಿಯದೇ ಮಾತನಾಡವುದನ್ನು ನಿಲ್ಲಿಸಬೇಕು.

ಕೊನೆಯದಾಗಿ ಕರೋನಾ ಸಂದರ್ಭದಲ್ಲಿ ತೀರಾ ನಕಾರಾತ್ಮಕವಾದ ಮತ್ತು ಅಸ್ಪೃಶ್ಯತೆಯನ್ನು ನೆನಪಿಸುವಂತಹ ಸಾಮಾಜಿಕ ಅಂತರ ಎಂಬ ಪದದ ಬದಲಿಗೆ ದೈಹಿಕ ಅಂತರ ಎಂಬ ಪದ ಬಳಕೆಯನ್ನು ಮಾಡುವಂತೆ ಸರಕಾರ ಆದೇಶ ಹೊರಡಿಸಬೇಕು. ಇದು ಪ್ರಜ್ಞೆಯ ಭಾಗವಾಗಿ ಉತ್ತಮವಾದ ನಡೆಯಾಗಬಲ್ಲದು. ಕರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಪಕ್ಷಭೇಧ ಮರೆತು ಯಾವುದೇ ಮೂಲೆಯಿಂದ ಉತ್ತಮ ಸಲಹೆಗಳು ಬಂದರೆ ಅವುಗಳನ್ನು ಸ್ವೀಕರಿಸ ಬೇಕಿರುವುದು ಸರಕಾರದ ಕರ್ತವ್ಯವಾಗಿದ್ದು ಎಲ್ಲರೂ ಕೂಡಾ ಒಟ್ಟಾಗಿ ನಮ್ಮ ಅನುಭವ ಮತ್ತು ಜ್ಞಾನವನ್ನು ಜನರ ಆರೋಗ್ಯ ರಕ್ಷಣೆಗಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ.

Leave a Reply

Your email address will not be published. Required fields are marked *

error: Content is protected !!